Advertisement

Sardar Vallabhbhai Patel; 562 ರಾಜಪ್ರಭುತ್ವ ಪ್ರಾಂತ, ಒಂದು ದೇಶ

12:28 AM Oct 31, 2023 | Team Udayavani |

1947ರ ಮುನ್ನ ಭಾರತವೆಂಬುದು, ನಾನಾ ರಾಜರ ಪ್ರಾಂತಗಳಲ್ಲಿ ಹಂಚಿ ಹೋಗಿದ್ದು, ಬ್ರಿಟಿಷರ ಮೇಲ್ವಿಚಾ ರಣೆಯಲ್ಲಿ ಇವೆಲ್ಲವೂ ಅಧಿಕಾರ ನಡೆಸುತ್ತಿದ್ದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವ ವೇಳೆಗೆ ಇಡೀ ದೇಶವನ್ನು ಒಟ್ಟಿಗೆ ಸೇರಿಸುವ ಬಹುದೊಡ್ಡ ಸಾಧನೆಯನ್ನು ಮಾಡಿದ್ದವರು ದೇಶದ ಉಕ್ಕಿನ ಮಾನವ ಎಂದೇ ಖ್ಯಾತರಾಗಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲರು. ಸಾಮ, ದಾನ, ಭೇದ, ದಂಡ ಪ್ರಯೋಗದ ಮೂಲಕವೇ ಅಂದು ಇಡೀ ದೇಶವನ್ನು ಒಗ್ಗೂಡಿಸಿದರು. ಹೀಗಾಗಿಯೇ ಅವರ ಹುಟ್ಟುಹಬ್ಬದ ದಿನವಾದ ಅ.31 ಅನ್ನು ಏಕತಾ ದಿನವೆಂದು ಆಚರಿಸಲಾಗುತ್ತಿದೆ.

Advertisement

ಆಧುನಿಕ ಭಾರತದ ವಾಸ್ತು ಶಿಲ್ಪಿ

ದೇಶದ ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವರೂ ಆಗಿದ್ದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರನ್ನು ಆಧುನಿಕ ಭಾರತದ ವಾಸ್ತುಶಿಲ್ಪಿ ಎಂದೇ ಕರೆಯಲಾಗುತ್ತದೆ. ಏಕೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ 562 ರಾಜರ ಪ್ರಾಂತಗಳನ್ನು ಒಂದುಗೂಡಿಸುವುದು ಸುಲಭದ ಕೆಲಸವಾಗಿ ಇರಲಿಲ್ಲ. ಇದನ್ನು ಬಹಳ ರಾಜಕೀಯ ಪ್ರಜ್ಞೆ, ರಾಜತಾಂತ್ರಿಕ ನೀತಿ, ಸಾಮ, ದಾನ, ಭೇದ ಮತ್ತು ದಂಡ ನೀತಿ ಪ್ರಯೋಗಿಸಿ ಇಡೀ ದೇಶವನ್ನು ಒಗ್ಗೂಡಿಸಿದರು. ಇದರಲ್ಲಿ ಪಟೇಲ್‌ ಅವರ ದೂರದೃಷ್ಟಿ, ತಂತ್ರ, ರಾಜತಾಂತ್ರಿಕತೆ ಮತ್ತು ಪ್ರಾಯೋಗಿಕ ವಿಧಾನ ಹೆಚ್ಚು ಮೇಳೈಸಿದ್ದವು.

ರಾಜರ ಆಳ್ವಿಕೆಯಲ್ಲಿ ಶೇ.48ರಷ್ಟು ಪ್ರದೇಶ
ಸ್ವಾತಂತ್ರ್ಯ ಪೂರ್ವದಲ್ಲಿ ರಾಜಪ್ರಭುತ್ವದ ರಾಜ್ಯಗಳು ಭಾರತದ ಶೇ.48 ಪ್ರದೇಶವನ್ನು ಒಳಗೊಂಡಿದ್ದವು. ದೇಶದ ಜನಸಂಖ್ಯೆಯಲ್ಲಿ ಶೇ.28ರಷ್ಟು ಪಾಲು ಹೊಂದಿದ್ದವು. ಈ ರಾಜ್ಯಗಳು ಕಾನೂನುಬದ್ಧವಾಗಿ ಬ್ರಿಟಿಷ್‌ ಭಾರತದ ಭಾಗವಾಗಿರಲಿಲ್ಲವಾದರೂ, ವಾಸ್ತವದಲ್ಲಿ, ಅವು ಸಂಪೂರ್ಣವಾಗಿ ಬ್ರಿಟಿಷ್‌ ಪ್ರಭುತ್ವಕ್ಕೆ ಅಧೀನವಾಗಿದ್ದವು. 1947ರ ಭಾರತೀಯ ಸ್ವಾತಂತ್ರ್ಯ ಕಾಯ್ದೆ (ಮೌಂಟ್‌ಬ್ಯಾಟನ್‌ ಯೋಜನೆಯ ಆಧಾರದ ಮೇಲೆ) ಭಾರತೀಯ ಸಂಸ್ಥಾನಗಳ ಮೇಲೆ ಬ್ರಿಟಿಷ್‌ ಪ್ರಭುತ್ವದ ಪರಮಾಧಿಕಾರ­ವನ್ನು ಕಳೆದುಕೊ ಳ್ಳಲು ಅವಕಾಶ ಮಾಡಿ­ಕೊಟ್ಟಿತು. ಇದು ಈ ಆಡಳಿತಗಾರರಲ್ಲಿ ಪ್ರತಿಯೊಬ್ಬರಿಗೂ ಹೊಸದಾಗಿ ಜನಿಸಿದ ಭಾರತ ಅಥವಾ ಪಾಕಿಸ್ಥಾನದೊಂದಿಗೆ ವಿಲೀನಗೊಳ್ಳುವ ಅಥವಾ ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ಮುಂದುವರಿ­ಯುವ ಆಯ್ಕೆಯನ್ನು ನೀಡಿತು.

ಸ್ವಾತಂತ್ರ್ಯ ದಿನಾಚರಣೆಯ ಮೊದಲು ಈ 500 ಕ್ಕೂ ಹೆಚ್ಚು ಮುಖ್ಯಸ್ಥರನ್ನು ಭಾರತಕ್ಕೆ ಸೇರಿಸಿಕೊಳ್ಳುವ ಅಗತ್ಯವನ್ನು ಮನಗಂಡ ಪಟೇಲ್‌ ಮತ್ತು ಮೆನನ್‌ ಅವರು ಭಾರತೀಯ ಪ್ರಭುತ್ವದೊಂದಿಗೆ ತಮ್ಮ ಏಕೀಕರಣವನ್ನು ಸಾಧಿಸಲು ಬಲ ಮತ್ತು ಸ್ನೇಹಪರ ತಂತ್ರಗಳನ್ನು ಬಳಕೆ ಮಾಡಲು ಮುಂದಾದರು.
ಆದರೆ ಈ ಪ್ರಕ್ರಿಯೆ ಸರಳವಾಗಿರಲಿಲ್ಲ. ದಶಕಗಳ ಕಾಲ ಬ್ರಿಟಿಷರಿಂದ ಶೋಷಣೆಗೆ ಒಳಗಾಗಿದ್ದ ಅನೇಕ ಆಡಳಿತಗಾರರು ಬ್ರಿಟಿಷರ ನಿರ್ಗಮನದ ಅನಂತರ ಸ್ವಾಯ­ತ್ತತೆಯನ್ನು ಘೋಷಿಸಲು ಮತ್ತು ವಿಶ್ವ ಭೂಪಟದಲ್ಲಿ ತಮ್ಮ ಸ್ವತಂತ್ರ ರಾಜ್ಯತ್ವವನ್ನು ಘೋಷಿಸಲು ಸೂಕ್ತ ಕ್ಷಣವೆಂದು ನೋಡಿದರು. ಆದಾಗ್ಯೂ, ಪಟೇಲ್‌ ಮತ್ತು ಮೆನನ್‌ ಅವರ ಅದ್ಭುತ ತಂಡವು ಪಟ್ಟುಹಿಡಿದು ಕೆಲಸ ಮಾಡಿತು.

Advertisement

ಪಟೇಲರ ದಣಿವರಿಯದ ಪ್ರಯತ್ನಗಳು ಫಲಿಸಿದವು. ಬಹುತೇಕ ಆಡಳಿತಗಾರರು ತಮ್ಮ ತಮ್ಮ ರಾಜ್ಯಗಳ ವಿಸರ್ಜನೆಗೆ ಒಪ್ಪಿ, ಸಾವಿರಾರು ಹಳ್ಳಿಗಳು, ಜಾಗೀರ್‌ಗಳು, ಅರಮನೆಗಳು, ಸಂಸ್ಥೆಗಳು, ಕೋಟ್ಯಂತರ ರೂಪಾಯಿಗಳ ನಗದು ಬಾಕಿಗಳು ಮತ್ತು ಸುಮಾರು 12,000 ಮೈಲಿಗಳ ರೈಲ್ವೇ ವ್ಯವಸ್ಥೆಯನ್ನು ಯಾವುದೇ ಪರಿಹಾರವನ್ನು ಪಡೆಯದೆ ಭಾರತ ಸರಕಾರಕ್ಕೆ ಒಪ್ಪಿಸಿದರು. 1947ರ ಆಗಸ್ಟ್‌ 15ರ ಹೊತ್ತಿಗೆ, ರಾಜಪ್ರಭುತ್ವದ ರಾಜ್ಯಗಳ ಏಕೀಕರಣ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿತ್ತು.

ಸವಾಲಾದ ರಾಜಮನೆತನಗಳು
ಹೈದರಾಬಾದ್‌
ಹೈದರಾಬಾದಿನ ನಿಜಾಮ ಮಿರ್‌ ಒಸ್ಮಾನ್‌ ಅಲಿ ಖಾನ್‌ ಸ್ವತಂತ್ರವಾಗಿರಲು ಬಯಸಿದ್ದರು. ಹೀಗಾಗಿ ಮೊದಲು ಭಾರತಕ್ಕೆ ಸೇರಲು ಒಪ್ಪಲಿಲ್ಲ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸಲು ಪಟೇಲರು ಬಲಪ್ರಯೋಗ ಮಾಡಬೇಕಾಯಿತು.

ಜುನಾಗಢ
ಜುನಾಗಢದ ನವಾಬ ಮುಹಮ್ಮದ್‌ ಮಹಾಬತ್‌ ಖಾಂಜಿ ಹಿಂದೂ ಬಹುಸಂಖ್ಯಾಕ ರಾಜ್ಯವಾಗಿದ್ದರೂ ಪಾಕಿಸ್ಥಾನಕ್ಕೆ ಸೇರಲು ಬಯಸಿದ್ದರು. ಜುನಾಗಢವನ್ನು ಭಾರತದೊಂದಿಗೆ ಸಂಯೋಜಿಸಲು ಪಟೇಲರು ಸೇನೆ ತೆಗೆದುಕೊಂಡು ಹೋಗಿ ಬಲಪ್ರಯೋಗ ಮಾಡಿ ಭಾರತಕ್ಕೆ ಸೇರಿಸಿಕೊಳ್ಳಬೇಕಾಯಿತು.

ಕಾಶ್ಮೀರ
ಕಾಶ್ಮೀರದ ಮಹಾರಾಜ ಹರಿಸಿಂಗ್‌ ಭಾರತಕ್ಕೆ ಸೇರಬೇಕೆ ಅಥವಾ ಪಾಕಿಸ್ಥಾನಕ್ಕೆ ಸೇರಬೇಕೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇದರ ನಡುವೆಯೇ ಪಾಕಿಸ್ಥಾನ ಕಾಶ್ಮೀರದ ಮೇಲೆ ದಾಳಿಯನ್ನೂ ಶುರು ಮಾಡಿತ್ತು. ಆಗ ಪಟೇಲರು ರಾಜ್ಯಕ್ಕೆ ಸೈನ್ಯವನ್ನು ಕಳುಹಿಸುವ ಮೂಲಕ ಭಾರತಕ್ಕೆ ಸೇರುವಂತೆ ಮನವೊಲಿಸಬೇಕಾಯಿತು.

ಮಣಿಪುರ
ಮಣಿಪುರದ ರಾಜ ಬೋಧcಂದ್ರ ಸಿಂಗ್‌ ತನ್ನ ರಾಜ್ಯವು ಸ್ವತಂತ್ರವಾಗಿ ಉಳಿಯಬೇಕೆಂದು ಬಯಸಿದ್ದರು. ಆದಾಗ್ಯೂ ಅವರು ವಿಲೀನ ಪತ್ರಕ್ಕೆ ಸಹಿ ಹಾಕಲು ಮತ್ತು ಭಾರತದೊಂದಿಗೆ ವಿಲೀನಗೊಳ್ಳಲು ಆಗ್ರಹಿಸಲಾಯಿತು.

ತ್ರಿಪುರಾ
ತ್ರಿಪುರಾದ ರಾಜ ಬೀರ್‌ ಬಿಕ್ರಮ್‌ ಕಿಶೋರ್‌ ಮಾಣಿಕ್ಯ ಬಹದ್ದೂರ್‌ ಅವರು ಆರಂಭದಲ್ಲಿ ತಮ್ಮ ರಾಜ್ಯವು ಸ್ವತಂತ್ರವಾಗಿ ಉಳಿಯಬೇಕೆಂದು ಬಯಸಿದ್ದರು. ಅನಂತರದಲ್ಲಿ ಭಾರತದೊಂದಿಗೆ ವಿಲೀನಗೊಳ್ಳಲು ಒಪ್ಪಿಕೊಂಡರು.

ಪಟೇಲರ ತಂತ್ರಗಾರಿಕೆ
ದೇಶಭಕ್ತಿ
ರಾಜ್ಯಗಳನ್ನು ಸೇರಿಸಲು ಅವರು ಮುಂದಿಟ್ಟ ಮೊದಲ ತಂತ್ರವೇ ದೇಶಭಕ್ತಿ. ಹಿಂದಿನ ಸ್ವಾತಂತ್ರ್ಯ ಹೋರಾಟವು ಸೇರಿದಂತೆ ದೇಶಕ್ಕಾಗಿ ಮಡಿದವರ ನೆನಪಿಸಿಕೊಟ್ಟು, ರಾಷ್ಟ್ರದ ಬಗೆಗಿನ ಅವರ ಕರ್ತವ್ಯಗಳನ್ನು ನೆನಪಿಸಿ, ಭಾರತ ಸೇರುವಂತೆ ಮನವೊಲಿಕೆ ಮಾಡಿದರು.

ಪ್ರಿವಿ ಪರ್ಸ್‌
ಪಟೇಲರು “ಪ್ರಿವಿ ಪರ್ಸ್‌” ಪರಿಕಲ್ಪನೆಯನ್ನು ಪರಿಚಯಿಸಿದರು – ಭಾರತದೊಂದಿಗೆ ವಿಲೀನಗೊಳ್ಳುವ ಒಪ್ಪಂದಕ್ಕಾಗಿ ರಾಜ ಮನೆತನ ಗಳಿಗೆ ಒಂದಷ್ಟು ರಾಜಧನವನ್ನೂ ನೀಡ­ಲಾಯಿತು. ಭಾರತ ಸಂವಿಧಾನದ ಆರ್ಟಿಕಲ್‌ 291ರಂತೆ ಹಣ ನೀಡಲಾಯಿತು.

ಬಲಪ್ರಯೋಗ
ಕೆಲವು ಸಂದರ್ಭಗಳಲ್ಲಿ ಪಟೇಲರು ಕೆಲವು ರಾಜ ಪ್ರಭುತ್ವದ ರಾಜ್ಯಗಳನ್ನು ಭಾರತದೊಂದಿಗೆ ಸಂಯೋಜಿ­ಸಲು ಬಲವನ್ನು ಬಳಸ­ ಬೇಕಾಯಿತು. ಉದಾಹರಣೆಗೆ, ಅವರು ಹೈದರಾಬಾದ್‌ ಮತ್ತು ಜುನಾಗಢವನ್ನು ಭಾರತದೊಂದಿಗೆ ಸಂಯೋಜಿಸಲು
ಬಲವನ್ನು ಬಳಸಿದರು.

ಸರ್ದಾರ್‌ ನಡೆದು ಬಂದ ದಾರಿ
ಸರ್ದಾರ್‌ ವಲ್ಲಭಭಾಯ್‌ ಪಟೇಲರು 1875ರ ಅ. 31ರಂದು ಗುಜರಾತ್‌ನ ನಾಡಿ­ ಯಾಡ್‌ನ‌ ರೈತರ ಕುಟುಂಬದಲ್ಲಿ ಜನಿಸಿದರು. ಆರಂಭಿಕ ವಿದ್ಯಾಭ್ಯಾಸದ ಬಳಿಕ ಕಾನೂನು ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದರು.
ಮಹಾತ್ಮಾ ಗಾಂಧೀಜಿಯವರಿಂದ ಪ್ರೇರಿತರಾದ ಪಟೇಲರು, ರಾಷ್ಟ್ರೀಯ ಕಾಂಗ್ರೆಸ್‌ ಸೇರ್ಪಡೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಪಟೇಲರನ್ನು ರೈತರ ಚಾಂಪಿಯನ್‌ ಎಂದೂ ಕರೆಯಲಾಗುತ್ತದೆ. ಇದಕ್ಕೆ ಕಾರಣ, ಖೇಡಾ, ಬೊಶಾìದ್‌ ಮತ್ತು ಬಾಡೋìಲಿಯಲ್ಲಿ ರೈತರ ಆಂದೋಲನಗಳನ್ನು ಯಶಸ್ವಿಯಾಗಿ ಮುನ್ನಡೆಸಿದರು. ತೆರಿಗೆ ಹೇರಿಕೆಗೆ ವಿರೋಧ ಮತ್ತು ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು.
ಸ್ವಾತಂತ್ರಾéನಂತರದಲ್ಲಿ ಉಪ
ಪ್ರಧಾನಿ ಮತ್ತು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿ ಇಡೀ ದೇಶವನ್ನು ಒಗ್ಗೂಡಿಸಿದರು.
ಇವರನ್ನು ರಾಜನೀತಿಜ್ಞ ಮತ್ತು ಉತ್ತಮ ಆಡಳಿತಗಾರ ಎಂದೂ ಹೇಳಲಾಗುತ್ತದೆ. ಏಕೆಂದರೆ ಭಾರತದ ಆಡಳಿತ ರಚನೆಗೆ ಅಡಿಪಾಯ ಹಾಕಿದರು. ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್‌ ಸೇವೆಯನ್ನು ಸ್ಥಾಪಿಸಿದರು.
ಸರ್ದಾರ್‌ ವಲ್ಲಭಭಾಯ್‌ ಪಟೇಲರು 1950ರ ಡಿ.15ರಂದು ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದರು.

Advertisement

Udayavani is now on Telegram. Click here to join our channel and stay updated with the latest news.

Next