ತತ್ವವನ್ನು ವಸ್ತು ಸ್ವರೂಪದಿಂದ ಯುಕ್ತವಾದ, ಜೀವಾದಿ ಪದಾರ್ಥಗಳ ಶ್ರದ್ಧೆ ಇಡುವುದಕ್ಕೆ “ಸಮ್ಯಕ್ ದರ್ಶನ’ ಎನ್ನುತ್ತಾರೆ. ಸಮ್ಯಕ್ ದರ್ಶನ, ಧರ್ಮದ ಮೂಲಸ್ತಂಭವಾಗಿದೆ. “ಸಮ್ಯಕ್’ ಎಂದರೆ, ನಿಜವಾದ, ಯಥಾರ್ಥವಾದ, ವಾಸ್ತವವಾದ ಶ್ರದ್ಧೆ. ಇದರ ಅಭಾವವಾದರೆ, ಜ್ಞಾನವು ಸಮ್ಯಕ್ ಆಗದು. ಚಾರಿತ್ರ್ಯವೂ ಆಗದು. ಮುಕ್ತಿಯ ಮಹಲಿಗೆ ಸಮ್ಯಕ್ ದರ್ಶನ ಪ್ರಥಮ ಮೆಟ್ಟಿಲು. ಇದು ನಮ್ಮ ವಿಚಾರಕೇಂದ್ರೀಯ ಆಧಾರ ಸ್ತಂಭವಾಗಿದೆ.
ಆಚಾರದ ವಿಶುದ್ಧಿಗಾಗಿ, ವಿಚಾರ ಶುದ್ದಿಯು ಅನಿವಾರ್ಯವಾಗಿದೆ. ಸಮ್ಯಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯದಲ್ಲಿ ಅಂಕಿ ಮತ್ತು ಶೂನ್ಯಕ್ಕಿರುವ ಸಂಬಂಧವಿದೆ. ಎಷ್ಟೇ ಶೂನ್ಯಗಳಿದ್ದರೂ ಅಂಕಿಗಳಿಲ್ಲದಿದ್ದರೆ, ಅದಕ್ಕೆ ಯಾವ ಮಹತ್ವವೂ ಇರುವುದಿಲ್ಲವೋ ಹಾಗೆ. ಸಮ್ಯಕ್ ದರ್ಶನವು ಅಂಕಿ ಇದ್ದಂತೆ ಮತ್ತು ಸಮ್ಯಕ್ ಚಾರಿತ್ರ್ಯವು ಶೂನ್ಯವಿದ್ದಂತೆ. ಎರಡೂ ಇರಲೇಬೇಕು. ಸಮ್ಯಕ್ ದರ್ಶನದಿಂದಲೇ ಸಮ್ಯಕ್ ಚಾರಿತ್ರ್ಯದ ತೇಜಸ್ಸು ಕಂಗೊಳಿಸುವುದು.
ಸಮ್ಯಕ್ ದರ್ಶನ ರಹಿತ ಚಾರಿತ್ರ್ಯವೆಂದರೆ, ಕಣ್ಣಿಲ್ಲದ ವ್ಯಕ್ತಿಯಂತೆ ಅವನು ನಿರಂತರ ನಡೆಯಬಹುದು. ಆದರೆ, ಗುರಿಯ ಕಲ್ಪನೆ ಇರುವುದಿಲ್ಲ. ಲಕ್ಷ್ಯವಿಲ್ಲದ ಪಯಣ ವ್ಯರ್ಥ ಕಾಲ ಹರಣದಂತೆ ಶರೀರಕ್ಕೊಂದು ವೃಥಾ ಶ್ರಮ. ಸ್ವಭಾವದಿಂದ ಅಧಿಗಮ ಅಂದರೆ, ಪರೋಪ ದೇಶದಿಂದ ಸಮ್ಯಕ್ ದರ್ಶನ ಉತ್ಪನ್ನವಾಗುತ್ತದೆ. ತನ್ನ ಸ್ವಭಾವದಿಂದ ಅಂದರೆ, ಪರೋಪ ದೇಶ ಇಲ್ಲದೆಯೇ ಪೂರ್ವ ಭವ ಸಂಸ್ಕಾರದಿಂದ ಉತ್ಪನ್ನವಾಗುವ ಸಮ್ಯಕ್ ದರ್ಶನಕ್ಕೆ “ಅಧಿಗಜ ಸಮ್ಯಕ್ ದರ್ಶನ’ ಎಂದು ಹೇಳುವರು.
ಈ ಎರಡೂ ಸಮ್ಯಕ್ತವೇ ಆಗಿದೆ. ಮಾನವ ಜೀವಿಗೆ ಮಿಥ್ಯಾತ್ವ, ಸಮ್ಯಕ್ ಮಿಥ್ಯಾತ್ವ, ಸಮ್ಯಕ್ ಪ್ರಕೃತಿ, ಅನಂತಾನುಬಂಧಿ, ಕ್ರೋಧ, ಮಾನ, ಮಾಯ, ಲೋಭ- ಈ ಏಳು ಕರ್ಮ ಪ್ರಕೃತಿಗಳ ಉಪಶಮ, ಕ್ಷಯ ಅಥವಾ ಕ್ಷಯೋಪಶಮವನ್ನು ಹೊಂದಲೇಬೇಕು. ಇದು ಅನಿವಾರ್ಯ. ವಿಭಿನ್ನ ದೃಷ್ಟಿಯಿಂದ ಸಮ್ಯಗ್ಧರ್ಶನದ ವಿಭಿನ್ನ ಲಕ್ಷಣಗಳನ್ನು ಹೇಳಿರುವರು.
ಅವು: 1. ಪರಮಾರ್ಥಭೂತ (ದೇವ, ಶಾಸ್ತ್ರ ಮತ್ತು ಗುರುಗಳಲ್ಲಿ ಮೂರು ಮೂಢತೆ ಮತ್ತು 8 ಮದಗಳಿಂದ ರಹಿತನಾಗಿ ಹಾಗೂ 8 ಅಂಗಗಳಿಂದ ಯುಕ್ತವಾಗಿ ಶ್ರದ್ಧೆ ಇಡುವುದು); 2:- ನೈಜ ತತ್ತ್ವದ ವಿಶ್ವಾಸ, ಶ್ರದ್ಧೆ; 3. ಸ್ವಪರದಲ್ಲಿ ಶ್ರದ್ಧೆ, 4. ಆತ್ಮದಲ್ಲಿ ಶ್ರದ್ಧೆ.
* ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನಮಠ, ಮೂಡಬಿದ್ರಿ