ಬೆಳಗಾವಿ: ಸಿಆರ್ಪಿಎಫ್ ವಿಂಗ್ ಕಮಾಂಡೋ ಸಚಿನ್ ಸಾವಂತ್ ಅವರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಸದಲಗಾ ಠಾನೆ ಇನ್ಸಪೆಕ್ಟರ್ ಅನಿಲ್ ಕುಂಬಾರ ಅವರನ್ನು ಬುಧವಾರ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಕಮಾಂಡೋ ಸಚಿನ್ ಹಾಗೂ ಪೊಲೀಸರ ಮಧ್ಯೆ ನಡೆದ ಗಲಾಟೆ ಪ್ರಕರಣ ತೀವ್ರ ತಾರಕಕ್ಕೇರುತ್ತಿದೆ.
ಜೈಲು ಸೇರಿದ್ದ ಯೋಧ ಜಾಮೀನಿನ ಮೇಲೆ ಬಿಡುಗಡೆಗೊಂಡರೂ ಸಿಆರ್ಪಿಎಫ್ ಹಾಗೂ ಪೊಲೀಸರ ನಡುವಿನ ಶೀತಲ ಸಮರ ಇನ್ನೂ ನಿಂತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಠಾಣೆಯ ಪಿಎಸ್ಐ ಅವರನ್ನು ಅಮಾನತು ಮಾಡುವ ಮೂಲಕ ಪ್ರಕರಣಕ್ಕೆ ತೇಪೆ ಹಚ್ಚುವ ಕಾರ್ಯ ನಡೆದಿದೆ.
ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದ್ದರು. ಅದರಂತೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರನ್ನು ತನಿಖೆ ನಡೆಸಲು ಆದೇಶಿಸಲಾಗಿತ್ತು. ತನಿಖೆ ಪ್ರಾರಂಭಿಸಿದ ಕೆಲವೇ ಗಂಟೆಯಲ್ಲಿಯೇ ಪಿಎಸ್ಐ ಅಮಾನತು ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.