Advertisement

ಐಐಟಿಯಲ್ಲಿ ಸಂಸ್ಕೃತ ಪೀಠ

11:15 AM Feb 10, 2018 | Karthik A |

ಚೆನ್ನೈ: ಮದ್ರಾಸ್‌ನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ತಾಂತ್ರಿಕ ಕೋರ್ಸ್‌ಗಳ ಜತೆಗೆ ಸಂಸ್ಕೃತವನ್ನು ಬೋಧಿಸಲಿದೆ. ಅದಕ್ಕಾಗಿ ಪ್ರತ್ಯೇಕ ಪೀಠ ಸ್ಥಾಪನೆ ಯಾಗಲಿದೆ. ಅಂದ ಹಾಗೆ ಅದಕ್ಕೆ ಕೇಂದ್ರ ಸರ್ಕಾರದ ನೆರವು ಇಲ್ಲ. ತಾಂತ್ರಿಕ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂತ ರಾಜೀಂದರ್‌ ಸಿಂಗ್‌ ಜಿ ಮಹರಾಜ್‌ ಪೀಠ ಸ್ಥಾಪನೆಗಾಗಿ 90 ಲಕ್ಷ ರೂ. ನೀಡಿದ್ದಾರೆ. 

Advertisement

ವೇದಗಳಲ್ಲಿ ಪ್ರಸ್ತಾಪವಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನ ವಿಶೇಷವಾಗಿ ಸಂಸ್ಕತ ಭಾಷೆಯ ಅಧ್ಯಯನ ಮತ್ತು ಸಂಶೋಧನೆ ಈ ಪೀಠದಿಂದ ನಡೆಯಲಿದೆ ಎಂದು ಐಐಟಿ ಮದ್ರಾಸ್‌ನ ದ ಹಿರಿಯ ಅಧಿಕಾರಿ ‘ದ ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ತಿಳಿಸಿದ್ದಾರೆ. ವೇದಗಳಲ್ಲಿ ಉಲ್ಲೇಖವಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ಪೀಠ ಸ್ಥಾಪಿಸಲಾಗುತ್ತಿದೆ. ಏಕಕಂತಿನಲ್ಲಿ 75 ಲಕ್ಷ ರೂ. ಕೊಡುಗೆ ಮತ್ತು ವಾರ್ಷಿಕವಾಗಿ 15 ಲಕ್ಷ ರೂ.ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಭಾರತೀಯ ಸಂಸ್ಕೃತಿಗಾಗಿನ ಶ್ರೀ ಅರಬಿಂದೋ ಪ್ರತಿಷ್ಠಾನದ ನಿರ್ದೇಶಕ ಸಂಪದಾನಂದ ಮಿಶ್ರಾ ಉದ್ದೇಶಿತ ಪೀಠದ ನೇತೃತ್ವ ವಹಿಸಲಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಂಸ್ಕೃತ ವೈಜ್ಞಾನಿಕ ಭಾಷೆ. ಅದು ಭಾರತದ ಆತ್ಮ. ವಿದ್ಯಾರ್ಥಿಗಳಿಗೆ ಭಾಷೆ ಪರಿಚಯಿಸುವ ಕೆಲಸ ಮಾಡಲಿದ್ದೇನೆ’ ಎಂದಿದ್ದಾರೆ. ಸಂತ ರಾಜೀಂದರ್‌ ಸಿಂಗ್‌ ಜಿ ಮಹರಾಜ್‌ 1967ರಲ್ಲಿ ಐಐಟಿ ಮದ್ರಾಸ್‌ನಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದರು. 20 ವರ್ಷಗಳ ಕಾಲ ಎಂಜನಿಯರಿಂಗ್‌ ಮತ್ತು ಸಂವಹನ ಕ್ಷೇತ್ರದಲ್ಲಿ ದುಡಿದ ಬಳಿಕ ಹೊಸದಿಲ್ಲಿಯಲ್ಲಿ ‘ಸೈನ್ಸ್‌ ಆಫ್ ಸ್ಪಿರಿಟ್ಯುವಾಲಿಟಿ’ ಎಂಬ ಸಂಸ್ಥೆ ಸ್ಥಾಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next