Advertisement

ಆತ್ಮವಿಶ್ವಾಸ ಹೆಚ್ಚಿಸಿದ ಓವರ್‌: ಉನಾದ್ಕತ್‌

02:23 PM Apr 26, 2017 | Team Udayavani |

ಮುಂಬಯಿ: ಯಶಸ್ವಿ ಅಂತಿಮ ಓವರ್‌ನಿಂದಾಗಿ ತನ್ನ ಆತ್ಮವಿಶ್ವಾಸ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂಬುದಾಗಿ ಪುಣೆ ತಂಡದ ಪೇಸ್‌ ಬೌಲರ್‌ ಜೈದೇವ್‌ ಉನಾದ್ಕತ್‌ ಹೇಳಿದ್ದಾರೆ. ಸೋಮವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ವಾಂಖೇಡೆಯಲ್ಲಿ ನಡೆದ ದ್ವಿತೀಯ ಸುತ್ತಿನ ಐಪಿಎಲ್‌ ಪಂದ್ಯದಲ್ಲಿ ಪುಣೆ 3 ರನ್ನುಗಳ ರೋಮಾಂಚಕಾರಿ ಜಯ ಸಾಧಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

‘ನಮಗೆ ಅತ್ಯಗತ್ಯವಾಗಿ ಬೇಕಿದ್ದ ಗೆಲುವು ಇದಾಗಿತ್ತು. ನಮ್ಮ ಗೆಲುವಿನ ಸರಣಿ ಪುನರಾರಂಭಗೊಂಡಿದೆ. ಮುಂಬೈಯನ್ನು ಅವರದೇ ಅಂಗಳ ವಾದ ವಾಂಖೇಡೆಯಲ್ಲಿ ಕೆಡವಿದ್ದರಿಂದ ತಂಡದ ಆತ್ಮವಿಶ್ವಾಸವೂ ಹೆಚ್ಚಿದೆ. ನಾವು ಒಂದು ಯೋಜನಾ ಬದ್ಧ ಹಾಗೂ ಸಂಘಟಿತವಾಗಿ ಬೌಲಿಂಗ್‌ ನಡೆಸಿದೆವು. ಸತತವಾಗಿ ವಿಕೆಟ್‌ ಕೆಡವುತ್ತ ಹೋದೆವು. ತಂಡದ ಹಾಗೂ ವೈಯಕ್ತಿಕವಾಗಿ ನನ್ನ ನಿರ್ವಹಣೆಯಿಂದ ಸಂತುಷ್ಟನಾಗಿದ್ದೇನೆ’ ಎಂದು ಉನಾದ್ಕತ್‌ ಹೇಳಿದರು.

ಮರು ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪುಣೆ 6 ವಿಕೆಟಿಗೆ 160 ರನ್‌ ಬಾರಿಸಿದರೆ. ಮುಂಬೈ 8 ವಿಕೆಟಿಗೆ 157 ರನ್‌ ಗಳಿಸಿ 3 ರನ್ನಿನಿಂದ ಸೋತಿತು. ನಾಯಕ ರೋಹಿತ್‌ ಶರ್ಮ ಇದೇ ಮೊದಲ ಬಾರಿಗೆ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ, ಅಂತಿಮ ಓವರ್‌ ತನಕ ಕ್ರೀಸಿನಲ್ಲಿದ್ದರೂ ಮುಂಬೈಗೆ ಗೆಲುವು ತಂದೊಪ್ಪಿಸಲು ವಿಫ‌ಲರಾದರು. ಅವರು 39 ಎಸೆತಗಳಿಂದ 58 ರನ್‌ ಬಾರಿಸಿ ನಿರ್ಗಮಿಸಿದರು (6 ಬೌಂಡರಿ, 3 ಸಿಕ್ಸರ್‌). ಇದರೊಂದಿಗೆ ಮುಂಬೈ ಇಂಡಿಯನ್ಸ್‌ನ ಗೆಲುವಿನ ಅಭಿಯಾನ ಸತತ 6 ಪಂದ್ಯಗಳಿಗೆ ಕೊನೆಗೊಂಡಿದೆ. 10ನೇ ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಎರಡೂ ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆ ಪುಣೆ ತಂಡದ್ದಾಗಿದೆ. ಎ. 6ರಂದು ಪುಣೆಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಟೀವನ್‌ ಸ್ಮಿತ್‌ ಪಡೆ 7 ವಿಕೆಟ್‌ಗಳ ಜಯ ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಪುಣೆ – 6 ವಿಕೆಟಿಗೆ 160. ಮುಂಬೈ-8 ವಿಕೆಟಿಗೆ 157 (ರೋಹಿತ್‌ 58, ಪಾರ್ಥಿವ್‌ 33, ಬಟ್ಲರ್‌ 17, ಸ್ಟೋಕ್ಸ್‌ 21ಕ್ಕೆ 2, ಉನಾದ್ಕತ್‌ 40ಕ್ಕೆ 2, ಕ್ರಿಸ್ಟಿಯನ್‌ 6ಕ್ಕೆ 1).


ಅಂತಿಮ ಓವರ್‌, 17 ರನ್‌

ಜೈದೇವ್‌ ಉನಾದ್ಕತ್‌ ಪಾಲಾದ ಅಂತಿಮ ಓವರಿನಲ್ಲಿ ಮುಂಬೈ ಜಯಕ್ಕೆ 17 ರನ್‌ ಅಗತ್ಯವಿತ್ತು. ರೋಹಿತ್‌ ಶರ್ಮ -ಹಾರ್ದಿಕ್‌ ಪಾಂಡ್ಯ ಕ್ರೀಸಿನಲ್ಲಿದ್ದುದರಿಂದ ಸಹಜವಾಗಿಯೇ ದೊಡ್ಡ ಹೊಡೆತಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಪಾಂಡ್ಯ ಮೊದಲ ಎಸೆತದಲ್ಲೇ ಔಟಾದರು. ಮುಂದಿನ ಎಸೆತವನ್ನು ರೋಹಿತ್‌ ಸಿಕ್ಸರ್‌ಗೆ ಅಟ್ಟಿದರು. ಮೂರನೆಯದು ವೈಡ್‌ ಎಸೆತ ಎಂದು ಭಾವಿಸಿಬಿಟ್ಟರು. ವೈಡ್‌ ಕೊಡದ ಕಾರಣ ಅಂಪಾಯರ್‌ ಜತೆ ವಾಗ್ವಾದಕ್ಕಿಳಿದರು. 4ನೇ ಎಸೆತದಲ್ಲಿ ಉನಾದ್ಕತ್‌ಗೆ ರಿಟರ್ನ್ ಕ್ಯಾಚ್‌ ನೀಡಿ ನಿರ್ಗಮಿಸಿದರು. 5ನೇ ಎಸೆತದಲ್ಲಿ ಮೆಕ್ಲೆನ್‌ಗನ್‌ ರನೌಟಾದರು. ಹರ್ಭಜನ್‌ ಸಿಂಗ್‌ ಅಂತಿಮ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದರೂ ಪ್ರಯೋಜನವಾಗಲಿಲ್ಲ. ಅಮೋಘ ಬೌಲಿಂಗ್‌ ದಾಳಿ ಸಂಘಟಿಸಿದ ಬೆನ್‌ ಸ್ಟೋಕ್ಸ್‌ (4-1-21-2) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಎಕ್ಸ್‌ಟ್ರಾ ಇನ್ನಿಂಗ್ಸ್‌ : ಪಂದ್ಯ-28 : ಮುಂಬೈ-ಪುಣೆ
– ಮುಂಬೈ ಇಂಡಿಯನ್ಸ್‌ 5ನೇ ಸಲ 3 ರನ್‌ ಅಥವಾ ಇದಕ್ಕಿಂತ ಕಡಿಮೆ ರನ್‌ ಅಂತರದಲ್ಲಿ ಸೋತಿತು. ಈ ಲೆಕ್ಕಾಚಾರದಲ್ಲಿ ಮುಂಬೈಗೆ ಅಗ್ರಸ್ಥಾನ. ಕೆಕೆಆರ್‌ ಇದೇ ಅಂತರದಲ್ಲಿ 4 ಸಲ ಸೋತು ದ್ವಿತೀಯ ಸ್ಥಾನದಲ್ಲಿದೆ (ಒಮ್ಮೆ ಡಕ್‌ವರ್ತ್‌ -ಲೂಯಿಸ್‌ ನಿಯಮ ಅನ್ವಯವಾಗಿತ್ತು). 

– 2013ರ ಬಳಿಕ ವಾಂಖೇಡೆಯಲ್ಲಿ ಚೇಸಿಂಗ್‌ ನಡೆಸಿದ ವೇಳೆ ಮುಂಬೈ 3ನೇ ಸೋಲನುಭವಿಸಿತು. 9 ಪಂದ್ಯಗಳನ್ನು ಚೇಸ್‌ ಮಾಡಿ ಗೆದ್ದಿದೆ.

– ರೋಹಿತ್‌ ಶರ್ಮ ರನ್‌ ಚೇಸಿಂಗ್‌ ವೇಳೆ 12ನೇ ಅರ್ಧ ಶತಕ ಹೊಡೆದರು. ಈ ಸಾಧನೆ ಯಲ್ಲಿ ಅವರಿಗೆ 3ನೇ ಸ್ಥಾನ. ವಾರ್ನರ್‌ (19), ಗಂಭೀರ್‌ (18) ಮೊದಲೆರಡು ಸ್ಥಾನದಲ್ಲಿದ್ದಾರೆ.

– ರನ್‌ ಚೇಸ್‌ ವೇಳೆ ಮುಂಬೈ ಪರಾಭವಗೊಂಡ ಪಂದ್ಯಗಳಲ್ಲಿ ರೋಹಿತ್‌ ಶರ್ಮ 4ನೇ ಅರ್ಧ ಶತಕ ಹೊಡೆದರು. ಇಲ್ಲಿ ಅವರಿಗೆ 2ನೇ ಸ್ಥಾನ. ಡೇವಿಡ್‌ ವಾರ್ನರ್‌ ಮೊದಲ ಸ್ಥಾನದಲ್ಲಿದ್ದಾರೆ (7 ಅರ್ಧ ಶತಕ).

– ಐಪಿಎಲ್‌ನಲ್ಲಿ ಮುಂಬೈ 4ನೇ ಲೆಗ್‌ಸ್ಪಿನ್ನರ್‌ನನ್ನು ಕಣಕ್ಕಿಳಿಸಿತು. ಇವರೆಂದರೆ ಕರ್ಣ್ ಶರ್ಮ. ಉಳಿದ ಮೂವರು – ಚೇತನ್ಯ ನಂದ, ಯಜುವೇಂದ್ರ ಚಾಹಲ್‌ ಮತ್ತು ಶ್ರೇಯಸ್‌ ಗೋಪಾಲ್‌.

– ಇದು ರೋಹಿತ್‌ ಶರ್ಮ ಹಾಗೂ ಧೋನಿ ಅವರ 150ನೇ ಐಪಿಎಲ್‌ ಪಂದ್ಯ. ಇವರಿಗಿಂತ ಹೆಚ್ಚು ಐಪಿಎಲ್‌ ಪಂದ್ಯವಾಡಿದ್ದು ಸುರೇಶ್‌ ರೈನಾ ಮಾತ್ರ (154).

– ಮುಂಬೈ ಇಂಡಿಯನ್ಸ್‌ ಟಿ-20 ಮಾದರಿ ಯಲ್ಲಿ ಅತೀ ಹೆಚ್ಚು 170 ಪಂದ್ಯಗಳನ್ನಾಡಿತು. ಈ ಸಂದರ್ಭದಲ್ಲಿ ಇಂಗ್ಲೆಂಡಿನ ಸಾಮರ್‌ಸೆಟ್‌ ಕೌಂಟಿಯ ದಾಖಲೆ ಪತನಗೊಂಡಿತು (169).

– ಹರ್ಭಜನ್‌ ಸಿಂಗ್‌ ಟಿ-20ಯಲ್ಲಿ 200 ವಿಕೆಟ್‌ ಉರುಳಿಸಿದ ವಿಶ್ವದ 19ನೇ, ಭಾರತದ 3ನೇ ಬೌಲರ್‌ ಎನಿಸಿದರು. ಈ ಸಾಧನೆಗೈದ ಭಾರತದ ಉಳಿದಿಬ್ಬರು ಬೌಲರ್‌ಗಳೆಂದರೆ ಆರ್‌. ಅಶ್ವಿ‌ನ್‌ ಮತ್ತು ಅಮಿತ್‌ ಮಿಶ್ರಾ.

– ಹರ್ಭಜನ್‌ 200 ವಿಕೆಟ್‌ಗಳಿಗಾಗಿ 225 ಪಂದ್ಯಗಳನ್ನಾಡಿದರು. 19 ಮಂದಿ ಸಾಧಕರಲ್ಲಿ ಭಜ್ಜಿಗೆ 3ನೇ ಸ್ಥಾನ. ಕೈರನ್‌ ಪೊಲಾರ್ಡ್‌ (286) ಮತ್ತು ಆಲ್ಬಿ ಮಾರ್ಕೆಲ್‌ (237) ಮೊದಲೆರಡು ಸ್ಥಾನದಲ್ಲಿದ್ದಾರೆ.

– ಮುಂಬೈ ಸತತ 7 ಪಂದ್ಯ ಗೆದ್ದು ಐಪಿಎಲ್‌ನಲ್ಲಿ ತನ್ನ ನೂತನ ದಾಖಲೆ ಸ್ಥಾಪಿಸುವ ಪ್ರಯತ್ನದಲ್ಲಿ ವಿಫ‌ಲವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next