ಕಡಬ: ಕಡಬದ ಹನುಮಾನ್ ನಗರ (ಕೇವಳ) ದಲ್ಲಿರುವ ಸರಸ್ವತೀ ಪದವಿ ಪೂರ್ವ ವಿದ್ಯಾಲಯದ ವಠಾರದಲ್ಲಿ ಶನಿವಾರ ರಾತ್ರಿ ಜರಗಿದ ಸರಸ್ವತೀ ವಿದ್ಯಾಲಯದ ವಾರ್ಷಿಕ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಸಾಂಸ್ಕೃತಿಕ ವೈಭವ ಜನರ ಮನಸೂರೆಗೊಳಿಸಿತು. ಸಾಹಸ ಕಸರತ್ತುಗಳು ರೋಮಾಂಚನಗೊಳಿಸಿದವು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಕರಾಟೆ, ಮಲ್ಲಕಂಬ, ದೊಂದಿ ಪ್ರದರ್ಶನದೊಂದಿಗೆ ಬಕಾಸುರ ವಧೆ ಯಕ್ಷರೂಪಕ, ದ್ವಿಚಕ್ರ ಸಮತೋಲನ, ದೇಶ ಭಕ್ತಿಗೀತೆ, ಶಿಶು ನೃತ್ಯ, ಕೋಲಾಟ, ಯೋಗಾಸನ, ಜನಪದ ಗೀತೆ, ವೀರಗಾಸೆ, ದೀಪಾರತಿ, ಕೂಪಿಕಾ, ಹಾಡಿನ ಜತೆಗೆ ವಿದ್ಯಾರ್ಥಿಗಳಿಂದ ಕುಂಚದಲ್ಲಿ ವೀರ ಸಾವರ್ಕರ್ ವರ್ಣಚಿತ್ರ ರಚನೆ, ಜಲಿಯನ್ವಾಲಾ ಭಾಗ್ ಹತ್ಯಾಕಾಂಡದ ಕಿರುನಾಟಕ, ಕುಣಿತ ಭಜನೆ ಹಾಗೂ ವಿದ್ಯಾರ್ಥಿಗಳಿಂದ ಸಾಹಸ ಪ್ರದರ್ಶನ ಜರಗಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಕಡಬ, ಬೆಂಗಳೂರಿನ ಉದ್ಯಮಿ ಮಾಧವ ಗೌಡ ಕತ್ಲಡ್ಕ, ಮೈಸೂರಿನ ಉದ್ಯಮಿ ದಿವಾಕರ ದಾಸ್, ಖ್ಯಾತ ವಕೀಲ ಮಹೇಶ್ ಕಜೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಡಬದ ಉದ್ಯಮಿ ಸುಂದರ ಗೌಡ ಮಂಡೆಕರ, ಡಾ| ಸೌಮ್ಯಾ ಪ್ರಸಾದ್ ಕೋಡಿಂಬಾಳ, ಹಾಸನದ ರಂಗೇಗೌಡ, ಆರೆಸ್ಸೆಸ್ ಜಿಲ್ಲಾ ಕಾರ್ಯವಾಹ ಸುಭಾಶ್ಚಂದ್ರ ಕಳಂಜ, ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಂಗಯ್ಯ ಶೆಟ್ಟಿಗಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಬೆಂಗಳೂರಿನ ಉದ್ಯಮಿ ರಂಜಿತ್, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ ಅಭ್ಯಾಗತರಾಗಿದ್ದರು.
ಶ್ರೀ ಭಾರತಿ ಶಿಶು ಮಂದಿರದ ಅಧ್ಯಕ್ಷ ಪ್ರಕಾಶ್ ಎನ್.ಕೆ., ವ್ಯವಸ್ಥಾಪಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಮಾಧವ ಕೋಲ್ಪೆ ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿದ್ಯಾಲಯದ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕಿ ಪ್ರೇಮಲತಾ ನಿರೂಪಿಸಿದರು. ಉಪನ್ಯಾಸಕ ನಾಗರಾಜ್, ಶಿಕ್ಷಕರಾದ ಶಿವಪ್ರಸಾದ್ ಹಾಗೂ ಲಕ್ಷ್ಮೀಶ ಆರಿಗ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿದ್ಯಾಲಯದ ಅಧ್ಯಕ್ಷ ರವಿರಾಜ ಶೆಟ್ಟಿ ಕಡಬ ವಂದಿಸಿದರು.