Advertisement

ಶ್ರೀ ಸೋಮನಾಥೇಶ್ವರ ದೇವಸ್ಥಾನದ ಗೋಪುರದಲ್ಲಿ ಆರಂಭವಾದ ಶಾಲೆಗೀಗ 112 ವರ್ಷ

09:52 AM Nov 29, 2019 | mahesh |

19ನೇಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1907 ಶಾಲೆ ಆರಂಭ
ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಶಾಲೆ

ಮೂಡುಬಿದಿರೆ: ಮೂಡುಬಿದಿರೆಯಿಂದ ಪಶ್ಚಿಮಕ್ಕೆ ಸುಮಾರು 5 ಕಿ.ಮೀ. ದೂರದಲ್ಲಿರುವ ಪುತ್ತಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1907ರಲ್ಲಿ ಪ್ರಾರಂಭವಾಯಿತು.
ಆರಂಭದ ದಿನಗಳಲ್ಲಿ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಗೋಪುರದಲ್ಲಿಯೇ ಶಾಲೆ ನಡೆಸಲಾಗುತ್ತಿತ್ತು. ಸ್ಥಾಪಕರ ಖಚಿತ ಮಾಹಿತಿ ಇಲ್ಲ. ಆದರೆ, ಶಾಲೆ ನಡೆಸಲು ನಡಿಗುತ್ತು ಸುಬ್ರಾಯ ಭಟ್‌, ಆನಡ್ಕ ಅಣ್ಣೆರ್‌, ಅಡಿಗಳ್‌ ನಾರಾಯಣ ಭಟ್‌, ಸುಬ್ರಾಯ ಮಡ್ಮಣ್ಣಾಯ, ವೆಂಕಟರಮಣ ಮಡ್ಮಣ್ಣಾಯ ಇವರೇ ಮೊದಲಾದವರು ಪರಿಶ್ರಮಿಸಿದ್ದಾರೆನ್ನಲಾಗುತ್ತಿದೆ. 1ರಿಂದ 4ನೇ ತರಗತಿಯವರೆಗೆ ಶಿಕ್ಷಣಾವಕಾಶವಿತ್ತು.

ಶತಮಾನೋತ್ಸವ
ಆರಂಭದ ವರ್ಷಗಳಲ್ಲಿ 50-60 ವಿದ್ಯಾರ್ಥಿಗಳು. ಮುಂದೆ ಹತ್ತಿರದ, ಎತ್ತರದ ಜಾಗದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಗೊಂಡಿತು. 1976ರಲ್ಲಿ ವೇಳೆಗೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. 2009ರಲ್ಲಿ ಶತಮಾನೋತ್ಸವ ಆಚರಿಸಲಾಗಿದೆ.

83 ಸೆಂಟ್ಸ್‌ ಜಾಗದಲ್ಲಿ ಶಾಲಾ ಕಟ್ಟಡವಿದೆ, 52 ಸೆಂಟ್ಸ್‌ ಸರಕಾರದಿಂದ ಲಭಿಸಿದ್ದು ಆಟದ ಮೈದಾನಕ್ಕಾಗಿ ಬಳಕೆಯಾಗುತ್ತಿದೆ. ಶಾಲೆ ಸ್ಥಾಪನೆಯಾದಾಗ ಪುತ್ತಿಗೆ, ನಡಿಗುತ್ತು, ಪಡುಬೆಟ್ಟು, ಕೊಲಕಾಡಿ, ಸಿರಿಯಾರ, ಕುಂಗೂರು, ಮುರಂತಕೋಡಿ, ಕರಿಮುಗೇರು, ಕಂಚೀಬೈಲು, ಸಾಂತಿಂಜ ಹೀಗೆ ಹತ್ತಿರದ ಹತ್ತಾರು ಪ್ರದೇಶಗಳ, ವಿಶೇಷವಾಗಿ ಸಾಕಷ್ಟು ಸಂಖ್ಯೆಯಲ್ಲಿದ್ದ ಕೂಡುಕುಟುಂಬಗಳಲ್ಲಿದ್ದ ಮಕ್ಕಳಿಗೆ ಮಾತ್ರವಲ್ಲ ಸಂಪಿಗೆ, ಹಂಡೇಲು, ಗುಡ್ಡೆಯಂಗಡಿ, ಕೇಮಾರು, ಕಡಂದಲೆ ವಿದ್ಯಾಗಿರಿ ಹೀಗೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೂ ಅನುಕೂಲವಾಯಿತು. ಈಗ ಈ ಎಲ್ಲ ಪ್ರದೇಶಗಳ ವ್ಯಾಪ್ತಿಯಲ್ಲಿ 10 ಶಾಲೆಗಳಿವೆ.

Advertisement

ಸಾಧಕ ಹಳೆ ವಿದ್ಯಾರ್ಥಿಗಳು
ಅದಮಾರು ವಿಭುದಪ್ರಿಯ ಶ್ರೀಗಳ ಪೂರ್ವಾಶ್ರಮದ ತಾಯಿ ಲಕ್ಷ್ಮೀ , ಸಾಹಿತಿ ರಸಿಕ ಪುತ್ತಿಗೆ, ಪುತ್ತಿಗೆ ದೇಗುಲದ‌ ಪ್ರಧಾನ ಅರ್ಚಕ ಅಡಿಗಳ್‌ ಶ್ರೀನಿವಾಸ ಭಟ್‌, ನಡಿಗುತ್ತು ವಾಸುದೇವ ಭಟ್‌, ಮುರಂತಕೋಡಿ ಶಾಸ್ತ್ರಿ, ಕುಂಗೂರು ನಾರಾಯಣ ಆಚಾರ್ಯ, ಹೋಟೆಲ್‌ ಉದ್ಯಮಿ ಬಿಲಾೖ ವಾಸುದೇವ ರಾವ್‌, ಡಾ| ಪಿ. ಪದ್ಮನಾಭ ಉಡುಪ , ಪಿ. ವಾದಿರಾಜ ಭಟ್‌, ಹೋಟೆಲ್‌ ಉದ್ಯಮಿ ಪಿ.ಎಲ್‌. ಉಪಾಧ್ಯಾಯ, ಪಿ. ರಾಮದಾಸ ಮಡ್ಮಣ್ಣಾಯ, ಸಿಎ ಬಾಲಕೃಷ್ಣ ಭಟ್‌, ವಕೀಲ ಕಾರ್ತಿಕ್‌ ಉಡುಪ, ಗ್ರಾ.ಪಂ. ಸದಸ್ಯ ನಾಗವರ್ಮ ಜೈನ್‌, ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಶ್ರೀನಿವಾಸ ಭಟ್‌, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಾದಿರಾಜ ಮಡ್ಮಣ್ಣಾಯ, ಕಾರ್ಯದರ್ಶಿ, ನಿವೃತ್ತ ಶಿಕ್ಷಕ , ಲೇಖಕ ಎಸ್‌.ಯು. ಪುತ್ತಿಗೆ, ಕೋಶಾಧಿಕಾರಿ, ಕಲಾವಿದೆ ವಿದ್ಯಾರಮೇಶ್‌ ಭಟ್‌ ನಡಿಗುತ್ತು ಹೀಗೆ ಹಳೆವಿದ್ಯಾರ್ಥಿಗಳ ಪಟ್ಟಿ ಬೆಳೆಯುತ್ತದೆ.

ಶಿಕ್ಷಕರು/ಮುಖ್ಯಶಿಕ್ಷಕರಲ್ಲಿ ಬೆರ್ಕೆ ಬಾಬಣ್ಣ, ಪರಮೇಶ್ವರಯ್ಯ, ಸೋಮನಾಥಯ್ಯ, ನಾಗಪ್ಪಯ್ಯ, ಗಂಗಮ್ಮ , ರಾಜೀವಿ, ಜಯಂತಿ, ಚಂದು ಮೊಲಿ, ಮುಂದೆ ಸೇನೆ ಸೇರಿದ ಗುಡ್ಡೊಟ್ಟು ಪುತ್ತಿಗೆ ಪದ್ಮಯ್ಯ ಶೆಟ್ಟಿ, ಸಂಜೀವ ಪೂಜಾರಿ, ಸುದೀರ್ಘ‌ಕಾಲ ಸೇವೆಸಲ್ಲಿಸಿ ಶಾಲೆಯನ್ನು ಶೈಕ್ಷಣಿಕವಾಗಿ ಎತ್ತರಿಸಿದ ಪ್ರೇಮಲತಾ, ಕಾಶಿಯಮ್ಮ, ಮಾಡ್ತ ಟೀಚರ್‌ ಅವರನ್ನು ಸಾಂಕೇತಿಕವಾಗಿ ಹೆಸರಿಸಬಹುದು. 1947ರಲ್ಲಿ ಸ್ವಾತಂತ್ರ್ಯ ಲಭಿಸಿದಾಗ ತ್ರಿವರ್ಣ ಬಾವುಟ ಹಿಡಿದು ಅರಸುಕಟ್ಟೆಗೆ ಹೋಗಿ ಊರಿಡೀ ತಿರುಗಾಡಿ ಬಂದ ನೆನಪು ಹಳೆವಿದ್ಯಾರ್ಥಿ ಎಸ್‌ಯು ಪುತ್ತಿಗೆಯವರಿಗಿದೆ.

ಸುಸಜ್ಜಿತ ಸೌಲಭ್ಯಗಳು
ಪುತ್ತಿಗೆ ಶಾಲೆಯಲ್ಲಿ ಪ್ರಸ್ತುತ ಓರ್ವ ರೆಗ್ಯುಲರ್‌, ಒಂದು ನಿಯೋಜಿತ, 2 ಅತಿಥಿ, 1 ಗೌರವ ಶಿಕ್ಷಕರಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳಿದ್ದಾರೆ. ಸರಕಾರದ ಸವಲತ್ತುಗಳಲ್ಲದೆ, ಕುಡಿಯುವ ನೀರು, ಗ್ರಂಥಾಲಯ, ಶೌಚಾಲಯ, ದಾನಿಗಳಿಂದ ಪುಸ್ತಕ, ಅಟೋರಿಕ್ಷಾ ಸೌಲಭ್ಯ ಒದಗಿಬಂದಿದೆ. ಹೆತ್ತವರು, ಊರವರ ಸಹಕಾರದಲ್ಲಿ ಅಕ್ಷರ ತೋಟ ನಿರ್ವಹಿಸಲಾಗುತ್ತಿದೆ. ನರೇಗಾದಿಂದ ಭಾಗಶಃ ಆವರಣ ಗೋಡೆ ನಿರ್ಮಾಣ ನಡೆದಿದೆ. ಈಗ ಜೋಸೆಫ್‌ ಮೊಂತೆರೋ ಮುಖ್ಯೋಪಾಧ್ಯಾಯರು. ವನಿತಾ ನಾಯ್ಕ ಎಸ್‌ಡಿಎಂಸಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಲ್ಲ ವ್ಯವ ಸ್ಥೆಗಳನ್ನು ಹೊಂದಿರುವ ಈ ಶಾಲೆಯಲ್ಲಿ ಉತ್ತಮ ಶಿಕ್ಷಕ ವೃಂದವಿದೆ. ಶೈಕ್ಷಣಿಕ ಮಾತ್ರವಲ್ಲ ಕ್ರೀಡಾರಂಗದಲ್ಲೂ ನಮ್ಮ ಮಕ್ಕಳು ಗುರುತಿಸಿಕೊಂಡಿರುವುದು ನಮಗೆ ಸಂತಸದ ಸಂಗತಿ’
– ಜೋಸೆಫ್‌ ಮೊಂತೆರೋ, ಮುಖ್ಯೋಪಾಧ್ಯಾಯರು

ಶತಮಾನ ಕಂಡ ಶಾಲೆ ಇದಾದರೂ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಅರಿತು ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಮುಂದಾಗಬೇಕು. ಪೋಷಕರೂ ಮಕ್ಕಳನ್ನು ಸ.ಶಾಲೆಗೆ ಸೇರಿಸಿದರೆ ಮಾತ್ರ ಶಾಲೆಯ ಪುನಶ್ಚೇತನ ಸಾಧ್ಯ.
-ಸಿಎ ಬಾಲಕೃಷ್ಣ ಭಟ್‌ ಪುತ್ತಿಗೆ, ಹಳೆವಿದ್ಯಾರ್ಥಿ.

- ಧನಂಜಯ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next