Advertisement

ಬದುಕಿಗೆ ಗುಲಾಬಿಯ ರಂಗು

05:04 PM Apr 16, 2018 | |

ಹಾವೇರಿ ಜಿಲ್ಲೆ ರಾಣೆ ಬೆನ್ನೂರು ತಾಲೂಕಿನ ಐರಣಿ ತಾಂಡಾದ ಪಕ್ಕೀರಪ್ಪ ರಾಮಪ್ಪ ಲಮಾಣಿ ನಾಲ್ಕು ವರ್ಷಗಳಿಂದ ಪಾಲಿಹೌಸ್‌ನಲ್ಲಿ ಗುಲಾಬಿ ಕೃಷಿ ಮಾಡುತ್ತಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಗುಲಾಬಿ ಇದೆ. ಅಷ್ಟೇ ವಿಸ್ತಾರದ ಪಾಲಿಹೌಸ್‌ನಲ್ಲಿ ರಂಗು ರಂಗಿನ ಗುಲಾಬಿ ಹೂವುಗಳು ಕಂಗೊಳಿಸುತ್ತಿವೆ.

Advertisement

ಕೃಷಿ ಹೇಗಿದೆ?: ಪಕ್ಕೀರಪ್ಪ ಅವರದು ಎರಡು ಎಕರೆ ಜಮೀನು. ತುಂಬಾ ಹಿಂದಿನಿಂದಲೂ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ಇವರಿಗೆ ಹೊಸತೇನಾದರೂ ಸಾಧಿಸಬೇಕೆಂಬ ತುಡಿತವಿತ್ತು. ಹೈಟೆಕ್‌ ಮಾದರಿಯಲ್ಲಿ ಕೃಷಿ ಮಾಡಬೇಕು. ಅಪರೂಪದ ಬೆಳೆಗಳನ್ನು ಬೆಳೆಯಬೇಕು. ಹೀಗೆ ಹತ್ತು ಹಲವು ಸಾಗುವಳಿ ಕನಸುಗಳನ್ನು ಹೊಂದಿದ್ದರು. ಎಲ್‌. ಐ.ಸಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಇವರು ಕೃಷಿಯಲ್ಲಿ ಪೂರ್ಣಕಾಲಿಕವಾಗಿ ತೊಡಗಿಕೊಳ್ಳಲು ಅಪರಿಮಿತ ಆಸಕ್ತಿ ಹೊಂದಿದ್ದರು.

ಅದೊಮ್ಮೆ ಇವರ ಊರಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌,  ರೈತರನ್ನು ಒಟ್ಟುಗೂಡಿಸಿ ಒಂದು ಸಭೆಯನ್ನು ಆಯೋಜಿಸಿತ್ತು. ಹೈಟೆಕ್‌ ಕೃಷಿ ಕೈಗೊಳ್ಳಲು ಇಚ್ಛಿಸುವ ಆಸಕ್ತ ರೈತರಿಗೆ ಆರ್ಥಿಕ ಸಹಕಾರ ಒದಗಿಸುವ ಬಗ್ಗೆ ಬ್ಯಾಂಕ್‌ ಒಲವು ವ್ಯಕ್ತಪಡಿಸಿತ್ತು. ಆಗ ಪಕೀರಪ್ಪ, ಬ್ಯಾಂಕ್‌ ಅಧಿಕಾರಿಗಳಲ್ಲಿ ತಮ್ಮ ಕೋರಿಕೆ ಮುಂದಿಟ್ಟಿದ್ದರು. ಇವರ ಆಸಕ್ತಿಯನ್ನು ಗಮನಿಸಿದ ಬ್ಯಾಂಕ್‌ ತಲಾ ಅರ್ಧ ಎಕರೆಗೆ ಒಂದರಂತೆ ಒಟ್ಟು ಎರಡು ಪಾಲಿ ಹೌಸ್‌ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿತು. ದೊಣ್ಣೆ ಮೆಣಸಿನ ಕಾಯಿ ಬೆಳೆಯುವ ಉದ್ದೇಶದಿಂದ ಪಾಲಿಹೌಸ್‌ ನಿರ್ಮಾಣ ಮಾಡಿದ ಇವರು, ಆದರೆ ಬೆಲೆ ವ್ಯತ್ಯಾಸದಿಂದ ಗುಲಾಬಿ ಕಡೆ ಹೊರಳಿದರು.  

ಬಣ್ಣ ಬಣ್ಣದ ಗುಲಾಬಿ: ಸುಮಾರು 35,000 ಗುಲಾಬಿ ಗಿಡಗಳನ್ನು ಹೊಸೂರಿನಿಂದ ತರಿಸಿಕೊಂಡರು. ತಲಾ ಗಿಡಕ್ಕೆ ಹನ್ನೆರಡು ರೂಪಾಯಿ ವೆಚ್ಚವಾಯಿತು. ನಾಟಿ ಪೂರ್ವ ಮೂರು ಅಡಿ ಅಗಲ ಒಂದೂವರೆ ಅಡಿ ಎತ್ತರದ ಬೆಡ್‌ ಹಾಕಿದ್ದಾರೆ.  ಕೊಟ್ಟಿಗೆ ಗೊಬ್ಬರ ಫ‌ಲವತ್ತಾದ ಮಣ್ಣು ಮಿಶ್ರಿತ ದಿಬ್ಬಗಳವು. ಒಂದು ಬೆಡ್‌ ಮೇಲೆ ಎರಡು ಸಾಲಿನಲ್ಲಿ ಗಿಡ ನಾಟಿ. ಒಂದು ಬೆಡ್‌ ಹಾಗೂ ಇನ್ನೊಂದು ಬೆಡ್‌ಗಳ ನಡುವೆ ಒಂದೂವರೆ ಅಡಿ ಅಂತರವಿಟ್ಟಿದ್ದಾರೆ.

ಡ್ರಿಪ್‌ ಅಳವಡಿಕೆ ಮಾಡಿಸಿ ಗಿಡದ ಬುಡಕ್ಕೆ ಹನಿ ನೀರು ಸೇರುವಂತೆ ನೋಡಿಕೊಂಡಿದ್ದಾರೆ. ಐದು ತಳಿಯ ಗುಲಾಬಿ ಗಿಡಗಳು ಇವರ ಕೃಷಿ ತಾಕಿನಲ್ಲಿದೆ. ತಾಜ್‌ ಮಹಲ್‌, ಅವಲಾನ್ಸ್‌ ರೋಸ್‌, ನೋಬ್ಲೆನ್‌ ರೋಸ್‌, ಗೋಲ್ಡ್‌ ಸ್ಪೇರ್‌ ರೋಸ್‌, ಕಾರ್ಲೆಟ್‌ ರೋಸ್‌ ತಳಿಯ ಗುಲಾಬಿ ಗಿಡಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಮೂರು ತಿಂಗಳಿಗೆ ಹೂವಿನ ಇಳುವರಿ ಆರಂಭಗೊಂಡಿದೆ.

Advertisement

ಆರು ತಿಂಗಳವರೆಗೆ ಗಿಡದ ಬೆಳವಣಿಗೆಯ ದೃಷ್ಟಿಯಿಂದ ಮೊಗ್ಗುಗಳನ್ನು ಚಿವುಟಿದ್ದಾರೆ. ಹೀಗಾಗಿ ಹೂವಿನ ಇಳುವರಿ ಜಾಸ್ತಿಯಾಗತೊಡಗಿದೆ. ಎರಡು ದಿನಕ್ಕೊಮ್ಮೆ ಕಡ್ಡಾಯವಾಗಿ ದ್ರವರೂಪದ ಗೊಬ್ಬರ ಉಣಿಸುತ್ತಾರೆ. ವಾರಕ್ಕೊಮ್ಮೆ ತಪ್ಪದೇ ಔಷಧಿ ಸಿಂಪಡಿಸುತ್ತಾರೆ. ವಾತಾವರಣದ ಉಷ್ಣತೆ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಜಾಗ್ರತೆ ಬೇಕು. ಹೀಗಾಗಿ ನೀರುಣಿಸುವಿಕೆ ರೋಗ ನಿಯಂತ್ರಣೆಯ ಕಾಳಜಿಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುತ್ತಾರೆ.

ಹೂವಿನ ಇಳುವರಿ: ಪ್ರತಿ ದಿನ ಹೂವಿನ ಕೊಯ್ಲು ಮಾಡುತ್ತಾರೆ. ದಿನಕ್ಕೆ 1800-2000 ಹೂವು ಸಿಗುತ್ತಿದೆ.  ಬೆಳಗಿನ ಜಾವ ಏಳು ಗಂಟೆಗೆ ಹೂವು ಕತ್ತರಿಸಲು ತೊಡಗುತ್ತಾರೆ. ಗಿಡಗಳಲ್ಲಿ ಮೊಗ್ಗು ಅರಳಿರುವಾಗಲೇ ಪ್ರತಿ ಮೊಗ್ಗುಗಳಿಗೆ ಹೂ ಹೊದಿಕೆ ತೊಡಿಸುತ್ತಾರೆ. ರಂಧ್ರಗಳಿರುವ ಮೆದುವಾದ ಹೊದಿಕೆಯ ನಡುವೆ ಹೂವು ಅರಳಲು ಆರಂಭಿಸುತ್ತದೆ. ಕೆಲವೊಮ್ಮೆ ಗಿಡದ ಬುಡಕ್ಕೆ ಗೊಬ್ಬರದ ಪ್ರಮಾಣ ಜಾಸ್ತಿ ಬಿದ್ದರೆ ಆ ಗಿಡದಲ್ಲಿನ ಹೂವಿನ ಗಾತ್ರವೂ ದೊಡ್ಡದಾಗುತ್ತದೆ. 

ಹೂವುಗಳನ್ನು ಕತ್ತರಿಸುವಲ್ಲಿ ಜಾಣ್ಮೆ ಅಗತ್ಯ. ಒಂದು ಅಡಿಗಳಷ್ಟು ತೊಗಟೆ ಸಮೇತ ಹೂವನ್ನು ಕತ್ತರಿಸುತ್ತಾರೆ.  ಕೊಯ್ಲು ಮಾಡಿ ಒಂದೆಡೆ ಸಂಗ್ರಹಿಸಿದ ಹೂವನ್ನು ಅವುಗಳ ಗಾತ್ರಕ್ಕೆ ತಕ್ಕಂತೆ ವಿಂಗಡಿಸುತ್ತಾರೆ. ಸಣ್ಣ ಗಾತ್ರದ ಹೂವುಗಳು ಒಂದೆಡೆ. ದೊಡ್ಡ ಗಾತ್ರದ ಹೂವುಗಳು ಮತ್ತೂಂದೆಡೆ. ಹೂವುಗಳನ್ನು ತೆಗೆದು ಇಪ್ಪತ್ತು ಹೂವುಗಳನ್ನು ಒಂದೆಡೆ ಸೇರಿಸಿ ಪಿಂಡಿಯನ್ನು ಕಟ್ಟುವುದು ಮುಂದಿನ ಹಂತ. ನಂತರ ಸಣ್ಣ ತೆಳುವಾದ ಪೆಟ್ಟಿಗೆಯಲ್ಲಿ ಹಾಕಿ ಮಾರುಕಟ್ಟೆಗೆ ರವಾನಿಸುತ್ತಾರೆ.

ಹೂವುಗಳು ದಿನ ನಿತ್ಯ ಹೈದರಾಬಾದ್‌ ಮಾರುಕಟ್ಟೆ ಸೇರುತ್ತದೆ. ಪ್ರತೀ ಹೂವಿಗೆ ಎರಡು ರೂಪಾಯಿಯಂತೆ ದರ ಸಿಗುತ್ತಿದೆ. ಸಾಂದ್ರ ಪದ್ಧತಿಯಲ್ಲಿ ಬೆಳೆಯುತ್ತಿದ್ದರೂ ಗಿಡಗಳ ಗೆಲ್ಲುಗಳು ಅಗಲಕ್ಕೆ ಪಸರಿಸದೇ ಶಿಸ್ತು ಬದ್ಧವಾಗಿ,  ನೇರವಾಗಿ ಬೆಳೆಯುತ್ತಾ ಹೋಗುವುದು ಪಾಲಿ ಹೌಸ್‌ ಕೃಷಿಯ ವಿಶೇಷತೆ. ಹೂವನ್ನು ಕತ್ತರಿಸುವಾಗ ಒಂದೂವರೆ ಅಡಿಗಳಷ್ಟು ಗಿಡದ ಗೆಲ್ಲುಗಳನ್ನೇ ಕತ್ತರಿಸುವುದರಿಂದ ಸಾಮಾನ್ಯ ಪದ್ಧತಿಯಂತೆ ವಾರ್ಷಿಕವಾಗಿ ಒಮ್ಮೆ ಗಿಡ ಕತ್ತರಿಸುವ ಪ್ರಮೇಯ ಇರುವುದಿಲ್ಲ.

ಗಿಡಗಳು ಹತ್ತಿರ ಹತ್ತಿರವಿದ್ದರೂ ನೇರವಾಗಿ ಎತ್ತರಕ್ಕೆ ಬೆಳೆಯುವುದರಿಂದ ಹೂವಿನ ಕೊಯ್ಲಿಗೆ ಯಾವುದೇ ಸಮಸ್ಯೆಇಲ್ಲ. ಪ್ರತೀ ಗಿಡ ಸರಾಸರಿ ಮೂರು ಅಡಿಗಳಷ್ಟು ಬೆಳೆದು ನಿಲ್ಲುತ್ತವೆ. ದಿನ ನಿತ್ಯ ಹೂವಿನ ಕೊಯ್ಲು ಇರುವುದರಿಂದ ಎಂಟು ಮಂದಿ ಖಾಯಂ ಕೆಲಸಗಾರರನ್ನು ನೇಮಿಸಿಕೊಂಡಿದ್ದಾರೆ. ನಿರ್ವಹಣ ವೆಚ್ಚವೇ ವಾರಕ್ಕೆ 35,000 ರೂ. ಖರ್ಚಾಗುತ್ತದೆ ಎನ್ನುತ್ತಾರೆ ಪಕೀರಪ್ಪ. 

ಸಂಪರ್ಕಿಸಲು: 9741074935

* ಕೋಡಕಣಿ ಜೈವಂತಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next