Advertisement

ಸಂಧಾನದಲ್ಲಿದೆ ಪರಿಹಾರ; ರಷ್ಯಾ-ಉಕ್ರೇನ್‌ ಬಿಕ್ಕಟ್ಟಿಗೆ ಭಾರತದ ಸಲಹೆ

01:44 AM Feb 23, 2022 | Team Udayavani |

ವಿಶ್ವಸಂಸ್ಥೆ/ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ಉಂಟಾಗಿರುವ ಯುದ್ಧ ಸದೃಶ ಬಿಕ್ಕಟ್ಟು ಪರಿಹಾರಕ್ಕೆ ಸಮಾ ಧಾನದ ಮಾರ್ಗ ಕಂಡುಕೊಳ್ಳಬೇಕು ಎಂದು ಭಾರತ ಸಲಹೆ ನೀಡಿದೆ. ಸದ್ಯ ಉಂಟಾಗಿರುವ ಸಂಘರ್ಷಮಯ ವಾತಾ ವರಣದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದಿದ್ದ ಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಟಿ.ಎಸ್‌.ತಿರುಮೂರ್ತಿ ಅವರು ಮಾತನಾಡಿದರು. ಎಲ್ಲ ರಾಷ್ಟ್ರಗಳೂ ಕೂಡ ಸಂಯಮದಿಂದಲೇ ವರ್ತಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Advertisement

ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ಅತ್ಯಂತ ಗರಿಷ್ಠ ಎಚ್ಚರಿಕೆಯ ನಡೆಯನ್ನು ಇರಿಸುತ್ತಿದೆ. ತಿರುಮೂರ್ತಿಯವರು ಮಾತನಾಡಿ “ಸದ್ಯ ಉಂಟಾಗಿರುವ ವಾತಾವರಣದ ಬಿಗುವು ತಪ್ಪಿಸುವುದೇ ತುರ್ತಿನ ಆದ್ಯತೆಯಾಗಬೇಕಾಗಿದೆ. ಬಿಕ್ಕಟ್ಟಿನ ಪರಿಸ್ಥಿತಿ ತಿಳಿಗೊಳಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಸಬೇಕು’ ಎಂದು ಸಲಹೆ ಮಾಡಿದ್ದಾರೆ.

ಗಮನಿಸುತ್ತಿದ್ದೇವೆ: ಭಾರತ ಸರಕಾರ ಸದ್ಯ ಉಂಟಾಗಿರುವ ಪರಿಸ್ಥಿತಿಯನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ತಿರುಮೂರ್ತಿ ಹೇಳಿದ್ದಾರೆ. ಒಟ್ಟಾರೆ ಪ್ರದೇಶದಲ್ಲಿ ರಷ್ಯಾ -ಉಕ್ರೇನ್‌ ಸಂಘರ್ಷದಿಂದ ಕಳವಳ ಪಡುವ ಸ್ಥಿತಿ ನಿರ್ಮಾಣ ವಾಗಿದೆ ಎಂದು ಹೇಳಿದ್ದಾರೆ. ಎಲ್ಲರೂ ಕೂಡ ಅತ್ಯಂತ ಸೈರಣೆ ಯಿಂದ ವರ್ತಿಸಬೇಕು. ಈ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಕೊಡುಗೆ ನೀಡಬೇಕಾಗಿದೆ ಎಂದರು ತಿರುಮೂರ್ತಿ. ಅಂತಾ ರಾಷ್ಟ್ರೀಯವಾಗಿ ಶಾಂತಿ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದಿದ್ದಾರೆ.

ರಷ್ಯಾಕ್ಕೆ ಹಿನ್ನಡೆ: ವಿಶ್ವಸಂಸ್ಥೆಯಲ್ಲಿ ರಷ್ಯಾದ ರಾಯಭಾರಿ ವಾಸಿಲಿ ಉಕ್ರೇನ್‌ ವಿರುದ್ಧ ಕ್ರಮ ಕೈಗೊಳ್ಳುವು ದನ್ನು ಸಭೆಯಲ್ಲಿ ಸಮರ್ಥಿಸಲು ಮುಂದಾದರೂ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ.

ಮತ್ತೊಮ್ಮೆ ಎಚ್ಚರಿಕೆ: ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಇರುವ ಭಾರತದ ವಿದ್ಯಾರ್ಥಿಗಳು ಕೂಡಲೇ ಸ್ವದೇಶಕ್ಕೆ ತೆರಳು  ವಂತೆ ರಾಯಭಾರ ಕಚೇರಿ ಮತ್ತೊಮ್ಮೆ ಸೂಚನೆ ನೀಡಿದೆ.

Advertisement

ಆನ್‌ಲೈನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯು ತ್ತವೆಯೇ ಎಂಬ ಬಗ್ಗೆ ಆಯಾ ವಿಶವಿದ್ಯಾನಿಲಯಗಳ ಜತೆಗೆ ಸಂಪರ್ಕ ಸಾಧಿಸುತ್ತಿರುವುದಾಗಿ ರಾಯಭಾರ ಕಚೇರಿ ತಿಳಿಸಿದೆ.

ಮಾತುಕತೆಯೇ ಮಾರ್ಗ: ಮಾತುಕತೆ ಮೂಲಕವೇ ಹಾಲಿ ಬಿಕ್ಕಟ್ಟು ಬಗೆಹರಿಸಲು ಸಾಧ್ಯ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಉತ್ತರ ಪ್ರದೇಶದ ಬಲಿಯಾದಲ್ಲಿ ಮಾತ ನಾಡಿದ ಅವರು, ಶಾಂತಿ ಸ್ಥಾಪನೆ ಯಾಗಬೇಕು ಎನ್ನು ವುದೇ ಭಾರತದ ಆದ್ಯತೆ. ಅಮೆರಿಕ ಮತ್ತು ರಷ್ಯಾ ಅಧ್ಯಕ್ಷರು ಪರಸ್ಪರ ಮಾತುಕತೆಗೆ ಸಮ್ಮತಿಸಿದ್ದಾರೆ ಎಂದು ಹೇಳಿದ್ದಾರೆ.

ಆರ್ಥಿಕ ದೃಢತೆಗೆ ಧಕ್ಕೆ: ಸದ್ಯ ಉಂಟಾಗಿರುವ ಬಿಕ್ಕಟ್ಟಿನಿಂದ ದೇಶದಲ್ಲಿ ಆರ್ಥಿಕ ದೃಢತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಮುಂಬಯಿಯಲ್ಲಿ ಮಾತನಾಡಿದ ಅವರು, ಈ ಬೆಳವಣಿಗೆಯಿಂದ ಕಚ್ಚಾ ತೈಲದ ಬೆಲೆ ಕೂಡ ಹೆಚ್ಚಾಗಲಿದೆ. ಇದೂ ಕೂಡ ಸವಾಲಿನ ಸ್ಥಿತಿ ನಿರ್ಮಾಣ ಮಾಡಲಿದೆ ಎಂದು ಹೇಳಿದ್ದಾರೆ.

ಸೂಚ್ಯಂಕ ಕುಸಿದು ಚೇತರಿಕೆ
ಮುಂಬಯಿ: ಉಕ್ರೇನ್‌ ಮತ್ತು ರಷ್ಯಾ ನಡುವಿನ ಬಿಕ್ಕಟ್ಟಿನಿಂದಾಗಿ ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಏರಿಳಿಕೆ ಕಂಡಿದೆ. ವಹಿವಾಟಿನ ಆರಂಭದಲ್ಲಿ 1,300 ಪಾಯಿಂಟ್ಸ್‌ ಕುಸಿದಿತ್ತು. ದಿನಾಂತ್ಯಕ್ಕೆ 382.91 ಪಾಯಿಂಟ್ಸ್‌ ಕುಸಿತ ಕಂಡು ಪ್ರಮಾಣದಲ್ಲಿ ಕೊಂಚ ಏರಿಕೆಯಾಯಿತು. ಹೀಗಾಗಿ ದಿನಾಂತ್ಯಕ್ಕೆ 57,300.68 ಪಾಯಿಂಟ್ಸ್‌ಗೆ ಮುಕ್ತಾಯವಾಗಿದೆ. ನಿಫ್ಟಿ ಸೂಚ್ಯಂಕ 114.45 ಪಾಯಿಂಟ್ಸ್‌ ಇಳಿಕೆಯಾಗಿ 17,092.20ರಲ್ಲಿ ಮುಕ್ತಾಯಗೊಂಡಿದೆ.

ಬಿಎಸ್‌ಇ ನಲ್ಲಿ ಟಾಟಾ ಸ್ಟೀಲ್‌ಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಉಳಿದಂತೆ ಡಾ| ರೆಡ್ಡೀಸ್‌, ಐಟಿಸಿ, ಭಾರ್ತಿ ಏರ್‌ಟೆಲ್‌ ಸೇರಿದಂತೆ ಪ್ರಮುಖ ಕಂಪೆನಿಗಳ ಷೇರುಗಳಿಗೆ ನಷ್ಟವಾಗಿದೆ. ಇದೇ ವೇಳೆ ಅಮೆರಿಕದ ಡಾಲರ್‌ ಎದುರು 29 ಪೈಸೆ ಕುಸಿತಗೊಂಡು ದಿನಾಂತ್ಯಕ್ಕೆ 74.84 ರೂ.ಗಳಿಗೆ ಮುಕ್ತಾಯವಾಯಿತು.

ಬ್ರೆಂಟ್‌ ಕಚ್ಚಾ ತೈಲ ಬೆಲೆ ಶೇ.3.9 ಏರಿಕೆ
ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮಂಗಳವಾರ ಏಳು ವರ್ಷಗಳ ಗರಿಷ್ಠಕ್ಕೆ ಏರಿಕೆಯಾಗಿದೆ. 2014ಕ್ಕೆ ಹೋಲಿಕೆ ಮಾಡಿದರೆ, ಕಚ್ಚಾ ತೈಲದ ಬೆಲೆ ಶೇ.4.9 ಏರಿಕೆಯಾಗಿದೆ. ನ್ಯೂಯಾರ್ಕ್‌ ಮರ್ಕೆಂಟೈಲ್‌ ಎಕ್ಸ್‌ಚೇಂಜ್‌ನಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 96.64 ಡಾಲರ್‌ ಆಗಿದೆ. ಪೆಟ್ರೋಲ್‌, ಡೀಸೆಲ್‌ಗೆ ಬಳಕೆ ಮಾಡುವ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಕೂಡ ಶೇ.3.9ರ ಏರಿಕೆಯಾಗಿ, ಪ್ರತೀ ಬ್ಯಾರೆಲ್‌ಗೆ 99.07 ಡಾಲರ್‌ ಆಗಿದೆ. ಇದರ ಜತೆಗೆ ಚಿನ್ನದ ಬೆಲೆಯಲ್ಲಿಯೂ ಏರಿಕೆಯಾಗಿದೆ.

ಸೂರ್ಯಕಾಂತಿ ಎಣ್ಣೆ ಆಮದಿಗೆ ಧಕ್ಕೆ: ಉತ್ಪಾದಕರ ಆತಂಕ‌
ಸದ್ಯ ಉಂಟಾಗಿರುವ ಬಿಕ್ಕಟ್ಟು ಶೀಘ್ರವೇ ಬಗೆಹರಿಯಬೇಕು. ಇಲ್ಲದಿದ್ದರೆ ಸೂರ್ಯಕಾಂತಿ ಬೀಜದ ಎಣ್ಣೆ ಆಮದಿಗೆ ಧಕ್ಕೆ ಉಂಟಾಗಲಿದೆ ಎಂಬ ಆತಂಕವನ್ನು ಭಾರತೀಯ ಖಾದ್ಯ ತೈಲ ಉತ್ಪಾದಕರ ಒಕ್ಕೂಟ (ಐವಿಪಿಎ) ಆತಂಕ ವ್ಯಕ್ತಪಡಿಸಿದೆ. ಉಕ್ರೇನ್‌ನಿಂದ ಶೇ.70 ಪ್ರಮಾಣದಲ್ಲಿ ಸೂರ್ಯಕಾಂತಿ ಬೀಜದ ಎಣ್ಣೆ ಆಮದು ಮಾಡಲಾಗುತ್ತಿದೆ. ಶೇ.20 ಪ್ರಮಾಣ ರಷ್ಯಾದಿಂದ, ಶೇ.10 ಅರ್ಜೆಂಟೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಉಕ್ರೇನ್‌ನಿಂದ ಸೂರ್ಯಕಾಂತಿ ಬೀಜದ ಎಣ್ಣೆ ದೇಶಕ್ಕೆ ಬಾರದೇ ಇದ್ದರೆ, ಬೇರೆ ಮಾರ್ಗಕಂಡುಕೊಳ್ಳುವ ಅನಿವಾರ್ಯ ಉಂಟಾಗಲಿದೆ ಎಂದು ಐವಿಪಿಎಯ ಅಧ್ಯಕ್ಷ ಸುಧಾಕರ ದೇಸಾಯಿ ಹೇಳಿದ್ದಾರೆ.

ಸದ್ಯ ಪ್ರತೀ ತಿಂಗಳು 2 ಲಕ್ಷ ಟನ್‌ ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಅದು 3 ಲಕ್ಷ ಟನ್‌ವರೆಗೆ ಹೋಗುತ್ತದೆ ಎಂದಿದ್ದಾರೆ ದೇಸಾಯಿ. ಹೀಗಾಗಿ ಇಂಥ ಬಿಕ್ಕಟ್ಟು ಆತಂಕಕ್ಕೆ ಕಾರಣ ಎಂದಿದ್ದಾರೆ. ಉಕ್ರೇನ್‌ನಲ್ಲಿ ವಾರ್ಷಿಕವಾಗಿ 170 ಲಕ್ಷ ಟನ್‌ ಸೂರ್ಯಕಾಂತಿ ಬೀಜದ ಎಣ್ಣೆ ಉತ್ಪಾದಿಸಲಾಗುತ್ತದೆ.

ರಾಜತಾಂತ್ರಿಕ ಮಾರ್ಗದ ಮೂಲಕ ಬಿಕ್ಕಟ್ಟು ಪರಿಹರಿಸಲು ಸಿದ್ಧರಿದ್ದೇವೆ. ದೊನೆಸ್ಕ್ ಮತ್ತು ಲುಹಾನ್ಸ್ಕ್ ನಲ್ಲಿ ರಕ್ತಪಾತ ಆಗುವುದು ನಮಗೂ ಇಷ್ಟವಿಲ್ಲ. ಆದರೆ ಅನ್ಯ ಮಾರ್ಗವಿಲ್ಲದೆ ಬಲ ಪ್ರಯೋಗಕ್ಕೆ ಮುಂದಾಗಿದ್ದೇವೆ.
-ವಾಸಿಲಿ ವಿಶ್ವಸಂಸ್ಥೆಯಲ್ಲಿ ರಷ್ಯಾ ರಾಯಭಾರಿ

Advertisement

Udayavani is now on Telegram. Click here to join our channel and stay updated with the latest news.

Next