Advertisement

ಮೊಸಳೆ ಹಿಡಿಯದೆ ಅರಣ್ಯ ಸಿಬ್ಬಂದಿ ವಾಪಸ್‌

11:45 AM May 12, 2019 | Naveen |

ಸೈದಾಪುರ: ಭೀಮಾ ನದಿ ತಗ್ಗು ಪ್ರದೇಶ ನೀರಿನಲ್ಲಿ ಬಿಡು ಬಿಟ್ಟಿರುವ ಮೊಸಳೆಗಳನ್ನು ಹಿಡಿಯದೇ ಅರಣ್ಯ ಇಲಾಖೆ ಸಿಬ್ಬಂದಿ ವಾಪಾಸ್ಸಾದ ಹಿನ್ನೆಲೆಯಲ್ಲಿ ಗೂಡೂರು ಸೇರಿದಂತೆ ನದಿ ದಡದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

Advertisement

ಕಳೆದ ಏ. 28ರಂದು ಗೂಡೂರು ಗ್ರಾಮದ ಬಸವಲಿಂಗಪ್ಪ (55) ಎಂಬ ವ್ಯಕ್ತಿ ಮೊಸಳೆ ಬಾಯಿಗೆ ಸಿಲುಕಿ ಸಾವನಪ್ಪಿದ್ದ. ಈ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಬಾವಿಕಟ್ಟಿ ನೇತೃತ್ವದಲ್ಲಿ ಎಂಟು ಜನ ಪರಿಣಿತರ ತಂಡ ಮೊಸಳೆ ಹಿಡಿಯಲು ಆಗಮಿಸಿತ್ತು. ಕೆಲ ಗಂಟೆ ಹೊತ್ತು ವೀಕ್ಷಿಸಿ ಮೊಸಳೆಗಳನ್ನು ನೀರಿನಲ್ಲಿ ಹಿಡಿಯುವುದು ಕಷ್ಟ. ಅದರಲ್ಲಿಯೂ ಈ ಪ್ರದೇಶದಲ್ಲಿ ತಗ್ಗುಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗಿದೆ. ಇದರಿಂದ ಮೊಸಳೆ ಹಿಡಿಯಲು ಸಾಧ್ಯವಿಲ್ಲ. ಮೊಸಳೆಗಳು ಹೊಂಡಗಳಲ್ಲಿ ಅವಿತುಕೊಂಡಿದ್ದು, ಸ್ವಲ್ಪ ನೀರು ಖಾಲಿ ಮಾಡಿದ ನಂತರ ಅವುಗಳನ್ನು ಹಿಡಿಯಬಹುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದರಿಂದಾಗಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಎದುರಾಗಿದೆ.

30ಕ್ಕೂ ಹೆಚ್ಚು ಮೊಸಳೆಗಳಿರುವ ಶಂಕೆ: ಗೂಡೂರು ಸಮೀಪದ ಭೀಮಾ ನದಿಯಲ್ಲಿ ಅನೇಕ ಹೊಂಡಗಳಿವೆ. ಹೆಚ್ಚಿನ ನೀರು ಸಂಗ್ರಹವಾಗಿರುವುದರಿಂದ ಈ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಮೊಸಳೆಗಳಿವೆ ಎಂದು ಪರಿಣಿತರು ಶಂಕೆ ವ್ಯಕ್ತಪಡಿಸದ್ದಾರೆ.

ನಾವು ಒಂದೆರಡು ಮೊಸಳೆ ಇದ್ದರೆ ಹಿಡಿದು ಸ್ಥಳಾಂತರ ಮಾಡಬಹುದು. ಆದರೆ ಇಲ್ಲಿ ಇಷ್ಟೊಂದು ಮೊಸಳೆಗಳು ಇವೆ ಎಂದು ಊಹಿಸಿಕೊಂಡಿರಲ್ಲಿಲ್ಲ. ಅವುಗಳನ್ನು ಸ್ಥಳಾಂತರ ಮಾಡುವುದು ಕಷ್ಟ ಸಾಧ್ಯ ಎಂದು ಅರಣ್ಯ ಸಿಬ್ಬಂದಿ ತಿಳಿಸಿದರು.

ನಿರಾಸೆಯಿಂದ ಮನೆಗೆ ತೆರಳಿದ ಗ್ರಾಮಸ್ಥರು: ಭೀಮಾ ತೀರಕ್ಕೆ ಮೊಸಳೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬರುತ್ತಾರೆ ಎಂದು ಸುದ್ದಿ ತಿಳಿದು ಕೂತಹಲದಿಂದ ಗ್ರಾಮಸ್ಥರು ಆಗಮಿಸಿದ್ದರು. ಕೆಲ ಹೊತ್ತು ಕಾಯ್ದ ನಂತರ ಸಿಬ್ಬಂದಿ ಹಿಡಿಯಲು ಕಷ್ಟ ಸಾಧ್ಯ ಎಂದು ಹಿಂದಿರುಗಿದ ನಂತರ ಗ್ರಾಮಸ್ಥರು ಆತಂಕದಿಂದ ಮತ್ತು ನಿರಾಸೆಯಿಂದ ಮನೆಗೆ ತೆರಳಿದರು.

Advertisement

ಗೂಡೂರು ಸಮೀಪದ ಭೀಮಾ ನದಿಯಲ್ಲಿರುವ ಮೊಸಳೆಗಳನ್ನು ಹಿಡಿಯಲು ಪರಿಣಿತರನ್ನು ಕಳುಹಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಮೊಸಳೆಗಳು ಇವೆ. ಅಲ್ಲದೇ ಹೊಂಡಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿರುವ ಹಿನ್ನ್ನೆಲೆಯಲ್ಲಿ ಅವುಗಳನ್ನು ಹಿಡಿದು ಸ್ಥಳಾಂತರಿಸುವುದು ಕಷ್ಟ ಸಾಧ್ಯ. ನದಿ ದಡದಲ್ಲಿ ಸೂಚನಾ ಫಲಕ ಮತ್ತು ಗ್ರಾಮಗಳಲ್ಲಿ ಡೊಂಗುರ ಹಾಕಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು. ಗ್ರಾಮಸ್ಥರು ಜಾಗೃತಿಯಿಂದ ಈ ಕಡೆ ಬರದಂತೆ ಎಚ್ಚರಕ್ಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಬಸವರಾಜ,
ವಲಯ ಅರಣ್ಯ ಅಧಿಕಾರಿ ಯಾದಗಿರಿ

ಗೂಡೂರು ಗ್ರಾಮದ ಸಮೀಪ ಭೀಮಾ ನದಿ ದಡದಲ್ಲಿ ಇಂದಿಗೂ ನಾಲ್ಕರಿಂದ ಐದು ಮೊಸಳೆಗಳು ಇವೆ ಎಂದು ತಿಳಿದಿದ್ದೇವು. ಆದರೆ ಹಿಡಿಯಲು ಬಂದ ಅರಣ್ಯ ಸಿಬ್ಬಂದಿ ತಿಳಿಸಿರುವ ಹಾಗೆ 30ಕ್ಕೂ ಹೆಚ್ಚು ಮೊಸಳೆಗಳು ಇರುವುದರಿಂದ ನದಿ ತಟದಲ್ಲಿಯೇ ಗ್ರಾಮದ ನೂರಾರು ಜನರು ಮತ್ತು ದನಕರುಗಳು ನೀರಿಗಾಗಿ ನದಿಗೆ ಹೋಗಬೇಕಾಗುತ್ತದೆ. ಅಲ್ಲದೇ ನದಿ ಪಾತ್ರದ ಗ್ರಾಮಗಳಲ್ಲಿ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಆರಣ್ಯಾಧಿಕಾರಿಗಳು ಪುನರಾಲೋಚಿಸಿ ಮೊಸಳೆಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ.
ಆಂಜನೇಯ ರಾಂಪುರ,
ಮೃತ ವ್ಯಕ್ತಿ ಸಂಬಂಧಿ

Advertisement

Udayavani is now on Telegram. Click here to join our channel and stay updated with the latest news.

Next