Advertisement

‘ಶಾಂತಿ ಕ್ರಾಂತಿ’ಯ ಬಾಲನಟ ‘ಪುಟ್ಮಲ್ಲಿ’ಯಲ್ಲಿ ಹಾಸ್ಯ ನಟನಾಗಿ ಎಂಟ್ರಿ ಪಡೆದು ಮಿಂಚಿದ ಕಥೆ

09:00 AM Apr 07, 2020 | Hari Prasad |

ಬೆಂಗಳೂರು: ಬುಲೆಟ್ ಪ್ರಕಾಶ್ ಅವರು ಉದ್ಯಾನನಗರಿಯ ಕಾಟನ್ ಪೇಟೆಯಲ್ಲಿ ಹುಟ್ಟಿ ತಮ್ಮ ಬಾಲ್ಯವನ್ನು ಕಳೆದವರು. ಪ್ರಕಾಶ್ ಅವರ ತಂದೆ ಬಿಎಂಟಿಸಿಯಲ್ಲಿ ಕೆಲಸಕ್ಕಿದ್ದರು ಆದರೆ ಬಳಿಕ ಅನಿವಾರ್ಯ ಕಾರಣಗಳಿಂದ ಅದನ್ನು ಬಿಡಬೇಕಾಗಿ ಬಂತು. ಬಳಿಕ ಆಟೋ ರಿಕ್ಷಾ ಓಡಿಸಿಕೊಂಡು ಜೊತೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಪ್ರಕಾಶ್ ಅವರ ತಾಯಿ ಗೃಹಿಣಿಯಾಗಿದ್ದರು. ಭಾರತೀಯ ಜನತಾ ಪಕ್ಷದ ನಂಟನ್ನು ಮೊದಲಿನಿಂದಲೂ ಹೊಂದಿದ್ದ ಪ್ರಕಾಶ್ ಕುಟುಂಬದಲ್ಲಿ ತಾಯಿ ಗೌರಮ್ಮನವರು ಕಾರ್ಪೊರೇಟ್ ಚುನಾವಣೆಯಲ್ಲೂ ಸ್ಪರ್ಧಿಸಿ ಅದೃಷ್ಟ ಪರೀಕ್ಷೆ ಮಾಡಿದ್ದರು.

Advertisement

ತನ್ನ ಆರಂಭಿಕ ದಿನಗಳಲ್ಲಿ ಬುಲೆಟ್ ಪ್ರಕಾಶ್ ಅವರು ಬಹಳ ಆರಾಮವಾಗೇ ಓಡಾಡಿಕೊಂಡಿದ್ದರು. ವಿದ್ಯಾಭ್ಯಾಸ, ಕೆಲಸ, ಮುಂದಿನ ಜೀವನದ ಕುರಿತಾಗಿ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ.

ರವಿಚಂದ್ರನ್ ಅವರು ‘ಶಾಂತಿ-ಕ್ರಾಂತಿ’ ಚಿತ್ರ ಮಾಡುತ್ತಿದ್ದ ಸಂದರ್ಭದಲ್ಲಿ ಅದರಲ್ಲಿ ನಟಿಸಲು ಶಾಲಾ ಮಕ್ಕಳ ಅಗತ್ಯವಿದ್ದಾಗ ಪ್ರಕಾಶ್ ಅವರ ಶಾಲೆಯಿಂದ ಮಕ್ಕಳ ತಂಡವನ್ನೇ ಚಿತ್ರೀಕರಣಕ್ಕೆ ಕರೆದುಕೊಂಡುಹೋಗಿದ್ದರು, ಆ ತಂಡದಲ್ಲಿ ಪ್ರಕಾಶ್ ಎಂಬ ಹುಡುಗನೂ ಇದ್ದ. ಆವತ್ತೇ ಪ್ರಕಾಶ್ ಅವರು ರವಿಚಂದ್ರನ್ ಬಳಿ ನಟನಾಗಬೇಕೆನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಆದರೆ ಅಂದು ರವಿ ಪ್ರಕಾಶ್ ಅವರನ್ನು ಗದರಿಸಿ, ಡಿಗ್ರಿ ಮುಗಿಸಿ ಬಳಿಕ ಇದೆಲ್ಲಾ ಶೋಕಿ ಮಾಡುವಂತೆ ತಲೆ ಮೇಲೆ ಮೊಟಕಿ ಕಳಿಸಿದ್ದರು.

ಪ್ರಕಾಶ್ ಅವರ ತಂದೆಯವರ ಸಂಬಂಧಿಯೊಬ್ಬರು ನಿರ್ಮಿಸುತ್ತಿದ್ದ ಪುಟ್ಮಲ್ಲಿ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಬುಲೆಟ್ ಪ್ರಕಾಶ್ ಅವರು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಾಲಾಶ್ರೀ ಹಾಗೂ ಸಾಯಿಕುಮಾರ್, ಕಲ್ಯಾಣ್ ಕುಮಾರ್ ಅಭಿನಯಿಸಿದ್ದ ಚಿತ್ರ ಅದಾಗಿತ್ತು.

ರವಿಚಂದ್ರನ್ ಅವರ ಚಿತ್ರತಂಡದಲ್ಲಿ ಖಾಯಂ ನಟನಾಗಿದ್ದ ಬುಲೆಟ್ ಪ್ರಕಾಶ್ ಅವರು ಕ್ರೇಜಿಸ್ಟಾರ್ ಜೊತೆಯಲ್ಲಿ ಬೆನ್ನುಬೆನ್ನುಗೆ ಒಂಭತ್ತು ಚಿತ್ರಗಳಲ್ಲಿ ನಟಿಸಿರುವುದು ವಿಶೇಷವೇ ಸರಿ. ಶಿವರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಬುಲೆಟ್ ಅವರು ಶಿವಣ್ಣ ಜೊತೆಯಲ್ಲಿ ಮೊದಲ ಸಲ ‘ಜೋಡಿ ಹಕ್ಕಿ’ ಚಿತ್ರದಲ್ಲಿ ನಟಿಸಿದ್ದರು ಆದರೆ ಚಿತ್ರದ ಓಘಕ್ಕೆ ಬೇಕಾಗಿ ಇವರ ಪಾತ್ರವನ್ನು ಬಳಿಕ ಕಟ್ ಮಾಡಲಾಗಿತ್ತಂತೆ. ಆ ಬಳಿಕ ಪ್ರಕಾಶ್ ಅವರು ಶಿವರಾಜ್ ಕುಮಾರ್ ಅವರ ಜೊತೆ ಎ.ಕೆ.47ನಲ್ಲಿ ನಟಿಸಿದರು.

Advertisement

ಸದಾ ಬುಲೆಟ್ ನಲ್ಲೇ ತಿರುಗಾಡುತ್ತಿದ್ದ ಪ್ರಕಾಶ್ ಅವರನ್ನು ‘ಓ ನನ್ನ ನಲ್ಲೆ’ ಚಿತ್ರೀಕರಣ ಸಂದರ್ಭದಲ್ಲಿ ಕಂಡ ನಟ ರವಿಚಂದ್ರನ್ ಅವರು ಕರೆದು ಅವರಿಗೆ ತಮ್ಮ ಹೆಸರಿನ ಜೊತೆ ಬುಲೆಟ್ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆ ಬಳಿಕ ಕನ್ನಡ ಚಿತ್ರರಂಗದಲ್ಲಿ ಪ್ರಕಾಶ್ ಬುಲೆಟ್ ಪ್ರಕಾಶ್ ಆಗಿ ಮಿಂಚತೊಡಗಿದರು.

ಎಕೆ 47ನಲ್ಲಿ ಖಳಪಾತ್ರ ನಿಭಾಯಿಸಿ ನಾಯಕ ನಟ ಶಿವರಾಜ್ ಕುಮಾರ್ ಗೆ ಬಯ್ಯುವ ದೃಶ್ಯದಲ್ಲಿ ಬುಲೆಟ್ ಪ್ರಕಾಶ್ ಅವರ ಅಭಿನಯ ಅದೆಷ್ಟು ಪರಣಾಮಕಾರಿಯಾಗಿತ್ತೆಂದರೆ ಶಿವಣ್ಣ ಅಭಿಮಾನಿಗಳಿಂದ ಪ್ರಕಾಶ್ ಸಖತ್ ಬೈಗುಳ ತಿಂದಿದ್ದರಂತೆ!

ಅತೀ ಕಡಿಮೆ ಅವಧಿಯಲ್ಲಿ 375 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಬುಲೆಟ್ ಅವರದ್ದು. ಒಂದೇ ದಿನ ಐದು ಚಿತ್ರಗಳ ಶೂಟಿಂಗ್, ಡಬ್ಬಿಂಗ್ ಗಳಲ್ಲಿ ಭಾಗವಹಿಸಿದ ನಿದರ್ಶನಗಳೂ ಇವರ ವೃತ್ತಿಜೀವನದಲ್ಲಿ ನಡೆದಿದೆ. ಆದರೆ ತನ್ನ ದೇಹ ತೂಕವನ್ನು ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಬುಲೆಟ್ ಪ್ರಕಾಶ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಹೋಗಿದ್ದು ಮಾತ್ರ ವಿಪರ್ಯಾಸವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next