Advertisement

ಅವ್ಯವಹಾರ, ಭ್ರಷ್ಟಾಚಾರ, ದುರ್ಬಳಕೆ ತಡೆಗೆ ಕಠಿಣ ಕಾನೂನು : ಸಚಿವ ಎಸ್.ಟಿ. ಸೋಮಶೇಖರ್

06:19 PM Jun 28, 2022 | Team Udayavani |

ದಾವಣಗೆರೆ: ಸಹಕಾರ ಕ್ಷೇತ್ರದಲ್ಲಿನ ಸೊಸೈಟಿ, ಬ್ಯಾಂಕ್‌ಗಳನ್ನೇ ಮುಳುಗಿಸುವಂತಹ ಅವ್ಯವಹಾರ, ಭ್ರಷ್ಟಾಚಾರ, ದುರ್ಬಳಕೆ ತಡೆಗೆ ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

Advertisement

ಮಂಗಳವಾರ ತ್ರಿಶೂಲ್ ಕಲಾಭವನದಲ್ಲಿ ನಡೆದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಕಟ್ಟಡದ ಶಂಕುಸ್ಥಾಪ ನಾ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಮೋಸ, ಅವ್ಯವಹಾರ, ಭ್ರಷ್ಟಾಚಾರ ತಡೆಗೆ ಈಗಿರುವ ಕಾನೂನುಗಳ ಜೊತೆಗೆ ಇನ್ನೂ ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದರು.

ರಾಜ್ಯದಲ್ಲಿ 21 ಡಿಸಿಸಿ, 1 ಅಪೆಕ್ಸ್ ಬ್ಯಾಂಕ್, 5400 ರಷ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 40-50 ಸಂಘಗಳಲ್ಲಿ ಮೋಸ, ಅವ್ಯವಹಾರ, ಭ್ರಷ್ಟಾಚಾರ ನಡೆಯಬಹುದು.ಅಂದ ಮಾತ್ರಕ್ಕೆ ಇಡೀ ಸಹಕಾರ ಕ್ಷೇತ್ರದಲ್ಲೇ ಅವ್ಯವಹಾರ, ಮೋಸ, ಭ್ರಷ್ಟಾಚಾರ ನಡೆಯುತ್ತದೆ ಎನ್ನುವುದು ಸರಿ ಅಲ್ಲ. ಆದರೂ, ಅವ್ಯವಹಾರ ತಡೆಗೆ ಸರ್ಕಾರ ಇನ್ನೂ ಹೆಚ್ಚಿನ ಅಗತ್ಯ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ವಿತರಣೆ, ಮರುಪಾವತಿ, ಲಾಭ, ಡಿವಿಡೆಂಡ್ ಒಳಗೊಂಡಂತೆ ಇತೆ ಸೌಲಭ್ಯಗಳು ಸಕಾಲ ದಲ್ಲಿ ತಲುಪಿಸುವುದು ಒಳಗೊಂಡಂತೆ ಇತರೆ ಎಲ್ಲ ವಿಷಯಗಳ ಬಗ್ಗೆ ನಿಗಾವಹಿಸಲು ಕೇಂದ್ರ ಸರ್ಕಾರ ಒಂದೇ ಸಾಫ್ಟ್‌ವೇರ್ ಅಳವಡಿಸುವ ಚಿಂತನೆ ನಡೆಸಿದೆ. ರಾಜ್ಯದಲ್ಲೂ ಸಾಫ್ಟ್‌ವೇರ್ ಅಳವಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಎಲ್ಲ ರೈತರಿಗೆ ಸಹಕಾರ ಸಂಘ, ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ದೊರೆಯಬೇಕು. ಯಾವುದೇ ರೈತರಿಗೆ ಸಾಲ ದೊರೆಯಲಿಲ್ಲ ಎನ್ನುವಂತಾಗಬಾರದು ಎನ್ನುವ ಉದ್ದೇಶದಿಂದ ಈಗಿರುವ ಮೂರು ಮತ್ತು 10 ಲಕ್ಷದ ಸಾಲದ ಮಿತಿಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಹಣಕಾಸು ಸಚಿವರೊಂದಿಗೆ ಚರ್ಚಿಸಿದ್ದಾರೆ. ಅತಿ ಹೆಚ್ಚು ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

Advertisement

ಇದನ್ನೂ ಓದಿ : 6 ವರ್ಷದಿಂದ ಸಂಬಳವೇ ಇಲ್ಲ: ಮನನೊಂದು ತಾ.ಪಂ ಕಚೇರಿಯಲ್ಲೇ ನೇಣಿಗೆ ಶರಣಾದ ಗುತ್ತಿಗೆ ನೌಕರ

ಯಶಸ್ವಿನಿ… ಯೋಜನೆ ಮರು ಜಾರಿಗೊಳಿಸಬೇಕು ಎಂಬ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಯಶಸ್ವಿನಿ ಯೋಜನೆ ಮರು ಜಾರಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಜೆಟ್‌ನಲ್ಲಿ ಘೋಷಣೆ ಸಹ ಮಾಡಿದ್ದಾರೆ. ಅಕ್ಟೋಬರ್ 2 ರಿಂದ ಯಶಸ್ವಿನಿ ಯೋಜನೆ ಮರು ಜಾರಿಗೆ ಚಿಂತನೆ ನಡೆದಿತ್ತು. ಈಗ ಅದಕ್ಕಿಂತ ಮುನ್ನವೇ ಯೋಜನೆ ಮರು ಜಾರಿಗೆ ಸರ್ಕಾರ ಎಲ್ಲ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ 30 ಲಕ್ಷ ರೈತರಿಗೆ 20,180 ಕೋಟಿ ಸಾಲ ವಿತರಣೆ ಗುರಿಗೆ ಹೆಚ್ಚಾಗಿ ಶೇ. 102 ರಷ್ಟು ಪ್ರಮಾಣ ದಲ್ಲಿ ಸಾಲ ನೀಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ಸೌಲಭ್ಯ ಒದಗಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದಷ್ಟು ಬೇಗ ಸಾಲ ಸೌಲಭ್ಯ ವಿತರಣೆ ಪ್ರಾರಂಭ ಮಾಡಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

ರಾಜ್ಯದಲ್ಲಿ 9 ಲಕ್ಷ ಮಹಿಳೆಯರು ಸೇರಿದಂತೆ 26 ಲಕ್ಷದಷ್ಟು ರೈತರು ಹಾಲು ಉತ್ಪನ್ನ ಸಹಕಾರ ಸಂಘಗಳಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಅ ಎಲ್ಲ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಪ್ರಾರಂಭಿಸಿ, 26 ಲಕ್ಷ ಜನರಿಗೆ ಸದಸ್ಯತ್ವ ನೀಡಿ, ಕ್ರೆಡಿಟ್ ಕಾರ್ಡ್ ಇತರೆ ಸೌಲಭ್ಯ ಒದಗಿಸುವ ಚಿಂತನೆ ನಡೆದಿದೆ. ಬ್ಯಾಂಕ್ ಆರಂಭಿಸುವ ಕುರಿತಂತೆ ರಿಸರ್ವ್ ಬ್ಯಾಂಕ್‌ನೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next