ಮೂಡುಬಿದಿರೆ: ಮೂಡುಬಿದಿರೆ ಆರಕ್ಷಕರ ಠಾಣೆಯ ವತಿಯಿಂದ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಮತ್ತು ರಸ್ತೆ ಸಂಚಾರ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಗುರುವಾರ ಮೂಡುಬಿದಿರೆ ಪೇಟೆಯಲ್ಲಿ ಜರಗಿತು.
ಗುರುವಾರ ಮೂಡುಬಿದಿರೆ ಪೇಟೆಗೆ ಬಂದ ಹಲವು ವಾಹನ ಚಾಲಕರಿಗೆ ಸಂಚಾರಿ ನಿಯಮಗಳ ಬಗ್ಗೆ ಈ ಸಂದರ್ಭ ಅರಿವು ಮೂಡಿಸಲಾಯಿತು.
ಸಂಚಾರ ನಿಯಮ ಪಾಲನೆ, ಹೆಲ್ಮೆಟ್ ಧರಿಸಿ, ಸೀಟ್ ಬೆಲ್r ಕಟ್ಟಿಕೊಂಡು ವಾಹನ ಚಲಾಯಿಸಿದವರಿಗೆ ಮೂಡುಬಿದಿರೆ ಪೊಲೀಸರು ಲಾಡು ಕೊಟ್ಟು , ಶಹಬ್ಟಾಸ್ ಹೇಳಿದರು. ನೇರ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದವರನ್ನು ತಡೆದು ನಿಲ್ಲಿಸಿ ಹೆಲ್ಮೆಟ್ ಧರಿಸುವುದೂ ಸಹಿತ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸುವ ಕರಪತ್ರ ವಿತರಿಸಿ ಸೌಮ್ಯವಾಗಿ ವಿನಂತಿಪೂರ್ವಕ ಎಚ್ಚರಿಕೆಯನ್ನು ನೀಡಿದರು.
ಪಣಂಬೂರು ಎಸಿಪಿ ಶ್ರೀನಿವಾಸ ಗೌಡ ಅವರು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಹೆಚ್ಚಿನ ದ್ವಿಚಕ್ರ ಸವಾರರು ಹೆಲ್ಮೆಟ್ ಹಾಕುವುದಿಲ್ಲ. ದಂಡ ವಿಧಿಸಿದಾಗ ನಾವು ಮರೆತು ಬಿಟ್ಟು ಬಂದಿದ್ದೇವೆ ಎಂದು ಹೇಳುತ್ತಾರೆ. ದಿನ ಕೂಲಿ ನೌಕರರಂತೂ ನಾವು ಕೂಲಿ ಕೆಲಸ ಮಾಡುವವರು ದಂಡ ಕಟ್ಟಲು ಹಣವಿಲ್ಲವೆಂದು ಹೇಳುತ್ತಾರೆ. ಹಾಗಾಗಿ, ಸಾರ್ವಜನಿಕರಿಗೆ ರಸ್ತೆ ಸಂಚಾರದ ಕಾನೂನುಗಳನ್ನು ಪಾಲಿಸಬೇಕೆಂಬ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮೂಡುಬಿದಿರೆ ಠಾಣಾಧಿಕಾರಿಗಳು ಕೈಗೊಂಡಿದ್ದಾರೆ ಎಂದರು.
ಕರ್ಕಶ ಹಾರ್ನ್ ಬಳಿಸಿದರೆ ಸೂಕ್ತ ಕ್ರಮ
ಶಾಲಾ ಕಾಲೇಜು ವಾಹನಗಳಲ್ಲಿ ಮಿತಿ ಮೀರಿ ವಿದ್ಯಾರ್ಥಿಗಳನ್ನು ತುಂಬಿಸಿದ್ದರೆ ಮತ್ತು ಬಸ್ಸು ಸಹಿತ ಇತರ ವಾಹನಗಳಲ್ಲಿ ಕರ್ಕಶ ಹಾರ್ನ್ ಗಳನ್ನು ಬಳಸಿದರೆ ಅವರ ಮೇಲೆ ಕೇಸು ದಾಖಲಿಸಿ ವಾಹನ ಪರವಾನಿಗೆ ಮತ್ತು ಚಾಲನಾ ಪರವಾನಿಗೆಯನ್ನು ರದ್ದುಗೊಳಿಗೊಳಿಸಲಾಗುವುದು ಎಂದರು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಬಿ.ಎಸ್. ದಿನೇಶ್ ಕುಮಾರ್, ಉಪನಿರೀಕ್ಷಕ ದೇಜಪ್ಪ ಮತ್ತು ಸಿಬಂದಿಗಳು ಮೂಡುಬಿದಿರೆ ವ್ಯಾಪ್ತಿಯ ಆಲಂಗಾರು, ವಿದ್ಯಾಗಿರಿ, ಬಸ್ ನಿಲ್ದಾಣದ ಬಳಿ, ಜ್ಯೋತಿನಗರ, ಇರುವೈಲು ರಸ್ತೆ ಬಳಿ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದರು.