ಸವಣೂರು: ತಾಲೂಕು ತೋಟಗಾರಿಕೆ ಇಲಾಖೆಯಿಂದ ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಮತ್ತು ಬಳಕೆ ಹಾಗೂ ಸರ್ಕಾರದ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆಗೊಳಿಸುವ ಕುರಿತು ತಾಪಂ ಸಭೆಗೆ ಮಾಹಿತಿ ಏಕೆ ನೀಡುವದಿಲ್ಲ ಎಂದು ತಾಲೂಕು ತೋಟಗಾರಿಕೆ ನಿರ್ದೇಶಕ ವಿನೋದ ಬುಕಳಿ ಅವರಿಗೆ ಪ್ರಶ್ನಿಸಿ ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಮಾಹಿತಿ ಕೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ತಾಪಂ ಅಧ್ಯಕ್ಷ ಸುಬ್ಬಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಕೇಂದ್ರ ಸರ್ಕಾರದ ಯೋಜನೆ ಹಾಗೂ ಅನುದಾನದ ಕುರಿತು ವಿವರಣೆಯನ್ನು ಸಭೆಗೆ ನೀಡಲಾಗಿಲ್ಲ. ಈ ಕುರಿತು ತಾಲೂಕು ಪಂಚಾಯಿತಿಯಿಂದ ಬೇಡಿಕೆ ಬಂದಲ್ಲಿ ಒದಗಿಸಲಾಗುವುದು ಎಂದು ಹೇಳಿದರು. ಇದಕ್ಕೆ ಆಕ್ರೋಶಗೊಂಡ ಅಧ್ಯಕ್ಷರು, ನಾವು ಬೇಡಿಕೆಯಿಟ್ಟಲ್ಲಿ ಮಾಹಿತಿ ಒದಗಿಸುವುದಾದರೆ ನೀವೇಕೆ ಸಭೆಗೆ ಬರಬೇಕು? ಯೋಜನೆಗಳು ಯಾವುದೇ ಇರಲಿ; ಸಭೆಗೆ ವರದಿ ನೀಡುವುದು ನಿಮ್ಮ ಕೆಲಸ. ಮೊದಲು ಸರಿಯಾಗಿ ವರದಿ ನೀಡುವುದನ್ನು ಕಲಿಯಿರಿ ಎಂದು ತರಾಟೆ ತೆಗೆದುಕೊಂಡರು.
ಸರ್ಕಾರದ ವಿವಿಧ ಯೋಜನೆಗಳಡಿ ಆಯ್ಕೆಗೊಂಡ ಎಸ್ಸಿ, ಎಸ್ಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಹೆಸರು ಸೇರಿಸಿದ್ದೇಕೆ ಎಂದು ತಾಪಂ ಅಧ್ಯಕ್ಷರು ಕೃಷಿ ಸಹಾಯಕ ನಿರ್ದೇಶಕ ಪ್ರದೀಪ ಕಿವಟೆ ಅವರನ್ನು ತರಾಟೆ ತೆಗೆದುಕೊಂಡರು.
ಇದಕ್ಕುತ್ತರಿಸಿದ ಅಧಿ ಕಾರಿ, ಫಲಾನುಭವಿಗಳ ಪಟ್ಟಿಯಲ್ಲಿ ಇತರೆ ಎಂಬ ಶಬ್ದ ಬಿಟ್ಟು ಹೋಗಿದ್ದು, ಸರಿ ಮಾಡಿಕೊಡಲಾಗುವುದು ಎಂದು ಹೇಳುತ್ತಿದ್ದಂತೆ, ಪ್ರತಿ ಸಲವೂ ಇದೇ ನಿಮ್ಮ ಗೋಳಾಯಿತು. ವರದಿಯಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಮಾಹಿತಿ ನೀಡುವುದೇ ಇಲ್ಲ. ನೀವು ಬದಲಾಗುವುದು ಯಾವಾಗ? ಎಸ್ಸಿ, ಎಸ್ಟಿ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯವರನ್ನು ಸೇರ್ಪಡೆಗೊಳಿಸಿದ್ದೀರಿ. ಮೊದಲು ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ ಎಂದು ಎಚ್ಚರಿಸಿದರು.
ದೈಹಿಕ ಶಿಕ್ಷಣ ಅಧಿಕಾರಿ ಮೃತ್ಯುಂಜಯ ಗೌಡ್ರ ತಮ್ಮ ಇಲಾಖೆ ವರದಿ ಸಲ್ಲಿಸಿ, ಪ್ರಸಕ್ತ ವರ್ಷ ತಾಲೂಕಿನಲ್ಲಿ 1832 ವಿದ್ಯಾರ್ಥಿಗಳು ಎಸ್ಎಸ್ ಎಲ್ಸಿ ಪರೀಕ್ಷೆ ಬರೆಯಲಿದ್ದು, ಮಾರ್ಚ್ 21 ರಿಂದ ಏ. 4 ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಅದಕ್ಕಾಗಿ ತಾಲೂಕಿನ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ತರಬೇತಿ ನೀಡುವ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಿದ್ಧತೆಗೊಳಿಸಲಾಗಿದೆ. ಸವಣೂರು ಪಟ್ಟಣದಲ್ಲಿ 3, ಹತ್ತಿಮತ್ತೂರ, ಹೂವಿನಶಿಗ್ಲಿ, ಕುಣಿಮೆಳ್ಳಿಹಳ್ಳಿ, ಕಡಕೋಳದಲ್ಲಿ ತಲಾ ಒಂದರಂತೆ ಒಟ್ಟು 7 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದರು.
ಫೆ. 28 ರಂದು ನಡೆದ ಕೆಡಿಪಿ ಸಭೆಯಲ್ಲಿ ಮಂತ್ರೋಡಿ ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಸುಮಾರು 14 ಲಕ್ಷ ರೂ. ಹಗರಣ ಕುರಿತು ತನಿಖೆ ಕೈಗೊಳ್ಳುವಂತೆ ನಡೆದ ಚರ್ಚೆಯಲ್ಲಿ ತಾಪಂ ಅಧ್ಯಕ್ಷರು ಅಧಿಕಾರಿಗಳಿಗೆ ಮಾ. 5ರ ವರೆಗೆ ಗಡವು ನೀಡಿದ್ದರು. ಆದರೆ, ತಾಪಂ ಅಧಿಕಾರಿಗಳು ತನಿಖೆ ಮುಕ್ತಾಯದ ಹಂತದಲ್ಲಿದ್ದು, ಹೆಚ್ಚುವರಿ 8 ದಿನ ಕಾಲಾವಕಾಶ ನೀಡಬೇಕು ಎನ್ನುವ ಕೋರಿಕೆಯನ್ನು ಒಪ್ಪಿದ ತಾಪಂ ಅಧ್ಯಕ್ಷರು, ಮಾ. 13 ರಂದು ಈ ಕುರಿತು ಸಂಪೂರ್ಣ ತನಿಖೆ ಕೈಗೊಂಡು ಜಿಪಂ ಮೇಲಧಿ ಕಾರಿಗಳಿಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು. ವಿವಿಧ ಇಲಾಖೆ ಅ ಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿದರು. ತಾಪಂ ಇಒ ಇಸ್ಮಾಯಿಲ್ ಹಾಗೂ ಇತರರು ಪಾಲ್ಗೊಂಡಿದ್ದರು.