ದಾಂಡೇಲಿ: ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರ ಹಾಗೂ ಬಹು ಭಾಷೆಯ ನೆಲ ದಾಂಡೇಲಿಯಲ್ಲಿ ‘ಸಾಹಿತ್ಯ ಭವನ’ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯು ತಾತ್ವಿಕ ಸಮ್ಮತಿ ನೀಡಿದೆ. ಆಯಾ ತಾಲೂಕಿನ ನಗರಸಭೆಯವರು ನಿವೇಶನ ಮಂಜೂರಿ ನೀಡಿದ ತಕ್ಷಣವೇ ಕ್ರಿಯಾಯೋಜನೆ ತಯಾರಿಸಿ ಭವನ ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರ ಪತ್ರದ ಜೊತೆಗೆ ಮಾಹಿತಿ ನೀಡಿರುವ ವಾಸರೆಯವರು ಸಂಬಂಧಿಸಿದ ತಾಲೂಕುಗಳಲ್ಲಿ ನಿವೇಶನ ನೀಡಲು ಸ್ಥಳೀಯಾಡಳಿತ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರವೂ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಸಾಹಿತ್ಯ ಭವನ’ಗಳಿರಲಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ’ಸಾಹಿತ್ಯ ಭವನ ನಿರ್ಮಿಸಲು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದ ನಂತರ ಸಾಕಷ್ಟು ಪ್ರಯತ್ನ ಮಾಡಿರುವುದರ ಜೊತೆಯಲ್ಲಿ ಕಸಾಪ ರಾಜ್ಯಾದ್ಯಕ್ಷರಿಗೂ ಹಲವು ಬಾರಿ ಲಿಖಿತ ಮನವಿ ನೀಡಿ ಒತ್ತಾಯಿಸಲಾಗಿತ್ತು.
ಇದೀಗ ಕಸಾಪ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ನಮ್ಮ ಮನವಿಗೆ ಸ್ಪಂದಿಸಿ ‘ಸಾಹಿತ್ಯ ಭವನ’ ನಿರ್ಮಿಸಲು ತಾತ್ವಿಕ ಒಪ್ಪಿಗೆ ನೀಡಿರುವುದರ ಜೊತೆಗೆ ಪರಿಷತ್, ಸರಕಾರ ಹಾಗೂ ಸ್ಥಳೀಯರ ಪ್ರಾಯೋಜಕತ್ವದಲ್ಲಿ ಕಟ್ಟಡ ಕಾಮಗಾರಿ ನಿರ್ಮಿಸಬಹುದಾಗಿದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಾಧ್ಯಾಪಕ ವೃತ್ತಿ ತೊರೆದು ದೇಸಿ ಗೋವುಗಳನ್ನು ಸಾಕಿ ಯಶಸ್ಸು ಕಂಡ ರೈತ