Advertisement

ಹಿಂಸಾಚಾರ: ರಾಜ್ಯಪಾಲರ ಮಧ್ಯಪ್ರವೇಶ

12:30 AM Jan 04, 2019 | Team Udayavani |

ತಿರುವನಂತಪುರ/ಹೊಸದಿಲ್ಲಿ: ಇಬ್ಬರು ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ ಬಳಿಕ ಉಂಟಾದ ಹಿಂಸಾಚಾರದ ಬಗ್ಗೆ ಕೇರಳ ರಾಜ್ಯಪಾಲ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ವರದಿ ಕೇಳಿದ್ದಾರೆ. ಜತೆಗೆ ದೇವರ ಸ್ವಂತ ನಾಡಿನಲ್ಲಿ ಉಂಟಾದ ಅಹಿತಕರ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು ಎಂದು ಟ್ವೀಟ್‌ ಮಾಡಿದ್ದಾರೆ. 
“ಗುರುವಾರದ ಘಟನೆಯ ಬಗ್ಗೆ ಕೇರಳ ಮುಖ್ಯಮಂತ್ರಿಗಳ ಬಳಿ ವರದಿ ಕೇಳಿದ್ದೇನೆ. ಜತೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ, ಹಿಂಸಾತ್ಮಕ ಘಟನೆಗಳ ಬಗ್ಗೆ ತಕ್ಷಣ ಮಾಹಿತಿ ಕೇಳಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. 

Advertisement

ಎನ್‌ಐಎ ತನಿಖೆಗೆ ಒತ್ತಾಯ: ದೇಗುಲ ಪ್ರವೇಶ ವಿಚಾರ ಕೇಂದ್ರ ಗೃಹ ಸಚಿವಾಲಯಕ್ಕೂ ತಲುಪಿದೆ. ಈ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಪಕ್ಷದ ಸಂಸದ ವಿ.ಮುರಳೀಧರನ್‌ ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕನಕದುರ್ಗಾ ಮತ್ತು ಬಿಂದು ಅವರಿಗೆ ನಕ್ಸಲ್‌ ಹಿನ್ನೆಲೆ ಇದೆ. ಈ ಬಗ್ಗೆ ಪರಿಶೀಲನೆ ನಡೆಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. 

ಇಬ್ಬರ ಸಾವು: ಗುರುವಾರ ನಡೆದ ಹರತಾಳ ಸಂಬಂಧಿ ಘಟನೆಗಳಿಗೆ ಇಬ್ಬರು ಬಲಿಯಾಗಿದ್ದಾರೆ. ಪಟ್ಟಣಂತಿಟ್ಟದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡಿದ್ದ ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಚಂದ್ರನ್‌ ಉಣ್ಣಿತ್ತಾನ್‌ (55) ಅಸುನೀಗಿದ್ದಾರೆ. ತಲೆಗೆ ಗಂಭೀರ ಗಾಯಗಳಾದ ಕಾರಣ ಅವರು ಅಸುನೀಗಿದ್ದಾರೆ ಎಂದು ಮರಣೋತ್ತರ ವರದಿ ತಿಳಿಸಿದೆ. ಇನ್ನೊಂದೆಡೆ, ವಯನಾಡ್‌ನಿಂದ ತಿರುವನಂತಪುರದ ಪ್ರಾದೇಶಿಕ ಕ್ಯಾನ್ಸರ್‌  ಕೇಂದ್ರ (ಆರ್‌ಸಿಸಿ)ಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದ 64 ವರ್ಷದ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆ. ಆ್ಯಂಬುಲೆನ್ಸ್‌ ಆಗಮನದಲ್ಲಿ ವಿಳಂಬವಾದದ್ದೇ ಸಾವಿಗೆ ಕಾರಣ ಎಂದು ಅವರ ಬಂಧುಗಳು ದೂರಿದ್ದಾರೆ. 

ಆಪರೇಷನ್‌ ಬ್ರೋಕನ್‌ ವಿಂಡೋ: ಕೇರಳದ ವಿವಿಧ ಭಾಗಗಳಲ್ಲಿ ನಡೆದ ಹಿಂಸಾಚಾರ ಸಂಬಂಧ 745 ಮಂದಿಯನ್ನು ಬಂಧಿಸಲಾಗಿದೆ ಮತ್ತು 628 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ.  ರಾಜ್ಯಾದ್ಯಂತ 559  ಕೇಸು ದಾಖಲಿಸಲಾಗಿದೆ.  ಇನ್ನೂ” ಆಪರೇಷನ್‌ ಬ್ರೋಕನ್‌ ವಿಂಡೋ’ ಶಿರೋನಾಮೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಹಿಂಸಾತ್ಮಕ ಮತ್ತು ಕಾನೂನು ಉಲ್ಲಂಘನೆಯಲ್ಲಿ ತೊಡಗಿದ್ದವರ ಫೋಟೋ ಆಲ್ಬಂ ಒಂದನ್ನು ಸಿದ್ಧಪಡಿಸಲಾಗಿದ್ದು, ಅವರ ಬಂಧನಕ್ಕಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೀನಾಮೆ ಕೊಡಲಿ: ಇಬ್ಬರು ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಅಯ್ಯಪ್ಪ ದೇಗುಲವನ್ನು ಶುದ್ಧೀಕರಿಸುವುದಕ್ಕೆ ಬಾಗಿಲು ಹಾಕಿದ್ದ ಮುಖ್ಯ ತಂತ್ರಿ ಕಂದರಾರು ರಾಜೀವರಾರು ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪು ಪಾಲಿಸಲು ಸಾಧ್ಯವಾಗದೇ ಇದ್ದರೆ ಅವರು ರಾಜೀನಾಮೆ ನೀಡಲಿ ಎಂದಿದ್ದಾರೆ. ರಾಜ್ಯಾದ್ಯಂತ ಉಂಟಾಗಿರುವ ಗಲಭೆಗಳಿಗೆ ಬಿಜೆಪಿ, ಆರ್‌ಎಸ್‌ಎಸ್‌ ಕಾರಣ ಎಂದು ಆರೋಪಿಸಿದ್ದಾರೆ. ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ ಭಾಗಗಳಲ್ಲಿ ಉಂಟಾದ ಹಾನಿ, ದಾಳಿಗಳ ಬಗ್ಗೆ ವಿವರಣೆ ನೀಡಿದರು. ಪಂದಲಂನಲ್ಲಿ ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತ ಚಂದ್ರನ್‌ ಉಣ್ಣಿತ್ತಾನ್‌ ಅಸುನೀಗಿರುವ ಬಗ್ಗೆ ವಿವಾದ ಎಬ್ಬಿಸುವ ಅಗತ್ಯವಿಲ್ಲ. ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ ಎಂದಿದ್ದಾರೆ ಸಿಎಂ ಪಿಣರಾಯಿ. ಮಹಿಳೆಯರ ಪ್ರವೇಶದಿಂದ ಉಂಟಾಗಿರುವ ಹಿಂಸಾಚಾರದಲ್ಲಿ ಭಾಗವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇಬ್ಬರು ಸಾಮಾನ್ಯರಂತೆಯೇ ನಡೆದುಕೊಂಡು ಹೋಗಿ ದ್ದಾರೆಯೇ ಹೊರತು ಅವರನ್ನು ಹೆಲಿಕಾಪ್ಟರ್‌ ಮೂಲಕ ಸನ್ನಿಧಾನಂಗೆ ಇಳಿಸಲಾಗಿರಲಿಲ್ಲ ಎಂದೂ ಹೇಳಿದ್ದಾರೆ. ಜತೆಗೆ ಅವರ ಭೇಟಿ ವೇಳೆ ಅಲ್ಲಿ ಇದ್ದ ಭಕ್ತರು ಯಾರೂ ಪ್ರತಿಭಟಿಸಲಿಲ್ಲ ಎಂದಿದ್ದಾರೆ. 

Advertisement

ಸುಪ್ರೀಂಕೋರ್ಟ್‌ ವಿರುದ್ಧ: ಬಿಜೆಪಿ ಮತ್ತು ಶಬರಿಮಲೆ ಕರ್ಮ ಸಮಿತಿ ಗುರುವಾರ ಕರೆ ನೀಡಿರುವ ಹರತಾಳ ಸುಪ್ರೀಂಕೋರ್ಟ್‌ ಆದೇಶದ ವಿರುದ್ಧವಾಗಿದೆ ಎಂದಿದ್ದಾರೆ ಮುಖ್ಯಮಂತ್ರಿ. ಇದೇ  ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕರೆ ನೀಡುತ್ತಿರುವ ಐದನೇ ಹರತಾಳ ಗುರುವಾರದ್ದು ಎಂದಿದ್ದಾರೆ. 31 ಮಂದಿ ಪೊಲೀಸರಿಗೆ ಗಾಯಗಳಾಗಿವೆ ಎಂದು ಸಿಎಂ ವಿವರಣೆ ನೀಡಿದ್ದಾರೆ. ಹಲವಾರು ಸ್ಥಳಗಳಲ್ಲಿ ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಗುದ್ದಿದ ಬೆಂಗಾವಲು ವಾಹನ: ತಿರುವನಂತಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಮುಖ್ಯಮಂತ್ರಿಯ ಬೆಂಗಾವಲು ವಾಹನವೊಂದು ಯುವ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರು ಮತ್ತು ಕಾಂಗ್ರೆಸ್‌ನ ಇಬ್ಬರಿಗೆ ಗುದ್ದಿಕೊಂಡು ಹೋಗಿದೆ. ಈ ಬಗೆಗಿನ ವಿಡಿಯೋ ಮಲಯಾಳಂ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದೆ. ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಯುಡಿಎಫ್ ಆಯೋಜಿಸಿದ್ದ ಕರಾಳ ದಿನ ಪ್ರಯುಕ್ತ ತಿರುವನಂತಪುರಕ್ಕೆ ಆಗಮಿಸಿ, ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದರು. ಆಗ ವೇಗವಾಗಿಯೇ ಆಗಮಿಸಿದ್ದ ವಾಹನ ಅವರಿಗೆ ಡಿಕ್ಕಿ ಹೊಡೆದು ಮುಂದೆ ತೆರಳಿದೆ.

ಶುದ್ಧೀಕರಣ ಪ್ರಕ್ರಿಯೆಗೆ ಖಂಡನೆ: ದೇಗುಲದಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆಸಿದ ಬಗ್ಗೆ ಆಲ್‌ ಇಂಡಿಯಾ ಡೆಮಾಕ್ರಾಟಿಕ್‌ ವಿಮೆನ್ಸ್‌ ಅಸೋಸಿಯೇಶನ್‌ ಖಂಡನೆ ವ್ಯಕ್ತಪಡಿಸಿದೆ. ಇದರಿಂದಾಗಿ ಮಹಿಳೆಯರು ಅಶುದ್ಧರು ಎಂಬಂತೆ ಬಿಂಬಿಸಿದಂತಾಗಿದೆ ಎಂದು ಅದು ಹೇಳಿಕೆಯಲ್ಲಿ ಆರೋಪಿಸಿದೆ. ಬಲಪಂಥೀಯ ಸಂಘಟ ನೆಗಳು ಇದೇ ಪ್ರಕರಣವನ್ನು ನೆಪವಾಗಿ ಟ್ಟುಕೊಂಡು ಹಿಂಸಾತ್ಮಕ ವಾತಾವರಣ ಸೃಷ್ಟಿಸಲು ಮುಂದಾಗುತ್ತಿವೆ ಎಂದು ಸಂಘಟನೆ ಹೊಸದಿಲ್ಲಿಯಲ್ಲಿ ಆರೋಪಿಸಿದೆ. 

ತಮಿಳುನಾಡಿನಲ್ಲಿ 60 ಮಂದಿ ಬಂಧನ: ಮಹಿಳೆಯರ ಪ್ರವೇಶ ಖಂಡಿಸಿ ತಮಿಳುನಾಡಿನಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಹಿಂದೂ ಮಕ್ಕಳ್‌ ಕಚ್ಚಿ ಸಂಘಟನೆಯ 60 ಮಂದಿ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿಯ ವಕೀಲರ ಘಟಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ. ತಮಿಳುನಾಡಿನ ವಿವಿಧ ಭಾಗಗಳಿಂದ ಕೇರಳಕ್ಕೆ ತೆರಳುವ ಸಾರಿಗೆ ಸಂಸ್ಥೆ ಬಸ್‌ ಸಂಚಾರ ರದ್ದು ಮಾಡಲಾಗಿತ್ತು.

ತುರ್ತು ವಿಚಾರಣೆ ಇಲ್ಲ: ಸುಪ್ರೀಂಕೋರ್ಟ್‌
ಕೇರಳದಲ್ಲಿನ ಗಲಾಟೆ ಬೆನ್ನಲ್ಲೇ ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಶನ್‌ ಪರವಾಗಿ ವಕೀಲ ಪಿ.ವಿ.ದಿನೇಶ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ತ್ವರಿತ ವಿಚಾರಣೆಗೆ ಕೋರ್ಟ್‌ ನಿರಾಕರಿಸಿದೆ. ದೇಗುಲದ ಅರ್ಚಕರು ಮಹಿಳೆಯರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿ ಶುದ್ಧೀಕರಣ ಪ್ರಕ್ರಿಯೆ ಕೈಗೊಂಡಿದ್ದರು. ಇದು ನ್ಯಾಯಾಂಗ ನಿಂದನೆಯಾಗಿದ್ದು, ಅದರ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ನಿಗದಿತ ದಿನ ಅಂದರೆ ಜ.22ರಂದೇ ಅರ್ಜಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿತು. 

ಪತ್ರಕರ್ತರ ಮೇಲೆ ಹಲ್ಲೆ
ತಿರುವನಂತಪುರದಲ್ಲಿರುವ ಕೇರಳ ಸಚಿವಾಲಯದ ಮುಂಭಾಗದಲ್ಲಿ ವರದಿಗಾಗಿ ಆಗಮಿಸಿದ್ದ ಪತ್ರಕರ್ತರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ದ್ದಾರೆ. ಏಷ್ಯಾ ನೆಟ್‌ ಚಾನೆಲ್‌ನ ಪ್ರಕುಲ, ಡೆಕ್ಕನ್‌ ಕ್ರಾನಿಕಲ್‌ ಛಾಯಾಚಿತ್ರಗ್ರಾಹಕ ಪೀತಾಂಬರಂ ಪಯ್ಯರಿ, ಮಾತೃಭೂಮಿ ಚಾನೆಲ್‌ನ ವಿಡಿಯೋ ಗ್ರಾಫ‌ರ್‌ ಬಿಜು ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ಜತೆಗೆ ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಕ್ಯಾಮೆರಾ ಮತ್ತು ಇತರ ವಸ್ತುಗಳನ್ನು ಹಾಳು ಮಾಡಲಾಗಿದೆ.  ಹಲ್ಲೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಜೆಪಿ,ಶಬರಿಮಲೆ ಕರ್ಮ ಸಮಿತಿಯ ಎಲ್ಲ ಕಾರ್ಯಕ್ರಮಗಳನ್ನೂ ಬಹಿಷ್ಕರಿಸಲು ಕೇರಳದ ಮಾಧ್ಯಮಗಳು ನಿರ್ಧರಿಸಿವೆ. ಕೇರಳದ  ಘಟನೆ ಯನ್ನು ದೆಹಲಿ ಪತ್ರಕರ್ತರ ಒಕ್ಕೂಟ ಖಂಡಿಸಿದೆ. 

ಫೋಟೋ ವೈರಲ್‌
ಘಟನೆಯನ್ನು ವರದಿ ಮಾಡಲು ತೆರಳಿದ್ದ ಕೈರಳಿ ಟಿವಿಯ ಮಹಿಳಾ ವಿಡಿಯೋಗ್ರಾಫ‌ರ್‌ ಶಾಜಿಲಾ ಅಲಿ ಫಾತಿಮ್‌ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಇದರ ಹೊರ ತಾಗಿಯೂ ಕಣ್ಣೀರು ಹಾಕುತ್ತಲೇ ವಿಡಿಯೋ ಚಿತ್ರೀಕರಣ ಮಾಡು ತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇಂಥ ಘಟನೆಗಳಿಗೆ ತಾನು ಹೆದರುವುದಿಲ್ಲ. ಕರ್ತವ್ಯ ಮುಂದುವರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. 

ಶಬರಿಮಲೆ ದೇಗುಲಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿ ಕ್ರಾಂತಿ ಮಾಡಿದ್ದೇವೆ ಎಂದು ಸಿಎಂ ಮತ್ತು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಅವರ ಈ ಮಾತುಗಳು ಬಿಜೆಪಿಗೆ ಅಹಿತಕರ ಘಟನೆಗಳನ್ನು ನಡೆಸಲು ಪೂರಕ ವಾತಾವರಣ ನೀಡಿದಂತಾಗಿದೆ.
ರಮೇಶ್‌ ಚೆನ್ನಿತ್ತಲ, ಕೇರಳ ಪ್ರತಿಪಕ್ಷ ನಾಯಕ

ಅಲ್ಲಲ್ಲಿ ಬಿಜೆಪಿ-ಸಿಪಿಎಂ ಕಾರ್ಯಕರ್ತರ ನಡುವೆ ಬಡಿದಾಟ
ತಿರುವನಂತಪುರದಲ್ಲಿ ಪೊಲೀಸ್‌ ಠಾಣೆ ಮೇಲೆ ಬಾಂಬ್‌ ದಾಳಿ
ಮಾಧ್ಯಮ ಸಿಬ್ಬಂದಿ ಮೇಲೆ ಹಲ್ಲೆ
ಘಟನೆಗೆ ಆರ್‌ಎಸ್‌ಎಸ್‌-ಬಿಜೆಪಿ ಕಾರಣ ಎಂದು ಸಿಎಂ ಪಿಣರಾಯಿ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next