Advertisement

ನಾಳೆ ಕಡಲಿಗಿಳಿಯಲಿವೆ ದೋಣಿಗಳು

09:47 AM Jul 31, 2018 | |

ಮಂಗಳೂರು / ಮಲ್ಪೆ : ಮಳೆಗಾಲದ 60 ದಿನಗಳ ಸುದೀರ್ಘ‌ ರಜೆಯ ಬಳಿಕ ಆ. 1 ರಿಂದ ಹೊಸ ಮೀನುಗಾರಿಕೆ ಋತು ಆರಂಭವಾಗುತ್ತಿದೆ. ಮೀನುಗಾರರು ಹೊಸ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಬಾರಿ ಮುಂಗಾರು ಪ್ರಬಲವಾಗಿದ್ದು, ಕಡಲು ಬಹಳಷ್ಟು ಪ್ರಕ್ಷುಬ್ಧವಾದ ಹಿನ್ನೆಲಯಲ್ಲಿ ಎಲ್ಲ ಬಗೆಯ ಮೀನು ಗಾರಿಕೆ ಬೋಟುಗಳು ಆ.1ರಿಂದಲೇ ಮೀನುಗಾರಿಕೆಗೆ ತೆರಳುವುದು ಕಷ್ಟಸಾಧ್ಯ. ಆದರೆ ಶೇ.10ರಿಂದ 20ರಷ್ಟು ಬೋಟುಗಳು ಬಲೆ ಬೀಸಲು ಸಿದ್ಧತೆ ಕೈಗೊಂಡಿವೆ. ಉಳಿದ ಬೋಟುಗಳು ಮುಂದಿನ ಒಂದು ವಾರದೊಳಗೆ ಕಡಲಿ ಗಿಳಿಯುವ ಸಾಧ್ಯತೆ ಇದೆ. 

Advertisement

ಮೀನುಗಾರಿಕೆ ಋತು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮಂಗಳೂರಿನ ಧಕ್ಕೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಎರಡು ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಧಕ್ಕೆಗೆ ಹೊಸ ರೂಪ ದೊರೆಯುತ್ತಿದೆ. ರಜೆಯ ಮೂಡ್‌ನ‌ಲ್ಲಿದ್ದ ಹೊರ ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಮೀನುಗಾರರು ಧಕ್ಕೆಯತ್ತ ಮುಖ ಮಾಡಿದ್ದಾರೆ. ರಜೆಯ ಸಂದರ್ಭ ದುರಸ್ತಿ ಸಹಿತ ಇತರ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಬೋಟುಗಳು ಈಗ ಧಕ್ಕೆಯಲ್ಲಿ ಲಂಗರು ಹಾಕಿ, ಮೀನುಗಾರಿಕೆಗೆ ತೆರಳಲು ಸನ್ನದ್ಧವಾಗಿ ನಿಂತಿವೆ. ಧಕ್ಕೆಯಲ್ಲಿ ಸುಮಾರು 1,420 ಮೋಟಾರ್‌ ಅಳವಡಿಸಿದ ನಾಡದೋಣಿ ಹಾಗೂ 1,234ರಷ್ಟು ಯಾಂತ್ರೀಕೃತ ದೋಣಿಗಳಿವೆ. ಮಲ್ಪೆಯಲ್ಲಿ 700 ನಾಡದೋಣಿಗಳು, 2,200 ಮೋಟಾರ್‌ ಅಳವಡಿಸಿದ ದೊಡ್ಡ ದೋಣಿಗಳಿವೆ. 

2017ರ ಎಪ್ರಿಲ್‌ನಿಂದ 2018ರ ಮಾರ್ಚ್‌ ವರೆಗೆ ಉಭಯ ಜಿಲ್ಲೆಗಳಲ್ಲಿ ಒಟ್ಟು 3,236.99 ಕೋ.ರೂ. ಮೌಲ್ಯದ 2,92,061 ಟನ್‌ ಮೀನು ಹಿಡಿಯಲಾಗಿತ್ತು. ಈ ಪೈಕಿ ದ.ಕ. ಜಿಲ್ಲೆಯಲ್ಲಿ 1,656.99 ಕೋ.ರೂ. ಮೌಲ್ಯದ 1,63,925 ಟನ್‌ ಮೀನು ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (1,582.90 ಕೋ.ರೂ. ಮೌಲ್ಯದ 1,52,573 ಟನ್‌) 11,352 ಟನ್‌ ಅಧಿಕ ಮೀನು ಲಭ್ಯ ವಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ವರೆಗೆ, 1,580.00 ಕೋ.ರೂ. ಮೌಲ್ಯದ 1,28,136 ಟನ್‌ ಮೀನು ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (1,456.64 ಕೋ.ರೂ. ಮೌಲ್ಯದ 1,44,525 ಟನ್‌) 16,389 ಟನ್‌ ಕಡಿಮೆ ಮೀನು ಲಭ್ಯವಾಗಿತ್ತು. 2015-16ರಲ್ಲಿ ದ.ಕ. ಜಿಲ್ಲೆಯಲ್ಲಿ 1,370.53 ಕೋ.ರೂ. ಮೌಲ್ಯದ 1,51,458 ಟನ್‌ ಹಾಗೂ ಉಡುಪಿ ಜಿಲ್ಲೆಯಲ್ಲಿ 1,463.66 ಕೋ.ರೂ. ಮೌಲ್ಯದ 1,51,099 ಟನ್‌ ಮೀನು ಹಿಡಿಯಲಾಗಿದೆ. 

5 ರಾಜ್ಯಗಳಲ್ಲಿ  ಒಂದೇ ಅವಧಿಯ ರಜೆ
ಪಶ್ಚಿಮ ಕರಾವಳಿಯಲ್ಲಿ 2015 ಕ್ಕಿಂತ ಹಿಂದೆ 57 ದಿನ (ಜೂ. 15 ರಿಂದ ಆ. 10) ಮೀನು ಗಾರಿಕೆ ನಿಷೇಧ ವಿತ್ತು. ಆದರೆ ಮತ್ಸ   ಕ್ಷಾಮ ನೀಗಿ ಸುವ ಉದ್ದೇಶ ದಿಂದ 2015ರಲ್ಲಿ ಕೇಂದ್ರ ಸರಕಾರ ಪಶ್ಚಿಮ ಕರಾವಳಿಗೆ ಏಕ ರೂಪ ದಲ್ಲಿ 61 ದಿನ ನಿಷೇಧ ವಿಧಿಸಿ ಆದೇಶ ಹೊರಡಿ ಸಿದೆ. ಅದರಂತೆ ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಒಂದೇ ಅವಧಿಯ ಮೀನುಗಾರಿಕೆ ನಿಷೇಧವಿದೆ. 

ಮೀನುಗಾರರಿಗೆ “ಕಾಡ್‌ ಎಂಡ್‌ ಬಲೆ’ ಉಚಿತ
ಸಮುದ್ರದಲ್ಲಿ ಮೀನು ಹಿಡಿಯಲು ಬಳಸುವ ಬಲೆಯ ಕಣ್ಣು ಗಾತ್ರ ಕನಿಷ್ಠ 35 ಎಂ.ಎಂ. ಕಡ್ಡಾಯಗೊಳಿಸಿ ಮೀನುಗಾರಿಕಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮೀನು ಸಿಗುವುದು ಕಡಿಮೆಯಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಸಣ್ಣ ಕಣ್ಣಿನ ಬಲೆಯನ್ನು ಬಳಸಲು ಇನ್ನು ಅವಕಾಶವಿಲ್ಲ. ಈ ಬಗ್ಗೆ ಪ್ರಾರಂಭಿಕ ಹಂತದಲ್ಲಿ ಮೀನುಗಾರರಿಗೆ ಮಾಹಿತಿ ನೀಡುವ ಜತೆಗೆ ಪ್ರೋತ್ಸಾಹ ನೀಡುವ ಇರಾದೆಯಿಂದ “ಕಾಡ್‌ ಎಂಡ್‌ ಬಲೆ’ಯನ್ನು ಉಚಿತವಾಗಿ ನೀಡಲು ಸರಕಾರ ಕ್ರಮ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 800 ಕಾಡ್‌ ಎಂಡ್‌ ಬಲೆ ನೀಡಲು ಗುರಿ ಇರಿಸಲಾಗಿದ್ದು, ತಲಾ ಒಂದು ಬಲೆಗೆ 10,000 ರೂ. ವೆಚ್ಚವಾಗಲಿದೆ ಎನ್ನುತ್ತಾರೆ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಮಹೇಶ್‌. ಮಲ್ಪೆ ಬಂದರಿಗೆ ಸುಮಾರು 1,300 ಬಲೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next