Advertisement

Brahma Kamala: ಆರೋಗ್ಯ ಸಂಜೀವಿನಿ… ಬ್ರಹ್ಮಕಮಲದ ಆಧ್ಯಾತ್ಮಿಕ ಹಿನ್ನಲೆ ಏನು?

02:54 PM Nov 30, 2023 | Team Udayavani |

ಪ್ರಕೃತಿ ಮಡಿಲಲ್ಲಿ ನೆಲೆಯಾಗಿರುವ ಅದೆಷ್ಟೋ ವಿಶಿಷ್ಟ, ವಿಶೇಷವಾಗಿರುವ ವಿಚಾರಗಳಿವೆ. ಅರಿಯದೇ ಹುದುಗಿರುವ ಸಾವಿರಾರು ಅಂಶಗಳಿವೆ. ಅಂತೆಯೇ ಪ್ರಕೃತಿಯಲ್ಲಿ ಅದೆಷ್ಟೋ ಸಾವಿರ ಜಾತಿಯ ಹೂಗಳಿವೆ. ಆ ಎಲ್ಲ ಹೂಗಳು ಸೂರ್ಯೋದಯ ಸಮಯಕ್ಕೆ ಅರಳಿ ಸೂರ್ಯಾಸ್ತದ ಸಮಯಕ್ಕೆ ಬಾಡಿ ಬಿಡುತ್ತದೆ. ಜತೆಗೆ ಅತೀ ಹೆಚ್ಚು ಹೊತ್ತು ಜೀವಂತವಾಗಿರುವ ಹೂಗಳಿವೆ. ಅಂತಹ ಹೂವುಗಳಲ್ಲಿ ಭಿನ್ನವಾಗಿರುವ, ವಿಶೇಷ – ವಿಶಿಷ್ಟವಾಗಿರುವ ಪುಷ್ಪವೇ ಬ್ರಹ್ಮಕಮಲ.

Advertisement

ಈ ಹೂವು ಎಲ್ಲ ಹೂವುಗಳಂತೆ ಮುಂಜಾನೆ ಅರಳಿ ಮುಸ್ಸಂಜೆ ಬಾಡುವುದಿಲ್ಲ. ಬದಲಾಗಿ ಇದು ರಾತ್ರಿ ಅರಳಿ ರಾತ್ರಿಯೇ ಬಾಡುವ ಹೂವಾಗಿದ್ದು,  ಬರೀ ಎರಡು ತಾಸು ಮಾತ್ರ ಜೀವಂತವಾಗಿರುತ್ತದೆ. ಆದ್ದರಿಂದ ಇದನ್ನು ರಾತ್ರಿ ರಾಣಿ ಎಂದು ಕರೆಯಲಾಗುತ್ತದೆ. ಇದು ಮಧ್ಯ ಮಾನ್ಸೂನ್‌ (ಜೂನ್‌ -ಆಗಸ್ಟ್‌) ತಿಂಗಳಲ್ಲಿ ಅರಳುತ್ತದೆ. ಈ ಪುಷ್ಪವು ಬಿಳಿ, ಗುಲಾಬಿ ಮತ್ತು ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತದೆ.

ಇವು ಎಲ್ಲ ಹೂವಿನ ಗಿಡಗಳಂತೆ ಬೇರಿನಿಂದ ಗಿಡವಾಗಿ, ಗಿಡದ ಅನಂತರ ಹೂವಾಗುವ ಅಥವಾ ಬೀಜಗಳಿಂದ ಸಸಿಗಳಾಗಿ ಅನಂತರ ಗಿಡವಾಗಿ ಹೂವನ್ನು ಬಿಡುವಂತಹ ಸಸ್ಯಗಳಲ್ಲ. ಇದು ಬರೀ ಒಂದು ಎಲೆಯಿಂದ ಬದುಕುವ ಗಿಡ. ಎಲೆಯೇ ಮೊಗ್ಗಾಗಿ ಅನಂತರ ಹೂವಾಗಿ ಪರಿವರ್ತನೆಗೊಳ್ಳುತ್ತದೆ.

ಇದರ ಗಿಡಗಳು 5 ರಿಂದ 10 ಸೆಂ. ಮೀ. ನಷ್ಟು ಬೆಳೆಯಬಲ್ಲವು. ಇದು ಉತ್ತರಾಖಂಡ ಹಾಗೂ ಹಿಮಾಲಯದಂತಹ ಶೀತಭಾಗದಲ್ಲಿ ಅತೀ ಹೆಚ್ಚಾಗಿ ಕಾಣಲ್ಪಡುತ್ತದೆ. ಇದು ಉತ್ತರಾಖಂಡದ ರಾಜ್ಯ ಪುಷ್ಪವಾಗಿದ್ದು, ಉತ್ತರಾಖಂಡದ ಜಿಲ್ಲೆಗಳಾದ ಕೇದಾರನಾಥ, ಹೇಮಕುಂಡ ಮತ್ತು ತುಂಗನಾಥದಲ್ಲಿ ಅತೀ ಹೆಚ್ಚಾಗಿ ಈ  ಪುಷ್ಪವು ಕಂಡುಬರುತ್ತದೆ. ಇದರಿಂದಾಗಿ ಈ ಹೂವನ್ನು ಹಿಮಾಲಯದ ಹೂವುಗಳ ರಾಜ ಎಂದು ಕರೆಯುತ್ತಾರೆ.

ಆಧ್ಯಾತ್ಮಿಕ ಹಿನ್ನಲೆ

Advertisement

ಹೆಸರೇ ಹೇಳುವಂತೆ ಪೌರಾಣಿಕತೆಯನ್ನು ಒಳಗೊಂಡ ಪುಷ್ಪವಿದು. ಸಂಪತ್ತು, ಅದೃಷ್ಟ ಹಾಗೂ ಪವಿತ್ರತೆಯ ಸಂಕೇತವನ್ನು ಹೊಂದಿದೆ. ಮಹಾವಿಷ್ಣುವಿನ ನಾಭಿಯಲ್ಲಿ ಅರಳಿದ ಕಮಲದ ಮೂಲಕ ಬ್ರಹ್ಮದೇವರು ಹೊರಬಂದರು ಎಂಬ ನಂಬಿಕೆ. ಈ ಪುಷ್ಪವನ್ನು ಬ್ರಹ್ಮದೇವರು ಕೈಯಲ್ಲಿ ಧರಿಸಿರುತ್ತಾರೆ. ಇದರಿಂದಾಗಿ ಈ ಪುಷ್ಪಕ್ಕೆ ಬ್ರಹ್ಮ ಕಮಲ ಎಂಬ ಹೆಸರು ಬಂದಿತು ಎಂಬ ಪ್ರತೀತಿ ಇದೆ.

ಕೆಲವು ಪುರಾಣಗಳ ಪ್ರಕಾರ ಶಿವನು ಗಣೇಶನ ರುಂಡ ಕಡಿದ ಅನಂತರ ಆನೆಯ ತಲೆಯನ್ನು ಜೋಡಿಸುವ ಸಂದರ್ಭದಲ್ಲಿ ಈ ಬ್ರಹ್ಮಕಮಲ ಪುಷ್ಪದ ರಸವನ್ನು ಲೇಪಿಸಿದ ಅನಂತರವೇ ತಲೆ ಜೋಡಣೆಯಾಯಿತು. ಅದರಿಂದಾಗಿ ಗಣೇಶನು ಬಲಶಾಲಿ ಹಾಗೂ ಬುದ್ಧಿವಂತನಾದ ಎಂಬ ನಂಬಿಕೆ ಇದೆ. ಈ ಪುಷ್ಪವು ಉತ್ತರಾಖಂಡ ಹಾಗೂ ಹಿಮಾಲಯದ ಭಾಗದಲ್ಲಿ ಕಂಡುಬರುವುದರಿಂದ ಇಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯಗಳಾದ ಕೇದಾರನಾಥ, ಬದರಿನಾಥ ಹಾಗೂ ತುಂಗಭದ್ರನಾಥ ದೇವರಿಗೆ ಈ ಪುಷ್ಪವನ್ನು ಆರಾಧಿಸಲು ಬಳಸುತ್ತಾರೆ.

ಮೊದಲ ಬಾರಿ ಅರಳುವಾಗ 5 ಜನ ಮತ್ತೈದೆಯರಿಗೆ ಉಡಿ ತುಂಬಿಸಿ ಸಾಂಪ್ರದಾಯಿಕವಾಗಿ ಸತ್ಕರಿಸುವ ಸಂಪ್ರದಾಯ / ಪದ್ಧತಿ ಉತ್ತರ ಕರ್ನಾಟಕದ ಭಾಗದಲ್ಲಿದೆ.  ಮಾತ್ರವಲ್ಲದೆ, ವಾಸ್ತು ಶಾಸ್ತ್ರವು ಈ ಪುಷ್ಪವನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಈ ಪುಷ್ಪವನ್ನು ಮನೆಯ ಬ್ರಹ್ಮ ಸ್ಥಾನದಲ್ಲೇ ನೆಡಬೇಕು.

ಇದರಿಂದಾಗಿ ಪುಷ್ಪವು ತನ್ನ ಸುವಾಸನೆಭರಿತವಾದ ಪರಿಮಳವನ್ನು ಮನೆಯ ತುಂಬಾ ಪಸರಿಸುವಂತೆ ಮಾಡುತ್ತದೆ. ಈ ಪುಷ್ಪವು ಮನೆಯಲ್ಲಿನ ದುಷ್ಟಶಕ್ತಿ ಹಾಗೂ ನಕಾರಾತ್ಮಕತೆಯನ್ನು ಹೋಗಲಾಡಿಸಿ, ಧನಾತ್ಮಕ ಶಕ್ತಿಯನ್ನು ನೆಲೆಸುವಂತೆ ಮಾಡುತ್ತದೆ ಮತ್ತು ಮನೆಯಲ್ಲಿ ಸಂತೋಷ, ಸಂಪತ್ತು ಹಾಗೂ ಸಮೃದ್ಧಿಯು ವೃದ್ಧಿಯಾಗುವಂತೆ ಮಾಡುತ್ತದೆ. ಆದ್ದರಿಂದ ಈ ಪುಷ್ಪವನ್ನು ದೇವಲೋಕದ ಪುಷ್ಪವೆಂದು ಸಹ ಕರೆಯುತ್ತಾರೆ.

ಆರೋಗ್ಯದ ಸಂಜೀವಿನಿ

ಬ್ರಹ್ಮಕಮಲವು ಆಯುರ್ವೇದದಲ್ಲೂ ತನ್ನ ಮಹತ್ವವನ್ನು ಗುರುತಿಸಿಕೊಂಡಿದೆ. ಆಯುರ್ವೇದದಲ್ಲಿ ನಾವು ಈ ಪುಷ್ಪದ ಅಪಾರ ಉಪಯೋಗವನ್ನು ಕಾಣಬಹುದು. ಬ್ರಹ್ಮಕಮಲ ಹೂವು ಕಹಿ ರುಚಿ ಹೊಂದಿದ್ದರೂ ಉತ್ತಮ ಆರೋಗ್ಯಕ್ಕೆ ಇದು ಸಿಹಿಯಾಗಿದೆ. ಇದರ ಕಾಂಡ, ಬೇರು, ಹೂವು ಎಲ್ಲವೂ ಉತ್ತಮವಾದ ಅಮೃತವಾಗಿದೆ.

  •  ಈ ಪುಷ್ಪವು ಲಿವರ್‌ಗೆ ಸಂಬಂಧಪಟ್ಟಂತಹ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ಲಿವರ್‌ಗೆ ಹಾನಿಯಾಗದಂತೆ ತಡೆಯುತ್ತದೆ.
  •  ಇದು ನಂಜು ನಿರೋಧಕವಾಗಿದೆ ಹಾಗೂ ಗಾಯ, ಕಡಿತವನ್ನು ಗುಣಪಡಿಸಲು ಸಹಕರಿಸುತ್ತದೆ.
  •  ಇದು ಉರಿಯೂತಕ್ಕೆ, ರಕ್ತದ ಪ್ರಮಾಣ ಹೆಚ್ಚಿಸುವಿಕೆಗೆ, ರಕ್ತ ಶುದ್ಧೀಕರಣಕ್ಕೆ ಮತ್ತು ರಕ್ತದ ಪೂರೈಕೆಗೆ ಸಹಕರಿಸುತ್ತದೆ.
  •  ಇದು ಹೃದಯ ಸಂಬಂಧಿ ಖಾಯಿಲೆ ಗುಣಪಡಿಸುತ್ತದೆ.
  •  ಈ ಪುಷ್ಪದ ಕಷಾಯವು ಅತಿಯಾದ ಜ್ವರವನ್ನು ಬೇಗನೆ ಶಮನಗೊಳಿಸುತ್ತದೆ.
  •  ಮಹಿಳೆಯರ ಮುಟ್ಟಿಗೆ ಸಂಬಂಧಪಟ್ಟಂತಹ ಸಮಸ್ಯೆಗೆ ಈ ಗಿಡದ ಔಷಧ ಉತ್ತಮ ಪ್ರಯೋಜನಕಾರಿಯಾಗಿದೆ.

ಭಾರತ ಮಾತ್ರವಲ್ಲದೆ ಬೇರೆ ದೇಶದಲ್ಲಿ ಇದನ್ನು ಔಷಧವಾಗಿ ಬಳಸುತ್ತಾರೆ. ಇಂದಿನ ಯುವ ಜನರು ಖಾಯಿಲೆಗಳಿಗೆ ಬೇಗನೆ ತುತ್ತಾಗುತ್ತಿದ್ದಾರೆ ಮಾತ್ರವಲ್ಲದೆ, ಹೆಚ್ಚು ಸಂವೇದನಾಶೀಲರಾಗಿದ್ದಾರೆ. ಒಂದು ಖಾಯಿಲೆಗೆ ಮದ್ದನ್ನು ತೆಗೆದುಕೊಂಡರೆ ಖಾಯಿಲೆ ಬಾಧಿಸುತ್ತದೆ. ಜನರು ಬಹುಬೇಗನೆ ಖಾಯಿಲೆ ಗುಣವಾಗಬೇಕೆಂದು ಔಷಧಗಳನ್ನು ಸೇವನೆ ಮಾಡುತ್ತಾರೆ ಆದರೆ ಖಾಯಿಲೆ ಬಾಧಿಸುವುದನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ಮರೆತಿದ್ದಾರೆ.

-ವಿದ್ಯಾಪ್ರಸಾದ್‌

ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next