ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟರಲ್ಲಿ ಒಬ್ಬರು. ಶಿವಣ್ಣ ಅವರ ಅಭಿನಯಕ್ಕೆ ಕಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ʼಜೈಲರ್ʼ ನಲ್ಲಿನ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಶಿವಣ್ಣ ಈಗಾಗಲೇ ಅನೌನ್ಸ್ ಮಾಡಿರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ, ಹೊಸ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಲೇ ಇದ್ದಾರೆ. ಶಿವರಾಜ್ ಕುಮಾರ್ ಈ ಹಿಂದೆ ತಮಿಳಿನ ನಿರ್ದೇಶಕರೊಬ್ಬರೊಂದಿಗೆ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು.
ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸಿನಿಮಾ ಅನೌನ್ಸ್ ಆದ ಬಳಿಕ ಶಿವಣ್ಣ ಇತರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾದ ಕಾರಣ ಈ ಸಿನಿಮಾದ ಬಗ್ಗೆ ಯಾವ ಅಪ್ಡೇಟ್ ಕೂಡ ಹೊರಬಿದ್ದಿರಲಿಲ್ಲ. ಇದೀಗ ಕಾರ್ತಿಕ್ ಅದ್ವೈತ್ ಜೊತೆಗಿನ ಸಿನಿಮಾದ ಬಗ್ಗೆ ಹೊಸ ವಿಚಾರವೊಂದು ಹೊರಬಿದ್ದಿದೆ.
ಈ ಹಿಂದೆ ಕಾರ್ತಿಕ್ ಅದ್ವೈತ್ ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ.
ಸದ್ಯ ಶಿವರಾಜ್ ಕುಮಾರ್ ಅವರ ಈ ಸಿನಿಮಾಕ್ಕೆ ಸೂಕ್ತ ಕಲಾವಿದರ ಆಯ್ಕೆ ತೆರೆಮರೆಯಲ್ಲಿ ನಡೆಯುತ್ತಿದೆ. ಕಾಲಿವುಡ್ ಚಿತ್ರರಂಗದ ಖ್ಯಾತ ಹಾಗೂ ಬಹು ಬೇಡಿಕೆಯ ನಟನಾಗಿರುವ ಎಸ್ಜೆ ಸೂರ್ಯ ಅವರನ್ನು ಕನ್ನಡಕ್ಕೆ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ʼಸಿನಿಮಾ ಎಕ್ಸ್ ಪ್ರೆಸ್ʼ ವರದಿ ತಿಳಿಸಿದೆ.
ಎಸ್ಜೆ ಸೂರ್ಯ ಶಿವರಾಜ್ ಕುಮಾರ್ – ಕಾರ್ತಿಕ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟೇ ನಟ ಗ್ರೀನ್ ಸಿಗ್ನಲ್ ನೀಡಬೇಕಿದೆ ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ಎಸ್ ಜೆ ಸೂರ್ಯ ಅವರ ಅಭಿನಯ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ʼಮಾರ್ಕ್ ಆಂಟನಿʼ ʼಜಿಗರ್ತಂಡ ಡಬಲ್ ಎಕ್ಸ್ʼ ಮಿಂಚಿರುವ ಅವರು ಮುಂದೆ ʼಇಂಡಿಯನ್ 2ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತ ಶಿವರಾಜ್ ಕುಮಾರ್ ಸದ್ಯ ʼಭೈರತಿ ರಣಗಲ್ʼ, ಅರ್ಜುನ್ ಜನ್ಯ ಅವರ ʼ45ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.