Advertisement

ಕೇಂದ್ರೀಯ ವಿವಿಯಲ್ಲಿ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದ ತೃಪ್ತಿ

05:18 PM Apr 14, 2020 | mahesh |

ಕಲಬುರಗಿ: ವಿಶ್ವವಿದ್ಯಾಲಯದಲ್ಲೇ ಇದ್ದು, ಸದಾ ಆಗು ಹೋಗುಗಳ ಮೇಲೆ ನಿಗಾ ವಹಿಸಿದ್ದಲ್ಲದೇ ಶೈಕ್ಷಣಿಕ ಅಭಿವೃದ್ಧಿ ಚಟುವಟಿಕೆಗಳ ದೂರದೃಷ್ಟಿ ಹೊಂದಿದ ಪರಿಣಾಮ ನ್ಯಾಕ್‌ದಿಂದ ವಿವಿ ಬಿ-ಪ್ಲಸ್‌, ಪ್ಲಸ್‌ ಮಾನ್ಯತೆ ಪಡೆದಿದೆ. ಒಟ್ಟಾರೆ ದೇಶದಲ್ಲೇ ಉತ್ತಮ ಎನ್ನಬಹುದಾದ ವಿವಿಯಾಗಿ ಹೊರಹೊಮ್ಮಿದೆ. ವಿವಿ ಪ್ರವೇಶಾತಿಗಾಗಿ 700 ಸೀಟುಗಳಿಗಾಗಿ 65 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕುವುದೇ ಇದಕ್ಕೆ ಸಾಕ್ಷಿ. ವಿವಿಯಿಂದ ಗೌರವ ಡಾಕ್ಟರೇಟ್‌ ನೀಡಿದರೆ ಒಂದಿಲ್ಲ ಒಂದು ವಿವಾದ ಹಾಗೂ ಅಪಸ್ವರ ಬರುವುದನ್ನು ನಾವು ಕೇಳಿದ್ದೇವೆ. ಆದರೆ ಸಿಯುಕೆಯಿಂದ ನೀಡಲಾಗಿರುವ ಗೌರವ ಡಾಕ್ಟರೇಟ್‌ಗೆ ಇಡೀ
ದೇಶವೇ ಮುಕ್ತಕಂಠದಿಂದ ಶ್ಲಾಘಿಸಿದೆ.

Advertisement

ಹೌದು. ದಶಕದ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯ ಸಾಧನೆಯ ಹಿಂದೆ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಅವರ ಸಾಕಷ್ಟು
ಶ್ರಮವಿದೆ. ವಿವಿ ಕುಲಪತಿಯಾಗಿ ಐದು ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದು, ಅವರ ಅವಧಿಯಲ್ಲಿ ಮಾಡಿರುವ ಕಾರ್ಯಗಳು ಹಾಗೂ ಆಗಬೇಕಿರುವ ವಿಷಯಗಳ ಕುರಿತು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ವಿವಿಗೆ ತಾವು ಬಂದ ಮೇಲೆ ಮಾಡಿದ ಕಾರ್ಯಗಳೇನು?
ವಿವಿ ಆರಂಭವಾಗಿ ಐದು ವರ್ಷ ಕಳೆದಿದ್ದರೂ ಗುಲ್ಬರ್ಗ ವಿವಿಯಲ್ಲೇ ಕಾರ್ಯ ನಿರ್ವಹಿಸಿ ಕಡಗಂಚಿ ಕ್ಯಾಂಪಸ್‌ಗೆ ಆಗಮಿಸಿ ಮೂರು ತಿಂಗಳಾಗಿತ್ತು. ವಿವಿಯೆಂದರೆ ನೀರಿನ ಸಮಸ್ಯೆ ಎನ್ನುವ ಮಟ್ಟಿಗೆ ಸಮಸ್ಯೆಯಿತ್ತು. ಸರ್ಕಾರದಿಂದ ಭರವಸೆ ಸಿಕ್ಕಿತ್ತಾದರೂ ಹೇಳಿದಂತೆ ನೀರು ಪೂರೈಕೆಯಾಗಲಿಲ್ಲ. ಹೀಗಾಗಿ ಕ್ಯಾಂಪಸ್‌ನಲ್ಲಿ 30 ಸಾವಿರ ಸಸಿ ನೆಡಲಾಯಿತು. ತದ ನಂತರ ಕೆರೆ ನಿರ್ಮಿಸಲಾಯಿತು. ಪಡಿತರ ಮಾದರಿಯಲ್ಲಿ ನೀರು ಬಳಸಿಕೊಂಡ ಪರಿಣಾಮ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಉಳಿದಂತೆ ಕಟ್ಟಡಗಳ ಕಡೆ ಲಕ್ಷ್ಯ ವಹಿಸಿ ಒಂದೊಂದಾಗಿ ಪೂರ್ಣಗೊಳಿಸಲಾಗಿದೆ. ಕಲಬುರಗಿ ನಗರದ ಏಳೆಂಟು ಬಾಡಿಗೆ ಕಟ್ಟಡದಲ್ಲಿ ವಿವಿಯ ವಸತಿ ನಿಲಯಗಳನ್ನು ನಡೆಸಲಾಗುತ್ತಿತ್ತು. ಇದಕ್ಕಾಗಿ 1.50 ಕೋಟಿ ರೂ. ಜತೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಬಸ್‌ ಪಾಸ್‌ ಸಲುವಾಗಿ ಎರಡು ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು. ಇದನ್ನು ತಾವು ಬಂದ ತಕ್ಷಣ ನಿಲ್ಲಿಸಿದೆವು.

ಕಟ್ಟಡಗಳನ್ನು ಯಾವ ಆದ್ಯತೆ ಮೇರೆಗೆ ನಿರ್ಮಿಸಲಾಯಿತು?
ವಿವಿ ಆಡಳಿತ ಕಚೇರಿ ಭವನವನ್ನು ಮೊದಲು ಪೂರ್ಣಗೊಳಿಸಿ ಅಗತ್ಯ ಪೀಠೊಪಕರಣ ಕಲ್ಪಿಸಲಾಯಿತು. ನಂತರ ಒಂದೊಂದಾಗಿ ವಿಭಾಗಗಳ ಕಟ್ಟಡಗಳನ್ನು ನೀರಿನ ಸಮಸ್ಯೆ ನಡುವೆಯೂ ಪೂರ್ಣಗೊಳಿಸಿರುವುದು ಒಂದು ಸಾಹಸವೇ ಸರಿ. ವಿವಿ ಆವರಣದೊಳಗೆ ಘಟಿಕೋತ್ಸವ ಮಾಡಬೇಕು. ಅದರಲ್ಲೂ ಘಟಿಕೋತ್ಸವ ಭವನ ನಿರ್ಮಿಸಬೇಕೆಂದು ಬಯಸಿ 1500 ಜನರು ಕುಳಿತುಕೊಳ್ಳುವ ಘಟಿಕೋತ್ಸವ ಸಭಾಂಗಣ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕಳೆದ ಮಾರ್ಚ್‌ ತಿಂಗಳಲ್ಲಿ ನಡೆಸಬೇಕೆಂದಿರುವ ಘಟಿಕೋತ್ಸವ ಇದರಲ್ಲೇ ನಡೆಸಬೇಕೆಂಬುದಾಗಿ ನಿರ್ಧರಿಸಲಾಗಿತ್ತು. ಒಟ್ಟಾರೆ ಶೇ.90 ಕಟ್ಟಡಗಳು ಪೂರ್ಣವಾಗಿವೆ. ಉಳಿದ ಕಟ್ಟಡ
ಕಾರ್ಯ ಹಾಗೂ ವಿಜ್ಞಾನ ಪೂರಕ ಸಾಮಗ್ರಿಗಳಿಗೆ 132 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟಾರೆ ವಿವಿಯೊಂದು ಸುಂದರ ಕ್ಯಾಂಪಸ್‌ ನ್ನಾಗಿ ನಿರ್ಮಿಸಿದ ತೃಪ್ತಿ ತಮಗಿದೆ.

ಶೈಕ್ಷಣಿಕವಾಗಿ ವಿವಿ ಮಾಡಿರುವ ಸಾಧನೆಗಳೇನು?
ತಾವು ಕುಲಪತಿಯಾಗಿ ಬಂದಾಗ 20 ವಿಭಾಗಗಳಿದ್ದವು. ಈಗ ಡಬಲ್‌ ವಿಭಾಗಗಳಾಗಿವೆ. ಕರ್ನಾಟಕ ಕೇಂದ್ರೀಯ ವಿವಿಗೆ ದೇಶಾದ್ಯಂತ 65 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಬಯಸಿ ಅರ್ಜಿ ಸಲ್ಲಿಸುತ್ತಿರುವುದೇ ವಿವಿಯ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಕೆಲವೊಂದು ವಿವಿಗೆ 10 ಸಾವಿರ ಅರ್ಜಿ ಸಹ ಸಲ್ಲಿಕೆಯಾಗಲ್ಲ. ಬೋಧನೆಯಲ್ಲಿ ಕೌಶಲ್ಯತೆ, ಹೊಸ ವಿಭಾಗಗಳ ಪ್ರಾರಂಭ, ಕಟ್ಟಡಗಳ ಜತೆಗೆ ಮೂಲಸೌಕರ್ಯ ಜತೆಗೆ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ
ಒಡಂಬಡಿಕೆ ಮಾಡಿಕೊಂಡಿರುವ ಪರಿಣಾಮ ವಿವಿಗೆ ಬಿ++ ಗ್ರೇಡ್‌ ಸಿಕ್ಕಿದೆ. ಈಚೆಗಷ್ಟೇ 72 ಪ್ರಾಧ್ಯಾಪಕರ ನೇಮಕಾತಿ ಕೈಗೊಳ್ಳಲಾಗಿದೆ. ಒಟ್ಟಾರೆ ಭದ್ರ ಅಡಿಪಾಯ ಹಾಕಲಾಗಿದೆ. ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಮುಂದಿನವರದ್ದು.

Advertisement

ಅಸಮಾಧಾನ ತಂದಿರುವ ಘಟನೆಗಳು ಯ್ನಾವವು?
ವಿವಿಗೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಯಾಗದಿರುವುದು, ವಿವಿಯಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿ ಕೊಲೆಯಾಗಿರುವುದು, ವಿವಿಗೆ ಪ್ರಾಧ್ಯಾಪಕ-ಸಹ ಪ್ರಾಧ್ಯಾಪಕರ ನೇಮಕಾತಿಯಲ್ಲಿ ವಿನಾಕಾರಣ ತಮ್ಮ ವಿರುದ್ಧ ಆರೋಪಿಸಿರುವುದು ಅಸಮಾಧಾನ ತಂದಿವೆ. ನೀರಿನ ಸಮಸ್ಯೆ ನಿವಾರಣೆಗೆ ಎಲ್ಲರಿಗೂ ಪತ್ರ ಬರೆಯಲಾಗಿದೆ. ಪ್ರಾಧ್ಯಾಪಕರ ನೇಮಕಾತಿಯಲ್ಲಿ ವಿನಾಕಾರಣ ಆರೋಪಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಅನ್ಯಾಯವಾಗಿದ್ದರೆ
ಅಭ್ಯರ್ಥಿಗಳು ಆರೋಪಿಸಬಹುದಿತ್ತು. ಜತೆಗೆ ನ್ಯಾಯಾಲಯ ಮೊರೆ ಹೋಗಬೇಕಿತ್ತು. ಇಲ್ಲಿ ಮೂರನೇ ವ್ಯಕ್ತಿ ಆರೋಪ ಮಾಡಿದ್ದಾಗಿದೆ. ಈಗಾಗಲೇ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಒಟ್ಟಾರೆ ಹಗಲಿರಳು ವಿವಿಯಲ್ಲೇ ಇದ್ದು ವಿವಿ ಅಭಿವೃದ್ಧಿಗೆ ಶ್ರಮಿಸಲಾಗಿದೆ.

ಕೊನೆಯದಾಗಿ ಹೇಳುವುದೇನು?
ಬೆಂಗಳೂರಿನಲ್ಲಿ ಸಿಯುಕೆ ಅಧ್ಯಯನ ಕೇಂದ್ರ(ಸ್ಟಡಿ ಸೆಂಟರ್‌)ಕ್ಕಾಗಿ ಬೆಂಗಳೂರು ವಿವಿಯಲ್ಲಿ 10 ಎಕರೆ ಭೂಮಿ ನೀಡಲಾಗಿದೆ. ಇದು ವಿವಿ ರಾಷ್ಟ್ರೀಯ,
ಅಂತಾರಾಷ್ಟ್ರೀಯ ಚಟುವಟಿಕೆಗಳಿಗೆ ಪೂರಕವಾಗಲಿದೆ. ಕಟ್ಟಡಗಳಿಗಾಗಿ ಈಗಷ್ಟೇ 132 ಕೋಟಿ ರೂ. ಬಿಡುಗಡೆಯಾಗಿದೆ. ಇದು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಲಿದೆ. ಒಟ್ಟಾರೆ ಸುಂದರ ಕ್ಯಾಂಪಸ್‌ ನಿರ್ಮಿಸಲಾಗಿದೆ. ಮುಂದಿನ ಕುಲಪತಿಗಳು ಇದೇ ದಾರಿಯಲ್ಲಿ ಮುನ್ನಡೆಸಿಕೊಂಡು ಹೋದಲ್ಲಿ ರಾಜ್ಯದ
ಏಕೈಕ ಸಿಯುಕೆ ಮತ್ತಷ್ಟು ಹೆಸರು ಮಾಡುವಲ್ಲಿ ಯಾವುದೇ ಅನುಮಾನವಿಲ್ಲ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next