Advertisement

Sambhavami Yuge Yuge Review; ಊರು ಗೆದ್ದ ಹಳ್ಳಿಹೈದ

03:35 PM Jun 22, 2024 | Team Udayavani |

ಆಶ್ರಯ ನೀಡಿ, ಬದುಕು ಕಟ್ಟಿಕೊಳ್ಳಲು ಕಾರಣವಾದ ಊರಿಗೆ ಮಗ ಸೇವೆ ಮಾಡಬೇಕು. ಈ ಮೂಲಕ ಊರ ಜನರ ಕಷ್ಟಕ್ಕೆ ಮಗ ಆಗಬೇಕು ಎಂದು ಕನಸು ಕಾಣುವ ತಾಯಿ. ಒಳ್ಳೆಯ ವಿದ್ಯಾವಂತನಾದರೂ ತಾಯಿಯ ಆಸೆಯಂತೆ ಸಿಟಿಯ ಕನಸು ಬಿಟ್ಟು ಹಳ್ಳಿ ಜನರ ಸೇವೆಗೆ ಮುಂದಾಗುವ ಮಗ. ಬಹುಬೇಗನೇ ಊರಮಂದಿಯ ಮೆಚ್ಚುಗೆ ಪಡೆಯುತ್ತಲೇ ಒಂದಷ್ಟು ಮಂದಿಯ ದ್ವೇಷಕ್ಕೂ ಕಾರಣನಾಗುತ್ತಾನೆ. ಅಲ್ಲಿಂದ ಆಟ ಶುರು. ಆ ಆಟ ಏನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು.

Advertisement

ಹೌದು, ಈ ವಾರ ತೆರೆಕಂಡಿರುವ “ಸಂಭವಾಮಿ ಯುಗೇ ಯುಗೇ’ ಚಿತ್ರ ಒಂದು ಹಳ್ಳಿ ಕಥಾನಕ. ಊರು ಉದ್ಧಾರ ಮಾಡಲೆಂದು ಹಳ್ಳಿಯಲ್ಲೇ ಉಳಿದು, ಪಂಚಾಯತ್‌ ಅಧ್ಯಕ್ಷನಾಗುವ ಯುವಕನ ಒಳ್ಳೆತನ ಒಂದು ಕಡೆಯಾದರೆ, ಅವ್ಯವಹಾರದಲ್ಲಿ ತೊಡಗಿರುವ ಗುಂಪಿನ ಆಟ ಮತ್ತೂಂದು ಕಡೆ. ಇದರಲ್ಲಿ ಹೀರೋ ಹೇಗೆ ಜಯಿಸುತ್ತಾನೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇಡೀ ಸಿನಿಮಾದ ಚಿತ್ರೀಕರಣ ಮಂಡ್ಯ, ಚನ್ನಪಟ್ಟಣ ಸುತ್ತಮುತ್ತ ನಡೆದಿರುವುದರಿಂದ ಅಲ್ಲಿನ ಪರಿಸರ ಕಥೆಯ ಜೊತೆಗೆ ಸಾಗಿದೆ.

ನಿರ್ದೇಶಕರು ಮೂಲ ಕಥೆಯ ಆಶಯಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಊರಿನ ರಾಜಕೀಯ, ಜನರ ನಿರೀಕ್ಷೆ ಈ ನಡುವೆಯೇ ಚಿಗುರೊಡೆಯುವ ಪ್ರೀತಿ.. ಇಂತಹ ಅಂಶಗಳ ಮೂಲಕ ಸಿನಿಮಾ ಸಾಗಿಬರುತ್ತದೆ. ಶಿಕ್ಷಣ ಪಡೆದ ಯುವಕರೆಲ್ಲಾ ಹಳ್ಳಿ ಬಿಟ್ಟು ಸಿಟಿ ಸೇರಿದರೆ ಹಳ್ಳಿಯನ್ನು ಉದ್ಧಾರ ಮಾಡುವವರು ಯಾರು? ಹಳ್ಳಿಯಲ್ಲೇ ಒಳ್ಳೆಯ ಅವಕಾಶಗಳು ಸೃಷ್ಟಿಯಾಗಬೇಕು ಮತ್ತು ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂಬ ಸಂದೇಶವೂ ಈ ಸಿನಿಮಾದಲ್ಲಿದೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲೊಂದು ಸಂದೇಶವಿದೆ, ಜೊತೆಗೆ ಒಂದು

ಥ್ರಿಲ್ಲರ್‌ ಅಂಶವೂ ಇದೆ. ಇದನ್ನು ನಿರ್ದೇಶಕರು ಸುದೀರ್ಘ‌ವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಅದೇ ಕಾರಣದಿಂದ ಸಿನಿಮಾದ ಅವಧಿ ಹೆಚ್ಚಿದೆ. ಒಂದಷ್ಟು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಇನ್ನು ಸಿನಿಮಾದ ಹೈಲೈಟ್‌ ಎಂದರೆ ಅದು ಕ್ಲೈಮ್ಯಾಕ್ಸ್‌. ಇಲ್ಲೊಂದು ಊಹಿಸಲಾಗದ ಟ್ವಿಸ್ಟ್‌ ಕೊಡಲಾಗಿದೆ.

ನಾಯಕ ಜಯ್‌ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಸೆಂಟಿಮೆಂಟ್‌ ದೃಶ್ಯಗಳಲ್ಲಿ ಅವರು ಪಳಗಬೇಕು. ಉಳಿದಂತೆ ಸುಧಾರಾಣಿ, ವೆಂಕಟೇಶ್‌, ಅಶ್ವಿ‌ನ್‌ ಹಾಸನ್‌ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

Advertisement

ಆರ್‌.ಪಿ.ರೈ

Advertisement

Udayavani is now on Telegram. Click here to join our channel and stay updated with the latest news.

Next