Advertisement

Sandalwood: ಎಲ್ಲವೂ ಚೆನ್ನಾಗಿತ್ತು.. ಒಳ್ಳೆಯ ಸಿನಿಮಾ, ಭರ್ಜರಿ ನಿರೀಕ್ಷೆ..; ಆದರೆ……

04:31 PM Jul 21, 2023 | Team Udayavani |

ಒಂದು ಕಡೆ ಸ್ಟಾರ್‌ ನಟ ಹಾಗೂ ಕೆಲವು ನಿರ್ಮಾಪಕರ ನಡುವಿನ ವಿವಾದ, ಇನ್ನೊಂದು ಕಡೆ ಸ್ಟಾರ್‌ ನಟಿ ಹಾಗೂ ಹೊಸ ತಂಡದ ನಡುವಿನ ವಿವಾದ…

Advertisement

– ಆರು ತಿಂಗಳ “ಬರಗಾಲ’ದ ನಂತರ ಒಳ್ಳೆಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬಹುದು ಎಂದುಕೊಂಡ ಸಿನಿಮಾ ಪ್ರೇಮಿಗಳಿಗೆ ಸದ್ಯ ಜೋರಾಗಿ ಕೇಳಿಬರುತ್ತಿರುವುದು ಸಿನಿಮಾಗಳ “ಖುಷಿ’ಯ ಸುದ್ದಿಗಳಿಗಿಂತ ವಿವಾದಗಳ ಕುರಿತಾದ “ವಿಷಾದ’ದ ಸುದ್ದಿ. ಇಲ್ಲಿ ವಾದ ಏನೆಂಬುದು ಹಾಗೂ ಅದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬುದು ಮುಖ್ಯವಲ್ಲ. ಅದು ಅವರವರ ನಡುವಿನ ಮಾತುಕತೆ…ಆದರೆ, ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಈ ತರಹದ ವಿವಾದಗಳು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬಾರದಿತ್ತು ಎನ್ನುವುದು ನಿಜವಾದ ಸಿನಿಮಾ ಪ್ರೇಮಿಗಳ ಹೃದಯಪೂರ್ವಕ ಕಳಕಳಿ.ಈ ಕಳಕಳಿಯ ಹಿಂದೊಂದು ಕಾಳಜಿಯೂ ಇದೆ. ಇಂತಹ ವಿವಾದಗಳು ಚಿತ್ರರಂಗದ ಮೇಲೆ ನೆಗೆಟಿವ್‌ ಪರಿಣಾಮ ಬೀರುತ್ತದೆ ಎಂಬುದೇ ಆ ಕಾಳಜಿ.

ಎಲ್ಲರಿಗೂ ಗೊತ್ತಿರುವಂತೆ 2023ರಲ್ಲಿ ಅರ್ಧ ವರ್ಷ ಮುಗಿದಿದೆ. ಈ ಆರು ತಿಂಗಳಿನಲ್ಲಿ ಯಾವ ಚಿತ್ರ ಗೆದ್ದಿದೆ, ಸೂಪರ್‌ ಹಿಟ್‌ ಆಗಿದೆ ಎಂದರೆ ಮೌನವೇ ಎಲ್ಲರ ಉತ್ತರ. ಮುಂದಿನ ಆರು ತಿಂಗಳಿನಲ್ಲಿ ಒಂದಷ್ಟು ನಿರೀಕ್ಷಿತ ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಸಹಜವಾಗಿಯೇ ಸಣ್ಣ ಭರವಸೆಯ ಬೆಳಕು ಮೂಡಿದೆ. ಇಂತಹ ಸಂದರ್ಭದಲ್ಲಿ ಈ ವಿವಾದಗಳು ಬೇಕಿತ್ತಾ ಎಂಬುದು ಸಿನಿಮಾ ಪ್ರೇಮಿಗಳ ಪ್ರಶ್ನೆ.

ಸಿನಿಮಾ ಕಾರ್ಯಕ್ರಮಗಳಲ್ಲಿ ಕೇಳಿಬರುವ ಕನ್ನಡ ಚಿತ್ರರಂಗ ಒಂದು ಕುಟುಂಬವಿದ್ದಂತೆ. ಇಲ್ಲಿ ಎಲ್ಲರೂ ಒಂದೇ ಎಂಬ ಮಾತುಗಳ ಮೇಲೆ ಸಿನಿಮಾಪ್ರೇಮಿಗಳಿಗೆ ಸಂದೇಹ ಬರುವಂತಾಗಿದೆ. ನಾಲ್ಕು ಗೋಡೆಗಳ, ನಾಲ್ಕೈದು “ಹಿರಿಯರ’ ಮಧ್ಯೆ ಬಗೆಹರಿಸಿಕೊಳ್ಳಬಹುದಾದಂತಹ ವಿವಾದಗಳು ಆಗಾಗ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಷ್ಟೊಂದು ದೊಡ್ಡ ಸದ್ದು ಮಾಡುತ್ತಿವೆ ಎಂಬ ಪ್ರಶ್ನೆ ಹಾಗೂ ಬೇಸರ ಅನೇಕರದು.

ನಂಬಿಕೆಯ ಮೇಲಿನ ನಡಿಗೆ:  ಕನ್ನಡ ಚಿತ್ರರಂಗ ಅವತ್ತಿನಿಂದ ಇವತ್ತಿನವರೆಗೆ ನಡೆದುಕೊಂಡು ಬಂದಿದ್ದು ಒಂದೇ ಒಂದು ಸೂತ್ರದ ಮೇಲೆ,ಅದು ನಂಬಿಕೆ, ವಿಶ್ವಾಸದ ಮೇಲೆ. ಇಲ್ಲಿ ಒಬ್ಬ ಸ್ಟಾರ್‌ ನಟ ಹೊಸ ನಿರ್ದೇಶಕನಿಗೆ ಕಾಲ್‌ ಶೀಟ್‌ ಕೊಟ್ಟು, ತನ್ನನ್ನು ಪೂರ್ಣಪ್ರಮಾಣದಲ್ಲಿ ಅರ್ಪಿಸಿಕೊಳ್ಳುತ್ತಾನೆ ಎಂದರೆ ಅದಕ್ಕೆ ಕಾರಣ ಆ ನಿರ್ದೇಶಕನ ಮೇಲಿನ ವಿಶ್ವಾಸ.. ಇದೊಂದೇ ಅಲ್ಲ, ನಿರ್ಮಾಪಕ-ನಟನ ನಡುವಿನ ಸಂಬಂಧ, ಸಂಭಾವನೆ, ಸಿನಿಮಾ ಸಮಯದ ವ್ಯವಹಾರ… ಎಲ್ಲವೂ ವಿಶ್ವಾಸ, ನಂಬಿಕೆಯ ಮೇಲೆಯೇ ನಡೆಯುತ್ತದೆ.

Advertisement

ನಿರ್ಮಾಪಕನೊಬ್ಬನ ಸಿನಿಮಾ ಹಣಕಾಸಿನ ಮುಗ್ಗಟ್ಟಿನಿಂದ ರಿಲೀಸ್‌ ನಿಂತುಹೋಗುತ್ತದೆ ಎಂದಾಗ, ತಾನೇ ಮುಂದೆ ಬಂದು ಸಿನಿಮಾ ರಿಲೀಸ್‌ಗೆ ಬೇಕಾದ ಹಣ ಹೊಂದಿಸಿಕೊಟ್ಟು ಯಾವುದೇ ಕ್ರೆಡಿಟ್‌ ತಗೊಳದೇ, ಎಲೆಮರೆಯ ಕಾಯಿಯಂತೆ ಹೀರೋ ಇರುತ್ತಾನೆ ಎಂದರೆ ಅದು ಆ ನಿರ್ಮಾಪಕನ ಮೇಲಿನ ವಿಶ್ವಾಸ, ಗೌರವದಿಂದ… ನಿರ್ಮಾಪಕರು ಅಷ್ಟೇ, ಯಾವತ್ತೋ ಮಾಡುವ ಸಿನಿಮಾಕ್ಕೆ ವರ್ಷಕ್ಕೆ ಮೊದಲೇ ಅಡ್ವಾನ್ಸ್‌ ಮಾಡಿ, ಹೀರೋಗಾಗಿ ಕಾಯುತ್ತಾರೆ ಎಂದರೆ ಅಲ್ಲೂ ಕಾಣುವುದು ವಿಶ್ವಾಸ, ನಂಬಿಕೆಯೇ. ಹಾಗಾಗಿ, ಕನ್ನಡ ಚಿತ್ರರಂಗದಲ್ಲಿ ಅವತ್ತಿನಿಂದ ಇವತ್ತಿನವರೆಗೂ “ಪತ್ರ ವ್ಯವಹಾರ’ಕ್ಕಿಂತ ನಂಬಿಕೆ ಎಂಬುದೇ “ಮೂಲ ಪತ್ರ’. ಆದರೆ, ಕಾಲ ಸರಿಯುತ್ತಾ ಹೋದಂತೆ, ಸಣ್ಣಪುಟ್ಟ ಮನಸ್ತಾಪಗಳು ಮನಸ್ಸು ಕೆಡಿಸಿದಂತೆ ನಂಬಿಕೆ ಎಂಬ ಮೂಲಪತ್ರ ಕ್ಷೀಣಿಸುತ್ತಾ ಹೋಗಿ ವಿವಾದವಾಗಿ ಮಾರ್ಪಾಡಾಗುವುದು ದುರದೃಷ್ಟಕರ. ಒಂದು ವಿವಾದ ಬಗೆಹರಿಯಬಹುದು, ಆದರೆ ಇಂತಹ ವಿವಾದಗಳಿಗೆ ಕೊನೆ ಎಂಬುದೇ ಇಲ್ಲ. ಕೆಲವು ದೊಡ್ಡದಾಗಿ ಸದ್ದು ಮಾಡಿದರೆ, ಇನ್ನು ಕೆಲವು ಸಣ್ಣದಾಗಿ ಬಂದು ಹೋಗುತ್ತವೆ.

ಯಶಸ್ಸಿನ ಖುಷಿ ಮತ್ತು ಬೇಸರ

ಒಂದು ಸಿನಿಮಾದ ಗೆಲುವು ಆಯಾ ತಂಡಕ್ಕೆ, ಆಯಾ ಹೀರೋಗೆ ಖುಷಿ ಕೊಟ್ಟರೆ, ಅದೇ ಯಶಸ್ಸು ಆ ಹೀರೋನ ನಂಬಿಕೊಂಡು ಮುಂದಿನ ಚಿತ್ರಕ್ಕೆ ಅಣಿಯಾಗಿದ್ದ ನಿರ್ಮಾಪಕ, ನಿರ್ದೇಶಕನಿಗೆ ಸಣ್ಣ ಬೇಸರ ತರುತ್ತದೆ. ಅದು ಹೇಗೆ ಎಂದು ನೀವು ಕೇಳಬಹುದು. ಸಾಮಾನ್ಯವಾಗಿ ಹೀರೋಗಳ ಏಕಕಾಲಕ್ಕೆ ಎರಡೂ¾ರು ಸಿನಿಮಾಗಳನ್ನು ಒಪ್ಪಿಕೊಂಡು, ಅಡ್ವಾನ್ಸ್‌ ಹಣ ಪಡೆದಿರುತ್ತಾರೆ. ಆದರೆ, ಮೊದಲು ಬಿಡುಗಡೆಯಾದ ತನ್ನ ಚಿತ್ರ ದೊಡ್ಡ ಮಟ್ಟದಲ್ಲಿ ಸೂಪರ್‌ ಹಿಟ್‌ ಆಗಿ, ಸ್ಟಾರ್‌ ಡಮ್‌ ಹೆಚ್ಚಾಗಿ ತನ್ನ “ಕೀರ್ತಿ’ ಊರೆಲ್ಲಾ ಪಸರಿಸಿದಾಗ ತಾನು ಹಿಂದೆ ಕಮಿಟ್‌ ಆಗಿದ್ದ ಸಿನಿಮಾಗಳ ಆಸಕ್ತಿ ಕಳೆದುಕೊಳ್ಳುತ್ತಾನೆ. ತಾನು ಈ ಹಿಂದೆ ಕಮಿಟ್‌ ಆದ ಸಿನಿಮಾ ಇವತ್ತಿನ ತನ್ನ ಮಾರ್ಕೆಟ್‌ ವ್ಯಾಲ್ಯೂಗೆ “ಸಣ್ಣ’ದಾಗಿ ಕಾಣುತ್ತದೆ. ಹಾಗಾಗಿ, ತನ್ನ ಸರತಿಯಲ್ಲಿದ್ದ ಸಿನಿಮಾವನ್ನು ಬಿಟ್ಟು, ಹೊಸದನ್ನು ಹುಡುಕಲಾರಂಭಿಸುತ್ತಾನೆ. ಇದು ಅಷ್ಟು ವರ್ಷ ಆ ಹೀರೋಗಾಗಿ ಕಾದ ನಿರ್ಮಾಪಕರಿಗೆ ನಿರಾಸೆ ಉಂಟು ಮಾಡುವ ಜೊತೆಗೆ ಸಣ್ಣ ಅಸಮಾಧಾನಕ್ಕೂ ಕಾರಣವಾಗುತ್ತದೆ. ಸೂಪರ್‌ ಹಿಟ್‌ ಆಗಿ, ಸ್ಟಾರ್‌ಡಮ್‌ ಹೆಚ್ಚಿಸಿಕೊಂಡ ಹೀರೋ ತಾನು ಕಮಿಟ್‌ ಆದ ಅಡ್ವಾನ್ಸ್‌ ಹಣವನ್ನು ನಿರ್ಮಾಪಕರಿಗೆ ವಾಪಾಸ್‌ ಮಾಡಬಹುದು. ಆದರೆ, ಹೀರೋಗಾಗಿ ಕಾದ ನಿರ್ಮಾಪಕರ ಮನಸ್ಸಿನಲ್ಲಾದ ಅಸಮಾಧಾನ, ಬೇಸರವನ್ನು ಶಮಗೊಳಿಸುವುದು ಕಷ್ಟ. ಈ ತರಹದ ಉದಾಹರಣೆಗಳು ಕನ್ನಡ ಚಿತ್ರರಂಗ ಸೇರಿ ಬೇರೆ ಬೇರೆ ಚಿತ್ರರಂಗಗಳಲ್ಲಿ ಕಾಣಸಿಗುತ್ತವೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next