Advertisement

ಸಂಗಣ್ಣ ಕರಡಿ ಕುಣಿತ ಶುರು

05:42 PM Apr 04, 2019 | pallavi |

ಕೊಪ್ಪಳ: ಲೋಕಸಭೆ ಚುನಾವಣೆ ಸಮರದ ಕಾವು ಬಿಸಿಲಿನ ಮಧ್ಯೆಯೂ ಜೋರಾಗುತ್ತಿದೆ. ಬುಧವಾರ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿ, ನಗರದಲ್ಲಿ ಬೃ‌ಹತ್‌ ರೋಡ್‌ ಶೋ ನಡೆಸಿದರು.

Advertisement

ನಗರದ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಸಂಗಣ್ಣ ಕರಡಿ ಅವರು ಬೆಂಬಲಿಗರೊಂದಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬಳಿಕ ಗವಿಮಠಕ್ಕೆ ತೆರಳಿ ಮಠದ ಮುಂಭಾಗದಲ್ಲಿ ನಮಸ್ಕರಿಸಿ ಪ್ರಚಾರ ಕಾರ್ಯಕ್ಕೆ ಅಣಿಯಾದರು. ಮಧ್ಯಾಹ್ನ 1:40ರಿಂದ ಆರಂಭವಾದ ರೋಡ್‌ ಶೋನಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

ಮೆರವಣಿಗೆ ಸಾಗಿದ ರಸ್ತೆಗಳು ಕೇಸರಿಮಯವಾಗಿದ್ದವು. ಬಿಜೆಪಿ ಕಾರ್ಯಕರ್ತರು ಭಾವುಟ ಹಿಡಿದು ಮೋದಿ.. ಮೋದಿ .. ಎಂದು ಘೋಷಣೆ ಕೂಗುತ್ತ ಎಲ್ಲರ ಗಮನ ಸೆಳೆದರು. ಸಂಗಣ್ಣ ಕರಡಿಗೆ ಮತ ನೀಡಿ ಎನ್ನುವ ಘೋಷಣೆಯೂ ಅಲ್ಲಲ್ಲಿ ಕೇಳಿ ಬಂದಿತು. ಆರಂಭದಲ್ಲಿ ಪಾಲ್ಗೊಂಡ ಶಾಸಕ ಬಿ. ಶ್ರೀರಾಮುಲು ಅವರು ಗಡಿಯಾರ ಕಂಬದ ಮಾರ್ಗದತ್ತ ಮೆರವಣಿಗೆ ಸಾಗುತ್ತಿದ್ದಂತೆ ಅಲ್ಲಿಂದ ಬೇರೆಡೆ ತೆರಳಿದರು.
ಆದರೆ ಮುರಗೇಶ ನಿರಾಣಿ, ಹಾಲಪ್ಪ ಆಚಾರ್‌, ಪರಣ್ಣ ಸೇರಿ ಇತರೆ ನಾಯಕರು ಸಂಗಣ್ಣ ಕರಡಿಗೆ ಸಾಥ್‌ ನೀಡಿದರು.

ಬಿಸಿಲಿನ ತಾಪಕ್ಕೆ ಬೆಚ್ಚಿದ ಜನ: ಬಿರು ಬಿಸಿಲಿನ ಮಧ್ಯೆ ಮರವಣಿಗೆ ಸಾಗುತ್ತಿದ್ದಂತೆ ಬಿಸಿಲಿನ ಪ್ರಖರತೆಗೆ ಬೆಚ್ಚಿದ ಜನರು ಟೋಪಿ ಹಾಕಿಕೊಂಡೇ ಮೆರವಣಿಗೆಯ ಉದ್ದಕ್ಕೂ ಸಾಗಿದರು. ಹಲವರಂತೂ ನೆರಳು ಸಿಕ್ಕದ್ದಲ್ಲಿ ನಿಂತುಕೊಂಡರು. ತೆರೆದ ವಾಹನದಲ್ಲಿ ನಿಂತಿದ್ದ ಮುಖಂಡರ ಬೆವರಿಳಿಯುತ್ತಿತ್ತು. ಅದರ ಮಧ್ಯೆಯೂ ಮುಖಂಡರು ಇರುವ ಕಡೆ ಕೈ ಮಾಡುತ್ತಾ ಜೈಕಾರ ಕೂಗುತ್ತಿದ್ದರು.

ಅಶೋಕ ವೃತ್ತದತ್ತ ಸಾಗಿದ ಮೆರವಣಿಗೆ ಜೋರಾಗಿ ನಡೆಯಿತು. ಮೆರವಣಿಗೆ ಬಳಿಕ ಮಧ್ಯಾಹ್ನ 3 ಗಂಟೆ ವೇಳೆ ಸಂಗಣ್ಣ ಕರಡಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮತ್ತೂಮ್ಮೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇನ್ನೂ ಮೆರವಣಿಗೆಯಲ್ಲಿ ಲಂಭಾಣಿ ಮಹಿಳೆಯರು ಬಿಜೆಪಿ ಭಾವುಟ ಹಿಡಿದು ಜೈಕಾರ ಕೂಗುತ್ತಲೇ ಮೆರವಣಿಗೆಯಲ್ಲಿ ಸಾಗಿದರು. ವೇಷಧಾರಿಗಳು, ಮಜಲು ಗೊಂಬೆಗಳು ಗಮನ ಸೆಳೆದವು. ಯುವಕರು ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಜೈಕಾರ ಹಾಕಿದರು.

Advertisement

ನಾಮಪತ್ರ ಹಾಗೂ ರೋಡ್‌ ಶೋನಲ್ಲಿ ಮಾಜಿ ಸಚಿವ ಲಕ್ಷ್ಮಣ್ಣ ಸವದಿ, ಮುರಗೇಶ ನಿರಾಣಿ, ಗೋವಿಂದ ಕಾರಜೋಳ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರ, ಹಾಲಪ್ಪ ಆಚಾರ್‌, ಪಕ್ಷದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅದರಂತೆ ಸಂಗಣ್ಣ ಕರಡಿ ಅವರು ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಮಾಡಿದ ಅಭಿವೃದ್ಧಿಯೇ ಅವರ ಗೆಲವಿಗೆ ಶ್ರೀರಕ್ಷೆಯಾಗಲಿದೆ. ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ಸಂಗಣ್ಣ ಕರಡಿಗೆ ಮತ ನೀಡಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು.
ಬಿ. ಶ್ರೀರಾಮುಲು, ಶಾಸಕ

ನನ್ನ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಇಂದು ಜನತೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಲು ಬಯಸಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ರೈಲ್ವೆ ಸೇರಿ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಎಂಟೂ ಕ್ಷೇತ್ರಗಳಲ್ಲೂ ನನಗೆ ಅಭೂತಪೂರ್ವ ಮತಗಳನ್ನು ಜನರು ನೀಡಲಿದ್ದಾರೆ ಎನ್ನುವ ವಿಶ್ವಾಸವನ್ನಿಟ್ಟಿದ್ದೇನೆ.
ಸಂಗಣ್ಣ ಕರಡಿ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next