ಕಲಬುರಗಿ: ತಾಲೂಕಿನ ಗ್ರಾಮೀಣ ಮತಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಿಗಾಗಿ ವಿಶೇಷವಾಗಿ ಮೀಸಲಿಟ್ಟಿರುವ ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿ ಪೋಲು ಮಾಡಲಾಗಿದೆ ಎಂದು ಆಪಾದಿಸಿ ಮಂಗಳವಾರ ಪ್ರಜಾ ಪರಿವರ್ತನ ವೇದಿಕೆ ಕಾರ್ಯಕರ್ತರು ಲೋಕೋಪಯೋಗಿ ಒಳನಾಡು ಜಲಸಾರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಬಳಿಕ ಲೋಕೋಪಯೋಗಿ ಒಳನಾಡು ಜಲಸಾರಿಗೆ ಇಲಾಖೆ ಅಧೀಕ್ಷಕ ಅಭಿಯಂತರರ ಮುಖೇನ ಸಚಿವ ಎಚ್.ಸಿ.ಮಹಾದೇವಪ್ಪ ಅವರಿಗೆ ಮನವಿ ಸಲ್ಲಿಸಿ, ಉಭಯ ಪಂಗಡದ ಕಾಲೋನಿಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಎಸ್ಸಿ, ಎಸ್ಟಿ ಜನರು ಇಲ್ಲದ ವಸತಿ ಪ್ರದೇಶದಲ್ಲಿ ರಸ್ತೆ, ಚರಂಡಿ ಹಾಗೂ ಇತರೆ ಮೂಲಸೌಕರ್ಯಗಳನ್ನು ಮಾಡಲಾಗಿದೆ ಎಂದು ಆಪಾದಿಸಿದರು.
ಕಲಬುರಗಿಯ ಇಎಸ್ಐ ಆಸ್ಪತ್ರೆಯ ಮುಖ್ಯ ರಸ್ತೆಯಿಂದ ಸಣ್ಣಕ್ಕಿ ಮನೆವರೆಗೆ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಕುಸುನೂರು ಗ್ರಾಮ ಎನ್ಜಿಒ ಕಾಲೋನಿಯಲ್ಲಿ 6ಲಕ್ಷ ರೂ. ರಸ್ತೆ, ಮಹಾಗಾಂವ ಗ್ರಾಮದಲ್ಲಿ 30 ಲಕ್ಷ ರೂ. ಎಸ್ಸಿಪಿ ಅನುದಾನ, ಹಾಗರಗಾ ಗ್ರಾಮದಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಡಾಂಬರೀಕರಣ ಮಾಡಿರುವ ಪ್ರದೇಶದಲ್ಲಿ ಒಬ್ಬರು, ಇಬ್ಬರಷ್ಟೇ ಎಸ್ಸಿ, ಎಸ್ಟಿ ಸಮುದಾಯದ ಜನರಿದ್ದಾರೆ.
ಇನ್ನೂ ಕೆಲವು ಕಡೆಗಳಲ್ಲಿ ಕಾಮಗಾರಿ ಮಾಡದೆಯೇ ಬಿಲ್ಗಳನ್ನು ಎತ್ತಿ ಹಾಕಲಾಗಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಜೆಇ ರμàಕ್, ಎಇಇ ಅಜಿಜೋದ್ದಿನ್ ಹಾಗೂ ಇಇ ಮಾರುತಿ ಮಾಲೆ ಅವರ ವಿರುದ್ಧ ಕ್ರಮ ಕೈಗೊಂಡು ಶಿಕ್ಷೆಗೆ ಗುರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿಭಾಗೀಯ ಅಧ್ಯಕ್ಷ ರಮೇಶ ಬೆಳಕೋಟಿ, ಜಿಲ್ಲಾಧ್ಯಕ್ಷ ವಿದ್ಯಾದರ ಮಾಳಗೆ, ರಾಜ್ಯ ಕಾರ್ಯದರ್ಶಿ ಪ್ರಕಾಶ ಹಾಗರಗಿ, ಜಿಲ್ಲಾ ಉಪಾಧ್ಯಕ್ಷ ರವಿ ಕೋರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಜಿಡಗಾ, ವಿಠuಲ ಕೋನೇಕರ, ವಿಕಾಶ ತಿಪ್ಪಾ, ಗೌತಮ ಸಾಲೇಗಾಂವ, ಸುಧೀರ ಹೊಸಮನಿ ಮತ್ತಿತರರು ಪಾಲ್ಗೊಂಡಿದ್ದರು.