Advertisement

ಲಿಂಚಿಂಗ್‌ ವಿರುದ್ಧ ಕಾನೂನು ತ್ವರಿತವಾಗಿ ಪಾಲನೆಯಾಗಲಿ

06:00 AM Jul 19, 2018 | Team Udayavani |

ನ್ಯಾಯ ನೀಡುವುದು ಕಾನೂನಿನ ಕೆಲಸವೇ ಹೊರತು ಉದ್ರಿಕ್ತ ಗುಂಪಿನ ಕೆಲಸವಲ್ಲ ಎನ್ನುವುದನ್ನು ಥಳಿಸುವವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸಭ್ಯ ಭಾಷೆಯಲ್ಲಿ ಹೇಳಿದಾಗ ಅರ್ಥವಾಗದಿದ್ದರೆ ಕಠಿನವಾಗಿ ವರ್ತಿಸುವುದು ಅನಿವಾರ್ಯ. 

Advertisement

ಅಕ್ರಮ ಗೋ ಸಾಗಣೆ ಮತ್ತು ಮಕ್ಕಳ ಕಳ್ಳರು ಎಂದು ಶಂಕಿಸಿ ಅಮಾಯಕರನ್ನು ಥಳಿಸಿ ಸಾಯಿಸುವ ಭೀಕರ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಸಕಾಲಿಕವೂ, ಸಮುಚಿತವೂ ಹೌದು. ಕಳೆದ ಕೆಲ ವರ್ಷಗಳಿಂದೀಚೆಗೆ ಜನರ ಗುಂಪು ವದಂತಿಗಳನ್ನು ನಂಬಿ ಅಮಾಯಕರನ್ನು ಬಡಿದು ಸಾಯಿಸುವ ಪ್ರಕರಣಗಳು ಕಳವಳಕಾರಿಯಾಗಿ ಹೆಚ್ಚಿದ್ದು, ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ದೇಶ ತಲೆತಗ್ಗಿಸುವಂತಾಗಿದೆ. ಇಂಗ್ಲೀಶ್‌ನಲ್ಲಿ ಲಿಂಚಿಂಗ್‌ ಎಂಬುದಾಗಿ ಕರೆಯಲಾಗುವ ಈ ಕೃತ್ಯದ ಹಿಂದಿರುವುದು ಅಸಹನೆ ಮತ್ತು ಆತಂಕ. ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ಈ ಮಾದರಿಯ ಕೃತ್ಯಗಳು ಸಂಭವಿಸಿವೆ. ಅದರಲ್ಲೂ ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ಐದು ಮಂದಿಯನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಥಳಿಸಿ ಕೊಂದಿರುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ. 

ಸಾಮೂಹಿಕವಾಗಿ ಥಳಿಸಿ ಕೊಲ್ಲುವುದನ್ನು ಸರ್ವೋತ್ಛ ನ್ಯಾಯಾಲಯ° ಭಯಾನಕ ಕೃತ್ಯ ಎಂಬುದಾಗಿ ವ್ಯಾಖ್ಯಾನಿಸಿರುವುದು ಪರಿಸ್ಥಿಯ ಗಂಭೀರತೆಯನ್ನು ತಿಳಿಸುತ್ತದೆ. ಇಂಥ ಕೃತ್ಯಗಳನ್ನು ನಿಯಂತ್ರಿಸದಿದ್ದರೆ ಅದು ಬಿರುಗಾಳಿಯಂತೆ ದೇಶಾದ್ಯಂತ ಹರಡಬಹುದು ಎಂದು ಸಕಾಲಿಕವಾದ ಎಚ್ಚರಿಕೆಯನ್ನು ಇದೇ ವೇಳೆ ನೀಡಿದೆ. ಇಂತಹ ಘಟನೆಗಳನ್ನು ತಡೆಯಲು ಕೇಂದ್ರವಾಗಲಿ, ರಾಜ್ಯ ಸರಕಾರಗಳಾಗಲಿ ಸಮರ್ಪಕ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖೀಸಿದೆ. ದೇಶದ ಪ್ರಜೆಗಳ ಪ್ರಾಣ ಮತ್ತು ಸೊತ್ತುಗಳನ್ನು ರಕ್ಷಿಸಬೇಕಾದದ್ದು ಚುನಾಯಿತ ಸರಕಾರಗಳ ಆದ್ಯ ಕರ್ತವ್ಯ. ಲಿಂಚಿಂಗ್‌ ತಡೆಯಲು ವಿಫ‌ಲವಾಗುವುದು ಎಂದರೆ ಸರಕಾರ ಈ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫ‌ಲವಾಗಿದೆ ಎಂದೇ ಅರ್ಥ. ಹೀಗಾಗಿ ಸರಕಾರಗಳು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಗಂಭೀರವಾಗಿ ಪರಿಗಣಿಸಬೇಕು. 

ಆರಂಭದಲ್ಲೇ ಕಠಿನ ಕ್ರಮ ಕೈಗೊಂಡಿದ್ದರೆ ಜನರಿಗೆ ಕಾನೂನಿನ ಭಯ ಮೂಡುತ್ತಿತ್ತು. ಅಂದರೆ ತತ್‌ಕ್ಷಣ ಸರಕಾರ ಪ್ರತಿಸ್ಪಂದಿಸಿ ಆರೋಪಿಗಳನ್ನು ಹಿಡಿದು ಕಠಿನ ಸಂದೇಶ ರವಾನಿಸುವ ಕೆಲಸವನ್ನು ಮಾಡಬೇಕಿತ್ತು.ಆದರೆ ಗುಂಪು ಸೇರಿ ಸಾಯಿಸುವ ಕೃತ್ಯಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಮರ್ಪಕವಾದ ಕಾನೂನೇ ಇಲ್ಲ. ಪ್ರಸ್ತುತ ಭಾರತೀಯ ದಂಡಸಂಹಿತೆಯ 302 ಮತ್ತು 34ನೇ ಸೆಕ್ಷನ್‌ ಪ್ರಕಾರ ಈ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿನ ಭಯ ಇಲ್ಲ ಎಂದಾದರೆ ಜನರು ತಾವು ಮಾಡಿದ್ದೇ ಸರಿ ಎಂದು ಭಾವಿಸುವ ಅಪಾಯವಿದೆ. ಸಮಾಜ ಈ ಹಂತಕ್ಕೆ ತಲುಪಿದರೆ ಅದು ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ನ್ಯಾಯ ನೀಡುವುದು ಕಾನೂನಿನ ಕೆಲಸವೇ ಹೊರತು ಉದ್ರಿಕ್ತ ಗುಂಪಿನ ಕೆಲಸವಲ್ಲ ಎನ್ನುವುದನ್ನು ಥಳಿಸುವವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಸಭ್ಯ ಭಾಷೆಯಲ್ಲಿ ಹೇಳಿದಾಗ ಅರ್ಥವಾಗದಿದ್ದರೆ ಕಠಿನವಾಗಿ ವರ್ತಿಸುವುದು ಅನಿವಾರ್ಯ.ಇಷ್ಟರ ತನಕ ಸರಕಾರ ಇಂಥ ಕಾಠಿನ್ಯವನ್ನು ತೋರಿಸದಿರುವುದೇ ಪರಿಸ್ಥಿತಿ ಉಲ್ಬಣಿಸಲು ಕಾರಣ. ಈ ಕಠಿನತೆಯನ್ನೀಗ ಆಳುವವರು ತೋರಬೇಕಾಗಿದೆ. ನ್ಯಾಯಾಲಯವೂ ಇದೇ ದಾಟಿಯಲ್ಲಿ ಸರಕಾರಕ್ಕೆ ಚಾಟಿ ಬೀಸಿದೆ. 

ಲಿಂಚಿಂಗ್‌ ತಡೆಯಲು ಸಂಸತ್‌ನಲ್ಲಿ ವಿಶೇಷ ಕಾನೂನು ರಚನೆಯಾಗ ಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ವಿಳಂಬವಿಲ್ಲದೆ ಪಾಲಿಸುವ ವಿವೇಚನೆಯನ್ನು ಸರಕಾರ ತೋರಬೇಕು. ಸಮೂಹದಲ್ಲಿ ಸೇರಿ ಹೊಡೆದು ಸಾಯಿಸಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭಂಡ ಧೈರ್ಯ ಮೂಡಿದರೆ ಕಾನೂನು ಅರ್ಥ ಕಳೆದುಕೊಳ್ಳುತ್ತದೆ. ಸಾಯಿಸುವವರು ಮತ್ತು ಸಾಯಿಸಲು ಕುಮ್ಮಕ್ಕು ನೀಡುವವರು ಇಬ್ಬರನ್ನೂ ಗುರುತಿಸಿ ಶಿಕ್ಷಿಸುವ ಕಾನೂನು ರಚನೆಯಾಗುಬೇಕಿರುವುದು ಸದ್ಯದ ಅಗತ್ಯ. ನಾಗರಿಕ ಸಮಾಜದಲ್ಲಿ ಒಂದು ಲಿಂಚಿಂಗ್‌ ಘಟನೆಯೇ ಎಚ್ಚೆತ್ತುಕೊಳ್ಳಲು ಸಾಕು. ಆದರೆ ನಾವು ಪದೇ ಪದೇ ಲಿಂಚಿಂಗ್‌ ಸಂಭವಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ ಎನ್ನುವುದೇ ನಮ್ಮ ರಾಜಕೀಯ ಇಚ್ಛಾಶಕ್ತಿಯ ಎದುರು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಇಡುತ್ತದೆ. ಇದರಲ್ಲಿ ಪೊಲೀಸರ ಪಾಲೂ ಇದೆ. ಹಲವು ಘಟನೆಗಳು ಪೊಲೀಸರ ಕಣ್ಮುಂದೆಯೇ ನಡೆದಿವೆ. ಕೃತ್ಯವನ್ನು ತಡೆಯುವುದಾಗಲಿ, ಆರೋಪಿಗಳನ್ನು ಬಂಧಿಸುವುದಾಗಲಿ ಸಾಧ್ಯವಾಗಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ. 

Advertisement
Advertisement

Udayavani is now on Telegram. Click here to join our channel and stay updated with the latest news.

Next