Advertisement

25 ವರ್ಷಗಳ ಅನಂತರ ಒಂದಾದ ಎಸ್‌ಎಡಿ-ಬಿಎಸ್‌ಪಿ!

02:56 AM Jun 14, 2021 | Team Udayavani |

ಇನ್ನೇನು ವರ್ಷದಲ್ಲಿ ಪಂಜಾಬ್‌ ನಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಈಗಲೇ ಇದಕ್ಕಾಗಿ ಸಿದ್ಧತೆಗಳೂ ಆರಂಭವಾಗಿವೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿಚಾರದಲ್ಲಿ ಶಿರೋಮಣಿ ಅಕಾಲಿ ದಳ(ಎಸ್‌ಎಡಿ) ಇಟ್ಟ ನಿಧಾನಗತಿಯ ಹೆಜ್ಜೆಯಿಂದಾಗಿ ಒಂದಷ್ಟು ಪೆಟ್ಟು ಬಿದ್ದಿದ್ದು, ಇದನ್ನು ಸರಿದೂಗಿಸಿಕೊಳ್ಳಲು ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರ ಪಕ್ಷ ಹೆಣಗಾಡುತ್ತಿದೆ. ಅತ್ತ ಕಾಂಗ್ರೆಸ್‌ ನಲ್ಲಿ ಎಲ್ಲವೂ ಸರಿ ಇಲ್ಲ. ಹಾಲಿ ಮುಖ್ಯಮಂತ್ರಿ ಕ್ಯಾ| ಅಮರೀಂದರ್‌ ಸಿಂಗ್‌ ವಿರುದ್ಧ ನವಜೋತ್‌ ಸಿಂಗ್‌ ಸಿಧು ಅವರು ಬಂಡಾಯವೆದ್ದಿದ್ದು, ಇದರ ಉಪಶಮನಕ್ಕೆ ಹೈಕಮಾಂಡ್‌ ಪ್ರಯತ್ನಿಸುತ್ತಲೇ ಇದೆ. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಪಂಜಾಬ್‌ಗ ತೆರಳಿ ಒಳಜಗಳವನ್ನು ಶಮನ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೂ ಇನ್ನೂ ಎಲ್ಲವೂ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಈ ಎಲ್ಲದರ ನಡುವೆ ಪಂಜಾಬ್‌ ನಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಯೊಂದು ಇಡೀ ದೇಶದ ಗಮನ ಸೆಳೆದಿದೆ. 1996ರ ಬಳಿಕ ರಾಜ್ಯದಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷಗಳು ಒಂದಾಗಿವೆ. ಇದು ಒಂದು ರೀತಿಯಲ್ಲಿ ಸಿಕ್ಖರು ಮತ್ತು ದಲಿತ ಸಮುದಾಯಗಳನ್ನು ಗುರಿಯಲ್ಲಿ ಇರಿಸಿಕೊಂಡು ಮಾಡಿಕೊಳ್ಳಲಾಗಿರುವ ಹೊಂದಾಣಿಕೆ ಎಂದೇ ಬಿಂಬಿಸಲಾಗುತ್ತಿದೆ.

1996ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಎಡಿ ಮತ್ತು ಬಿಎಸ್‌ಪಿ ಒಂದಾಗಿ ಸ್ಪರ್ಧೆ ಮಾಡಿದ್ದವು. ಆಗ ಒಟ್ಟು 13ರಲ್ಲಿ 11 ಕ್ಷೇತ್ರಗಳನ್ನು ಈ ಪಕ್ಷಗಳೇ ಗೆದ್ದಿದ್ದವು. ಆದರೆ 1997ರಲ್ಲಿ ಈ ಮೈತ್ರಿ ಕೂಟ ಮುರಿದು ಬಿದ್ದಿದ್ದು, ಎಸ್‌ಎಡಿ ಮತ್ತು ಬಿಜೆಪಿ ಒಂದಾಗಿದ್ದವು. ಇತ್ತೀಚೆಗಷ್ಟೇ ಈ ಎರಡೂ ಪಕ್ಷಗಳು ಮೈತ್ರಿ ಮುರಿದುಕೊಂಡಿವೆ.

ಈಗ 2022ರ ಚುನಾವಣೆಗಾಗಿ ಎಸ್‌ಎಡಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು, ಒಟ್ಟಾರೆ 117 ಕ್ಷೇತ್ರಗಳಲ್ಲಿ 20ರಲ್ಲಿ ಬಿಎಸ್‌ಪಿ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳಲ್ಲಿ ಶಿರೋಮಣಿ ಅಕಾಲಿ ದಳ ಸ್ಪರ್ಧೆ ಮಾಡಲಿದೆ ಎಂಬ ಒಪ್ಪಂದಕ್ಕೆ ಬರಲಾಗಿದೆ.
ರಾಜಕೀಯ ಪಂಡಿತರ ಪ್ರಕಾರ, ಈ ಒಪ್ಪಂದ ಪಂಜಾಬ್‌ನ ರಾಜಕೀಯ ಭವಿಷ್ಯವನ್ನೇ ಬದಲಿಸುವ ಸಾಧ್ಯತೆ ಇದೆ. ಅಂದರೆ, ಸಿಕ್ಖರು ಮತ್ತು ದಲಿತರು ಒಂದಾದರೆ ಇಲ್ಲಿನ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಬರಬಹುದು. ಇದಕ್ಕೆ ಸಾಕ್ಷಿ 1996ರ ಲೋಕಸಭೆ ಚುನಾವಣೆ. ಆಗ ಬಿಎಸ್‌ಪಿಯ ಪರಮೋಚ್ಚ ನಾಯಕ ಕಾನ್ಶಿಧೀ ರಾಮ್‌ ಮತ್ತು ಎಸ್‌ಎಡಿಯ ಪರಮೋಚ್ಚ ನಾಯಕ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ಜತೆಗೂಡಿ ಮೈತ್ರಿ ಮಾಡಿಕೊಂಡಿದ್ದರು. ಸಿಕ್ಖರು ಮತ್ತು ದಲಿತರು ಒಟ್ಟಾದ ಕಾರಣದಿಂದ ಭರ್ಜರಿ ಫ‌ಲಿತಾಂಶ ಬಂದಿತ್ತು. ಅದೇ ಮಾನದಂಡವನ್ನು ಇರಿಸಿಕೊಂಡು ಈಗ ಮತ್ತೆ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.

ಲೆಕ್ಕಾಚಾರ ಹೇಗೆ?
ದೇಶದಲ್ಲಿ ಬಹಳಷ್ಟು ಜನರಿಗೆ ತಿಳಿಯದ ವಿಚಾರವೊಂದಿದೆ; ಪಂಜಾಬ್‌ ಎಂದರೆ ಸಾಕು, ಅಲ್ಲಿ ಸಿಕ್ಖರೇ ಹೆಚ್ಚು ಎಂದೇ ಎಲ್ಲರೂ ಭಾವಿಸುತ್ತಾರೆ. ಒಂದರ್ಥದಲ್ಲಿ ಇದು ನಿಜವೇ. ಆದರೆ ಬೇರೆ ರಾಜ್ಯಗಳಿಗಿಂತ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಇದ್ದಾರೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲದ ವಿಚಾರ. ಹೌದು, ಇಲ್ಲಿ ಸುಮಾರು ಶೇ.32ರಷ್ಟು ದಲಿತರಿದ್ದಾರೆ. ಇನ್ನು ಶಿರೋಮಣಿ ಅಕಾಲಿ ದಳ ಜಾಟ್‌ ಸಿಕ್ಖರಲ್ಲಿ ಹಿಡಿತ ಸಾಧಿಸಿದೆ. ಅಷ್ಟೇ ಅಲ್ಲ, ಈ ಮೈತ್ರಿ ಒಂದು ರೀತಿಯಲ್ಲಿ ಪಂಥವಾದ ಮತ್ತು ಅಂಬೇಡ್ಕರ್‌ ವಾದದ ಸಮ್ಮಿಶ್ರಣ ಇದ್ದಂತೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.

Advertisement

2017ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಎಡಿ ಮತ್ತು ಬಿಎಸ್‌ಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಎರಡೂ ಕೆಟ್ಟ ಸೋಲು ಅನುಭವಿಸಿದ್ದವು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದರೂ ಹೆಚ್ಚಿನ ಮತ ಪ್ರಮಾಣ ಗಳಿಸುವಲ್ಲಿ ಎರಡೂ ಪಕ್ಷಗಳು ಯಶಸ್ವಿಯಾಗಿದ್ದವು. ಅಂದರೆ 2017ರಲ್ಲಿ ಎಸ್‌ಎಡಿ ಮತ್ತು ಬಿಎಸ್‌ಪಿ ಅವರ ಮತಗಳನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಜತೆಗೆ ದಲಿತರು ಕಾಂಗ್ರೆಸ್‌ ಕಡೆಗೆ ವಾಲಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಎಡಿ ತನ್ನ ಸಾಂಪ್ರಾದಾಯಿಕ ಮತಗಳನ್ನು ಒಂದಷ್ಟು ಸೆಳೆಯುವಲ್ಲಿ ಮತ್ತು ಬಿಎಸ್‌ಪಿ ತನ್ನ ಸಾಂಪ್ರದಾಯಿಕ ಮತಗಳಾದ ದಲಿತರ ವೋಟ್‌ ಸೆಳೆಯುವಲ್ಲಿ ಒಂದಷ್ಟು ಯಶಸ್ವಿಯಾಗಿದ್ದವು. ಇದನ್ನೇ ಗಮನದಲ್ಲಿಇರಿಸಿಕೊಂಡು ಎರಡೂ ಪಕ್ಷಗಳು ಒಗ್ಗೂಡಿವೆ. ವಿಶೇಷವಾಗಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಬಿಎಸ್‌ಪಿಗೆ ಬಿಟ್ಟು ಕೊಡಲಾಗಿದೆ. ಉಳಿದ ಕಡೆಗಳಲ್ಲಿ ಎಸ್‌ಎಡಿ ಸ್ಪರ್ಧೆ ಮಾಡಲಿದೆ. ಈ ಸಾಮಾಜಿಕ ಹೊಂದಾಣಿಕೆಯಿಂದಾಗಿ ತಮ್ಮ ತಮ್ಮ ಸಾಂಪ್ರದಾಯಿಕ ಮತಗಳು ಚದುರಿ ಹೋಗಲ್ಲ ಎಂಬುದು ಈ ಎರಡೂ ಪಕ್ಷಗಳ ವಿಶ್ವಾಸ.

ತೇಪೆ ಹಚ್ಚುವ ಯತ್ನ
ಇನ್ನು ಶಿರೋಮಣಿ ಅಕಾಲಿ ದಳ ಏನಾದರೂ ಆಗಲಿ, ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಠ ತೊಟ್ಟಿದೆ. ಅಲ್ಲದೆ ಈಗಾಗಲೇ ಪಕ್ಷಕ್ಕೆ ಬಿದ್ದಿರುವ ಏಟನ್ನು ಸರಿಪಡಿಸಿಕೊಳ್ಳಲೂ ಅದು ಮುಂದಾಗಿದೆ. ಅಂದರೆ, ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಮಾಡಿದಾಗ, ಶಿರೋಮಣಿ ಅಕಾಲಿ ದಳ ಎನ್‌ಡಿಎ ಭಾಗವಾಗಿತ್ತು. ಆಗ ಈ ಕೃಷಿ ಕಾಯ್ದೆಗಳನ್ನು ಅತ್ಯುಗ್ರವಾಗಿ ವಿರೋಧಿಸಲಿಲ್ಲ ಎಂಬ ಆರೋಪ ಎಸ್‌ಎಡಿ ಮೇಲಿದೆ. ಅನಂತರ ರೈತರು ಪ್ರತಿಭಟನೆ ಆರಂಭಿಸಿದ ಮೇಲೆ ಎಸ್‌ಎಡಿಯಿಂದ ಸಚಿವರಾಗಿದ್ದ ಹರ್‌ಸೀಮ್ರತ್‌ ಕೌರ್‌ ರಾಜೀನಾಮೆ ಕೊಟ್ಟರು ಎಂದು ಹೇಳಲಾಗುತ್ತಿದೆ. ಇದನ್ನು ಸರಿಪಡಿಸಿಕೊಳ್ಳುವ ಸಲುವಾಗಿಯೇ ಎಸ್‌ಎಡಿ ರೈತರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಬೆಂಬಲ ಕೊಟ್ಟಿದೆ. ಈಗಲೂ ಕೊಡುತ್ತಿದೆ. ಆದರೂ ತನ್ನ ಮೇಲಿನ ಅಪಾದನೆಗಳಿಂದ ಹೊರಬರಲು ಬೇರೆಯದ್ದೇ ಆದ ರೀತಿಯಲ್ಲಿ ಹೊಂದಾಣಿಕೆ ಬೇಕು. ಹೀಗಾಗಿ ದಲಿತ ಮತಗಳ ಮೇಲೆ ಕಣ್ಣು ಹಾಕಿ ಬಿಎಸ್‌ಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಕಾಂಗ್ರೆಸ್‌ ನಲ್ಲೂ ಒಳಜಗಳ
ಅತ್ತ ಶಿರೋಮಣಿ ಅಕಾಲಿ ದಳ ಮತ್ತು ಬಿಎಸ್‌ಪಿ ಜತೆಗೂಡಿ ಚುನಾವಣೆಗೆ ಹೋಗಲು ಸಿದ್ಧವಾಗುತ್ತಿದ್ದರೆ, ಇತ್ತ ಅಧಿಕಾರದಲ್ಲಿರುವ ಕಾಂಗ್ರೆಸ್‌ ನಲ್ಲಿ ಬೇರೆಬೇರೆ ಬೇಗುದಿಗಳು ಕಾಣಿಸಿಕೊಂಡಿವೆ. ಬೆಹºಲ್‌ ಕಲಾನ್‌ ಮತ್ತು ಕೊಟ್‌ ಕಪೂರಾ ಫೈರಿಂಗ್‌ ಕೇಸಿನಲ್ಲಿ ಸರಕಾರಕ್ಕೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನಲ್ಲಿ ಹಿನ್ನಡೆಯಾಗಿದೆ. ಇಲ್ಲಿ ವಿಶೇಷ ತನಿಖಾ ತಂಡದ ವರದಿಯನ್ನು ಪಕ್ಕಕ್ಕೆ ಸರಿಸಿರುವ ಹೈಕೋರ್ಟ್‌, ಹೊಸದಾಗಿ ಎಸ್‌ಐಟಿ ರಚಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ. ಹೈಕೋರ್ಟ್‌ನ ಆದೇಶ ಕಾಂಗ್ರೆಸ್‌ನೊಳಗೇ ಬೇಗುದಿಗೆ ಕಾರಣವಾಗಿದ್ದು, ಇಬ್ಬರು ಸಚಿವರು ರಾಜೀನಾಮೆಗೂ ಮುಂದಾಗಿದ್ದರು.
ಇದರ ನಡುವೆಯೇ ಪಂಜಾಬ್‌ ಸರಕಾರಕ್ಕೆ ನವಜೋತ್‌ ಸಿಂಗ್‌ ಸಿಧು ಅವರೂ ಕಾಡುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಬಹಿರಂಗವಾಗಿಯೇ ಟೀಕೆ ಮಾಡುತ್ತಿರುವ ಇವರು, ಸರಕಾರದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಫೈರಿಂಗ್‌ ಕೇಸಿನಲ್ಲಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಶಿರೋಮಣಿ ಅಕಾಲಿ ದಳದ ಬಾದಲ್‌ ಕುಟುಂಬ ಸದಸ್ಯರನ್ನು ಕಾಪಾಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಂಜಾಬ್‌ಗ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ತಂಡವೊಂದನ್ನು ಕಳುಹಿಸಿದ್ದಾರೆ. ಇವರು ಹಲವು ಸಚಿವರು, ಶಾಸಕರು ಸೇರಿ 150 ಮಂದಿಯನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಸದ್ಯದಲ್ಲೇ ಇವರು ಹೈಕಮಾಂಡ್‌ಗೆ ವರದಿಯನ್ನೂ ನೀಡಲಿದ್ದಾರೆ.

ಅಷ್ಟೇ ಅಲ್ಲ, ಮುಂದಿನ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ನವಜೋತ್‌ ಸಿಂಗ್‌ ಸಿಧುಗೆ ಸರಕಾರದಲ್ಲಿ ಸ್ಥಾನಮಾನ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಆದರೆ ಸದ್ಯಕ್ಕೆ ಇವ್ಯಾವುದೂ ಈಡೇರಿಲ್ಲ. ಕಾಂಗ್ರೆಸ್‌ನಲ್ಲಿನ ಈ ಗೊಂದಲಗಳೇ ಮುಂದಿನ ಚುನಾವಣೆಯಲ್ಲಿ ಕಂಟಕವಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ ಎಂದೂ ಹೇಳಲಾಗಿದೆ.

– ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next