Advertisement

ಕವಿತೆಗಳ ಉಳಿಸಿ ಕಣ್ಮರೆಯಾದರು!

10:44 AM Oct 14, 2019 | mahesh |

ಸಾಯುವ ನಿನ್ನ ಸಂಕಟ |
ತುಳಿದ ಕಾಲಿಗೆ ತಿಳಿಯದು |
(ನಾನು ಮತ್ತು ಇರುವೆ)
ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು |
ಇರುವೆಗಳಿಗೆ ದಾರಿ ಹೇಳಿತು |
ಇದು ಸಾವಿನ ಅರಮನೆ |
(ದಾರಿಯಲ್ಲಿ ದೊರೆತ ಪದ್ಯಗಳು)
– ಕವಿ ಜಿ. ಕೆ. ರವೀಂದ್ರ ಕುಮಾರ್‌

Advertisement

ಜಿ. ಕೆ. ರವೀಂದ್ರ ಕುಮಾರ್‌ ಎಂಬ ಕನ್ನಡದ ಒಬ್ಬ ಒಳ್ಳೆಯ ಕವಿ, ಮೇಲಾಗಿ ಎಲ್ಲ ಬಗೆಯ ದಕ್ಷ ಬರೆಹಗಾರ, ಮತ್ತು ಇವೆಲ್ಲಕ್ಕೆ ಕಳಶವಿಟ್ಟಂತೆ ಸಜ್ಜನಿಕೆಯ ಸಾಕಾರ ಇನ್ನಿಲ್ಲ. ಇತ್ತೀಚೆಗೆ ಅಗಲುವಾಗ ಅವರಿಗೆ 58ರ ಹರೆಯ. ನಾವು ಮೆಚ್ಚುವ ಒಬ್ಬ ವ್ಯಕ್ತಿ ಮತ್ತು ವ್ಯಕ್ತಿತ್ವ ಅಗಲಿದ ತಕ್ಷಣ ಅವರ ಬಗ್ಗೆ ಬರೆಯುವುದು ಎಷ್ಟು ಅಸಂಗತ ಮತ್ತು ಅಸಂಬದ್ಧ ಎಂಬುದು ಗೊತ್ತಾಗುವುದು ಹೀಗೆ ಬರೆಯುವಾಗಲೇ. ಅವರ ನೆನಪನ್ನು ಮೆಲುಕುಹಾಕುತ್ತ ಸಂಕಟಪಡುವ ಗಳಿಗೆಗಳನ್ನು ಕಳೆಯುವ ಹೊತ್ತಿನಲ್ಲಿ ಅವರ ಕುರಿತ ಮಾಹಿತಿಗಳನ್ನು ಕಲೆಹಾಕಿ ಅವರ ಒಡನಾಟದ ಅನುಭವವನ್ನು ಹೇಳುವುದಿದೆಯಲ್ಲ, ಅದು ಒಂದು ರೀತಿಯ ಅಸಹನೀಯ ಭಾವವನ್ನು ಮೂಡಿಸುತ್ತದೆ.

ರವೀಂದ್ರ ಕುಮಾರ್‌ ನಿಧನರಾದ ಸುದ್ದಿಯನ್ನು ದೂರವಾಣಿ ಮೂಲಕ ನನ್ನ ಮಗನಿಂದ ಕೇಳಿ ತಿಳಿದರೂ ಅದನ್ನು ನಂಬಲಾಗಲಿಲ್ಲ. ಅನಂತರ ಅವರ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಮೂಡಿದಾಗ ಅವರೇ ಎಂಬುದು ಖಚಿತವಾಯಿತು. ಈ ಹೊತ್ತಿಗೆ ನಾನು ನನ್ನ ಮಿತ್ರರೊಬ್ಬರಿಗೆ ಕರೆಮಾಡಿ ಸುದ್ದಿಯನ್ನು ಪಡೆದೆ. ನಮಗೆ ಸಮೀಪವಾಗಿರುವ ಆತ್ಮೀಯರೊಬ್ಬರು ಇಲ್ಲವೆಂದಾಕ್ಷಣ ಅದನ್ನು ನಂಬುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಆ ಸುದ್ದಿ ಸುಳ್ಳಾಗಿರಲಿ ಎಂದು ಭಾವಿಸುವುದು ಮನುಷ್ಯತ್ವದ ಹಕ್ಕು. ವಾಸ್ತವ ಭೂತದಂತೆ ಎದುರು ನಿಂತಾಗ ಒಂದು ಕ್ಷಣ ಹುಲಿಯೋ ಆನೆಯೋ ನಮ್ಮೆದುರು ನಿಂತರೆ ಕಾಲು ಕೀಳಲಾಗದೆ ಸ್ತಂಭೀಭೂತವಾಗಿ ನಿಲ್ಲುತ್ತೇವಲ್ಲ , ಹಾಗೆ ಮೈ ಮತ್ತು ಮನಸ್ಸು ಮರ ಕಟ್ಟಿ ಹೋಗುತ್ತದೆ. ರವೀಂದ್ರ ಕುಮಾರ್‌ ಸಾವಿನ ಸುದ್ದಿ ನನ್ನನ್ನು ಹೀಗೆ ಕಾಡಿದ್ದು ಸತ್ಯ.

ಅದೇ ರಾತ್ರಿ ರವೀಂದ್ರ ಕುಮಾರ್‌ ಅವರ ಒಬ್ಬನೇ ಮಗ, ಭೂವಿಜ್ಞಾನಿಯಾಗಿರುವ ಅನನ್ಯ ವಾಸುದೇವ್‌ಗೆ ಕರೆಮಾಡಿ ಒಂದಷ್ಟು ಮಾತನಾಡಿದೆ. ಮರುದಿವಸ ಮೈಸೂರಿನಲ್ಲಿ ಅಂತಿಮ ಸಂಸ್ಕಾರ ನಡೆಯುವುದನ್ನು ಆತ ತಿಳಿಸಿದ. ಆದರೆ, ನನಗೆ ವೃತ್ತಿ ಸಂಬಂಧದ ತೀರ ಅನಿವಾರ್ಯತೆಯ ಪ್ರಯುಕ್ತ ನಾನು ಬರಲಾಗುವುದಿಲ್ಲವೆಂಬುದನ್ನು ಅದು ಹೇಗೋ ಹೇಳಿದೆ. ಕೆಲವೇ ನಿಮಿಷಗಳ ನನ್ನ ದೂರವಾಣಿ ಮಾತುಗಳನ್ನು ಕೇಳಿದ ನನ್ನ ಪತ್ನಿ , “ಎಷ್ಟು ಪೆದ್ದುಪೆದ್ದಾಗಿ ಮಾತನಾಡಿದಿರಿ’ ಎಂದು ಹೇಳಿದಳು. ಹೇಗೆ ಮಾತನಾಡುವುದು, ಹೀಗೆ ಮನಸ್ಸನ್ನು ಆವರಿಸಿ ಈಗ ನೆನಪಾಗಿ ಉಳಿದಿರುವ ಗೆಳೆಯನ ಬಗ್ಗೆ !

ನಾನು ಬರೆಯಬೇಕಾದದ್ದು ರವೀಂದ್ರಕುಮಾರ್‌ ಬಗ್ಗೆ. ಗಾಂಧಿ-ನೆಹರೂ ಬಗ್ಗೆ ಸುಲಭವಾಗಿ ಬರೆಯಬಹುದು. ಅವರು ಇಲ್ಲ ಮಾತ್ರವಲ್ಲ, ಕಾಲ ಮತ್ತು ದೇಶದ ವ್ಯಾಪ್ತಿಯಲ್ಲಿ ದೂರದವರು. ನಾವು ಹಲವು ಕಾರಣಗಳಿಗಾಗಿ ಅವರನ್ನು ಗೌರವಿಸುವವರು. ಪಂಪ, ಶೇಕ್ಸ್‌ಪಿಯರ್‌ ಬಗ್ಗೆ ಬರೆಯಬಹುದು. ಅವರ ಬದುಕು ನಮಗೆ ಅಗತ್ಯದ್ದಲ್ಲ; ಅವರ ಬರಹವಷ್ಟೇ ನಮಗೆ ಅವರೊಂದಿಗೆ ಸಂಬಂಧ ಕಲ್ಪಿಸಿದ ಮೌಲ್ಯ. ಆದರೆ, ರವೀಂದ್ರಕುಮಾರ್‌ ಹಾಗಲ್ಲ. ಮೊನ್ನೆ ಮೊನ್ನೆ ಮಾತನಾಡಿದವರು; ಜೊತೆಯಲ್ಲಿ ಕಾಫಿ, ಊಟ ಮಾಡಿದವರು.

Advertisement

ರವೀಂದ್ರಕುಮಾರ್‌ ಚಿತ್ರದುರ್ಗದವರು. 1962ರಲ್ಲಿ ಹುಟ್ಟಿದವರು. ಆಕಾಶವಾಣಿಯಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ಕಾರ್ಯಕ್ರಮ ನಿರ್ವಾಹಕರಾಗಿ, ಈಗ ಇತ್ತೀಚೆಗೆ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿದ್ದವರು.  1994ರಲ್ಲಿ ಅವರು ತಮ್ಮ ಮೊದಲ ಕವನ ಸಂಕಲನ ಸಿಕಾಡಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚೊಚ್ಚಲ ಕೃತಿಯ ಬಹುಮಾನಕ್ಕೆ ಭಾಜನರಾದವರು.

1997ರಲ್ಲಿ ಪ್ರಕಟವಾದ ಎರಡನೆಯ ಕವನ ಸಂಕಲನ ಪ್ಯಾಂಜಿಯಾ ಮತ್ತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆಯಿತು. ಅನಂತರ 2001ರಲ್ಲಿ ಕದವಿಲ್ಲದ ಊರಲ್ಲಿ, 2007ರಲ್ಲಿ ಒಂದು ನೂಲಿನ ಜಾಡು, 2014ರಲ್ಲಿ ಮರವನಪ್ಪಿದ ಬಳ್ಳಿ ಕವನ ಸಂಕಲನಗಳ ು ಪ್ರಕಟವಾದವು. ಇವುಗಳ ನಡುವೆ ಕೆಲವು ಗದ್ಯ ಬರೆಹಗಳನ್ನೂ ಅವರು ಪ್ರಕಟಿಸಿದರು. 2008ರಲ್ಲಿ ಕೃತಿ-ಕತೃì ಪರಿಚಯ ಜುಗಲಬಂದಿ ಚಿಂತಕ ಯು.ಆರ್‌. ಅನಂತಮೂರ್ತಿ, 2009ರಲ್ಲಿ ವಿಮಶಾì ಚಿಂತನೆ ಪುನರ್ಭವ , 2014ರಲ್ಲಿ ಅಂಕಣ ಬರೆಹಗಳ ಸಂಕಲನ ಸುಪ್ತಸ್ವರ ಮತ್ತು 2018ರಲ್ಲಿ ಲಲಿತ ಪ್ರಬಂಧಗಳ ಸಂಕಲನ ತಾರಸಿ ಮಲ್ಹಾರ್‌ (2018)- ಇವು ಅವರ ಕೃತಿಗಳು. ಈ ಪೈಕಿ ಒಂದು ನೂಲಿನ ಜಾಡು ಕೃತಿಗೆ ನನ್ನಿಂದ ಮನ್ನುಡಿಯನ್ನು ಬರೆಯಿಸಿದ್ದರು!

ಕವಿಯಾಗಿ ಪ್ರಬಂಧಕಾರ
ಗದ್ಯ-ಪದ್ಯಗಳೆರಡರಲ್ಲೂ ಗುಣಮಟ್ಟವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ ರವೀಂದ್ರಕುಮಾರ್‌ ಒಳ್ಳೆಯ ಭಾಷಣಕಾರರೂ ಹೌದು. ತುಂಬ ಭಾರವಾಗದ ಪದಗಳ ಮೂಲಕ ಸಂಕೀರ್ಣ ವಿಚಾರ-ಭಾವಗಳನ್ನು ಅವರು ಸಂವಹನಗೊಳಿಸಬಲ್ಲರು. ಸಂಗೀತದ ನಿಕಟ ಸಂಪರ್ಕವನ್ನು ಹೊಂದಿ ಅದರ ಕುರಿತು ಕರಾರುವಾಕ್ಕಾಗಿ ಮಾತನಾಡಬಲ್ಲ ದೃಢತೆಯನ್ನೂ ಅವರು ಹೊಂದಿದ್ದರು. “ಆಕಾಶ’ ವಾಣಿಯನ್ನು ಭೂಮಿಯ ನಿರಂತರ ಸಂಪರ್ಕದಲ್ಲಿಡುವುದಕ್ಕೆ ದುಡಿಯುತ್ತಿದ್ದರು.

ಗಂಭೀರ ಮತ್ತು ಸಿನಿಮಾ ಹೀರೋಗಳಷ್ಟು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ ರವೀಂದ್ರಕುಮಾರ್‌ ಯಾವುದೇ ಸಭೆಯಲ್ಲೂ ಸೂಜಿಗಲ್ಲಿನಂತೆ, ಮತ್ಸರಿಸಬಹುದಾದಷ್ಟು ಮಿಂಚುತ್ತಿದ್ದರು. ಆಕಾಶವಾಣಿಯಲ್ಲಿದ್ದದ್ದಕ್ಕೋ ಏನೋ ಸ್ವರಭಾರ ಮತ್ತು ಮಾತಿನ ವಿನ್ಯಾಸ ಅವರಿಗೆ ಒಲಿದಿತ್ತು. ಹಾಗೆಂದು ಅವರು ತಾನು ವಿಶ್ವದ ಕೇಂದ್ರವಾಗಬೇಕೆಂದು ವರ್ತಿಸಿದವರೇ ಅಲ್ಲ.

ಈ ಎಲ್ಲದರ ನಡುವೆ ರವೀಂದ್ರ ಕುಮಾರ್‌ ಕನ್ನಡದ ಜನಮಾನಸದಲ್ಲಿ ಮತ್ತು ಮುಖ್ಯವಾಗಿ ಸಾಹಿತ್ಯ ಪ್ರಪಂಚದಲ್ಲಿ ಉಳಿಯುವುದು ಕವಿಯಾಗಿಯೇ. ನಾನು ಮೆಚ್ಚುವ ನನ್ನ ತಲೆಮಾರಿನ ಮೂರು ಕವಿಗಳಲ್ಲಿ ಅವರೊಬ್ಬರು. ಇನ್ನಿಬ್ಬರು ಎಸ್‌.ಮಂಜುನಾಥ್‌ ಮತ್ತು ಆನಂದ ಝುಂಜರವಾಡ. ಅವರ ಕಾವ್ಯದಲ್ಲಿ ಪದಗಳು ತಮ್ಮಷ್ಟಕ್ಕೆ ಆಟವಾಡುತ್ತವೆ. ಆದರೆ ಇವನ್ನು ನೋಡುತ್ತಿದ್ದಂತೆಯೇ ಇವು ನಮಗೆ ಬೇರಾವುದೋ ಜಗತ್ತಿನ, ನಾವೆಂದೂ ದರ್ಶಿಸದ ಅನುಭವವನ್ನು ನೀಡುತ್ತವೆ. ನಾನೇ ಹಿಂದೆ ಬರೆದಂತೆ ಬಹುತೇಕ ಎಲ್ಲ ಕವನಗಳಲ್ಲೂ ಶ್ರದ್ಧೆಯ ಕಾವ್ಯಾಭ್ಯಾಸ, ಬದುಕಿನ ಕುರಿತ ಆಪ್ತ ಸಹವಾಸ, ಆದರ್ಶಗಳನ್ನು ಹಿಂಬಾಲಿಸದೆಯೇ ವಾಸ್ತವವನ್ನು ಕೆಣಕುವ ಮೊನಚು ಕಂಡುಬರುತ್ತದೆ.

ಸಮೂಹದ ಮಧ್ಯ ಹೀಗೆ ಕಾಣುವ ರವೀಂದ್ರಕುಮಾರ್‌ ನನಗೆ ಸುಮಾರು ಎರಡು ದಶಕಗಳಿಂದ ನಿಕಟ ಸಂಪರ್ಕದಲ್ಲಿದ್ದವರು. ಅವರು ಮಡಿಕೇರಿ ಆಕಾಶವಾಣಿಯಲ್ಲಿದ್ದಾಗ ವಾರಕ್ಕೆ ಹಲವು ಬಾರಿ ನಾವು ಭೇಟಿಯಾಗುತ್ತಿದ್ದೆವು. ನನ್ನ ಮನೆಯಲ್ಲಿರುವ ನನ್ನ ಕಾನೂನು ವೃತ್ತಿಯ ಕಚೇರಿಯಲ್ಲಿ ಅವರು ತಾಳ್ಮೆಯಿಂದ ಕುಳಿತು ನನ್ನ ಕಾರ್ಯಕ್ಕೆ ವಿಘ್ನವಾಗದಂತೆ ಕೂರುತ್ತಿದ್ದದ್ದು ನನಗೆ ಈಗಲೂ ಮುಜುಗರವನ್ನು ನೀಡುತ್ತಿದೆ. ನನ್ನ ಕೆಲಸಗಳು ಮುಗಿದಾದ ಮೇಲೆ ನಾವು ಜೊತೆಯಲ್ಲಿ ನನ್ನ ಮನೆಯಲ್ಲಿ ಕಾಫಿಯೋ ಊಟವೋ ಮಾಡುತ್ತ ಹರಟುತ್ತಿದ್ದೆವು. ಅವರ-ನನ್ನ ಬರೆಹಗಳನ್ನು ಓದುತ್ತಿದ್ದೆವು. ಅವರ ಕಚೆೇರಿಗೆ, ನಿವಾಸಕ್ಕೆ ನಾನೂ ಹೋಗಿ ಒಂದಷ್ಟು ಮಾತನಾಡಿ ಬರುತ್ತಿರುವುದಿತ್ತು. ಇಲ್ಲಿಂದ ವರ್ಗವಾಗಿ ಹೋದ ಮೇಲೂ ಅವರು ನಿರಂತರ ಸಂಪರ್ಕದಲ್ಲಿದ್ದರು. ಮಡಿಕೇರಿಗೆ ಅಧಿಕೃತ ಕಾರ್ಯಗಳಿಗೆ ಅಥವಾ ಖಾಸಗೀ ಕಾರಣಗಳಿಗೆ ಬಂದರೆ ನನ್ನನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಅಷ್ಟೇ ಅಲ್ಲ ಸಾಹಿತ್ಯಕ್ಕಷ್ಟೇ ಸಂಬಂಧಗಳನ್ನು ಮಿತಿಗೊಳಿಸದೆ ನಮ್ಮಿàರ್ವರ ಕುಟುಂಬಗಳ ಸಖ್ಯವೂ ಬೆಳೆದಿತ್ತು. ಅವರ ಪತ್ನಿ ಡಾ| ಎಂ.ಆರ್‌. ಮಂದಾರವಲ್ಲಿ ಒಳ್ಳೆಯ ಬರೆಹಗಾರರು. ಗುಬ್ಬಚ್ಚಿ ಸ್ನಾನ ಎಂಬ ವಿನೋದ ಬರಹಗಳ ಸಂಕಲನ, ಬೊಗಸೆಯೊಳಗಿನ ಅಲೆ ಎಂಬ ಕಥಾಸಂಕಲನ ತಕ್ಷಣ ನೆನಪಾಗುವ ಅವರ ಕೃತಿಗಳು.

ಎಂದಿನಂತೆ ಸಂಜೆಗಳು ಬಂದುಹೋಗುತ್ತಿವೆ, ಎಂದಿನಂತೆ ಬರುತ್ತಿದ್ದ ರವೀಂದ್ರ ಕುಮಾರ್‌ ಇನ್ನು ಬರುವುದಿಲ್ಲ.

ಸಾಹಿತ್ಯ, ಸಂಗೀತಗಳನ್ನು ಎರಡು ಕಣ್ಣುಗಳಂತೆ ಕಂಡ
ಕವಿ ಜಿ. ಕೆ. ರವೀಂದ್ರ ಕುಮಾರ್‌ ಈಗ ನೆನಪು ಮಾತ್ರ !

ಬಾಲಸುಬ್ರಹ್ಮಣ್ಯ ಕಂಜರ್ಪಣೆ

Advertisement

Udayavani is now on Telegram. Click here to join our channel and stay updated with the latest news.

Next