Advertisement

ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ; ಧಾರ್ಮಿಕತೆ ಬಿಂಬಿಸುವ ವಸ್ತ್ರಕ್ಕಿಲ್ಲ ಅವಕಾಶ: ಡೀಸಿ

06:24 PM Apr 21, 2022 | Team Udayavani |

ಕೋಲಾರ: ಜಿಲ್ಲೆಯ 29 ಕೇಂದ್ರಗಳಲ್ಲಿ ನಾಳೆ ಯಿಂದ ಆರಂಭಗೊಳ್ಳುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ 17008 ವಿದ್ಯಾರ್ಥಿಗಳು ಕುಳಿತಿದ್ದು, ಸುಗಮ ಪರೀಕ್ಷೆಗೆ ಜಿಲ್ಲಾಡಳಿತ ಎಲ್ಲಾ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಹಿಜಾಬ್‌ ಸೇರಿದಂತೆ ಯಾವುದೇ ಧಾರ್ಮಿಕತೆ ಬಿಂಬಿಸುವ ವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ ಎಂದು ಶಿಕ್ಷಕರು, ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ ಹಾಗೂ ಪಿಯು ಬೋರ್ಡ್‌ ಉಪ ನಿರ್ದೇಶಕ ರಾಮಚಂದ್ರಪ್ಪ ಮಾಹಿತಿ ನೀಡಿದರು.

Advertisement

ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕರೆದಿದ್ದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ ಮಾತನಾಡಿ, ಈ ಬಾರಿ ಹೊಸದಾಗಿ 7116 ಬಾಲಕರು, 7626 ಬಾಲಕಿಯರು ಸೇರಿದಂತೆ 14742 ಮಂದಿ ಪರೀಕ್ಷೆಗೆ ಕುಳಿತಿದ್ದಾರೆ, ಪುನರಾವರ್ತಿತ ಅಭ್ಯರ್ಥಿಗಳಲ್ಲಿ 1760 ಬಾಲಕ, 1030 ಬಾಲಕಿಯರು ಸೇರಿದಂತೆ 2790 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಖಾಸಗಿಯಾಗಿ 267 ಬಾಲಕ, 189 ಬಾಲಕಿಯರು  ಸೇರಿದಂತೆ 456 ಮಂದಿ ಪರೀಕ್ಷೆಗೆ ಕುಳಿತಿದ್ದಾರೆ ಮತ್ತು 984 ಬಾಲಕರು, 826 ಬಾಲಕಿಯರು ಸೇರಿದಂತೆ ಒಟ್ಟು 1810 ಮಂದಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.ಪರೀಕ್ಷೆಗೆ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದರು.

ಒಟ್ಟು 29 ಕೆಂದ್ರಗಳಲ್ಲಿ ಸಿದ್ಧತೆ: ಕೋಲಾರದಲ್ಲಿ 11, ಬಂಗಾರಪೇಟೆ-3, ಕೆಜಿಎಫ್‌-3, ಶ್ರೀನಿವಾಸ ಪುರ-3, ಮುಳಬಾಗಿಲು-5, ಮಾಲೂರಿನಲ್ಲಿ 4 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಇದರಲ್ಲಿ 13 ಸರ್ಕಾರಿ, 6 ಅನುದಾನಿತ, 10 ಅನುದಾನರಹಿತ ಪರೀಕ್ಷಾ ಕೇಂದ್ರಗಳಾಗಿವೆ ಎಂದರು.

ಹಿಜಾಬ್‌ಗಿಲ್ಲ ಪರೀಕ್ಷೆಗೆ ಅವಕಾಶ: ದ್ವಿತೀಯ ಪಿಯುಸಿ ಪರೀಕ್ಷೆಗೂ ಸಹಾ ಜಿಜಾಬ್‌, ಕೇಸರಿ ಶಾಲು ಮತ್ತಿತರ ಧಾರ್ಮಿಕತೆ ಬಿಂಬಿಸುವ ವಸ್ತ್ರ ಧರಿಸಿ ಬರಲು ಅವಕಾಶ ನಿರಾಕರಿಸಲಾಗಿದೆ. ಇದು ಪರೀಕ್ಷೆ ಬರೆಯಲು ಬರುವ ಖಾಸಗಿ ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕಾರ್ಯ ನಿರ್ವಹಿಸುವ ಶಿಕ್ಷಕ,ಸಿಬ್ಬಂದಿಗೂ ಅನ್ವಯವಾಗಲಿದೆ ಎಂದರು.

ಹೊಸ ಅಭ್ಯರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆಗೆ ಬರಬೇಕು, ಖಾಸಗಿ ಅಭ್ಯರ್ಥಿಗಳು ಧಾರ್ಮಿಕತೆ ಬಿಂಬಿಸದ ಸಾಮಾನ್ಯ ವಸ್ತ್ರ ಸಂಹಿತೆ ಪಾಲಿಸಲು ಸೂಚಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲು ಈಗಾಗಲೇ ಶಿಕ್ಷಣ ಸಚಿವರು ಆದೇಶ ನೀಡಿದ್ದಾರೆ ಎಂದರು.

Advertisement

ಜಿಲ್ಲೆಯಲ್ಲಿ ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗೆ ಗುರುತಿನ ಚೀಟಿ ಇದ್ದರೆ ಮಾತ್ರವೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು. ಪ್ರತಿ ಕೇಂದ್ರಕ್ಕೂ ಓರ್ವ ಮುಖ್ಯ ಅ ಧೀಕ್ಷಕರಿದ್ದು, ಅವರೊಂದಿಗೆ ಜಂಟಿ ಮುಖ್ಯ ಅಧೀಕ್ಷಕರು ಕಾರ್ಯನಿರ್ವಹಿಸುವರು ಎಂದರು.

ವಿವಿಧ ತಾಲೂಕುಗಳ ತಹಶೀಲ್ದಾರ್‌ಗಳಾದ ದಯಾನಂದ್‌, ಸುಜಾತಾ, ರಮೇಶ್‌, ಕ್ಷೇತ್ರ ಶಿಕ್ಷಣಾ  ಧಿಕಾರಿಗಳಾದ ಉಮಾದೇವಿ, ಕೆಂಪಯ್ಯ, ಚಂದ್ರಶೇಖರ್‌, ಎ.ಬಿ.ರಾಮಕೃಷ್ಣಪ್ಪ, ಕೃಷ್ಣಮೂರ್ತಿ, ಪ್ರಾಂಶುಪಾಲರಾದ ಬಾಲಕೃಷ್ಣ, ನರಸಾಪುರ ಮಂಜುನಾಥ್‌, ಮುನಿಕೃಷ್ಣಪ್ಪ ಸೇರಿದಂತೆ ಎಲ್ಲಾ ಮಾರ್ಗಾಧಿಕಾರಿಗಳು, 29 ಕೇಂದ್ರಗಳ ಮುಖ್ಯ ಅಧೀಕ್ಷಕರು ಸಭೆಯಲ್ಲಿ ಹಾಜರಿದ್ದರು.

ಕೇಂದ್ರಗಳ 200ಮೀ.ವ್ಯಾಪ್ತಿ ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್‌ ಭದ್ರತೆ ನೀಡಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್‌ ಅಧಿಕಾರಿಗಳು ಪರೀಕ್ಷಾ ಆರಂಭಕ್ಕೆ ಅರ್ಧಗಂಟೆ ಮುನ್ನಾ ಕರ್ತವ್ಯಕ್ಕೆ ಹಾಜರಾಗಬೇಕು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡೆಲ್‌ಗ‌ಳನ್ನು ಅಂಚೆ ಕಚೇರಿಗೆ ಪರೀಕ್ಷಾ ಸಿಬ್ಬಂದಿ ಜತೆ ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200ಮೀಟರ್‌ ವ್ಯಾಪ್ತಿಯಲ್ಲಿ ಡೀಸಿ ನಿಷೇದಾಜ್ಞೆ ಜಾರಿ ಮಾಡಿದ್ದಾರೆ ಎಂದು ಪಿಯು ಬೋರ್ಡ್‌ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು. ಪರೀಕ್ಷಾ ಕೇಂದ್ರಗಳಿಗೆ ಮೊಬೆ„ಲ್‌ ಪೋನ್‌, ಇ-ಕ್ಯಾಮರಾ, ಲ್ಯಾಪ್‌ ಟಾಪ್‌ ಮತ್ತಿತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರದಂತೆ ಎಚ್ಚರಿಕೆ ನೀಡಲಾಗಿದೆ. ಕೊಠಡಿ ಮೇಲ್ವಿಚಾರಕರಾಗಲಿ ವಿದ್ಯಾರ್ಥಿಗಳಾಗಲಿ ಮೊಬೈಲ್‌ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸಿಸಿಕ್ಯಾಮರಾ ಕಣ್ಗಾವಲು
ಪರೀಕ್ಷಾ ಅವ್ಯವಹಾರ ತಡೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಸಣ್ಣಪುಟ್ಟ ಗೊಂದಲಗಳಿಗೂ ಅವಕಾಶವಾಗದಂತೆ ಎಚ್ಚರವಹಿಸಲಾಗಿದೆ. ಮಾರ್ಗಾ ಧಿಕಾರಿಗಳಾಗಿ ನೇಮಕಗೊಂಡಿರುವ ತಹಶೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರಾಂಶುಪಾಲರನ್ನೊಳಗೊಂಡ ತಂಡ ಕಾರ್ಯನಿರ್ವಹಿಸುತ್ತಿದೆ.ಕೇಂದ್ರ ಕಚೇರಿಯ 2 ಜಾಗೃತದಳ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 1, ಪೊಲೀಸ್‌ ಇಲಾಖೆ ಯಿಂದ 1, ಉಪನಿರ್ದೇಶಕರ ನೇತೃತ್ವದಲ್ಲಿ 1 ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜಾಗೃತದಳಗಳನ್ನು ರಚಿಸಲಾಗಿದೆ. ಪಿಯು ಶಿಕ್ಷಣ ಮಂಡಳಿಯಿಂದಲೇ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೊರ ಜಿಲ್ಲೆಗಳ ತಲಾ ಇಬ್ಬರು
ಸ್ಥಾನಿಕ ಜಾಗೃತದಳ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಪಿಯು ಬೋರ್ಡ್‌ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.

ವಾಹನಕ್ಕೆ ಜಿಪಿಎಸ್‌
ಪ್ರಶ್ನೆಪತ್ರಿಕೆಗಳನ್ನು ಎಲ್ಲಾ 29 ಕೇಂದ್ರಗಳಿಗೆ ಪರೀಕ್ಷೆಗೆ ಮುನ್ನಾ ಖಜಾನೆಯಿಂದ ಪಡೆದು ಸರಬರಾಜು ಮಾಡಲು ಪೊಲೀಸ್‌ ಬಂದೋ ಬಸ್ತ್ ಇರುವ 9 ವಾಹನಗಳು 9 ಮಾರ್ಗಗಳಲ್ಲಿ ಸಾಗಲಿವೆ. ಈ ಎಲ್ಲಾ ವಾಹನಗಳಿಗೂ ಜಿಪಿಎಸ್‌ ಅಳವಡಿಸಿದ್ದು, ಯಾವುದೇ ಅವ್ಯವಹಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತಿತರ ಸಮಸ್ಯೆಗಳು ಎದುರಾಗದಂತೆ ಎಲ್ಲಾ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next