Advertisement

ಸಂತ ಶಿರೋಮಣಿ ಪ್ರಗತಿಶೀಲ ಪ್ರವರ್ತಕ

08:25 PM Dec 29, 2019 | Lakshmi GovindaRaj |

ಪೇಜಾವರ ಶ್ರೀಗಳು ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅಷ್ಟೂ ಸಂಸ್ಥೆಗಳಿಗೆ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇಲ್ಲ. ಎಲ್ಲವೂ ಸ್ಥಳೀಯವಾಗಿ ರಚಿತವಾದ ಸಮಿತಿ ಅಥವಾ ಟ್ರಸ್ಟ್‌ಗಳ ಮೂಲಕ ನಡೆಯುತ್ತವೆ. ಶ್ರೀಗಳ ಆಡಳಿತ ನೈಪುಣ್ಯಕ್ಕೆ ಇದು ಸಾಕ್ಷಿ.

Advertisement

ಅವರು ವಿಶ್ವೇಶ್ವರ, ಇವರು ವಿಶ್ವೇಶ…: ಶ್ರೀಮಧ್ವಾಚಾರ್ಯರ ನೇರ ಶಿಷ್ಯರಾದ ಅಧೋಕ್ಷಜತೀರ್ಥರು ಶ್ರೀ ಪೇಜಾವರ ಮಠ ಪರಂಪರೆಯ ಪ್ರಥಮ ಯತಿ. ಶ್ರೀ ವಾದಿರಾಜರ ಕಾಲದಲ್ಲಿ ಪೇಜಾವರ ಮಠದಲ್ಲಿದ್ದ ಸ್ವಾಮೀಜಿ ಶ್ರೀವಿಶ್ವೇಶ್ವರತೀರ್ಥರು. ಇವರು ಪರಂಪರೆಯಲ್ಲಿ 16ನೆಯವರು. ಈಗಿನ ಶ್ರೀ ವಿಶ್ವೇಶತೀರ್ಥರು 33ನೆಯವರು, ಶ್ರೀ ವಿಶ್ವಪ್ರಸನ್ನತೀರ್ಥರು 34ನೆಯವರು.

ಹಿಂದೆಯೂ ಈಗಲೂ ಶ್ರೀ ವಿಶ್ವೇಶತೀರ್ಥರನ್ನು ಗೊತ್ತಿಲ್ಲದೆ ಶ್ರೀ ವಿಶ್ವೇಶ್ವರತೀರ್ಥರು ಎಂದು ಬರೆಯುವುದಿದೆ. ಅದೇ ಸರಿ ಎಂದು ವಾದಿಸುವವರೂ ಇದ್ದಾರೆ. ತಮ್ಮ ಪರಂಪರೆಯಲ್ಲಿದ್ದ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರನ್ನು ದಿನವೂ ಶ್ರೀ ವಿಶ್ವೇಶತೀರ್ಥರು, ಶ್ರೀ ವಿಶ್ವಪ್ರಸನ್ನತೀರ್ಥರು ಸ್ಮರಿಸಿಕೊಂಡು ದಂಡೋದಕ ಬಿಡುತ್ತಾರೆ.

ಶ್ರೀ ವಿಶ್ವೇಶತೀರ್ಥರ ಪೂರ್ವಾಶ್ರಮದ ಹೆಸರಿನ ಕತೆಯೂ ಇದೇ ರೀತಿಯಾದದ್ದು. ತಂದೆ ತಾಯಿ ಇರಿಸಿದ ಪೂರ್ವಾಶ್ರಮದ ಹೆಸರು “ವೆಂಕಟರಾಮ’. ಆದರೆ ಲೋಕದಲ್ಲಿ ರೂಢಿಗೆ ಬಂದದ್ದು, ರೂಢಿಗೆ ಬಂದ ತಪ್ಪೇ ಜನಜನಿತವಾದದ್ದು “ವೆಂಕಟರಮಣ’ ಎಂದು.

ಮುಂಡಾಸು ಕಟ್ಟಿದ ಆರೋಗ್ಯ ಸೂತ್ರ: ಪೇಜಾವರ ಶ್ರೀಗಳಿಗೆ ಶೀತ ಬಾಧೆ ಹೆಚ್ಚು. ಗಾಳಿ, ಹವಾ ನಿಯಂತ್ರಿತ ವಾತಾವರಣ ಆಗಿ ಬರು ವುದಿಲ್ಲ. ಶೀತವಾದಾಗ ಮುಖ ಕೆಂಪಗಾಗು ತ್ತಿತ್ತು. ಮಲಗುವಾಗಲೂ ಫ್ಯಾನ್‌ ಬಳಸುತ್ತಿರಲಿಲ್ಲ. ಪೂಜೆ ಮಾಡುವಾಗ ದೂರದಿಂದ ಫ್ಯಾನ್‌ ಗಾಳಿ ಬರುತ್ತಿದ್ದರೂ ಆರಿಸಲು ಹೇಳುತ್ತಿದ್ದರು. ಬೇರೆ ದಾರಿಯೇ ಇಲ್ಲವೆನ್ನುವಾಗ ಮಡಿಯ ಕಾವಿಶಾಟಿಯನ್ನೇ ಮುಂಡಾಸಾಗಿ ಸುತ್ತಿ ಪೂಜೆ ಮಾಡುತ್ತಿದ್ದುದೂ ಉಂಟು.

Advertisement

ಜತೆಗೆ ಅವರದು ಮಹಾದಾಕ್ಷಿಣ್ಯದ ಸ್ವಭಾವ. ಎಸಿ ಸಭಾಂಗಣದಲ್ಲಿ ಸಭೆ ಇದ್ದರೆ ಮಾಡುವುದೇನು? ಇದಕ್ಕೆ ಅವರೇ ಕಂಡುಕೊಂಡ ಉಪಾಯ ಕಿವಿ ಮುಚ್ಚುವಂತಹ ಟೋಪಿಧಾರಣೆ. ಅದು ಸಿಗದಾಗ ಕಾವಿಶಾಟಿಯನ್ನೇ ಕಿವಿ ಮುಚ್ಚುವಂತೆ ಮುಂಡಾಸು ಸುತ್ತಿಕೊಳ್ಳುತ್ತಿದ್ದರು. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಸರೋವರದಲ್ಲಿ ಮುಳುಗಿ ಸ್ನಾನ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ.

ಸಮಾಜಮುಖೀ: 1999ರ ಪ್ರಥಮೈಕಾದಶಿಯಂದು ಉಲ್ಬಣ ಜ್ವರವಿತ್ತು. ಬೆಂಗಳೂರಿನಲ್ಲಿ ಮಧ್ಯಾಹ್ನ ಸಾವಿರಾರು ಶಿಷ್ಯರಿಗೆ ತಪ್ತಮುದ್ರಾಧಾರಣೆ ಮಾಡಿ ಸಂಜೆ ಚೆನ್ನೈಗೆ ತೆರಳಿ ಅಲ್ಲಿಯೂ ತಪ್ತಮುದ್ರೆ ಅನುಗ್ರಹಿಸಿ ಮರುದಿನ ಬೆಳಗ್ಗೆ ಬೆಂಗಳೂರಿಗೆ ಬಂದರು. ಒಂದೆಡೆ ಜ್ವರಬಾಧೆ, ಇನ್ನೊಂದೆಡೆ ನಿರಶನದ ದೃಢ ದೀಕ್ಷೆ.

ಬಡವರ ಪರ ಕಾಳಜಿ: 1968ರಿಂದ, 1970 ಶ್ರೀಗಳ ದ್ವಿತೀಯ ಪರ್ಯಾಯ. ಈ ಅವಧಿಯಲ್ಲೇ 1968ರ ಆ.18ರಂದು ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆಯಾಯಿತು. ಶ್ರೀಪಾದರ ಸಾಮಾಜಿಕ ಕಳಕಳಿಗೆ ಇದು ಒಂದು ಅನನ್ಯ ನಿದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next