ಸಾಗರ: ನಗರದ ಗಣಪತಿ ಕೆರೆಯ ಪಕ್ಕದಲ್ಲಿ ಎತ್ತರದಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜ ಗಾಳಿಯ ಬಿರುಸಿಗೆ ಸಿಕ್ಕು ಹರಿದು ಹಾಳಾಗಿದ್ದರೂ ಅದರ ನಿರ್ವಹಣೆ ನಡೆಸುವ ಸಾಗರ ನಗರಸಭೆಯ ಗಮನಕ್ಕೆ ಬಾರದಿದ್ದುದು ಸೋಮವಾರ ಕಂಡುಬಂದಿತು.
ನಗರದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಿಎಚ್ ರಸ್ತೆಯ ಪಕ್ಕದಲ್ಲಿ 159 ಅಡಿ ಎತ್ತರದಲ್ಲಿ30-45 ಅಡಿ ಅಳತೆಯ ಬೃಹತ್ ರಾಷ್ಟ್ರಧ್ವಜ ಹಾರಾಡುತ್ತಿರುವುದು ಸಾಗರ ಪ್ರವೇಶಿಸುವ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಂತೆ ಕಾಣುತ್ತದೆ.2020 ರ ಆಗಸ್ಟ್ 15 ರಂದು ಪ್ರಾಯೋಗಿಕ ಪರೀಕ್ಷೆಗೊಳಗಾದ ರಾಷ್ಟ್ರಧ್ವಜ 2021 ರ ಜನವರಿ 26 ರಿಂದ ನಿರಂತರವಾಗಿ ಹಾರಾಡುತ್ತಿದೆ. ಸುಮಾರು87 ಲಕ್ಷ ರೂ. ವೆಚ್ಚದಲ್ಲಿ ಧ್ವಜಸ್ತಂಭ, ಉದ್ಯಾನವನಗಳ ನಿರ್ಮಾಣವಾಗಿದೆ. ಗಣಪತಿ ಕೆರೆಯ ನೀರಿನ ಸೆಲೆಯ ಭಾಗವನ್ನು ಮುಚ್ಚಿ ಈ ರಾಷ್ಟ್ರಧ್ವಜ ಸ್ತಂಭ ನಿರ್ಮಾಣ ಮಾಡಲಾಗಿದೆ ಎಂಬುದು ಆ ಕಾಲದಲ್ಲಿ ವಿವಾದವೂ ಆಗಿತ್ತು.
ಮೀರತ್ನ 380 ಅಡಿ ಎತ್ತರದ ರಾಷ್ಟ್ರಧ್ವಜ, ಬೆಳಗಾವಿಯ 361 ಅಡಿ ಎತ್ತರದ ಬಾವುಟಗಳ ಹಿಂದೆ ಸಾಗರದ ರಾಷ್ಟಧ್ವಜಕ್ಕೆ ವಿಶೇಷ ಕೀರ್ತಿ ಲಭ್ಯವಾಗಿದೆ. ಬಳ್ಳಾರಿಯಲ್ಲಿ 152 ಅಡಿ ಎತ್ತರದಲ್ಲಿ ಹಾಗೂ ಹೊಸಪೇಟೆಯಲ್ಲಿ150 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದೆ. ಮಲೆನಾಡಿನ ಮಳೆ, ಗಾಳಿಯ ಶೀತ ವಾತಾವರಣ, ಖಾದಿ ಧ್ವಜ ಹಾರಾಡಬೇಕಿರುವ ಕಾರಣ ಈಗಾಗಲೇ ಹಲವು ಬಾರಿ ಇಲ್ಲಿನ ರಾಷ್ಟ್ರಧ್ವಜ ಹರಿದು ಬದಲಾಯಿಸುವಂತಾಗಿದೆ.
ಈ ಕೆಲಸಕ್ಕೆ ಎರಡು ಹೆಚ್ಪಿ ಯಂತ್ರ ಕೂಡ ನಗರಸಭೆಯಿಂದ ಅಳವಡಿಸಲಾಗಿದೆ. ಪದೇ ಪದೆ ರಾಷ್ಟ್ರಧ್ವಜ ಹರಿದು ತೊಂದರೆಯಾಗುವುದರಿಂದ ನಗರಸಭೆಯಲ್ಲಿ ಸದಾ ಐದು ಧ್ವಜಗಳನ್ನು ಸಂಗ್ರಹಿಸಲಾಗಿದೆ ಎಂಬ ಸ್ಪಷ್ಟೀಕರಣವೂ ನಗರಸಭೆಯಿಂದ ಸಿಕ್ಕಿತ್ತು. ಒಂದು ಕ್ಷಣವೂ ದೇಶದ ರಾಷ್ಟ್ರಧ್ವಜ ಹರಿದ ಸ್ಥಿತಿಯಲ್ಲಿ ಹಾರಾಡುವುದು ಸಮ್ಮತವಲ್ಲದ ಕಾರಣ ಸಾರ್ವಜನಿಕರು ಗಮನಕ್ಕೆ ತರುವ ಮುನ್ನವೇ ಆಡಳಿತದ ಗಮನಕ್ಕೆ ತರುವ ಹಾಗೂ ತಕ್ಷಣ ಬದಲಿಸುವ ವ್ಯವಸ್ಥೆಯನ್ನು ನಗರಸಭೆ ಮಾಡಿಕೊಳ್ಳಬೇಕು ಎಂದು ದೇಶಭಕ್ತರು ಆಗ್ರಹಿಸಿದ್ದಾರೆ.