Advertisement

ಕೃಷಿಕರಿಗೆ ಕೇಂದ್ರದಿಂದ 3.70ಲಕ್ಷ ಕೋಟಿ ರೂ.: ಯೂರಿಯ ಸಬ್ಸಿಡಿಗಾಗಿಯೇ ಬಹುತೇಕ ಹಣ

12:24 AM Jun 29, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೃಷಿ ಚಟು­ವಟಿಕೆ­ಯನ್ನು ಉತ್ತಮ­ಗೊಳಿಸಲು, ಮುಖ್ಯ­ವಾಗಿ ಯೂರಿಯ ರಸ­ಗೊಬ್ಬರವನ್ನು ಎಲ್ಲರಿಗೂ ಸರಿಯಾಗಿ ತಲುಪುವಂತೆ ಮಾಡಲು ಕೇಂದ್ರ ಸರಕಾರ 3.70 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ರಸಗೊಬ್ಬರ ಸಚಿವ ಮನ್‌ಸುಖ್‌ಮಾಂಡ­ವಿಯಾ ಹೇಳಿ­ದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ­ಯವರು ರೈತರು ಸರಾಗ­ವಾಗಿ ಯೂರಿಯ ಪಡೆಯಬೇಕು, ಕೃಷಿ ಚಟುವಟಿಕೆಗಳು ಸುಸ್ಥಿರವಾಗಿ ಮುಂದು­ವರಿಯ­ಬೇಕೆಂದು ಬಯಸಿ­ದ್ದಾರೆ. ಅದಕ್ಕಾಗಿ ಭಾರೀ ಮೊತ್ತವನ್ನು ನೀಡಿದ್ದಾರೆ. 3.70 ಲಕ್ಷ ಕೋಟಿ ರೂ.ಗಳಲ್ಲಿ 3.68 ಲಕ್ಷ ಕೋಟಿ ರೂ.ಗಳನ್ನು ಯೂರಿಯ ಸಬ್ಸಿಡಿಗೆಂದೇ ಎತ್ತಿಡಲಾ­ಗಿದೆ. ಇದರಿಂದ 45 ಕೆ.ಜಿ.ಗಳ ಒಂದು ಯೂರಿಯ ಚೀಲ 242 ರೂ.ಗಳಿಗೇ ಸಿಗಲಿದೆ ಎಂದು ಮಾಂಡವಿಯಾ ಹೇಳಿ­ದ್ದಾರೆ. ಪ್ರಸ್ತುತ ದೇಶದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಹೀಗಾಗಿ ರೈತರು ತಮ್ಮ ಚಟುವಟಿಕೆಯನ್ನು ಬಿರುಸು­ಗೊಳಿಸಲಿ­ದ್ದಾರೆ. ಹೀಗಾಗಿ ಈ ಹಣ ಬಿಡುಗಡೆ ಮಹತ್ವ ಪಡೆದು­ಕೊಂಡಿದೆ.

ರಸಗೊಬ್ಬರ ಬಳಕೆ ತಗ್ಗಿಸುವ ರಾಜ್ಯಗಳಿಗೆ ಪ್ರೋತ್ಸಾಹಧನ
“ಪಿಎಂ-ಪ್ರಣಾಮ್‌” ನೂತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆ­ಯು ರಾಜ್ಯಗಳಲ್ಲಿ ರಾಸಾಯನಿಕ ಗೊಬ್ಬರಗಳಿಗೆ ಕಡಿವಾಣ ಹಾಕಿ, ಪರ್ಯಾಯ ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡುತ್ತದೆ. 2023-24ರ ಕೇಂದ್ರ ಬಜೆಟ್‌ನ ಭಾಗವಾಗಿ ಪಿಎಂ-ಪ್ರಣಾಮ್‌(ಭೂಮಿ ತಾಯಿಯ ಪುನಃಸ್ಥಾಪನೆ, ಜಾಗೃತಿ, ಉತ್ಪಾದನೆ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನಮಂತ್ರಿ ಕಾರ್ಯಕ್ರಮ) ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆ.1ರಂದು ಘೋಷಿಸಿದ್ದರು.

“ಒಂದು ರಾಜ್ಯ 10 ಲಕ್ಷ ಟನ್‌ ರಾಸಾಯನಿಕ ಗೊಬ್ಬರ ಉಪಯೋಗಿ­ಸುತ್ತಿದ್ದು, ಅದನ್ನು 3 ಲಕ್ಷ ಟನ್‌ಗೆ ಇಳಿಸಿದರೆ, ಅದರ ಸಬ್ಸಿಡಿ ಉಳಿತಾಯ 3,000 ಕೋಟಿ ರೂ. ಆಗಲಿದೆ. ಈ ಪೈಕಿ ಶೇ.50ರಷ್ಟು ಅಂದರೆ 1,500 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಸಂಬಂಧಪಟ್ಟ ರಾಜ್ಯಕ್ಕೆ ನೀಡಲಿದೆ. ಇದನ್ನು ಪರ್ಯಾಯ ಗೊಬ್ಬರ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು” ಎಂದು ಮಾಂಡವಿಯಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next