Advertisement

ಲಾಲು ಸೇವೆಗೆ ಬಂಟರು ಜೈಲಿಗೆ

06:30 AM Jan 10, 2018 | Team Udayavani |

ಪಾಟ್ನಾ: ಮೇವು ಹಗರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಜೈಲು ಸೇರುವ ವಿಚಾರ ಗೊತ್ತಾಗುತ್ತಲೇ, ಅವರಿಗೂ ಮೊದಲೇ ಅವರ ಮನೆಯ ಕೆಲಸದಾಳುಗಳು ಜೈಲಲ್ಲಿ ಕಾಯುತ್ತಿದ್ದರು!

Advertisement

ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ತಮ್ಮ ಒಡೆಯ ಇರುವಲ್ಲೇ ನಾವೂ ಇರಬೇಕು ಎಂದು ತೀರ್ಮಾನಿಸಿದ್ದ ನಂಬಿಕಸ್ಥ ಆಳುಗಳು ಇದಕ್ಕಾಗಿ  “ಮಾಸ್ಟರ್‌ ಪ್ಲಾನ್‌’ ಅನ್ನೇ ರೂಪಿಸಿದ್ದು ಈಗ ಬೆಳಕಿಗೆ ಬಂದಿದೆ. ಲಾಲುಗೆ ಅಡುಗೆ ಮಾಡುವ ಲಕ್ಷ್ಮಣ್‌ ಮತ್ತು ಸೇವಕ ಮದನ್‌ ಯಾದವ್‌ ತಮ್ಮ ವಿರುದ್ಧ ನೆರೆಮನೆ ಯಾತನಿಂದ ಪೊಲೀಸರಿಗೆ ದೂರು ಕೊಡಿಸಿ, ಜೈಲು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಲು ಜೈಲು ಸೇರುವುದು ಖಚಿತವಾಗುತ್ತಲೇ ಲಕ್ಷ್ಮಣ್‌ ಮತ್ತು ಮದನ್‌ ತಮ್ಮ ನೆರೆಮನೆಯಾತನ ಮೇಲೆ ಹಲ್ಲೆ ಮಾಡಿ, ಆತನಲ್ಲಿದ್ದ 10 ಸಾವಿರ ರೂ.ಗಳನ್ನು ದೋಚಿದ್ದಾರೆ. ಹೀಗಾಗಿ, ಸಹಜವಾಗಿಯೇ ನೆರೆಮನೆಯಾತ ಪೊಲೀಸರಿಗೆ ದೂರು ನೀಡಿದ್ದಾನೆ. ಇದಾದ ಬಳಿಕ ಆರೋಪಿಗಳು ರಾಂಚಿಯಲ್ಲಿನ ಸ್ಥಳೀಯ ಕೋರ್ಟ್‌ ಮುಂದೆ ಶರಣಾಗಿದ್ದಾರೆ. ನಂತರ ಅವರನ್ನು ಆರ್‌ಜೆಡಿ ನಾಯಕ ಲಾಲು ಯಾದವ್‌ ಇರುವ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಯಿತು ಎಂದು “ನ್ಯೂಸ್‌ 18′ ವರದಿ ಮಾಡಿದೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಎಸ್‌ಐ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ.

ಆದರೆ, ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು, ಲಾಲು ಅವರ ಸೇವೆ ಮಾಡಲೆಂದೇ ಕೆಲಸದಾಳುಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದೆ. ಆದರೆ, ಇದು ಕೇವಲ ಕಾಕತಾಳೀಯ ಘಟನೆ ಎಂದು ಆರ್‌ಜೆಡಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next