Advertisement

ಪರರಿಗಾಗಿ ತ್ಯಾಗವೇ ಬದುಕಿನ ಶ್ರೇಷ್ಠತೆ

10:42 AM Mar 02, 2020 | Suhan S |

ಹುಬ್ಬಳ್ಳಿ: ಒಬ್ಬರಿಗಾಗಿ ಇನ್ನೊಬ್ಬರು ಬದುಕಬೇಕು. ಇನ್ನೊಬ್ಬರಿಗಾಗಿ ತ್ಯಾಗ ಮಾಡುವುದೇ ಬದುಕಿನ ಶ್ರೇಷ್ಠತೆ ಎಂಬುದನ್ನೇ ಭಾರತೀಯ ಸಂಸ್ಕೃತಿ, ಪರಂಪರೆ ಕಲಿಸುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

Advertisement

ಗೋಕುಲದ ರೇವಡಿಹಾಳ ರಸ್ತೆಯ ಬಸವಂತಪ್ಪ ಹೊಸಮನಿ ಬಂಧುಗಳ ಹೊಲದಲ್ಲಿ ಸ್ಥಳೀಯ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯಿಂದ ಒಂದು ತಿಂಗಳ ಕಾಲ ಆಯೋಜಿಸಲಾದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದ ಆತ್ಮ ಆಧ್ಯಾತ್ಮವಾಗಿದೆ. ಭಾರತೀಯ ಮತ್ತು ಸನಾತನ ಸಂಸ್ಕೃತಿಯಲ್ಲಿ ಧರ್ಮಕ್ಕೆ ಸೀಮಿತವಾದ ಅರ್ಥ ನೀಡಿಲ್ಲ. ಜೀವನದ ಪದ್ಧತಿಯೇ ಧರ್ಮವಾಗಿದೆ. ಧರ್ಮ ಮತ್ತು ಪೂಜಾ ಪದ್ಧತಿಗೂ ವ್ಯತ್ಯಾಸವಿದೆ. ನಾವು ಮನೆಯಲ್ಲಿ ಮಾಡುವ ಪೂಜಾ ಪದ್ಧತಿ ವಿಭಿನ್ನವಾಗಿರಬಹುದು. ಆದರೆ ಅಂತಿಮವಾಗಿ ಧರ್ಮ ಒಂದೇ ಎಂದರು.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸದಿಂದ ಮಾನಸಿಕ ಸುಖ, ನೆಮ್ಮದಿ ಹೆಚ್ಚಾಗಿದೆ. ಬಡತನ ಇರಬಹುದು. ಕೆಲವರಿಗೆ ಒಂದೊತ್ತಿನ ಊಟ ಇರಲಿಕ್ಕಿಲ್ಲ. ಆದರೆ ಎಂದೂ ಅಪರಾಧ ಪ್ರವೃತ್ತಿಗೆ ಹೋಗಲ್ಲ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಅಲ್ಲಿಯಷ್ಟು ಪೊಲೀಸ್‌ ಠಾಣೆ, ಪೊಲೀಸರು ಭಾರತದಲ್ಲಿ ಇಲ್ಲ. ಜನಸಂಖ್ಯೆಗೆ ಹೋಲಿಸಿದರೆ ಅಪರಾಧ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಕುಟುಂಬದಲ್ಲಿ ಮಹಿಳೆಯು ಮಕ್ಕಳಿಗೆ ಸತತವಾಗಿ ಸಂಸ್ಕಾರ ಮೂಲಕ ಭಯ, ಭಕ್ತಿ ನೀಡುವುದೆ ಕಾರಣ ಎಂದು ಹೇಳಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಪ್ರಸ್ತುತ ಮಠ-ಮಾನ್ಯಗಳು ಸೇರಿದಂತೆ ಎಲ್ಲರೂ ಸರಕಾರದಿಂದ ಏನಾದರೂ ಪಡೆಯಬೇಕೆಂಬ ನಿರೀಕ್ಷೆ ಮಾಡುತ್ತಾರೆ. ಆದರೆ ವಿಜಯಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಜ್ಞಾನ ಮಂದಿರಕ್ಕೆ ಸರಕಾರವು 10 ಕೋಟಿ ರೂ. ಅನುದಾನ ನೀಡಲು ಮುಂದಾಗಿದ್ದರೂ ಸಿದ್ದೇಶ್ವರ ಶ್ರೀಗಳು ಅದು ಬೇಡ. ಭಕ್ತರೇ ನನಗೆ ಎಲ್ಲ. ಅವರೇ ಅದನ್ನು ನೆರವೇರಿಸುತ್ತಾರೆಂದು ಹೇಳಿ ತಡೆದರು. ಅಂತಹ ಮಹಾನ್‌ ನಡೆದಾಡುವ ದೇವರು ಅವರು. ನಾವು ಅವರ ಸಂದೇಶಗಳನ್ನು ನಮ್ಮ ಪ್ರತಿದಿನದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ಧೂಪ ಹಾಕುವ ಮೂಲಕ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಜಗತ್ತಿನಲ್ಲಿ ಇಂದು ಎರಡು ಸೂರ್ಯಗಳಿವೆ. ಒಂದು ಭೌತಿಕ ಶರೀರಕ್ಕೆ ಬೇಕಾದ ಆಕಾಶದಿಂದ ಉದಯಿಸುವ ಭೌತ ಸೂರ್ಯ. ಇನ್ನೊಂದು ಮಾನವನ ಅಂತರಂಗ ಶುದ್ಧಿಗಾಗಿ ಅವಶ್ಯವಾದ ಜ್ಞಾನ ಸೂರ್ಯ. ಸಿದ್ದೇಶ್ವರ ಶ್ರೀಗಳು ನಾಡಿನ ಜ್ಞಾನ ಸೂರ್ಯರಾಗಿದ್ದು, ಅವರ ಆಗಮನ ಇಡೀ ನಾಡಿಗೆ ಚೈತನ್ಯ ತುಂಬುತ್ತದೆ. ಅವರು ಜಗತ್ತಿನ ಬಹುದೊಡ್ಡ ತತ್ವಜ್ಞಾನಿಗಳು ಹಾಗೂ ಭಾರತದ ಋಷಿಮುನಿಗಳು, ಮಹಾತತ್ವಜ್ಞಾನಿಗಳ ಸಾಕಾರಮೂರ್ತಿ ಆಗಿದ್ದಾರೆ. ಅವರ ಪ್ರತಿ ಸಂದೇಶವು ಜಗತ್ತಿನ ಪ್ರತಿ ತತ್ವಜ್ಞಾನಿಗಳ ಮಾತಾಗಿದೆ ಎಂದರು.

ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಮಾತನಾಡಿ, ಬೇಕು ಎಂಬುದಕ್ಕಿಂತ ಬೇಡ ಎನ್ನುವುದನ್ನು ನಾವು ಮೊದಲು ಕಲಿಯಬೇಕಾಗಿದೆ. ಬೇಕು ಬೇಕು ಎನ್ನುತ್ತ ಸಾಗಿದರೆ ಅದು ವಿನಾಶದತ್ತ ಸಾಗುತ್ತದೆ. ಈ ಭೂಮಿಯಲ್ಲಿ ಜಲ, ಅನ್ನ, ಸುಭಾಷಿತ ರತ್ನಗಳಾಗಿದ್ದು, ಅವನ್ನು ವ್ಯರ್ಥ ಮಾಡಬೇಡಿ. ಇವುಗಳಿಂದ ವಂಚಿತರಾಗಬೇಡಿರಿ ಎಂದರು.

ಗೋಕುಲ ದಯಾನಂದ ಆಶ್ರಮದ ಚಿದ್ರೂಪಾನಂದ ಸ್ವಾಮೀಜಿ, ಅಕ್ಕಿಹೊಂಡ ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ, ಗದಗ ಶ್ರೀ ಶಿವಾನಂದ ಬೃಹನ್ಮಠದ ನೂತನ ಪೀಠಾಧಿಪತಿ ಮಜ್ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯ ಜನನ-ಮರಣದಿಂದ ಮುಕ್ತನಾಗಬೇಕಾದರೆ ಸಂತರ ಆಶೀರ್ವಾದ ಪಡೆಯಬೇಕು. ಅವರ ಪ್ರವಚನ ಕೇಳಬೇಕು. ಆಧ್ಯಾತ್ಮ ಸಂಪತ್ತು ಪಡೆಯಬೇಕು. ಅಜ್ಞಾನ ದೂರಮಾಡಿ ಸದ್ವಿಚಾರ, ಭಗವಂತನ ಚಿಂತನೆ ಮಾಡಬೇಕು. ಚಂಚಲ ಮನಸ್ಸು ನಿಯಂತ್ರಿಸಲ ಸತ್ಸಂಗ, ಮಹಾತ್ಮರ ಪ್ರವಚನ ಆಲಿಸುವುದು ಮುಖ್ಯ ಎಂದರು.

ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಗದಗ ಶ್ರೀ ಶಿವಾನಂದ ಬೃಹನ್ಮಠದ ಮಜ್ಜಗದ್ಗುರು ಅಭಿನವ ಶಿವಾನಂದ ಸ್ವಾಮೀಜಿ, ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ, ರಾಯನಾಳ ವಿರಕ್ತಮಠದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಹುಲ್ಯಾಳ ಶ್ರೀ ಮಲ್ಲಿಕಾರ್ಜುನ ಗುರುದೇವ ತಪೋವನದ ಹರ್ಷಾನಂದ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಮಾಜಿ ಶಾಸಕರಾದ ಡಿ.ಆರ್‌. ಪಾಟೀಲ, ಪಿ.ಡಿ. ಪಾಟೀಲ, ರಾಜಣ್ಣ ಕೊರವಿ ಮೊದಲಾದವರಿದ್ದರು.

ರಾಜೇಶ್ವರಿ ಪಾಟೀಲ ಪ್ರಾರ್ಥಿಸಿದರು. ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಅರವಿಂದ ಬೆಲ್ಲದ ಸ್ವಾಗತಿಸಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ವಂದಿಸಿದರು.

ಶಬ್ದಗಳು ತನ್ನದೆಯಾದ ಮಹತ್ವ ಪಡೆದಿವೆ. ಅದರ ಜೊತೆ ಅರ್ಥ ಜೋಡಿಸಿದರೆ ಭಾಷೆ ಆಗುತ್ತದೆ. ಅದಕ್ಕೆ ಭಾವನೆಗಳನ್ನು ಜೋಡಿಸಿದರೆ ಅದು ಬದುಕಾಗುತ್ತದೆ. ಆ ಬದುಕಿನ ಸವಿ ಸವಿಯಬೇಕೆಂದರೆ ಸಿದ್ದೇಶ್ವರ ಶ್ರೀಗಳ ವಾಣಿಯಿಂದ ಮಾತ್ರ ಸಾಧ್ಯ. –ಬಸವರಾಜ ಬೊಮ್ಮಾಯಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next