Advertisement

Lineman: ಸೂಪರ್‌ಮ್ಯಾನ್‌ಗಳಿಗೆ ಸಲಾಂ

12:33 PM Sep 18, 2024 | Team Udayavani |

ಜಗತ್ತು ತಂತ್ರಜ್ಞಾನದ ಆಧುನಿಕತೆಯೊಳಗೆ ಬಂಧಿಯಾಗಿದೆ. ಊರೆಲ್ಲ ಕತ್ತಲಾದಾಗ ಚಿಮಣಿ ದೀಪಗಳು, ಲ್ಯಾಂಪ್‌ಗಳು ಮನೆಯನ್ನು ಬೆಳಗುತ್ತಿದ್ದುದು ಒಂದು ಕಾಲವಾದರೆ ಇಂದು ವಿದ್ಯುತ್‌ ಎಂಬ ಹೊಸದೊಂದು ಶಕ್ತಿ ಬೆಳಗುತ್ತಿದೆ. ಹೊಸ ಹೊಸ ಆವಿಷ್ಕಾರಗಳು ನಮ್ಮ ಬದುಕಿಗೆ ಲಗ್ಗೆ ಇಟ್ಟಂತೆ ನಮ್ಮ ಬದುಕು ಅದರೊಂದಿಗೆ ಬೆಸೆದುಕೊಂಡು ಸಾಗುತ್ತಿವೆ. ಅಂತಹ ಒಂದು ಆವಿಷ್ಕಾರಗಳಲ್ಲಿ ವಿದ್ಯುತ್‌ ಕೂಡ ಒಂದು.

Advertisement

ಇಂದು ಎಲ್ಲ  ವಿದ್ಯುತ್‌ಮಯವಾಗಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ನಮ್ಮ ದೈನಂದಿನ ಕಾರ್ಯಗಳು ವಿದ್ಯುತ್‌ ಇಲ್ಲದೆ ನಡೆಯುವುದು ಅಸಾಧ್ಯ ಎನ್ನುವ ರೀತಿಯಲ್ಲಿ ಅದು ನಮ್ಮ ಬದುಕಿಗೆ ಸಂಪೂರ್ಣವಾಗಿ ಆವರಿಸಿದೆ. ಒಂದು ವಸ್ತುವಿನ ವ್ಯವಸ್ಥೆ ಅಂದರೆ ಅವುಗಳ ನಿರ್ವಹಣೆ ಅತ್ಯಂತ ಮುಖ್ಯವಾಗಿರುತ್ತದೆ ಅಲ್ಲವೇ. ನಿರ್ವಹಕನಿಲ್ಲದೆ ಕಾರ್ಯವು ನಡೆಯವುದು ಅಸಾಧ್ಯ. ನಿರ್ವಹಣೆಯ ಹಿಂದೆ ಅದೆಷ್ಟು ಸವಾಲುಗಳು, ಕಠಿನ ಪರಿಸ್ಥಿತಿಗಳನ್ನು  ಎದುರಿಸಿ ಬದುಕು ಕಟ್ಟಿಕೊಳ್ಳುವ ಹರಸಾಹಸ ನಿರ್ವಹಕನದು. ಅಂತಹ ನಿರ್ವಹಕ ಕಾರ್ಯಗಳಲ್ಲಿ ಲೈನ್‌ಮ್ಯಾನ್‌ ಕಾರ್ಯ ಕೂಡ ಒಂದು.

ಪ್ರತಿಯೊಂದು ವಿಚಾರಕ್ಕೂ ವಿದ್ಯುತ್‌ ಅನ್ನು ಅವಲಂಬಿಸಿದ ನಾವು ಅದರಿಂದ ಉಂಟಾಗುವ ಸಮಸ್ಯೆಗಳಿಗೂ ಪರಿಹಾರ ಹುಡುಕುವ ಜಂಜಾಟದಲ್ಲಿರುತ್ತೇವೆ. ಇಂತಹ ವಿದ್ಯುತ್‌ ಹಾನಿಯಾದರೆ, ತೊಂದರೆಯಾದರೆ,  ತತ್‌ಕ್ಷಣ ಹಾಜರಿರುವವರೂ ನಮ್ಮೂರ ಲೈನ್‌ಮ್ಯಾನ್‌ಗಳು. ದೇಶಕ್ಕೆ ಯೋಧ, ರೈತ ಎಷ್ಟು ಮುಖ್ಯವೋ ಪ್ರತಿಯೊಂದು ಊರಿನಲ್ಲಿರುವ  ಲೈನ್‌ಮ್ಯಾನ್‌ ಕೆಲಸಗಾರರೂ ಕೂಡ ಅಷ್ಟೇ ಮುಖ್ಯ. ಮಳೆ ಗಾಳಿ, ಬಿಸಿಲು ಎನ್ನದೆ ವಿದ್ಯುತ್‌ನ ತೊಂದರೆಗಳನ್ನು ತಟ್ಟನೆ ಸರಿಪಡಿಸುವ ಮಹಾತ್ಕಾರ್ಯ ಅವರದು.

ಮಳೆಗಾಲದಲ್ಲಂತೂ ವಿರಾಮವಿರದ ಕೆಲಸ.ಗಾಳಿಯ ಅಬ್ಬರಕ್ಕೆ ಅದೆಷ್ಟು ಮರಗಳು ತಂತಿಯ ಮೇಲೆ ಬಿದ್ದು ಹಾನಿಗಳಗುತ್ತದೆ, ವಿದ್ಯುತ್‌ ಕಂಬಗಳು ನೆಲಕ್ಕಪ್ಪಳಿಸಿ ಬಿಡುತ್ತದೆ. ಇಂತಹ ಸಂದ‌ರ್ಭಗಳಲ್ಲಿ ತಟ್ಟನೆ ಕಾರ್ಯ ಪ್ರವೃತ್ತರಾಗುವ ಅವರ ಕಾರ್ಯವನ್ನು ಮೆಚ್ಚಲೇಬೇಕು. ಹಗಲು ಇರುಳು ಎನ್ನದೆ ಮಳೆ ಬಿಸಿಲಿಗೆ ನಲುಗದೆ ಜೀವ ಪಣಕಿಟ್ಟು  ತಮ್ಮ ಕೆಲಸ, ಕರ್ತವ್ಯವನ್ನು ಮಾಡುವ ಅವರ ಈ ಸಾಹಸವು ನಿಜಕ್ಕೂ ಶ್ಲಾಘನೀಯ.

ಇಂದು ವಿದ್ಯುತ್‌ ಇಲ್ಲದೆ ಕೆಲಸಗಳು ನಡೆಯುವುದು ತುಂಬಾ ವಿರಳ. ವಿದ್ಯುತ್‌ ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಸಮಸ್ಯೆಗಳು ಅಂತೂ ಹೇಳತೀರದಷ್ಟು. ಜೋತು ಬಿದ್ದ ಲೈನ್‌ ವಯರ್‌ ಗಳಿಂದ ಹಿಡಿದು ದೊಡ್ಡ ದೊಡ್ಡ ಕರೆಂಟ್‌ ರಿಪೇರಿವರೆಗೂ ಕೆಲಸಗಳು ಅವರ ಹೆಗಲ ಮೇಲೆ ಇರುತ್ತದೆ. ಪ್ರಾಣದ ಹಂಗಿಲ್ಲದೆ ಕರೆಂಟ್‌ ಕಂಬ ಏರುವ ಅವರ ಸಾಹಸ ಅಚ್ಚರಿಪಡುವಂತದ್ದು.  ಎತ್ತರವಾದ ಕಂಬ ಏರಿ ಅದೆಷ್ಟೇ ಕಠಿನ ಕಾರ್ಯವನ್ನು ನಿರ್ವಹಿಸುವ ಅವರು ನಿಜಕ್ಕೂ ಹೀರೊಗಳಲ್ಲವೇ. ಹಳ್ಳಿ, ಪಟ್ಟಣ ಅರಣ್ಯ ಹೀಗೆ ಎಲ್ಲೆಂದರಲ್ಲಿ ಉಸಿರುಗಟ್ಟಿಸುವ ಕೆಲಸ ಅವರದು. ತಟ್ಟನೆ ಬರದಿದ್ದರೆ ನಾಗರಿಕರಿಗೆ ಅದೇನೂ ತೊಂದರೆಯಾಗಿಬಿಡುವುದೋ ಎಂದು ಎದ್ದು ಬಿದ್ದು ಕಾರ್ಯನಿರತರಾಗುವ ಅವರು ತಮ್ಮ ಬದುಕನ್ನು ಕೂಡ ಯೋಚನೆ ಮಾಡದೇ  ನಮ್ಮ ಆವಶ್ಯಕತೆಗಳಿಗಾಗಿ ದುಡಿಯುತ್ತಾರೆ. ತನ್ನ ಭವಿಷ್ಯವನ್ನು ಲೆಕ್ಕಿಸದೆ ನಾಗರಿಕರಿಗಾಗಿ ದುಡಿಯುವ ಅವರು ನಿಜವಾದ ಪವರ್‌ಮ್ಯಾನ್‌ಗಳು. ದೇಶದಲ್ಲಿ ರೈತ, ಯೋಧನಿಗೆ ನೀಡುವ ಗೌರವ ತಮ್ಮ ಪ್ರಾಣ ಪಣಕ್ಕಿಟ್ಟು ದುಡಿಯುವ ಲೈನ್‌ ಮ್ಯಾನ್‌ಗಳಿಗೂ ಸಿಗಬೇಕು, ಸೌಲಭ್ಯಗಳು ದೊರಕಬೇಕು. ನಮಗಾಗಿ ದುಡಿಯುವ ಅವರ ಕೆಲಸಗಳಿಗೆ ನನ್ನದೊಂದು ಸಲಾಂ.

Advertisement

-ವಿಜಯಲಕ್ಷ್ಮೀ ಬಿ. ಕೆಯ್ಯೂರು

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next