Advertisement

ಮಿಂಚಿದ ಸಮರ್ಥ್, ಪಡಿಕ್ಕಲ್, ಪ್ರಸಿಧ್ ಕೃಷ್ಣ: 291 ರನ್ ಅಂತರದ ಜಯ ಸಾಧಿಸಿದ ಕರ್ನಾಟಕ

04:36 PM Feb 22, 2021 | Team Udayavani |

ಬೆಂಗಳೂರು: ಬಿಹಾರ ತಂಡದ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಜಯ ಸಾಧಿಸಿದೆ. ನಾಯಕ ಸಮರ್ಥ್ ಆರ್. ಭರ್ಜರಿ ಶತಕ, ದೇವದತ್ತ್ ಪಡಿಕ್ಕಲ್ ಮತ್ತು ಸಿದ್ದಾರ್ಥ್ ಅರ್ಧಶತಕ, ಬೌಲರ್ ಗಳ ಬಿಗುದಾಳಿಯ ನೆರವಿನಿಂದ ತಂಡ 291 ರನ್ ಗಳ ಭಾರೀ ಅಂತರದಿಂದ ಗೆಲುವು ಕಂಡಿತು.

Advertisement

ಟಾಸ್ ಗೆದ್ದ ಬಿಹಾರ ಮೊದಲು ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಆರಂಭಿಕರಾದ ನಾಯಕ ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಬಿಹಾರದ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ಸಮರ್ಥ್ ಶತಕ ಸಿಡಿಸಿ ಮಿಂಚಿದರೆ, ಪಡಿಕ್ಕಲ್ ಶತಕದಂಚಿನಲ್ಲಿ ಎಡವಿದರು.

144 ಎಸೆತ ಎದುರಿಸಿದ ಸಮರ್ಥ್ ಅಜೇಯ 158 ರನ್ ಬಾರಿಸಿದರು. ಪಡಿಕ್ಕಲ್ 97 ರನ್ ಗಳಿಸಿದ್ದಾಗ ಔಟಾದರು. ಸಿದ್ದಾರ್ಥ್ ಕೇವಲ 55 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ತಂಡ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 354 ರನ್ ಕಲೆಹಾಕಿತು.

ಇದನ್ನೂ ಓದಿ:ಸರ್ದಾರ್‌ ಪಟೇಲ್‌ ಸ್ಟೇಡಿಯಂ : ಕ್ರಿಕೆಟ್‌ ಲೋಕಕ್ಕೆ ನೂತನ ಹೆಬ್ಟಾಗಿಲು

ಬೃಹತ್ ಮೊತ್ತ ಬೆನ್ನಟ್ಟಿದ ಬಿಹಾರ ತಂಡ ಯಾವ ಹಂತದಲ್ಲೂ ಗೆಲುವಿನ ಹುರುಪು ತೋರಲಿಲ್ಲ. ಕರ್ನಾಟಕದ ಬೌಲರ್ ಗಳ ದಾಳಿಗೆ ಕಂಗಾಲಾಯಿತು. 6.2 ಓವರ್ ಕಳೆಯುವಷ್ಟರಲ್ಲಿ ಬಿಹಾರದ ಅರ್ಧ ತಂಡ ಪೆವಿಲಿಯನ್ ಸೇರಿಯಾಗಿತ್ತು. ಆರಂಭಿಕ ಆಟಗಾರ ಎಸ್.ಗನಿ 37 ರನ್ ಬಾರಿಸಿದ್ದೆ ಬಿಹಾರದ ಉತ್ತಮ ಸಾಧನೆ.

Advertisement

ಉಳಿದಂತೆ ನಾಯಕ ಅಶುತೋಷ್ ಅಮನ್ ಮತ್ತು ಅನುಜ್ ರಾಜ್ ಎರಡಂಕಿ ಮೊತ್ತ ಕಲೆಹಾಕಿದರು. ಬಿಹಾರ ಪರ ನಾಲ್ವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 27.2 ಓವರ್ ಗೆ ಬಿಹಾರ ತಂಡ 87 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಕರ್ನಾಟಕ ಪರ ಪ್ರಸಿಧ್ ಕೃಷ್ಣ ನಾಲ್ಕು ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next