Advertisement

ಕೇರಳದಲ್ಲಿ ಎರಡನೇ ಕೊರೊನಾ ಪ್ರಕರಣ

10:04 AM Feb 04, 2020 | Team Udayavani |

ಹೊಸದಿಲ್ಲಿ/ಬೀಜಿಂಗ್‌: ಕೇರಳದಲ್ಲಿ ಕೊರೊನಾ ವೈರಸ್‌ನ ದ್ವಿತೀಯ ಪ್ರಕರಣ ರವಿವಾರ ಬೆಳಕಿಗೆ ಬಂದಿದ್ದು, ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ವುಹಾನ್‌ನಿಂದ ಆಗಮಿಸಿದ್ದ ವಿದ್ಯಾರ್ಥಿನಿಯಲ್ಲಿ ಸೋಂಕು ದೃಢಪಟ್ಟಿತ್ತು. ಈಗ ಚೀನದಿಂದ ಬಂದ ಮತ್ತೂಬ್ಬನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಅವರನ್ನು ಆಲಪ್ಪುಳದ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ.

Advertisement

ಆಲಪ್ಪುಳದಲ್ಲಿ ಒಟ್ಟು ನಾಲ್ವರಲ್ಲಿ ರೋಗಲಕ್ಷಣ ಕಂಡುಬಂದಿತ್ತು. ನಾಲ್ವರ ಮೇಲೂ ನಿಗಾ ಇರಿಸ ಲಾಗಿದ್ದು, ಒಬ್ಬನ ರಕ್ತದ ಮಾದರಿ ಪಾಸಿಟಿವ್‌ ಬಂದಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ. ಒಟ್ಟಾರೆ 120 ಮಂದಿಯನ್ನು ಅವರವರ ಮನೆಗಳಲ್ಲಿ ನಿಗಾದಲ್ಲಿ ಇರಿಸ ಲಾಗಿದೆ. ಇವರ ಮನೆಗಳಲ್ಲಿ ಯಾವುದೇ ಸಾರ್ವಜನಿಕ ಕಾರ್ಯ ಕ್ರಮ ಹಮ್ಮಿಕೊಳ್ಳದಂತೆ ಸೂಚಿಸಲಾಗಿದೆ ಎಂದೂ ಶೈಲಜಾ ಮಾಹಿತಿ ನೀಡಿದ್ದಾರೆ.

323 ಭಾರತೀಯರು ಸ್ವದೇಶಕ್ಕೆ
ಈ ಎಲ್ಲ ಬೆಳವಣಿಗೆಗಳ ನಡುವೆ ವುಹಾನ್‌ನಿಂದ ಮತ್ತೆ 323 ಭಾರತೀಯರು ಏರ್‌ ಇಂಡಿಯಾ ವಿಮಾನದಲ್ಲಿ ಸ್ವದೇಶಕ್ಕೆ ಮರಳಿದ್ದಾರೆ. ಇವರೊಂದಿಗೆ ಮಾಲ್ಡೀವ್ಸ್‌ನ 7 ನಾಗರಿಕರನ್ನೂ ಕರೆತರಲಾಗಿದೆ. ಇವರೆಲ್ಲರನ್ನೂ ಸೇನೆ ನಿರ್ಮಿಸಿರುವ ನಿಗಾ ಕೇಂದ್ರಕ್ಕೆ ಕರೆದೊಯ್ದು, 2 ವಾರಗಳ ಕಾಲ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಮಾಲ್ಡೀವ್ಸ್‌ನ 7 ಮಂದಿಯನ್ನು ಭಾರತಕ್ಕೆ ಕರೆತಂದು ಮಾನವೀಯತೆ ತೋರಿದ್ದಕ್ಕೆ ಭಾರತ ಸರಕಾರಕ್ಕೆ ಅಲ್ಲಿನ ಸರಕಾರ ಟ್ವೀಟ್‌ ಮೂಲಕ ಧನ್ಯವಾದ ಹೇಳಿದೆ.

ಇ-ವೀಸಾಗೆ ನಿರ್ಬಂಧ
ಚೀನ ನಾಗರಿಕರು ಮತ್ತು ಅಲ್ಲಿ ವಾಸವಿರುವ ವಿದೇಶಿಯರಿಗೆ ಇ-ವೀಸಾ ವಿತರಿಸುವ ವ್ಯವಸ್ಥೆಗೆ ಭಾರತವು ತಾತ್ಕಾಲಿಕ ನಿರ್ಬಂಧ ಹೇರಿದೆ. ಕೊರೊನಾ ವೈರಸ್‌ ಹಬ್ಬುವುದನ್ನು ತಡೆಯುವ ಸಲುವಾಗಿ ಈ ಕ್ರಮ ಎಂದು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಈಗಾಗಲೇ ವಿತರಿಸಲಾಗಿರುವ ಇ-ವೀಸಾಗಳು ಕೂಡ ರವಿವಾರದಿಂದ ಅಮಾನ್ಯಗೊಳ್ಳುತ್ತವೆ ಎಂದೂ ಸ್ಪಷ್ಟಪಡಿಸಿದೆ. ಚೀನದಲ್ಲಿ ವೈರಸ್‌ ಸೋಂಕಿಗೆ ಬಲಿಯಾದವರ ಸಂಖ್ಯೆ 305ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next