Advertisement

ರಾಯರ ಸನ್ನಿಧಿಯಲ್ಲಿ ನಾದಹಾರ ಝೇಂಕಾರ

03:45 AM Mar 06, 2017 | |

ರಾಯಚೂರು: ಮಂತ್ರಾಲಯದಲ್ಲಿ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ 422ನೇ ವರ್ಧಂತ್ಯುತ್ಸವ ನಿಮಿತ್ತ ಭಾನುವಾರ ಚೆನ್ನೈನ ನಾದಹಾರ ಸೇವಾ ಟ್ರಸ್ಟ್‌ನಿಂದ 500ಕ್ಕೂ ಹೆಚ್ಚು ಕಲಾವಿದರು ನಾದಹಾರ ಸಂಗೀತ ಕಾರ್ಯಕ್ರಮ ನೀಡಿದರು.

Advertisement

ಬೆಳಗ್ಗೆ ತಿರುಪತಿಯಿಂದ ಬಂದ ವೆಂಕಟೇಶ್ವರ ಸ್ವಾಮಿ ಶೇಷವಸ್ತ್ರಗಳನ್ನು ರಾಯರಿಗೆ ಸಮರ್ಪಿಸಲಾಯಿತು. ನಂತರ, ಕಾರ್ಯಕ್ರಮಕ್ಕೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಬಳಿಕ, ಸತತ ಎರಡು ಗಂಟೆಗಳ ಕಾಲ ಕಲಾವಿದರು ಏಕಕಾಲಕ್ಕೆ ಹಾಡುವ ಮೂಲಕ ರಾಯರಿಗೆ ವಿಶೇಷ ಸೇವೆ ಸಲ್ಲಿಸಿದರು. ತ್ಯಾಗರಾಜರ ಪಂಚರತ್ನ ಕೀರ್ತನೆಗಳು, ರಾಯರು ರಚಿಸಿದ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. 

ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಮುಂತಾದೆಡೆಯ ಕಲಾವಿದರು ಆಗಮಿಸಿದ್ದರು. ಜತೆಗೆ, 100ಕ್ಕೂ ಹೆಚ್ಚು ವಾದ್ಯಗಳ ವಾದನವೂ ನಡೆಯಿತು. ವಯೋಲಿನ್‌, ಮೃದಂಗ, ಕೊಳಲು, ಘಟಂ, ಕ್ಲಾರಿಯೋನೆಟ್‌, ತಾಳ, ಮೃದಂಗ ಸೇರಿ ಹಲವು ವಾದ್ಯಪ್ರಕಾರಗಳನ್ನು ನುಡಿಸಲಾಯಿತು.

ಇದೇ ವೇಳೆ, ಚೆನ್ನೈನ ರಾಘವೇಂದ್ರ ನಾದಹಾರ ಸೇವಾ ಟ್ರಸ್ಟ್‌ನಿಂದ 16.50 ಲಕ್ಷ ರೂ.ಮೌಲ್ಯದ ಅರ್ಧ ಕೆಜಿ ಚಿನ್ನದ ಕಮಂಡಲ (ತೀರ್ಥದ ಗಿಂಡಿ), ಮಂಚಾಲಮ್ಮ ದೇವಿಗೆ ಒಂದು ಲಕ್ಷ ರೂ.ಮೌಲ್ಯದ ಚಿನ್ನದ ಸರ ಸಮರ್ಪಿಸಲಾಯಿತು.ಈ ಮಧ್ಯೆ, ವಸತಿ ಸಚಿವ ಕೃಷ್ಣಪ್ಪ, ಕಿರುತೆರೆ ಕಲಾವಿದ ಕಾರ್ತಿಕ ಜಯರಾಂ (ಜೆಕೆ) ಕ್ಷೇತ್ರಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next