Advertisement
ಮಾ. 20ರಂದು ನೀಡಲಾಗಿದ್ದ ತೀರ್ಪಿನಲ್ಲಿ, ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ವಿರುದ್ಧದ ಜಾತಿ ನಿಂದನೆ ನಿಗ್ರಹ ಕಾಯ್ದೆ’ಯಲ್ಲಿನ ಕೆಲವು ನಿಯಮಗಳನ್ನು ಸಡಿಲಿಸಿದ್ದ ಸುಪ್ರೀಂ ಕೋರ್ಟ್, ದಲಿತರಿಂದ ಜಾತಿ ನಿಂದನೆ ದೂರು ದಾಖಲಾದ ತತ್ಕ್ಷಣವೇ ಆರೋಪಿಗಳನ್ನು ಬಂಧಿಸುವ ಕ್ರಮವನ್ನು ರದ್ದುಗೊಳಿಸಿತ್ತು. ಇದರಿಂದ ರೊಚ್ಚಿಗೆದ್ದಿರುವ ದಲಿತ ಸಂಘಟನೆಗಳು, ಸೋಮವಾರ ‘ಭಾರತ ಬಂದ್’ಗೆ ಕರೆ ನೀಡಿದ್ದವು. ನಾನಾ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಒಟ್ಟು 9 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಸುಪ್ರೀಂಕೋರ್ಟ್ನಲ್ಲಿ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿತ್ತು. ಅಂದಹಾಗೆ, ಸೋಮವಾರದ ಗಲಭೆಗಳಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 11ಕ್ಕೇರಿದೆ.
Related Articles
ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎ.ಕೆ. ಗೋಯೆಲ್ ಮತ್ತು ನ್ಯಾ| ಯು.ಯು. ಲಲಿತ್ ಅವರನ್ನು ಒಳಗೊಂಡ ನ್ಯಾಯಪೀಠ, “ಪ್ರತಿಭಟನೆಗೆ ಇಳಿದವರು ಸುಪ್ರೀಂ ಕೋರ್ಟ್ ತೀರ್ಪನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ತೋರುತ್ತದೆ. ನಾವು ಎಸ್ಸಿ, ಎಸ್ಟಿ ಕಾಯ್ದೆಯನ್ನು ದುರ್ಬಲಗೊಳಿಸಿಲ್ಲ. ಬದಲಿಗೆ, ಕಾಯ್ದೆಯ ದುರುಪಯೋಗದಿಂದ ಮುಗ್ಧರು ತೊಂದರೆಗೀಡಾಗುವುದನ್ನು ತಪ್ಪಿಸುವ ಪ್ರಯತ್ನ ಮಾಡಿದ್ದೇವೆ” ಎಂದು ಸ್ಪಷ್ಟವಾಗಿ ಹೇಳಿದೆ.
Advertisement