Advertisement

ಸಹಕಾರಿಗಳನ್ನು ಉಳಿಸಿ-ಬೆಳೆಸಿ: ಸವದಿ

02:19 PM Apr 26, 2022 | Team Udayavani |

ಅಥಣಿ: ರಾಷ್ಟ್ರದಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ನೀಡಿದ್ದು ಕರ್ನಾಟಕ ರಾಜ್ಯ. ಅದರಲ್ಲಿ ಅತಿ ಹೆಚ್ಚು ರೈತರಿಗೆ ಸಾಲ ನೀಡುತ್ತಿರುವುದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ಆಗಿದ್ದು, ಸಹಕಾರ ರಂಗದಲ್ಲಿ ಅತಿ ಹೆಚ್ಚು ಸಾಲಮನ್ನಾ ಮಾಡಿಕೊಂಡ ತಾಲೂಕು ಅಥಣಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

Advertisement

ಅವರು ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಶ್ರೀ ಅರವಟ್ಟಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉದ್ಘಾಟನಾ ಸಮಾರಂಭ ಹಾಗೂ ಸಾಲ ಪತ್ರ, ಮುದ್ದತ ಠೇವು ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಗ್ರಾಮದಲ್ಲಿ ಮೂರು ಸಹಕಾರ ಪತ್ತಿನ ಬ್ಯಾಂಕ್‌ಗಳನ್ನು ಅತ್ಯಂತ ಉತ್ತಮ ರೀತಿಯಿಂದ ಬೆಳೆಸಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುವುದು ನಿಮ್ಮೆಲ್ಲರ ಹೆಗಲ ಮೇಲಿದೆ ಎಂದು ತಿಳಿಸಿದರು.

ಈಗಾಗಾಲೇ 22 ಲಕ್ಷ ಕುಟುಂಬಗಳು ನಮ್ಮ ರಾಜ್ಯದಲ್ಲಿ ಪತ್ತಿನಿಂದ ಸಾಲವನ್ನು ಪಡೆದಿವೆ. ಪತ್ತಿನಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎಲ್ಲರೂ ಬೆಳೆಯಬೇಕು ಎನ್ನುವ ಉದ್ದೇಶ ನಮ್ಮದಾಗಿದೆ. ಅರ್ಧನಾರೇಶ್ವರ ಹಾಗೂ ವೈದ್ಯನಾಥನ್‌ ವರದಿಗಳು ಸಹಕಾರಿ ರಂಗಕ್ಕೆ ಬಹುಪಯೋಗಿಯಾಗಿವೆ ಎಂದರು.

ಬಿಡಿಸಿಸಿ ಅಧ್ಯಕ್ಷರಾದ ರಮೇಶ ಕತ್ತಿ ಅವರು ರೈತರಿಗೆ ಸಾಲಪತ್ರ ವಿತರಿಸಿ ಮಾತನಾಡಿ, ಸುಮಾರು 8 ಕೋಟಿ 30 ಲಕ್ಷ ರೂ. ಪತ್ತನ್ನು ಶೂನ್ಯ ಬಡ್ಡಿದರದಲ್ಲಿ ಪಡೆದುಕೊಂಡು ಅಭಿವೃದ್ಧಿ ನಾಮವನ್ನು ಜಪಿಸುತ್ತಿರುವ ದರೂರ ಗ್ರಾಮಸ್ಥರ ನಡೆ ಶ್ಲಾಘನೀಯ.

ಅದೇ ರೀತಿ ಶೂನ್ಯ ಬಡ್ಡಿದರ ಸಾಲ ಯೋಜನೆಯಿಂದ ಅಥಣಿ ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಮೂರು ಬಾರಿ ಸಾಲಮನ್ನಾ ಆದಾಗ ಅಥಣಿ ತಾಲೂಕಿನ ರೈತರಿಗೆ ಸುಮಾರು 300 ಕೋಟಿ ರೂ. ಅನುಕೂಲವಾಗಿದೆ. ಒಂದೇ ಗ್ರಾಮದಲ್ಲಿ ಮೂರು ಸಹಕಾರಿ ಸಂಘಗಳನ್ನು ಸ್ಥಾಪನೆ ಮಾಡುವ ಮೂಲಕ ರೈತರ ಮತ್ತು ಕಬ್ಬು ಬೆಳೆಗಾರರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

Advertisement

ಜಿಪಂ ಮಾಜಿ ಸದಸ್ಯ ಹಾಗೂ ಶ್ರೀ ಅರವಟ್ಟಿಗೆ ಪಿಕೆಪಿಎಸ್‌ ಅಧ್ಯಕ್ಷ ಸುರೇಶ ಮಾಯನ್ನವರ ಮಾತನಾಡಿ, ಸಹಕಾರಿ ಸಂಘವನ್ನು ಕಟ್ಟಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಹಿಳೆಯರು ಸ್ವಾವಲಂಬಿ ಜೀವನ ಮಾಡಲು ಪತ್ತಿನ ಸಾಲವನ್ನು ಹೆಚ್ಚಿಸಬೇಕು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕಾಂತ್‌ ಅಸ್ಕಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಂಜೀವಕುಮಾರ ಅವಕ್ಕನ್ನವರ, ಅರಿಹಂತ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜೈಪಾಲ್‌ ಚೌಗಲಾ, ಸಹಕಾರ ಇಲಾಖೆ ಉಪನಿಬಂಧಕ ಕೆ.ಎಲ್‌ ಶ್ರೀನಿವಾಸ್‌, ಚಿಕ್ಕೋಡಿ ಉಪನಿಬಂಧಕ ಗೌಡಪ್ಪನವರ, ಅಥಣಿ ನಿಯಂತ್ರಣ ಅಧಿಕಾರಿ ಎಸ್‌ ಎಸ್‌ ನಂದೇಶ್ವರ, ಬಾಯಪ್ಪಾ ಹೊಳೆಪ್ಪಗೋಳ, ಆನಂದ ಚೌಗಲಾ, ಆರ್‌ ಎನ್‌ ನೂಲಿ, ಶಬ್ಬೀರ ಮುಜಾವರ, ಸಾಗರ ಖಂಡಾಲ್ಕರ, ಎಮ್‌ ಎ ಮಾಳಿ, ಆರ್‌ ಬಿ ಗಲಗಲಿ, ಫರೀಧ ಅವಟಿ, ಮಹದೇವ ಬಸಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶ್ರೀಕಾಂತ್‌ ಅಸ್ಕಿ ಸ್ವಾಗತಿಸಿದರು. ಸಂಗಮೇಶ ಹಚ್ಚಡದ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next