Advertisement

ಅಕ್ಷರ ಕಲಿಸುವ ಸಾವಿತ್ರಿ ಜೀವನ ವ್ರತ

10:04 AM Jan 04, 2020 | mahesh |

ಮಹಿಳೆಯರಿಗೆ, ಅದರಲ್ಲಿಯೂ ಸಮಾಜದಲ್ಲಿ ಕೆಳವರ್ಗ ದವರೆಂದು ಅವಗಣನೆಗೆ ಒಳಗಾಗುತ್ತಿದ್ದ ಸಮುದಾಯಕ್ಕೆ ಅಕ್ಷರ ಜ್ಞಾನವನ್ನು ನೀಡಿದವರು ಸಾವಿತ್ರಿ ಬಾಯಿ ಫ‌ುಲೆ. ಅವರು ಅಕ್ಷರ ಕಲಿತದ್ದೇ ತಮ್ಮ ಪತಿ ಜ್ಯೋತಿಬಾ ಫ‌ುಲೆಯವರಿಂದ. ಈ ಅಕ್ಷರ ಜ್ಞಾನದ ಮೂಲಕ ಸಮಾಜದಲ್ಲಿ ಹೊಸ ಜ್ಞಾನೋದಯಕ್ಕೆ ಕಾರಣರಾದವರು.

Advertisement

ಕೆಳವರ್ಗದವರೆಂದು ಅವಗಣನೆಗೆ ಒಳಗಾದವರಿಗೆ ಅಕ್ಷರವನ್ನು ಕಲಿಸಿದ ಸಾವಿತ್ರಿ ಬಾಯಿ ಫ‌ುಲೆ ಅವರಿಗೆ ಮದುವೆಯಾದಾಗ ಎಂಟು ವರ್ಷ. ಅವರ ಪತಿ ಜ್ಯೋತಿಬಾ ಫ‌ುಲೆ ಅವರಿಗೆ 13 ವರ್ಷ.

ಸಾಂಗತ್ಯವೆಂದರೆ ಪರಸ್ಪರರ ಏಳಿಗೆಯನ್ನು ಬಯಸುವುದು ಎಂದು ಜ್ಯೋತಿಬಾ ಫ‌ುಲೆ ಅರಿತಿದ್ದರು. ಹಾಗಾಗಿ, ಪತ್ನಿ ಸಾವಿತ್ರಿಗೆ ಅಕ್ಷರ ಕಲಿಯಲು ಒತ್ತಾಸೆಯಾಗಿ ನಿಂತರು. ಹೀಗೆ ಶಿಕ್ಷಣ ಲೋಕವನ್ನು ಪ್ರವೇಶಿಸಿದ ಸಾವಿತ್ರಿ ಬಾಯಿ ಸಮಾಜದಲ್ಲಿದ್ದ ಏರುಪೇರುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಸಾಮರ್ಥ್ಯ ಪಡೆದರು. ಅಕ್ಷರವಷ್ಟೇ ಅಲ್ಲ, ಹೊಸ ನೋಟವನ್ನೂ ಜ್ಯೋತಿಬಾ ಅವರಿಗೆ ನೀಡಿದ್ದರು. ಅಕ್ಷರ ವಂಚಿತಳಾಗಿದ್ದ ತನಗೆ ದೊರೆತ ಈ ಜ್ಞಾನದ ಬಾಗಿಲನ್ನು ಸಾವಿತ್ರಿಬಾಯಿ ತನ್ನಂತೆಯೇ ವಂಚಿತರಾಗಿದ್ದ ಬೃಹತ್‌ ಸಮಾಜಕ್ಕೆ ನೀಡಲು ಬದುಕನ್ನು ಮುಡಿಪಿಟ್ಟರು. ಜ್ಯೋತಿಬಾ ಅವರೂ ಸಾಮಾಜಿಕ ಹೋರಾಟಗಾರನಾಗಿ ಅದಾಗಲೇ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.

1831ರಲ್ಲಿ ಮಹಾರಾಷ್ಟ್ರದ ನೈಗಾಂನ್‌ ಎಂಬಲ್ಲಿ ಹುಟ್ಟಿದ ಸಾವಿತ್ರಿಬಾಯಿ ಮದುವೆಯಾಗಿ ಅಕ್ಷರ ಜ್ಞಾನವನ್ನು ಪಡೆದು 1847ರಲ್ಲಿ ಮಿಚೆಲ್‌ ಎಂಬವರ ನಾರ್ಮಲ್‌ ಶಾಲೆಯಲ್ಲಿ ಶಿಕ್ಷಕ ತರಬೇತಿ ಪಡೆದರು. ಅವರು ಮಹಾರಾಷ್ಟ್ರದ ಮೊದಲ ಶಿಕ್ಷಕಿಯಾಗಿ ಅಕ್ಷರ ಪ್ರೀತಿಯುಳ್ಳವರಿಗೆ ಅಕ್ಷರ ಜ್ಞಾನ ನೀಡಿದ ಮೊದಲ ಗುರುವೂ ಹೌದು. ಬ್ರಿಟಿಷ್‌ ಸರಕಾರ ಅವರಿಗೆ ಇಂಡಿಯಾಸ್‌ ಫ‌ಸ್ಟ್‌ ಲೇಡಿ ಟೀಚರ್‌ ಎಂಬ ಗೌರವವನ್ನು ನೀಡಿದೆ.

ಬಾಲ್ಯವಿವಾಹ, ಸತಿ ಸಹಗಮನ, ಕೇಶಮುಂಡನ ಕ್ರಮಗಳ ವಿರುದ್ಧ ನಡೆದ ಆಂದೋಲನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಸಾವಿತ್ರಿ ಬಾಯಿ ಮತ್ತು ಜ್ಯೋತಿಬಾ ದಂಪತಿ. ಅಷ್ಟೇ ಅಲ್ಲ, ಸಂತ್ರಸ್ತ ಮಹಿಳೆಯರಿಗೆ ನೆರವಾಗುವ ಕೆಲಸಗಳಲ್ಲಿಯೂ ಸಾವಿತ್ರಿಬಾಯಿ ತೊಡಗಿಸಿಕೊಂಡರು. 1848ರಲ್ಲಿ ಪುಣೆಯ ನಾರಾಯಣ ಪೇಟೆಯ ಬಿಂದೇವಾಡದಲ್ಲಿ ತಳಸಮುದಾಯದ ಹೆಣ್ಣುಮಕ್ಕಳಿಗೆಂದೇ ಪ್ರತ್ಯೇಕ ಶಾಲೆ ತೆರೆದರು. ಇದು ದೇಶದ ಮೊದಲ ಬಾಲಕಿಯರ ಶಾಲೆ. ಮಹಿಳೆಯರಿಗೋಸ್ಕರ ಅವರು 14 ಶಾಲೆಗಳನ್ನು, ಸಂತ್ರಸ್ತರಿಗೆ ನೆಲೆ ಕಲ್ಪಿಸಲು ಅಬಲಾಶ್ರಮಗಳನ್ನು ತೆರೆದರು. ಅನಾಥ ಮಕ್ಕಳನ್ನು ಗುರುತಿಸಿ ಕರೆತಂದು ಆಶ್ರಮವನ್ನು ಕಟ್ಟಿ ಅವರಿಗೆ ವಿದ್ಯಾಭ್ಯಾಸ ನೀಡಿದರು.

Advertisement

ವಿಧವೆಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲದಲ್ಲಿ ಅವರ ಪರ ನಿಂತು ಶಿಕ್ಷಣದ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ವಿಧವೆಯೊಬ್ಬರ ಮಗನನ್ನೇ ದತ್ತು ಪಡೆದುಕೊಂಡು ಆತನನ್ನು ಸಾಕಿ ಸಲಹಿಸಿದರು.

ಸಮಾಜಮುಖೀಯಾದ ಈ ಕೆಲಸಗಳನ್ನು ಮಾಡುವುದು ಸಾವಿತ್ರಿಬಾಯಿ ಅವರಿಗೆ ಸುಲಭದ ಕೆಲಸವಾಗಿರಲಿಲ್ಲ. ಅವರು ಸಮಾಜದ ಪದ್ಧತಿಗಳ ವಿರುದ್ಧ ನಿಂತು ಕೆಲಸ ಮಾಡಬೇಕಿತ್ತು. ಮಹಿಳೆಯರು ಅಕ್ಷರ ಕಲಿಯುವುದೇ ಅಪರಾಧ ಎಂಬ ನಂಬಿಕೆ ಇದ್ದ ಕಾಲದಲ್ಲಿ ಶಿಕ್ಷಕಿಯಾಗಿ ಶಾಲೆಯನ್ನು ತಲುಪುವುದೂ ಕಷ್ಟವಾಗಿತ್ತು. ದಾರಿಯಲ್ಲಿ ಜನರು ಅವರ ಮೇಲೆ ಕಲ್ಲುಗಳನ್ನು ತೂರಿ, ಸೆಗಣಿ ಎರಚಿ ಅವಮಾನಿಸುತ್ತಿದ್ದರು. ಆಕೆ ಮನೋದೃಢತೆ ಹೊಂದಿರುವ ಗಟ್ಟಿಗಿತ್ತಿ. ಮತ್ತೂಂದು ಸೀರೆಯನ್ನು ಬ್ಯಾಗಿನಲ್ಲಿ ಇರಿಸಿಕೊಂಡು ಶಾಲೆಗೆ ತೆರಳಿ, ಸೀರೆ ಬದಲಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ದೈನಂದಿನ ಜೀವನದಲ್ಲಿ ಅವರು ಎಷ್ಟೊಂದು ಅವಮಾನಗಳನ್ನು ನುಂಗಿಕೊಂಡಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ. ವಿಧವೆಯರಿಗೆ, ಕಾನೂನು ಬಾಹಿರವಾಗಿ ಗರ್ಭಿಣಿಯಾದವರಿಗೆ ಅಬಲಾಶ್ರಮಗಳನ್ನು ಸ್ಥಾಪಿಸಿದ ಸಾವಿತ್ರಿ ಬಾಯಿ, ಮಾನವೀಯತೆಯನ್ನೂ ಮನೋಬಲವನ್ನೂ ಹೊಂದಿದ್ದ‌ ಧೀಮಂತೆ.

ಪುರೋಹಿತರ ಉಪಸ್ಥಿತಿಯಿಲ್ಲದ, ಕಾನೂನು ರೀತ್ಯಾ ಮದುವೆಗಳನ್ನು ಏರ್ಪಾಟು ಮಾಡಿ ಹಲವಾರು ಮಂದಿಗೆ ಬಾಳು ನೀಡಿದರು. ಪಶ್ಚಿಮ ಬಂಗಾಳದಲ್ಲಿ ತೀವ್ರ ಕ್ಷಾಮ ಎದುರಾದಾಗ ದಂಪತಿಗಳಿಬ್ಬರೂ ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು.

1892ರಲ್ಲಿ ಪ್ಲೇಗ್‌ ಪೀಡಿತರ ಸೇವೆ ಮಾಡುವಾಗಲೇ, ಆ ರೋಗವು ಸಾವಿತ್ರಿಬಾಯಿ ಎಂಬ ಮಹಾಮಾತೆಯ ಬಲಿ ಪಡೆಯಿತು.ಮಹಿಳೆಯರಿಗಾಗಿ ಅವರು ಹಚ್ಚಿಟ್ಟ ಅಕ್ಷರ ದೀಪ ಇಂದು ಪ್ರಕಾಶಮಾನವಾಗಿ ಬೆಳಗತ್ತಿದೆ. ಅದರ  ಬೆಳಕಿನಡಿ ಅರಿವಿನ ಪ್ರಜ್ಞೆ ವಿಸ್ತರಿಸಿಕೊಳ್ಳಬೇಕಾಗಿದೆ.

ಕೆಆರ್‌

Advertisement

Udayavani is now on Telegram. Click here to join our channel and stay updated with the latest news.

Next