Advertisement

5 ಲಕ್ಷ ರೂ. ಡ್ರಾ ಮಾಡಿಕೊಳ್ಳಲು ಅವಕಾಶ ನೀಡಿ

11:21 AM Oct 10, 2017 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಕೈಗಾರಿಕಾ ವಾಣಿಜ್ಯ  ಸಹಕಾರ ಸಂಘದ ಠೇವಣಿದಾರರು ಗರಿಷ್ಠ 5 ಲಕ್ಷ ರೂ.ವರೆಗೆ ಹಣ ಬಿಡಿಸಿಕೊಳ್ಳಲು ಅವಕಾಶ  ನೀಡುವಂತೆ ಸಂಘದ ಆಡಳಿತಾಧಿಕಾರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ತಮ್ಮ ಖಾತೆಯಲ್ಲಿರುವ ಹಣ ಹಿಂಪಡೆದುಕೊಳ್ಳಲು ಅವಕಾಶ ಕಲ್ಪಿಸದ ಸಂಘದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಕೆಲ ಠೇವಣಿದಾರರ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ಅವರಿದ್ದ ಏಕಸದಸ್ಯಪೀಠ, ಈ  ನಿರ್ದೇಶನ ನೀಡಿತು.

ಸಾಕಷ್ಟು ಮಂದಿ  ಠೇವಣಿದಾರರು ತಮ್ಮ ದುಡಿಮೆಯ ಹಣವನ್ನು ಖಾತೆಯಲ್ಲಿ ಠೇವಣಿ ಇರಿಸಿರುತ್ತಾರೆ. ತಾಂತ್ರಿಕ ಕಾರಣಗಳಿಂದ ಅವರಿಗೆ ಹಣ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸದಿರುವುದು ಸರಿಯಲ್ಲ. ಹೀಗಾಗಿ ಸದ್ಯಕ್ಕೆ  ಠೇವಣಿದಾರರು ಇಟ್ಟಿರುವ ಮೊತ್ತದಲ್ಲಿ ಗರಿಷ್ಠ 5 ಲಕ್ಷ ರೂ. ಹಿಂಪಡೆದುಕೊಳ್ಳಲು ಅವಕಾಶ ನೀಡಬೇಕು.

5 ಲಕ್ಷ ರೂ.ಗಳಿಗಿಂತ ಕಡಿಮೆ ಮೊತ್ತ ಇರಿಸಿರುವ ಠೇವಣಿದಾರರು ತಮ್ಮ ಹಣವನ್ನು ವಾಪಾಸ್‌ ಪಡೆದುಕೊಳ್ಳಲಿ. ಈ ಬಗ್ಗೆ ಎಲ್ಲ ಠೇವಣಿದಾರರಿಗೂ ಮಾಹಿತಿ ತಿಳಿಯುವವಂತೆ ಪ್ರಕಟಣೆ ಹೊರಡಿಸಿ ವರದಿ ನೀಡಿ ಎಂದು ಸಂಘದ ಆಡಳಿತಾಧಿಕಾರಿಗೆ ನಿರ್ದೇಶಿಸಿದ ನ್ಯಾಯಪೀಠ, ಅಕ್ಟೋಬರ್‌ 30ಕ್ಕೆ ವಿಚಾರಣೆ ಮುಂದೂಡಿತು.

ಏನಿದು ವಿವಾದ?: ಬಸವನಗುಡಿಯಲ್ಲಿರುವ  ಕರ್ನಾಟಕ ರಾಜ್ಯ ಕೈಗಾರಿಕಾ ವಾಣಿಜ್ಯ ಸಹಕಾರ ಸಂಘ ನಿಯಮಿತದಲ್ಲಿ ಸುಮಾರು 71 ಸಾವಿರಕ್ಕೂ ಅಧಿಕ ಗ್ರಾಹಕರು ಖಾತೆ ತೆರೆದು ಹಣ ಠೇವಣಿ ಇರಿಸಿದ್ದಾರೆ. ಆದರೆ, ಸಂಘಕ್ಕೆ  ಬ್ಯಾಂಕ್‌ ಮಾನ್ಯತೆ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರಾಕರಿಸಿದೆ.

Advertisement

ಹೀಗಾಗಿ ತಮ್ಮ ಹಣವನ್ನು ವಾಪಾಸ್‌ ನೀಡುವಂತೆ ಗ್ರಾಹಕರು ಸಂಘದ ಆಡಳಿತಾಧಿಕಾರಿಯನ್ನು ಕೋರಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ತಮ್ಮ ಹಣ ವಾಪಾಸ್‌ ಪಡೆದುಕೊಳ್ಳಲು ಆಡಳಿತಾಧಿಕಾರಿಗೆ ನಿರ್ದೇಶನ ನೀಡುವಂತೆ ಕೋರಿ ಹಲವು ಗ್ರಾಹಕರು ಹೈಕೋರ್ಟ್‌ ಮೊರೆಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next