Advertisement

ಬೇಕು-ಬೇಡಗಳ ನಡುವೆ ಸಂಸ್ಕೃತ ಕಥನ

11:39 PM Jan 21, 2022 | Team Udayavani |

ಬೆಂಗಳೂರಿನಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಭೂಮಿ ನೀಡಿರುವುದು ಮತ್ತು ಅನುದಾನ ಒದಗಿಸುವ ವಿಚಾರದಲ್ಲಿ ಭಾರೀ ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವೇ ಕೆಲವು ಜನರ ಮಾತೃಭಾಷೆ ಯಾಗಿರುವ ಸಂಸ್ಕೃತ ವಿವಿಗೆ ಏಕೆ ಭಾರೀ ಪ್ರಮಾಣದ ಹಣ ಎಂಬುದು ಕನ್ನಡ ಹೋರಾಟಗಾರರ ಪ್ರಶ್ನೆ. ಕನ್ನಡಕ್ಕೂ, ಸಂಸ್ಕೃತ ವಿವಿಗೂ ಸಂಬಂಧವಿಲ್ಲ, ಈ ಬಗ್ಗೆ ಕನ್ನಡ ಹೋರಾಟಗಾರರ ವಿರೋಧಕ್ಕೆ ಅರ್ಥವಿಲ್ಲ ಎಂಬುದು ಸಂಸ್ಕೃತ ವಿವಿ ಪರವಾಗಿರುವವರ ವಾದ. ಹೀಗಾಗಿ ಸಂಸ್ಕೃತ ವಿವಿಯ ಕುರಿತಾಗಿ ನಡೆಯುತ್ತಿರುವ ವಿವಾದದ ಸುತ್ತ ಒಂದು ನೋಟ ಇಲ್ಲಿದೆ..

Advertisement

ಸದ್ಯದ ಸ್ಥಿತಿಗತಿಯೇನು?
ಸದ್ಯ ಚಾಮರಾಜಪೇಟೆಯ ಕಟ್ಟಡವೊಂದರಲ್ಲಿ ಸಂಸ್ಕೃತ ವಿವಿ ಕಾರ್ಯಾಚರಣೆ ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ಸಂಸ್ಕೃತ ವಿವಿ ಆರಂಭಿಸಬೇಕು ಎಂಬ ಉದ್ದೇಶದಿಂದ 2013ರಲ್ಲಿ ಮಾಗಡಿ ರಸ್ತೆಯಲ್ಲಿ 100 ಎಕ್ರೆ ಭೂಮಿ ನೀಡಲಾಗಿದೆ. ಪಾಠ-ಪ್ರವಚನ, ವಿಶ್ವವಿದ್ಯಾನಿಲಯದ ಅಭಿವೃದ್ಧಿ, ಬೋಧಕ-ಬೋಧಕೇತರ ಸಿಬಂದಿ ನೇಮಕಾತಿ ಸೇರಿದಂತೆ ಹತ್ತಾರು ವಿಷಯಗಳ ವಿಚಾರವಾಗಿ 2020ರಲ್ಲಿ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಯು ರಾಜ್ಯ ಸರಕಾರಕ್ಕೆ 369 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದೆ. ಆದರೆ ಸರಕಾರದಿಂದ ಈ ವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅಲ್ಲದೆ ಕೆಎಸ್‌ಒಯು ಜತೆಗಿನ ಒಡಂಬಡಿಕೆಯಂತೆ ಅದಕ್ಕೆ 5 ಎಕರೆ ಭೂಮಿ ಬಿಟ್ಟುಕೊಡಲಾಗಿದ್ದು, ಅದರ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಸಂಸ್ಕೃತ ವಿಶ್ವವಿದ್ಯಾನಿಲಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ| ದೇವನಾಥನ್‌.

ವಿವಾದ ಹುಟ್ಟಿದ್ದು ಹೇಗೆ?
2013ರಲ್ಲೇ ಸಂಸ್ಕೃತ ವಿವಿಗಾಗಿ ಭೂಮಿ ಕೊಟ್ಟಿದ್ದರೂ, ಇದುವರೆಗೆ ಯಾವುದೇ ವಿವಾದಗಳುಂಟಾಗಿರಲಿಲ್ಲ. ಆದರೆ ಸಂಸ್ಕೃತ ಪಿಯು ಕಾಲೇಜುಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಬಾರದು ಎಂದು ಸಂಸ್ಕೃತ ಭಾರತಿ, ಸಂಸ್ಕೃತ ಅಧ್ಯಾಪಕರ ಸಂಘ ಹೈಕೋರ್ಟ್‌ಗೆ ಕೇಸ್‌ ಹಾಕಿವೆ. ಇದು ಕನ್ನಡಪರ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿದೆ.

ಕನ್ನಡಪರ ಸಂಘಟನೆಗಳವಾದ
ರಾಜ್ಯದಲ್ಲಿರುವ ಏಕೈಕ ಕನ್ನಡ ವಿಶ್ವವಿದ್ಯಾನಿಲಯ ವಾದ ಹಂಪಿ ವಿವಿ ಹಲವಾರು ಸಮಸ್ಯೆಗಳಿಂದ ಕೂಡಿದೆ. ಸಮರ್ಪಕ ಮೂಲ ಸೌಕರ್ಯವಿಲ್ಲ, ಬೋಧಕ-ಬೋಧಕೇತರ ಸಿಬಂದಿ ಕೊರತೆ ಇದೆ, ನಿವೃತ್ತರಾದವರಿಗೆ ಪಿಂಚಣಿ ನೀಡಲು ಅನುದಾನವಿಲ್ಲ. ರಾಜ್ಯ ಸರಕಾರ ಪ್ರತೀ ವರ್ಷ ಸುಮಾರು 5-6 ಕೋಟಿ ರೂ. ಅನುದಾನ ನೀಡಲು ಸಹ ಸರಕಾರ ಹಿಂದೇಟು ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಕಲಿಸಲು ವಿರೋಧ ಮಾಡುತ್ತಿರುವ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ರಾಜ್ಯದಲ್ಲಿ ನಿರ್ಮಿಸುವ ಮತ್ತು ಕೋಟ್ಯಂತರ ರೂ. ಅನುದಾನ ನೀಡುವ ಅಗತ್ಯವೇನಿದೆ? ಒಂದು ವೇಳೆ ಸಂಸ್ಕೃತ ವಿವಿ ನಿರ್ಮಿಸುವುದೇ ಆದರೆ ಅದಕ್ಕೂ ಮೊದಲು ಕನ್ನಡ ವಿವಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು.

ಕೇವಲ 24 ಸಾವಿರ
ದೇಶದಲ್ಲಿ ಸಂಸ್ಕೃತವನ್ನು ಮಾತೃಭಾಷೆಯಾಗಿ ಒಪ್ಪಿಕೊಂಡಿರುವವರು ಕೇವಲ 24 ಸಾವಿರ ಮಾತ್ರ. ಕೇವಲ 24 ಸಾವಿರ ಜನರಿಗೆ ದೇಶದಲ್ಲಿ 19 ವಿಶ್ವವಿದ್ಯಾನಿಲಯಗಳಿವೆ. ಕರ್ನಾಟಕದಲ್ಲಿ ಸಂಸ್ಕೃತ ಮಾತೃಭಾಷೆ ಎಂದು ಒಪ್ಪಿಕೊಂಡಿರುವವರು ಕೇವಲ ಒಂದು ಸಾವಿರ ಜನ ಮಾತ್ರ. ಕೋಟ್ಯಂತರ ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳದ ಮತ್ತು ಭಾಷೆಯನ್ನು ಕಲಿಯದವರಿಗೆ ಸರಕಾರದ ಸೌಲಭ್ಯಗಳೇಕೆ ಎಂಬುದು ಕನ್ನಡಪರ ಹೋರಾಟಗಾರರ ಪ್ರಶ್ನೆ.

Advertisement

ಕೇಸ್‌ ಹಿಂಪಡೆಯಲಿ
ನಾವೇನು ಸಂಸ್ಕೃತ ವಿರೋಧಿಗಳಲ್ಲ. ಆದರೆ ಸಂಸ್ಕೃತ ಭಾರತಿ ಅಧ್ಯಾಪಕರ ಸಂಘ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಕಡ್ಡಾಯ ಮಾಡಬಾ ರದು ಎಂದು ನ್ಯಾಯಾಲಯಕ್ಕೆ ಹೋಗಿರುವುದು ಸರಿಯಲ್ಲ. ರಾಜ್ಯದ ಆಡಳಿತ ಭಾಷೆಯನ್ನು ಪ್ರತಿಯೊಬ್ಬರೂ ಕಲಿಯುವ, ಕಲಿಸುವ ಮನಸ್ಸು ಇರಬೇಕು. ಕನ್ನಡ ಕಲಿಸುವುದಿಲ್ಲ ಎನ್ನುವವರಿಗೆ 369 ಕೋಟಿ ರೂ. ಅನುದಾನ ಹಾಗೂ 100 ಎಕ್ರೆ ಜಮೀನು ನೀಡಲಾಗಿದೆ.  ಮೊದಲು ಸಂಸ್ಕೃತ ಭಾರತಿ ಪ್ರಕರಣವನ್ನು ಹಿಂಪಡೆಯಬೇಕು. ರಾಜ್ಯ ಸರಕಾರದ ಆದೇಶವನ್ನು ವಿರೋಧಿಸಿ ಸಂಸ್ಕೃತ ಬೋಧನೆ ಮಾಡುವವರಿಗೆ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ವನ್ನು ಯಾವ ಉದ್ದೇಶಕ್ಕಾಗಿ ಕಟ್ಟಿಕೊಡಬೇಕು? ಅವರಿಗೇಕೆ ಸರಕಾರ ವೇತನ ನೀಡಬೇಕು ಎಂದು  ಕರ್ನಾಟಕ ರಕ್ಷಣ  ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪ್ರಶ್ನಿಸುತ್ತಾರೆ. ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆ ಹಿಂಪಡೆಯುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಹೋರಾಟದ ಮೊದಲ ಭಾಗವಾಗಿ ಟ್ವಿಟರ್‌ ಅಭಿಯಾನ ನಡೆದಿದ್ದು, ಎರಡನೇ ಭಾಗವಾಗಿ ಹೋರಾಟ ರೂಪಿಸಲು ಜ.24ರಂದು ಸಾಹಿತಿಗಳು, ಪ್ರಗತಿಪರ ಚಿಂತಕರು, ನಾಡು-ನುಡಿಗಾಗಿ ದುಡಿದಿರುವವರು ಸೇರಿದಂತೆ ರಾಜ್ಯದ ಗಣ್ಯರನ್ನು ಒಳಗೊಂಡ ದುಂಡುಮೇಜಿನ ಸಭೆ ಸೇರಲಾಗುತ್ತಿದೆ ಎಂದಿದ್ದಾರೆ ಅವರು.

ಎನ್‌ಇಪಿ ಜಾರಿಯಿಂದಲೇ ಸಮಸ್ಯೆ
ರಾಜ್ಯದಲ್ಲಿ ಕನ್ನಡ ಕಲಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಎರಡು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಅದನ್ನು ಪಾಲನೆ ಮಾಡುವುದಕ್ಕಾಗಿ ಸಂಸ್ಕೃತ ಭಾರತಿಯು ನ್ಯಾಯಾಲಯದ ಮೊರೆ ಹೋಗಿದೆ. ನ್ಯಾಯಾಲಯ ಕೂಡ ಕನ್ನಡವನ್ನು ಕಡ್ಡಾಯ ಮಾಡಬೇಡಿ, ಬಲವಂತವಾಗಿ ಕಲಿಸಬೇಡಿ ಎಂಬ ಮಧ್ಯಾಂತರ ತೀರ್ಪು ನೀಡಿದೆ. ಎನ್‌ಇಪಿ ಪ್ರಕಾರ ಬೋಧನೆ ಮಾಡುವಂತೆ ಸೂಚನೆ ನೀಡಿದೆ. ಭಾಷೆ ಬೋಧನೆ ವಿಷಯವೇ ಬೇರೆ, ಸಂಸ್ಕೃತ ವಿಶ್ವ ವಿದ್ಯಾಲಯವೇ ಬೇರೆ. ಈ ಎರಡೂ ವಿಷಯಗಳಿಗೂ ಒಂದ ಕ್ಕೊಂದು ಸಂಬಂಧವಿಲ್ಲ. ಎನ್‌ಇಪಿ ಪ್ರಕಾರ ಭಾಷೆ ಕಲಿಕೆ ವಿಚಾರ ನ್ಯಾಯಾಲಯಕ್ಕೆ ಹೋಗುವುದಕ್ಕೂ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಅನುದಾನ ನೀಡಬೇಡಿ ಎಂಬುದಕ್ಕೂ ಏನಾದರೂ ಸಂಬಂಧವಿದೆಯೇ? ರಾಜ್ಯ ಸರಕಾರ ಕನ್ನಡ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿ ಮಾಡದಿದ್ದರೆ, ಅನುದಾನ ಕೊಡುವಂತೆ ಆಗ್ರಹಿಸಬೇಕೇ ವಿನಾ ಸಂಸ್ಕೃತ ವಿಶ್ವವಿದ್ಯಾನಿಲಯದ ಅನುದಾನಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎನ್ನುತ್ತಾರೆ ಸಂಸ್ಕೃತ ವಿಶ್ವವಿದ್ಯಾನಿಲಯ ಸಿಂಡಿಕೇಟ್‌ ಸದಸ್ಯ ಪ್ರೊ| ನಂಜುಂಡಯ್ಯ. ಸಂಸ್ಕೃತ ವಿಶ್ವವಿದ್ಯಾನಿಲಯ ಘೋಷಣೆಯಾಗಿ 10 ವರ್ಷ ಮತ್ತು ಭೂಮಿ ನೀಡಿ 9 ವರ್ಷಗಳಾಗಿವೆ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಎರಡು ವರ್ಷಗಳಾದರೂ ಈ ವರೆಗೆ ಬಿಡಿಗಾಸು ಅನುದಾನ ನೀಡಿಲ್ಲ ಎಂದು ಹೇಳುತ್ತಾರೆ.

ಎನ್‌ಇಪಿ ನಿಯಮಗಳ ಪ್ರಕಾರ, ಎರಡು ಭಾಷೆಗಳನ್ನು ಕಲಿಸುವುದಕ್ಕೆ ಮಾತ್ರ ಅವಕಾಶವಿದೆ. ಮೊದಲ ಭಾಷೆ ಸಂಸ್ಕೃತ ಕಲಿತರೆ, ಎರಡನೇ ಭಾಷೆಯನ್ನು ಆಯಾ ಮಾತೃಭಾಷಿಗಳು ತಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನ್ಯಾಯಾಲಯ ಕೂಡ ಬಲವಂತವಾಗಿ ಕನ್ನಡ ಕಲಿಸಿ ಎಂದು ಹೇಳಿಲ್ಲ.
-ಪ್ರೊ| ದೇವನಾಥನ್‌, ಸಂಸ್ಕೃತ ವಿವಿ ಕುಲಪತಿ

ನಾವು ಸಂಸ್ಕೃತ ವಿರೋಧಿಯಲ್ಲ. ಆದರೆ ರಾಜ್ಯದ ಆಡಳಿತ ಭಾಷೆ ವಿರೋಧಿಸಿ, ಸರ್ಕಾ ರದ ನಿಯಮ ಉಲ್ಲಂ ಸಿ ಕನ್ನಡ ಕಲಿಸದೆ ಸಂಸ್ಕೃತ ಕಲಿಸುತ್ತಾರೆ ಎಂದಾದರೆ, ಅವರಿಗೆ ಸರ್ಕಾ ರದ ಸೌಲಭ್ಯಗಳೇಕೆ? ನೂರಾರು ಎಕರೆ ಭೂಮಿ, ಕೋಟ್ಯಂತರ ರೂ. ಅನುದಾನವನ್ನು ಏಕೆ ನೀಡಬೇಕು?
-ಟಿ.ಎ. ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ

6.5 ಕೋಟಿ ಕನ್ನಡಿಗರಿಗಾಗಿ ಇರುವ ಏಕೈಕ ವಿಶ್ವವಿದ್ಯಾನಿಲಯಕ್ಕೆ 2 ಕೋಟಿ ರೂ. ಕೊಡಲು ಸರಕಾರದ ಬಳಿ ಹಣವಿಲ್ಲ. ಸಂಸ್ಕೃತ ಮಾತನಾಡುವ 24 ಸಾವಿರ ಮಂದಿಗಾಗಿ ನೂರು ಎಕರೆ ಜಮೀನು, 369 ಕೋಟಿ ರೂ. ಇದ್ಯಾವ ನ್ಯಾಯ ಎಂದು ಜನ ಕೇಳುತ್ತಿದ್ದಾರೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೇನೆ.
-ಟಿ.ಎಸ್‌.ನಾಗಾಭರಣ,
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next