Advertisement

ಮುಪ್ಪಾನೆ ಲಾಂಚ್‌ ಮಾರ್ಗ ಅಭಿವೃದ್ಧಿಯಾಗಲಿ

01:16 PM Dec 04, 2019 | Naveen |

ಸಾಗರ: ಒಂದೆಡೆ ಕಳಸವಳ್ಳಿ ಹಾಗೂ ಅಂಬಾರಗೋಡ್ಲು ತಟಗಳ ನಡುವೆ ಶರಾವತಿ ಹಿನ್ನೀರಿನ ಸಿಗಂದೂರಿಗೆ ಹೋಗಲು ತುಮರಿ ಸೇತುವೆ ಕಾಮಗಾರಿಯ ಚಟುವಟಿಕೆಗಳು ನಿಧಾನವಾಗಿ ಬಿರುಸು ತೆಗೆದುಕೊಳ್ಳುತ್ತಿರುವ ಕಾಲದಲ್ಲಿ ಪರ್ಯಾಯವಾಗಿ ಹಾಗೂ ಪ್ರವಾಸೋದ್ಯಮದ ಆಕರ್ಷಣೆಯಾಗಬಹುದಾದ ಮುಪ್ಪಾನೆ ಹಾಗೂ ಹಲ್ಕೆಯ ಲಾಂಚ್‌ ಫ್ಲ್ಯಾಟ್ ಫಾರಂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಒತ್ತಾಯ ಕೇಳಿಬರುತ್ತಿದೆ.

Advertisement

ಶರಾವತಿ ಕಣಿವೆಯ ಸಂರಕ್ಷಿತ ಅರಣ್ಯ ಪ್ರದೇಶದ ಮುಪ್ಪಾನೆ ಕಾರ್ಗಲ್‌ನಿಂದ 14 ಕಿಮೀ ದೂರದಲ್ಲಿದೆ. ಮುಖ್ಯವಾಗಿ ಸಾಗರ- ಭಟ್ಕಳ ರಸ್ತೆಯಿಂದ ಕೇವಲ ಎರಡೂವರೆ ಕಿಮೀ ದೂರದಲ್ಲಿ ಈ ಮುಪ್ಪಾನೆ ಲಾಂಚ್‌ ನಿಲ್ಲುವ ಶರಾವತಿ ಹಿನ್ನೀರಿನ ದಡವಿದೆ. ಇಲ್ಲಿಂದ ತುಮರಿ ಗ್ರಾಪಂನ ಹಲ್ಕೆ ಎಂಬಲ್ಲಿನ ದಡಕ್ಕೆ ಕೇವಲ 10 ನಿಮಿಷಗಳಲ್ಲಿ ಲಾಂಚ್‌ ಮೂಲಕ ಹೋಗಬಹುದು. ಕಾರ್ಗಲ್‌ನಿಂದ ಸಾಗರಕ್ಕೆ ಬಂದು ಅಲ್ಲಿಂದ ಆವಿನಹಳ್ಳಿ ರಸ್ತೆಯಲ್ಲಿ ಸಿಗಂದೂರು ತಲುಪಲು 80 ಕಿಮೀ ಸಾಗಬೇಕಾದಲ್ಲಿ ಈ ಲಾಂಚ್‌ ಮೂಲಕ ಪಯಣಿಸಿದರೆ ಬರೋಬ್ಬರಿ 45 ಕಿಮೀನ ಪ್ರಯಾಣ ಉಳಿಸುತ್ತದೆ. ಅಷ್ಟೇ ಅಲ್ಲ, ಶಿರಸಿ, ಸಿದ್ಧಾಪುರದಿಂದ ಸಿಗಂದೂರು ಅಥವಾ ಕೊಲ್ಲೂರಿಗೆ ಹೋಗುವವರು ಕೂಡ ಈ ಮಾರ್ಗವನ್ನು ಬಳಸಿದರೆ ಅವರಿಗೆ ಗರಿಷ್ಠ ಅನುಕೂಲಗಳಾಗುತ್ತವೆ.

ಸಾಗರ ಪ್ರವಾಸ ಮಾಡುವವರು ಜೋಗ ಹಾಗೂ ಸಿಗಂದೂರುಗಳೆರಡಕ್ಕೂ ಭೇಟಿ ನೀಡುವುದಿದ್ದರೆ ಈ ಮಾರ್ಗ ಅವರ ಸಮಯ, ಇಂಧನವನ್ನು ಉಳಿಸುತ್ತದೆ ಎಂಬುದನ್ನು ಖಚಿತವಾಗಿ ಇಲ್ಲಿನವರು ಹೇಳುತ್ತಾರೆ.

ಕರೂರು ಬಾರಂಗಿಗಳ ಸಂಪರ್ಕ ವ್ಯವಸ್ಥೆ: ಕರೂರು ಹೋಬಳಿ ಜನರಿಗೆ ಕಾರ್ಗಲ್‌- ಜೋಗವನ್ನು ಕೇವಲ 35 ಕಿಮೀ ಸಮೀಪದಲ್ಲಿ ಸಂಪರ್ಕ ಕಲ್ಪಿಸುವ ಮುಪ್ಪಾನೆ ಲಾಂಚ್‌ ಮಾರ್ಗಕ್ಕೆ ಎರಡು ಲಾಂಚ್‌ ನಿಲ್ದಾಣಗಳಲ್ಲಿ ಶಾಶ್ವತ ಫ್ಲ್ಯಾಟ್ ಫಾರ್ಮ್ ಅಗತ್ಯ ಇದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗಿದೆ. ಜೋಗದಿಂದ ಸಿಗಂದೂರು ತಲುಪುವ ಅತಿ ಸಮೀಪದ ಪ್ರಕೃತಿ ನಡುವಿನ ಹಾದಿಯಲ್ಲಿ ಲಾಂಚ್‌ ಕ್ರಮಿಸಲು ಅವಕಾಶ ಇರುವ ಕಾರಣ ಪ್ರವಾಸಿಗರ ವಾಹನ ಸಂಖ್ಯೆ ಹೆಚ್ಚಿದೆ. ಇದರ ಜತೆ ಶಿರಸಿ- ಹೊನ್ನಾವರ- ಭಟ್ಕಳಕ್ಕೂ ಸಮೀಪ ಹಾದಿ ಇದೇ ಆಗಿರುವುದರಿಂದ ವಾಹನ ಸಂಖ್ಯೆಗಳು ಹೆಚ್ಚಳ ಆಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಡಳಿತ ತುರ್ತು ಕ್ರಮ ತೆಗೆದುಕೊಂಡು ಎರಡೂ ದಡಗಳಲ್ಲಿ ಸಮರ್ಪಕವಾದ ಫ್ಲ್ಯಾಟ್ ಫಾರ್ಮ್ ನಿರ್ಮಿಸಲು ಮುಂದಾಗಬೇಕು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಕರೂರು ಪ್ರತಿಪಾದಿಸುತ್ತಾರೆ.

ಪ್ರಸ್ತುತ ಕರೂರು ಹಾಗೂ ಬಾರಂಗಿ ಹೋಬಳಿ ಜನರ ಒಡನಾಟಕ್ಕೆ ಈ ಮಾರ್ಗ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅಲ್ಲದೆ ತುಮರಿ ಭಾಗ ಕಾರ್ಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವುದರಿಂದ ಇಲ್ಲಿನ ಜನ ತಮ್ಮ ಅಧಿಕೃತ ಬಂದೂಕನ್ನು ಸರ್ಕಾರದ ವಶಕ್ಕೆ ನೀಡಲು ಕೂಡ ಕಾರ್ಗಲ್‌ಗೆ ಬರಬೇಕು. ಇತ್ತೀಚೆಗೆ ತುಮರಿ ಭಾಗವನ್ನು ಜೋಗದ ಮೆಸ್ಕಾಂ ವಿಭಾಗಕ್ಕೆ ಸೇರಿಸಿರುವುದರಿಂದ ಬಿಲ್‌ ವ್ಯತ್ಯಾಸ ಸರಿಪಡಿಸಲು ಕೂಡ ಅಲ್ಲಿನ ಜನ ಜೋಗಕ್ಕೆ ಧಾವಿಸುವ ಪರಿಸ್ಥಿತಿಯಿದೆ. ಈ ನಿಟ್ಟಿನಲ್ಲಿ ಈ ಜಲ ಮಾರ್ಗವನ್ನು ಇನ್ನಷ್ಟು ಉತ್ತಮ ಪಡಿಸುವ ಅಗತ್ಯವಿದೆ ಎಂದು ಬಾರಂಗಿ ಭಾಗದ ನಿವಾಸಿ, ನಗರದ ತೋಟಗಾರ್ಸ್‌ ಸಂಸ್ಥೆಯ ಉಪಾಧ್ಯಕ್ಷ ಹು.ಭಾ.ಅಶೋಕ್‌ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Advertisement

ಸದ್ಯ ಮಾಹಿತಿ ಕೊರತೆ ಪ್ರಸ್ತುತ ವಿಶೇಷವಾದ ಜನಸಂಚಾರ ಇಲ್ಲದಿರುವುದರಿಂದ ಕಾಂಕ್ರೀಟ್‌ ಫ್ಲ್ಯಾಟ್ ಫಾರಂ ಇಲ್ಲದಿದ್ದರೂ ನಡೆಯುತ್ತಿದೆ. ಅಲ್ಲದೆ ನಾಲ್ಕು ಚಕ್ರದ ವಾಹನಗಳು ಸಾಗುವ ದಾರಿಯಲ್ಲಿ ಮುಪ್ಪಾನೆ ಐಬಿ ಎಂದು ಕರೆಸಿಕೊಳ್ಳುವ ಅರಣ್ಯ ಇಲಾಖೆ ಹೋಂ ಸ್ಟೇ ವ್ಯವಸ್ಥೆ ಇರುವುದರಿಂದ ಇಲಾಖೆ ಗೇಟ್‌ ನಿರ್ಮಿಸಿ ಬೀಗ ಹಾಕಿದೆ. ಅದನ್ನು ದಿನದ ನಿರ್ದಿಷ್ಟ ಸಮಯದಲ್ಲಾದರೂ ತೆಗೆಸುವ ಕೆಲಸ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಇಲ್ಲದಿರುವುದರಿಂದ ಸಾಧ್ಯವಾಗಿಲ್ಲ. ಪ್ರವಾಸಿಗರಿಗೆ ಕೂಡ ಈ ಪರ್ಯಾಯ ಮಾರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎನ್ನಬಹುದು.

ಪ್ರಸ್ತುತ ದಿನದಲ್ಲಿ ಬೆಳಗ್ಗೆ 8-30, 11-30, ಮಧ್ಯಾಹ್ನ 2-30 ಹಾಗೂ 4-30ಕ್ಕೆ ನಿಗದಿತ ಸಂಚಾರ ಮಾಡುವ ಲಾಂಚ್‌ ಅಗತ್ಯ ಬಿದ್ದರೆ ವಿಶೇಷ ಟ್ರಿಪ್‌ಗ್ಳನ್ನು ಮಾಡುತ್ತದೆ. ಆಚೆಗಿನ ದಡದಿಂದ 10 ನಿಮಿಷಕ್ಕೆ ಬರಬಹುದಾದ್ದರಿಂದ ಕಾಯುವ ಅಗತ್ಯವಿಲ್ಲ. ಪ್ರಸ್ತುತ ಹಲ್ಕೆಯಿಂದ ತುಮರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಅದರ ಅಭಿವೃದ್ಧಿಗೆ ಶಾಸಕ ಎಚ್‌. ಹಾಲಪ್ಪ 80 ಲಕ್ಷ ರೂ. ಕಾಮಗಾರಿಯ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂಬ ಮಾಹಿತಿಯಿದೆ.

ಭಟ್ಕಳ ರಸ್ತೆಯಿಂದ ಮುಪ್ಪಾನೆಗೆ ಮಣ್ಣಿನ ರಸ್ತೆಯಿದ್ದು, ಅರಣ್ಯ ಇಲಾಖೆ ಗೇಟ್‌ನ್ನು ಹಗಲು ವೇಳೆಯಲ್ಲಿ ತೆರೆದಿರಿಸಿದರೆ ಈ ಭಾಗದ ದೊಡ್ಡ ಸಮಸ್ಯೆಯೇ ಇಲ್ಲವಾಗುತ್ತದೆ. ಆಗ ಮಾರ್ಗಸೂಚಿಗಳನ್ನು ಹಾಕಿ ಪ್ರವಾಸಿ ಜನಕ್ಕೆ ಮಾರ್ಗದರ್ಶನ ಮಾಡಲು ಅವಕಾಶವಾಗುತ್ತದೆ. ಜಲಸಾರಿಗೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಅವಕಾಶವನ್ನು ಸರ್ಕಾರಗಳು ಕಳೆದುಕೊಳ್ಳುತ್ತಿವೆ.
ಕೆಲವು ದೇಶಗಳಲ್ಲಿ ಜಲಸಾರಿಗೆಯೊಂದೇ ಸಂಪರ್ಕ ವ್ಯವಸ್ಥೆ ಆಗಿರುವುದನ್ನು ಕಾಣುತ್ತೇವೆ. ರಸ್ತೆ ನಿರ್ವಹಣೆಯಂತ ಮರುಕಳಿಸುವ ವೆಚ್ಚಗಳಿಲ್ಲದ, ಅಂತರ ಕಡಿಮೆ ಮಾಡುವ ಈ ಮುಪ್ಪಾನೆ ಹಲ್ಕೆ ಜಲಮಾರ್ಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು.

ಪ್ರಸ್ತುತ ತುಮರಿ ಭಾಗದಲ್ಲಿ ನಾಲ್ಕು ಲಾಂಚ್‌ಗಳಿವೆ. ಹಬ್ಬದ ಸಂದರ್ಭದಲ್ಲಿ ಮಾತ್ರ ಮೂರು ಲಾಂಚ್‌ ಬಿಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಎರಡು ಮಾತ್ರ ಓಡಾಟ ನಡೆಸುತ್ತದೆ. ಸುಸ್ಥಿತಿಯಲ್ಲಿರುವ ಒಂದು ಲಾಂಚ್‌ ಬಳಕೆಯೇ ಆಗುತ್ತಿಲ್ಲ. ವ್ಯವಸ್ಥಿತ ಫ್ಲ್ಯಾಟ್  ಫಾರಂ ಸಿದ್ಧವಾದರೆ ಅದನ್ನೇ ಇಲ್ಲಿ ಬಳಸಿ ಒಂದೇ ಬಾರಿಗೆ ಹೆಚ್ಚು ವಾಹನ, ಜನರನ್ನು ಸಾಗಿಸಬಹುದು.

ಸರ್ಕಾರ ತನ್ನದೇ ಇಲಾಖೆಗಳ ಜೊತೆ ಸಮನ್ವಯ ಸೃಷ್ಟಿಸಿ ಇಚ್ಛಾಶಕ್ತಿ ತೋರಿದರೆ ಈಗಿರುವ ಸಿಗಂದೂರು ಮಾರ್ಗದ ಒತ್ತಡವನ್ನೂ ಕಡಿಮೆ ಮಾಡಬಹುದು. ರಸ್ತೆ ಕಾಮಗಾರಿ, ಸೇತುವೆ ನಿರ್ಮಾಣದಂತ ಕೋಟಿ ಕೋಟಿ ರೂ.ಗಳ ಕಾಮಗಾರಿ ಸಂಪಾದನೆಯನ್ನು ತಂದುಕೊಡುವಂತದು. ಹಾಗಾಗಿಯೇ ಜನಪ್ರತಿನಿಧಿ ಗಳಿಗೆ ಜಲಸಾರಿಗೆ ಕೊನೆಯ ಆಯ್ಕೆ ಎಂದು ಜನ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next