Advertisement

ಮಳೆ ಬಂದ್ರೆ ಈ ಶಾಲಾ ಮಕ್ಕಳಿಗೆ ದೇಗುಲವೇ ಆಸರೆ

04:54 PM Aug 01, 2022 | Team Udayavani |

ರಾಮನಗರ: ಮಳೆ ಮುನ್ಸೂಚನೆ ಕಂಡರೆ ಸಾಕು ಈ ಶಾಲೆಯ ಮಕ್ಕಳು ಪಕ್ಕದ ದೇಗುಲಕ್ಕೆ ಓಡಬೇಕು. ಏಕೆಂದರೆ, ಕಟ್ಟಡ ಶಿಥಿಲವಾಗಿರುವುದು. ಅದು ಯಾವ ಮಟ್ಟಿಗೆ ಅಂದ್ರೆ ಮಳೆ ಬಂದ್ರೆ ಚಾವಣಿಯಿಂದಲೇ ನೀರು ಶಾಲಾ ಕೊಠಡಿಯೊಳಗೆ ನುಗ್ಗುತ್ತದೆ. ಇದರಿಂದ ಆತಂಕಗೊಂಡ ಶಿಕ್ಷಕರು ಮಳೆ ಬಂದಾಗ ದೇವಾಲಯದ ಆವರಣದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಪ್ರವಚನ ಮಾಡುತ್ತಾರೆ.

Advertisement

ನಗರದ 31ನೇ ವಾರ್ಡ್‌ ಅರ್ಚಕರಹಳ್ಳಿಯಲ್ಲಿನ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಕಟ್ಟಡಗಳಿದ್ದು, ಎರಡನ್ನು 30 ವರ್ಷ ಹಿಂದೆ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಾಗಿರುವ ಕಾರಣ, ಬೇಗನೇ ಶಿಥಿಲಗೊಂಡಿವೆ. ಉಳಿದ ಎರಡು ಕೊಠಡಿ 40 ವರ್ಷ ಹಳೆಯದ್ದಾಗಿವೆ. ಇಲ್ಲಿ ನಾಲ್ವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯೋಪಾಧ್ಯಾಯರು ಸೇರಿ ಮೂವರು ಸರ್ಕಾರಿ ಶಿಕ್ಷಕರು, ಒಬ್ಬ ಅತಿಥಿ ಶಿಕ್ಷಕ ಇದ್ದಾರೆ. 1ರಿಂದ 7ನೇ ತರಗತಿವರೆಗೆ ಒಟ್ಟು 90 ವಿದ್ಯಾರ್ಥಿಗಳಿದ್ದು, ಮೂರು ಕೊಠಡಿಗಳ ಚಾವಣಿ ಶಿಥಿಲಗೊಂಡಿದೆ. ಅಲ್ಲದೆ, ಕಟ್ಟಡದ ಮೋಲ್ಡ್‌ಗೆ ಬಳಸಲಾಗಿದ್ದ ಕಬ್ಬಿಣದ ಸರಳು ತುಕ್ಕು ಹಿಡಿದು ಹೊರಗೆ ಕಾಣಿಸುತ್ತವೆ. ಇದರಿಂದ ಮಕ್ಕಳು, ಶಿಕ್ಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಮಕ್ಕಳ ಕಳುಹಿಸಲು ಹಿಂದೇಟು: ಶಾಲಾ ಕೊಠಡಿ ಸ್ಥಿತಿ ನೋಡಿ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಶಾಲೆ ಗಳ ಉಳಿವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಸರ್ಕಾರ ಸೌಲಭ್ಯ ನೀಡುವಲ್ಲಿ ಮಾತ್ರ ಸ್ವಲ್ಪ ಹಿಂದೆ ಬಿದ್ದಿದೆ ಎಂದರೆ ತಪ್ಪಲ್ಲ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಕೆಲವು ಶಿಕ್ಷಕರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಇಲಾಖೆಯ ಅಧಿಕಾರಿಗಳು ಕೂಡ ಹಲವು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

ಖಾಸಗಿ ವಲಯಗಳಿಂದ ಸಹಕಾರ ಪಡೆದು ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಇದರ ಜೊತೆಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡಿ ಸೌಲಭ್ಯ ಕಲ್ಪಿಸಬೇಕಿದೆ. ಸರ್ಕಾರ ಶಾಲೆಗಳ ಕೊಠಡಿ ನವೀಕರಣ ಮತ್ತುನೂತನ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡುವಮೂಲಕ ಮಕ್ಕಳ ಸುರಕ್ಷತೆ ಜೊತೆಗೆ ಉತ್ತಮ ಶಿಕ್ಷಣ ಕಲಿಕೆಯ ವಾತಾವರಣ ಸೃಷ್ಟಿಸಿದರೆ ಸರ್ಕಾರಿ ಶಾಲೆಗಳು ಉಳಿಯಲಿವೆ. ಈಗಾಗಲೇ ಶಾಲೆಗೆ ಮೂರು ಕೊಠಡಿವುಳ್ಳ ಹೊಸ ಕಟ್ಟಡ, ಎರಡು ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದ್ದು, ನಗರೋತ್ಥಾನ ಯೋಜನೆಯಡಿ ಕಾಮಗಾರಿ ಪ್ರಾರಂಭಗೊಳ್ಳ ಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾವುದೇ ಸರ್ಕಾರಿ ಶಾಲೆ ನಗರ ಪ್ರದೇಶದಲ್ಲಿದ್ದರೆ ನಗರೋತ್ಥಾನ ಯೋಜನೆಯಡಿ ಹಣ ಮೀಸಲಿಟ್ಟು ದುರಸ್ತಿಮಾಡುವುದು, ನೂತನ ಕಟ್ಟಡ ನಿರ್ಮಾಣಕಾರ್ಯ ಸುಗಮವಾಗಿ ಆಗುತ್ತಿದೆ. ಅಲ್ಲದೆ, ಸರ್ಕಾರ ವಿವಿಧ ಯೋಜನೆಗಳಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ. ಮತ್ತುದುರಸ್ತಿ ಕಾರ್ಯಕ್ಕೆ 2 ಕೋಟಿ ರೂ. ಬಿಡುಗಡೆಮಾಡುತ್ತದೆ. ಈ ಶಾಲೆಗೂ ತಾಂತ್ರಿಕತೊಂದರೆ ಇತ್ತು. ಇದೀಗ ಪರಿಹಾರ ಆಗಿದೆ.ಕೆಲವೇ ದಿನಗಳಲ್ಲಿ ಕಾಮಗಾರಿಆರಂಭವಾಗುವ ನಂಬಿಕೆಯಿದೆ. – ನಂಜುಂಡಸ್ವಾಮಿ, ಶಿಕ್ಷಣ ಸಂಯೋಜಕರು

Advertisement

ಶಾಲಾ ಕಟ್ಟಡದ ಚಾವಣಿ ಬಿರುಕು ಬಿಟ್ಟಿದ್ದು, ಸಿಮೆಂಟ್‌ ಪದರ ಆಗ್ಗಾಗ್ಗೆ ಉದುರುತ್ತದೆ.ಇದರಿಂದಾಗಿ ಪಾಠ ಮಾಡುವ ವೇಳೆ ಭಯ ಸಹಜವಾಗಿಯೇ ಇರುತ್ತೆ. ವಿಶೇಷವಾಗಿಮಳೆಗಾಲ ಬಂದ್ರೆ ನಮಗೆ ಆತಂಕ ಜಾಸ್ತಿ. ಆದ್ದರಿಂದ ಮುಂಜಾಗ್ರತಾ ಹಾಗೂ ಮಕ್ಕಳಹಿತದೃಷ್ಟಿಯಿಂದ ದೇವಾಲಯದಲ್ಲಿ ಪಾಠ ಮಾಡ್ತೇವೆ ಅಷ್ಟೇ. ಶಾಲಾ ಜಾಗದ ತಾಂತ್ರಿಕ ಸಮಸ್ಯೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಪರಿಹಾರವಾಗಿದೆ. ಈಗಾಗಲೇ ದುರಸ್ತಿ ಮಾಡುವ ಸಲುವಾಗಿ ಇಲಾಖೆ ಕೂಡ ಕ್ರಮವಹಿಸಿದೆ. ಆದಷ್ಟು ಬೇಗ ಕಟ್ಟಡ ನಿರ್ಮಾಣವಾಗಲಿದೆ ಎಂಬ ವಿಶ್ವಾಸವಿದೆ. – ಯೋಗಾನಂದ ಸ್ವಾಮಿ, ಮುಖ್ಯೋಪಾಧ್ಯಾಯ, ಅರ್ಚಕರಹಳ್ಳಿ ಶಾಲೆ.

– ಎಂ.ಎಚ್‌.ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next