ನವದೆಹಲಿ: ಸಂಕಷ್ಟಗಳು ಬಂದಾಗ ಒಂದರ ಹಿಂದೆ ಒಂದರಂತೆ ಬರುತ್ತದೆ ಎನ್ನುವ ಮಾತಿನಂತೆ ಇದೀಗ ಕೋವಿಡ್ ವೈರಸ್ ಕಾಟದಿಂದ ನಲುಗಿರುವ ಭಾರತಕ್ಕೆ ಚಂಡಮಾರುತದ ಭೀತಿಯೊಂದು ಬಂದೊದಗಿದೆ.
ಈ ಋತುವಿನ ಮೊದಲ ಚಂಡಮಾರುತಕ್ಕೆ ಅಂಫಾನ್ ಎಂದು ಹೆಸರಿಸಲಾಗಿದ್ದು ಮುಂದಿನ ಕೆಲ ದಿನಗಳಲ್ಲಿ ಈ ಚಂತಮಾಡುತ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಹುಟ್ಟಿಕೊಂಡು ಬಳಿಕ ಚಂಡಮಾರುತದ ರೂಪವನ್ನು ತಾಳಿ ಭಾರತದ ಪಶ್ಚಿಮ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ.
ಮುಂದಿನ 24 ಗಂಟೆಗಳ ಅವಧಿಯಲ್ಲಿ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಉಂಟಾಗಲಿರುವ ನಿಮ್ನ ಒತ್ತಡದ ಕಾರಣದಿಂದ ಕಾಣಿಸಿಕೊಳ್ಳುವ ಭಾರೀ ಸ್ವರೂಪದ ಗಾಳಿಯು ಈ ಭಾಗದಲ್ಲಿ ಭರ್ಜರಿ ಮಳೆಯನ್ನುಂಟುಮಾಡಲಿದೆ ಎಂದು ಇಲಾಖೆಯು ತನ್ನ ಮಾಹಿತಿಯಲ್ಲಿ ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ಉಂಟಾಗಲಿರುವ ನಿಮ್ನ ಒತ್ತಡವು ಬಳಿಕದ 24 ಗಂಟೆಗಳಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ ಹಾಗೂ ಇದರ ತೀವ್ರತೆಯನ್ನು ಹವಾಮಾನ ಇಲಾಖೆಯ ತಜ್ಞರು ಅಂದಾಜು ಮಾಡುತ್ತಿದ್ದಾರೆ. ಒಂದುವೇಳೆ ಇದು ಚಂಡಮಾರುತ ಸ್ವರೂಪವನ್ನು ಪಡೆದುಕೊಂಡರೆ ಇದನ್ನು ‘ಅಂಫಾನ್’ ಎಂದು ಕರೆಯಲಾಗುತ್ತದೆ ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಬಂಧಿತ ರಾಜ್ಯಗಳಿಗೆ ರವಾನಿಸಲಾಗುತ್ತದೆ.
ವಾಯುಭಾರ ಕುಸಿತದ ಕಾರಣದಿಂದ ದಕ್ಷಿಣ ಅಂಡಮಾನ್ ಸಮುದ್ರ ಭಾಗ, ಬಂಗಾಳ ಕೊಲ್ಲಿಯ ಆಗ್ನೇಯ ಭಾಗಗಳು, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹಗಳೂ ಸೇರಿದಂತೆ ಹಿಮಾಲಯದ ಪಶ್ಚಿಮ ಭಾಗಗಳು, ಪಂಜಾಬ್, ಹರ್ಯಾಣ, ಚಂಡೀಗಢ, ದೆಹಲಿ, ಉತ್ತರಪ್ರದೇಶ ಮತ್ತು ರಾಜಸ್ಥಾನದ ಹಲವು ಕಡೆಗಳಲ್ಲಿ ಮೇ 3 ರಿಂದ 6ರವರೆಗೆ ಗುಡುಗು ಸಹಿತ ಮಳೆಯನ್ನು ಸುರಿಸಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆಯು ನೀಡಿದೆ.