Advertisement

ಅರಳಗೋಡಲ್ಲಿ ಸದ್ಯಕ್ಕಿಲ್ಲ ಕೆಎಫ್‌ಡಿ ಆತಂಕ

03:48 PM Jan 13, 2020 | Naveen |

ಸಾಗರ: ಕಳೆದ ವರ್ಷ ಈ ಅವಧಿಯಲ್ಲಿ ಮಂಗನ ಕಾಯಿಲೆಯಿಂದ ತತ್ತರಿಸಿದ್ದ ತಾಲೂಕಿನ ಅರಳಗೋಡು ಭಾಗದಲ್ಲಿ ಈ ವರ್ಷ ಈವರೆಗೆ ಅಂತಹ ಪ್ರಕರಣಗಳು ಕಂಡು ಬಂದಿಲ್ಲದಿರುವುದರಿಂದ ಅಲ್ಲಿನ ಜನ ನಿಟ್ಟುಸಿರು ಬಿಡುತ್ತಿದ್ದಾರೆ.

Advertisement

ಕಳೆದ ವರ್ಷ ಮಂಗನ ಸಾವು, ಉಣುಗುಗಳ ಭಯದಿಂದ ಅಳಗೋಡು ಮೊದಲಾದೆಡೆ ಊರಿಗೆ ಊರೇ ಮನೆಗೆ ಬೀಗ ಹಾಕಿ ಬೇರೆಡೆಗೆ ವಲಸೆ ಹೋಗಿದ್ದ ಘಟನೆಗಳು ನಡೆದಿದ್ದವು. ಈ ವರ್ಷ ಶಂಕಿತ ಕೆಎಫ್‌ಡಿ ಜ್ವರ ಈವರೆಗೆ ಕಾಣಿಸಿಕೊಂಡಿಲ್ಲ, ಮಂಗಗಳು ಸಾವನ್ನಪ್ಪುತ್ತಿರುವುದು ಕಂಡುಬಂದಿಲ್ಲ ಎಂದು ಅಳಗೋಡಿನ ರಾಜೇಶ್‌ ಸಮಾಧಾನ ವ್ಯಕ್ತಪಡಿಸುತ್ತಾರೆ.

ಅಲ್ಲಿ ಅಂತಿಮ ಹಂತದಲ್ಲಿ ಅಡಕೆ ಕೊಯ್ಲಿನ ಕೆಲಸ ನಡೆದಿದ್ದು, ಗದ್ದೆಯಿಂದ ಭತ್ತ ಕೊಯ್ಲಾಗಿ ಮನೆ ಸೇರಿದೆ. ಈ ನಡುವೆ ಕಾನೂರಿನ ಭರತ್‌ರಲ್ಲಿ ಕಾಣಿಸಿದ
ಮಂಗನ ಕಾಯಿಲೆ ಹಾಗೂ ಹೂವಮ್ಮ ಸಾವಿನ ಪ್ರಕರಣದ ನಂತರ ಈ ಭಾಗದಲ್ಲಿ ಮೂರನೇ ಸುತ್ತಿನ ಲಸಿಕೆ ಹಾಕುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಲಸಿಕೆ ಹಾಕಿಸಿಕೊಳ್ಳುವಲ್ಲಿ ತೀವ್ರವಾದ ಪ್ರತಿರೋಧವಿರುವ ಮರಾಠಿಕೇರಿಯ ಮನೆಮನೆಗೆ ತೆರಳಿ ಲಸಿಕೆ ಹಾಕುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಮತ್ತೂಮ್ಮೆ ಮಂಗನ ಕಾಯಿಲೆಯ ಭಯ ಮೂಡುವಂತಾಗಿರುವುದು ಕೂಡ ಜನ ಲಸಿಕೆ ಹಾಕಿಕೊಳ್ಳುವಲ್ಲಿ ಪ್ರತಿರೋಧ ತೋರುವುದನ್ನು ಕಡಿಮೆ ಮಾಡಿದೆ ಎಂದು ಆಶಾ ಕಾರ್ಯಕರ್ತೆಯೋರ್ವರು ತಿಳಿಸಿದರು.

ಭಾನುವಾರ ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು, ಮೃತ ಹೂವಮ್ಮ ಅವರ ಶೀಗೇಹಳ್ಳಿಯ ಮನೆಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಬರುವ 17ರಂದು ಈ ಭಾಗದ ಮಾರಲಗೋಡು ಎಂಬಲ್ಲಿ ಲಸಿಕಾ ಶಿಬಿರ ನಡೆಸಲಾಗುವುದು. ಈ ಒಂದು ಘಟನೆಯ ಹೊರತಾಗಿ ಎಲ್ಲೂ ಆತಂಕದ ಪರಿಸ್ಥಿತಿ ಇಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ನಡುವೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟು, ಗುಣಮುಖನಾಗುತ್ತಿರುವ ಕಾನೂರಿನ ಭರತ್‌ ಅವರ ತಂದೆ ತಿಮ್ಮಪ್ಪ ಅವರಲ್ಲೂ ಜ್ವರ ಕಾಣಿಸಿಕೊಂಡಿದೆ. ಅವರ ರಕ್ತವನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು ಸೋಮವಾರ ವರದಿ ಲಭಿಸುವ ಸಾಧ್ಯತೆಗಳಿವೆ. ಸಾಗರದ ಆಸ್ಪತ್ರೆಯಲ್ಲಿ ಶಂಕಿತ ಕೆಎಫ್‌ಡಿ ಜ್ವರದಿಂದ ದಾಖಲಾಗಿದ್ದ ಅರಳಗೋಡು ಪಿಎಚ್‌ಸಿಯ ಹಾಳ್ತೋಟದ ಕೋಮರಾಜು ಅವರಲ್ಲಿ ಕೆಎಫ್‌ಡಿ ವೈರಸ್‌ ಇಲ್ಲ ಎಂದು ಲ್ಯಾಬ್‌ ವರದಿಗಳು ದೃಢಪಡಿಸಿವೆ.

ಕೆರೆ ಹಬ್ಬದ ಸಂಭ್ರಮದಲ್ಲಿ ಪಕ್ಕಕ್ಕೆ ಸರಿದ ಮಂಗನ ಕಾಯಿಲೆಯ ವಿಚಾರ: ಈ ವರ್ಷದಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚದರವಳ್ಳಿ ಸಮೀಪದ ಶೀಗೇಮಕ್ಕಿಯ ಹೂವಮ್ಮ ಶನಿವಾರ ಮಧ್ಯಾಹ್ನ 12-30ರ ಸಮಯದಲ್ಲಿಯೇ ಮಣಿಪಾಲ್‌ನಲ್ಲಿ ಸಾವನ್ನಪ್ಪಿದ್ದರೂ ನಗರದಲ್ಲಿ ಶಾಸಕ ಎಚ್‌. ಹಾಲಪ್ಪ ನೇತೃತ್ವದಲ್ಲಿ ನಡೆದಿದ್ದ ಕೆರೆ ಹಬ್ಬದ ಸಂಭ್ರಮಕ್ಕೆ ಮುಕ್ಕು ಬರಬಾರದು ಎಂಬ ಕಾರಣಕ್ಕಾಗಿಯೇ ಸಾವಿನ ಸುದ್ದಿಯನ್ನು ಪ್ರಚಾರ ಮಾಡಲಿಲ್ಲವೇ ಎಂಬ ಅನುಮಾನ ಸಾಗರದ ಹಲವರನ್ನುಕಾಡುವಂತಾಗಿದೆ.

Advertisement

ಶನಿವಾರ ಮಧ್ಯಾಹ್ನ ತಾಲೂಕಿನಾದ್ಯಂತ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಶಾಸಕ ಹಾಲಪ್ಪ ಅಲ್ಲದೆ ಸಂಸದ ಬಿ.ವೈ. ರಾಘವೇಂದ್ರ ಕೂಡ ಪಾಲ್ಗೊಂಡಿದ್ದರು. ಎಡಜಿಗಳೇಮನೆ ಗ್ರಾಪಂನ ಕರ್ಕಿಕೊಪ್ಪದಲ್ಲಿ, ನಗರದ
ಸಂಜಯ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ, ಗಾಂಧಿಮೈದಾನದ ನಾದವಿಂಶತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಅವರ ಮಾತುಗಳ ಯಾವುದೇ
ಸಂದರ್ಭದಲ್ಲಿ ತಾಲೂಕಿನ ಈ ದುರಂತದ ವಿಚಾರ ಪ್ರಸ್ತಾಪಗೊಳ್ಳಲಿಲ್ಲ. ಬಿಜೆಪಿ ಕಾರ್ಯಕರ್ತರು ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಸುದ್ದಿಗೆ ಜಾಗ ಸಿಕ್ಕಲೇ ಇಲ್ಲ. ಶಾಸಕ ಹಾಲಪ್ಪ ಅವರು ಮುತುವರ್ಜಿಯಿಂದ ಆಯೋಜಿಸಿರುವ ಕೆರೆ ಹಬ್ಬದ ಸಂದರ್ಭದಲ್ಲಿ ಇಂತಹ ಸೂತಕದ ಸುದ್ದಿ ಸಂಭ್ರಮಕ್ಕೆ ಮುಕ್ಕು ತರಬಹುದು ಎಂಬ ಆತಂಕ ಕಾಡಿದ್ದರಿಂದಲೇ ಅದನ್ನು ನಾಜೂಕಾಗಿ ನಿರ್ವಹಿಸಲಾಯಿತು ಎಂಬ ವಿಶ್ಲೇಷಣೆ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next