Advertisement

ಜಿಲ್ಲಾಡಳಿತದಿಂದ “ಮರಳು ಪರಿವೀಕ್ಷಕ’ಇಂಟಿಗ್ರೆಟೇಡ್‌ ಸಾಫ್ಟ್‌ವೇರ್‌

07:58 PM Aug 10, 2021 | Team Udayavani |

ಮಹಾನಗರ: ಮರಳುಗಾರಿಕೆ ಮತ್ತು ಸರಬರಾಜಿನಲ್ಲಿ ಹೆಚ್ಚು ಪಾರದರ್ಶಕ ತರುವ ಹಾಗೂ ಕಟ್ಟುನಿಟ್ಟಿನ ನಿಗಾ ಇರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ “ಮರಳು ಪರಿವೀಕ್ಷಕ’ ಎಂಬ ಇಂಟಿಗ್ರೆಟೇಡ್‌ ಸಾಫ್ಟ್‌ ವೇರ್‌ (ಸಮಗ್ರ ಮಾಹಿತಿ ಒಳಗೊಂಡ ತಂತ್ರಾಂಶ) ಸಿದ್ಧಪಡಿಸಿದೆ. ಮರಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ವಿರುವ ಸ್ಯಾಂಡ್‌ ಬಜಾರ್‌ ಸಹಿತ ಎಲ್ಲ ತಂತ್ರಾಂಶಗಳನ್ನು ಒಂದೇ ತಂತ್ರಾಂಶದೊಳಗೆ ತರಲಾಗಿದೆ.

Advertisement

ಮರಳು ಪರಿವೀಕ್ಷಕ ಇಂಟಿಗ್ರೆಟೇಡ್‌ ಸಾಫ್ಟ್‌ವೇರ್‌ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಪರಿಕಲ್ಪನೆಯಾಗಿದ್ದು, ಸರಕಾರಿ ಸ್ವಾಮ್ಯದ ಕಿಯೋನಿಕ್ಸ್‌ ಮೂಲಕ ಇದು ಸಿದ್ಧಗೊಂಡಿದ್ದು ರಾಜ್ಯದಲ್ಲೆ ಈ ಮಾದರಿ ಪ್ರಥಮವಾಗಿದೆ. ಮರಳುಗಾರಿಕೆ ದಿಬ್ಬಗಳಿಂದ ಮರಳು ತೆಗೆದು ಬೇಡಿಕೆ ಸಲ್ಲಿಸಿರುವವರ ತಾಣಕ್ಕೆ ಮರಳು ಸರಬರಾಜು ಆಗುವವರೆಗಿನ ಎಲ್ಲ ಮಾಹಿತಿಗಳು ಒಳ್ಳಗೊಂಡಿವೆ. ಇದಕ್ಕಾಗಿ ನೂತನ ಆ್ಯಪ್‌ವೊಂದನ್ನು ಸಿದ್ಧಪಡಿಸಲಾಗಿದ್ದು ಅಧಿಕಾರಿಗಳು ಪ್ರತಿಯೊಂದು ಹಂತವನ್ನು ಮೊಬೈಲ್‌ನಲ್ಲಿ ಆ್ಯಪ್‌ ಮೂಲಕ ವೀಕ್ಷಿಸಬಹುದಾಗಿದೆ.

ತಂತ್ರಾಂಶದ ವಿನ್ಯಾಸ:

ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಹಾಗೂ ಮರಳು ಸಾಗಾಟ ವಾಹನಗಳಿಗೆ ಈಗಾಗಲೇ ಜಿಪಿಎಸ್‌ ಅಳವಡಿಸಲಾಗಿದೆ. ಮರಳು ದಿಬ್ಬ ಕೇಂದ್ರಗಳ ಬಳಿ 360 ಡಿಗ್ರಿ ತಿರುಗುವ ಮತ್ತು ರಾತ್ರಿಯು ನಿಖರ ವಿಷನ್‌ ಹೊಂದಿರುವ ಶಕ್ತಿಶಾಲಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಇದಲ್ಲದೆ ವಿವಿಧ ಪೊಲೀಸ್‌ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕೆಮರಾಗಳಿರುತ್ತವೆ. ಈ ಎಲ್ಲ ವ್ಯವಸ್ಥೆಗಳನ್ನು ಒಂದೇ ತಂತ್ರಾಂಶದೊಳಗೆ ತಂದು ಒಂದು ಆ್ಯಪ್‌ನಲ್ಲಿ ಅಳವಡಿಸಿರುವ ಯೋಜನೆ ಇಂಟಿಗ್ರೆಟೇಡ್‌ ಸಾಫ್ಟ್ವೇರ್‌ ಆಗಿದೆ. ಆ್ಯಪ್‌ ಅನ್ನು ಮೊಬೈಲ್‌ಗೆ ಲಿಂಕ್‌ ಮಾಡಲಾಗಿದೆ.

ಜಿಲ್ಲೆಯಲ್ಲಿರುವ ಮರಳು ದಿಣ್ಣೆಗಳನ್ನು ಜಿಪಿಎಸ್‌ ನಿಗಾಕ್ಕೆ ಒಳಪಡಿಸಲಾಗುತ್ತಿದೆ. ಮರಳು ಸಾಗಾಟ ಲಾರಿಗಳು ಹಾಗೂ ಮರಳುಗಾರಿಕೆ ದೋಣಿಗಳು ಜಿಪಿಎಸ್‌ ವ್ಯವಸ್ಥೆ ಹೊಂದುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಇದನ್ನು ಪ್ರಸ್ತುತ ರೂಪಿಸಿರುವ ಮರಳು ಪರಿವೀಕ್ಷಕ ಆ್ಯಪ್‌ಗೆ

Advertisement

ಜೋಡಿಸಲಾಗುತ್ತದೆ. ಮರಳು ಸಾಗಾಟ ವಾಹನ ಹಾಗೂ ದೋಣಿ ಮಾಲಕರು ಜಿಪಿಎಸ್‌ ಫಿಟ್‌ನೆಸ್‌ ಸರ್ಟಿಫಿಕೆಟ್‌ ಆಧಾರದಲ್ಲಿ ಕ್ಯೂಆರ್‌ ಕೋಡ್‌ ಸೃಷ್ಟಿಸಬಹುದಾಗಿದೆ. ಜಿಪಿಎಸ್‌ ಸಾಧನ ಕಾರ್ಯಾರಂಭ ಮಾಡಿದ ಬಳಿಕ ಇದು ಮರಳು ಪರಿವೀಕ್ಷಕ ವೆಬ್‌ಗ ಜೋಡಣೆಯಾಗುತ್ತದೆ. ಜಿಪಿಎಸ್‌ ಅನ್ನು ಸದಾ ಸಕ್ರಿಯವಾಗಿಡುವುದು ಕಡ್ಡಾಯವಾಗಿರುತ್ತದೆ. ಮರಳು ಸಾಗಾಟ ಲಾರಿಗಳು ದಿನಕ್ಕೆ ಎಷ್ಟು ಬಾರಿ ಮರಳು ದಿಣ್ಣೆಗಳಿಂದ ಮರಳು ಸಾಗಾಟ ಮಾಡಿವೆ ಮತ್ತು ಪರವಾನಿಗೆ ರಹಿತವಾಗಿ ಅಥವಾ ಒಂದೇ ಪರವಾನಿಗೆ ಬಳಸಿ ಹಲವು ಬಾರಿ ಸಾಗಾಟ ಮಾಡಲಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇದಲ್ಲದೆ ಆಂತಾರಾಜ್ಯ ಮರಳು ಸಾಗಾಟವೂ ಪತ್ತೆಯಾಗುತ್ತದೆ.

ಮರಳುಗಾರಿಕೆ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ಪ್ರಸ್ತುತ ಇರುವ ವಿವಿಧ ತಂತ್ರಾಂಶ ಹಾಗೂ ನಿಗಾ ವ್ಯವಸ್ಥೆಗಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಮರಳು ಪರಿವೀಕ್ಷಕ ಇಂಟಿಗ್ರೆಟೇಡ್‌ ಸಾಫ್ಟ್‌ ವೇರ್‌ ಸಿದ್ಧಪಡಿಸಲಾಗಿದ್ದು, ಕಾರ್ಯಾರಂಭ ಮಾಡಿದೆ. ಇದರ ಆಧಾರದಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. -ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ  

Advertisement

Udayavani is now on Telegram. Click here to join our channel and stay updated with the latest news.

Next