ತಿರುವನಂತರಪುರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೇರಳದ ಶಬರಿಮಲೆ ಇಂದು ಸಂಜೆಯಿಂದ ಮತ್ತೆ ಭಕ್ತರಿಗಾಗಿ ತೆರಲಿದೆ. ಇನ್ನು ಎರಡು ತಿಂಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶವಿದ್ದು, ಇಂದು ಸಂಜೆ ಐದು ಗಂಟೆಗೆ ದೇವಾಲಯದ ಗರ್ಭಗುಡಿಯ ದ್ವಾರವನ್ನು ತೆರೆಯಲಾಗುತ್ತದೆ.
ಅರ್ಚಕ ಸುಧೀರ್ ನಂಬೂದರಿ ಅವರು ದೇವರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ನಂತರ ದರ್ಶನ ಆರಂಭವಾಗಲಿದೆ. ಇಂದು ಸ್ಥಳೀಯರು ಮತ್ತು ದೇವಾಲಯದ ಸಿಬ್ಬಂದಿಗೆ ಮಾತ್ರ ದರ್ಶನದ ಅವಕಾಶವಿದ್ದು, ನಾಳೆಯಿಂದ ಯಾತ್ರಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಈ ಬಾರಿ ಕೋವಿಡ್ ಕಾರಣದಿಂದ ಬಹಳಷ್ಟಯ ಬದಲಾವಣೆಗಳನ್ನು ಮಾಡಲಾಗಿದೆ. ಶಬರಿಮಲೆಗೆ ಬರುವ ಯಾತ್ರಿಕರು ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕಿದ್ದು, ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಇರುತ್ತದೆ.
ಇದನ್ನೂ ಓದಿ:ಹೊಳೆ ಬದಿ ಹಣತೆ ಹಚ್ಚಿ ದೀಪಾವಳಿ: ಜನಪ್ರತಿನಿಧಿಗಳ ಗಮನ ಸೆಳೆಯಲು ವಿನೂತನ ಪ್ರತಿಭಟನೆ
ದರ್ಶನಕ್ಕಾಗಿ ವರ್ಚುಯಲ್ ಕ್ಯೂ ವ್ಯವಸ್ಥೆ ಮಾಡಲಾಗಿದೆ. ಕೇರಳ ಸರ್ಕಾರದಿಂದ ನೀಳಕ್ಕಲ್ ಮತ್ತು ಪಂಪಾದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ತೆರೆಯಲಾಗಿದೆ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಹೇಳಲಾಗಿದೆ.
ಶಬರಿಮಲೆಯಲ್ಲಿ ಈ ಹಿಂದೆ ಪ್ರತಿದಿನ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಿದ್ದರು. ಈ ಬಾರಿ ಕೋವಿಡ್ ಕಾರಣದಿಂದ ಬಹಳಷ್ಟು ನಿಯಮಗಳನ್ನು ಪಾಲಿಸಬೇಕಾಗಿದೆ. ಭಕ್ತರ ಸಂಖ್ಯೆಗೂ ನಿಯಂತ್ರಣ ಮಾಡಲು ಸರ್ಕಾರ ನಿರ್ಧರಿಸಿದೆ.