Advertisement

ಸರಣಿ ಜಯದ ರೋ”ಹಿತಾನುಭವ’

10:04 AM Dec 18, 2017 | Team Udayavani |

ವಿಶಾಖಪಟ್ಟಣ: ಶ್ರೀಲಂಕಾವನ್ನು ಸ್ಪಿನ್‌ ಖೆಡ್ಡಾಕ್ಕೆ ಬೀಳಿಸಿದ ಬಳಿಕ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತ ವಿಶಾಖಪಟ್ಟಣದಲ್ಲಿ 8 ವಿಕೆಟ್‌ಗಳ ಜಯಭೇರಿ ಮೊಳಗಿಸಿ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ. ರೋಹಿತ್‌ ಶರ್ಮ ಟೀಮ್‌ ಇಂಡಿಯಾವನ್ನು ಮುನ್ನಡೆಸಿದ ಮೊದಲ ಪ್ರಯತ್ನದಲ್ಲೇ ಸರಣಿ ವಿಜೇತ ನಾಯಕರಾಗಿ ಹೊರಹೊಮ್ಮಿದರು. ಭಾರತ ವಿರಾಟ್‌ ಕೊಹ್ಲಿ ಇಲ್ಲದೆಯೂ ಪರಾಕ್ರಮ ಮೆರೆಯಿತು.

Advertisement

ರವಿವಾರದ ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾ ಬೃಹತ್‌ ಮೊತ್ತದ ಕನಸು ಕಾಣುತ್ತಲೇ 44.5 ಓವರ್‌ಗಳಲ್ಲಿ 215 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿಯಿತು. ಭಾರತ 32.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 219 ರನ್‌ ಬಾರಿಸಿ ವಿಜಯಿಯಾಯಿತು. ಆಗ ಎಡಗೈ ಆರಂಭಕಾರ ಶಿಖರ್‌ ಧವನ್‌ 100 ರನ್‌ ಮಾಡಿ ಅಜೇಯರಾಗಿದ್ದರು. ಇದು ಅವರ 12ನೇ ಶತಕ. 85 ಎಸೆತ ಎದುರಿಸಿದ ಧವನ್‌ 13 ಬೌಂಡರಿ, 2 ಸಿಕ್ಸರ್‌ ಬಾರಿಸಿ ಲಂಕಾ ದಾಳಿಯನ್ನು ಲೆಕ್ಕಕ್ಕಿಲ್ಲದಂತೆ ಮಾಡಿದರು. 

ಯುವ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಸತತ 2ನೇ ಅರ್ಧ ಶತಕದೊಂದಿಗೆ ಮಿಂಚಿದರು. ಅಯ್ಯರ್‌ ಕೊಡುಗೆ 65 ರನ್‌. 63 ಎಸೆತಗಳ ಈ ಸೊಗಸಾದ ಆಟ 8 ಬೌಂಡರಿ ಹಾಗೂ ಒಂದು ಸಿಕ್ಸರ್‌ನಿಂದ ಸಿಂಗಾರಗೊಂಡಿತ್ತು. ಮೊಹಾಲಿಯಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಮೆರೆದ ರೋಹಿತ್‌ ಶರ್ಮ ಇಲ್ಲಿ 7 ರನ್ನಿಗೆ ಔಟಾದ ಬಳಿಕ ಜತೆ ಗೂಡಿದ ಧವನ್‌-ಅಯ್ಯರ್‌ ದ್ವಿತೀಯ ವಿಕೆಟಿಗೆ 135 ರನ್‌ ಪೇರಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. ದಿನೇಶ್‌ ಕಾರ್ತಿಕ್‌ 26 ರನ್‌ ಮಾಡಿ ಔಟಾಗದೆ ಉಳಿದರು.

ಧರ್ಮಶಾಲಾದಲ್ಲಿ ಗೆಲುವಿನ ಆರಂಭ ಕಂಡಿದ್ದ ಶ್ರೀಲಂಕಾಕ್ಕೆ ಭಾರತದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆಲ್ಲುವ ಅವಕಾಶ ಎದುರಾಗಿತ್ತು. ಆದರೆ ಉಳಿದೆರಡು ಪಂದ್ಯ ಗಳಲ್ಲಿ ತಿರುಗಿ ಬಿದ್ದ ಟೀಮ್‌ ಇಂಡಿಯಾ ಸಿಂಹಳೀಯರ ಕನಸಿಗೆ ತಣ್ಣೀರೆರಚಿತು.

ಸ್ಪಿನ್‌ ಸುಳಿಗೆ ಸಿಲುಕಿದ ಶ್ರೀಲಂಕಾ
ಒಂದು ಹಂತದಲ್ಲಿ ಮುನ್ನೂರರ ಗಡಿ ದಾಟಿ ಮುನ್ನುಗ್ಗುವ ಸೂಚನೆ ನೀಡಿದ ಶ್ರೀಲಂಕಾ, ಸ್ಪಿನ್‌ ದಾಳಿ ಮೊದಲ್ಗೊಂಡ ಕೂಡಲೇ ಕುಸಿಯುತ್ತಲೇ ಹೋಯಿತು. ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಸೇರಿಕೊಂಡು ಲಂಕೆಗೆ ಮೂಗುದಾರ ತೊಡಿಸಿದರು. ಇಬ್ಬರೂ ತಲಾ 3 ವಿಕೆಟ್‌ ಉಡಾಯಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು.

Advertisement

ಆರಂಭಕಾರ ಉಪುಲ್‌ ತರಂಗ ಮತ್ತು ವನ್‌ಡೌನ್‌ ಬ್ಯಾಟ್ಸ್‌ಮನ್‌ ಸದೀರ ಸಮರವಿಕ್ರಮ ಸಾಹಸದಿಂದ ಶ್ರೀಲಂಕಾ 28ನೇ ಓವರ್‌ ವೇಳೆ 2 ವಿಕೆಟಿಗೆ 160 ರನ್‌ ಪೇರಿಸಿ ಮುನ್ನುಗ್ಗುತ್ತಿತ್ತು. ಇದೇ ಲಯದಲ್ಲಿ ಸಾಗಿದರೆ ಲಂಕಾ ಸ್ಕೋರ್‌ಬೋರ್ಡ್‌ನಲ್ಲಿ ಬೃಹತ್‌ ಮೊತ್ತ ದಾಖಲಾಗುತ್ತಿದ್ದುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಆದರೆ ಇಲ್ಲಿಂದ ಮುಂದೆ ಪೆರೆರ ಪಡೆ ಪರ ದಾಡುತ್ತಲೇ ಹೋಯಿತು. ಕುಸಿತದ ತೀವ್ರತೆ ಎಷ್ಟಿತ್ತೆಂದರೆ, 55 ರನ್‌ ಅಂತರದಲ್ಲಿ 8 ವಿಕೆಟ್‌ ಉರುಳಿ ಹೋಯಿತು; ಕೊನೆಯ 5 ವಿಕೆಟ್‌ 18 ರನ್‌ ಅಂತರದಲ್ಲಿ ಬಿತ್ತು!

ಭಾರತದಿಂದ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾ ಬಹಳ ಬೇಗನೆ ಆರಂಭಕಾರ ದನುಷ್ಕ ಗುಣತಿಲಕ (13) ಅವರನ್ನು ಕಳೆದುಕೊಂಡಿತು. ಈ ವಿಕೆಟ್‌ ಬುಮ್ರಾ ಬುಟ್ಟಿಗೆ ಬಿತ್ತು. ದ್ವಿತೀಯ ವಿಕೆಟಿಗೆ ಜತೆಗೂಡಿದ ತರಂಗ-ಸಮರವಿಕ್ರಮ ಸೇರಿ ಕೊಂಡು ಭಾರತದ ಬೌಲರ್‌ಗಳ ವಿರುದ್ಧ ಸಮರವನ್ನೇ ಸಾರಿದರು. ಯಾವುದೇ ದಾಳಿಗೆ ಜಗ್ಗಲಿಲ್ಲ. ಕ್ರೀಸ್‌ ಆಕ್ರಮಿಸಿಕೊಳ್ಳುತ್ತಲೇ ಹೋದರು. ರನ್‌ ಕೂಡ ಪ್ರವಾಹದಂತೆ ಏರತೊಡಗಿತು. ದ್ವಿತೀಯ ವಿಕೆಟಿಗೆ 121 ರನ್‌ ಒಟ್ಟುಗೂಡಿತು. ಆಗ ಸಮರವಿಕ್ರಮ (42) ಚಾಹಲ್‌ ಮೋಡಿಗೆ ಸಿಲುಕಿದರು.

ಆದರೆ ತರಂಗ ಆರ್ಭಟವೇನೂ ಕಡಿಮೆ ಆಗಲಿಲ್ಲ. ಮುನ್ನುಗ್ಗಿ ಬಾರಿಸುತ್ತ ಶತಕದತ್ತ ದೌಡಾಯಿಸತೊಡಗಿದರು. ಆದರೆ ಅದೃಷ್ಟ ಕೈಕೊಟ್ಟಿತು. ಶತಕಕ್ಕೆ ಕೇವಲ 5 ರನ್‌ ಬೇಕೆನ್ನುವಾಗ ಕುಲದೀಪ್‌ ಎಸೆತವೊಂದನ್ನು ಮುಂದೆ ಬಂದು ಬಾರಿಸುವ ಪ್ರಯತ್ನದಲ್ಲಿ ಸ್ಟಂಪ್ಡ್ ಆದರು. 82 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಮುಂದಿನದೆಲ್ಲ ಶ್ರೀಲಂಕಾದ ಕುಸಿತದ ಕತೆ.

ವಾಷಿಂಗ್ಟನ್‌ ಬದಲು ಕುಲದೀಪ್‌
ಅಂತಿಮ ಏಕದಿನ ಪಂದ್ಯಕ್ಕಾಗಿ ಎರಡೂ ತಂಡಗಳಲ್ಲಿ ಒಂದೊಂದು ಬದಲಾವಣೆ ಮಾಡಿಕೊಳ್ಳ ಲಾಯಿತು. ಕಳೆದ ಪಂದ್ಯದಲ್ಲಷ್ಟೇ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ಆಫ್ ಸ್ಪಿನ್ನಿಂಗ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಬದಲು ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಭಾರತದ ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಯಿತು. ಕುಲದೀಪ್‌ ಧರ್ಮಶಾಲಾದ ಮೊದಲ ಪಂದ್ಯದಲ್ಲಿ ಆಡಿದರೂ ಬೌಲಿಂಗ್‌ ಅವಕಾಶ ಪಡೆದಿರಲಿಲ್ಲ. ಶ್ರೀಲಂಕಾ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಸದೀರ ಸಮರವಿಕ್ರಮ ಅವಕಾಶ ಪಡೆದರು. 

ಸ್ಕೋರ್‌ಪಟ್ಟಿ

ಶ್ರೀಲಂಕಾ
ದನುಷ್ಕ ಗುಣತಿಲಕ    ಸಿ ರೋಹಿತ್‌ ಬಿ ಬುಮ್ರಾ    13
ಉಪುಲ್‌ ತರಂಗ    ಸ್ಟಂಪ್ಡ್ ಧೋನಿ ಬಿ ಯಾದವ್‌    95
ಸದೀರ ಸಮರವಿಕ್ರಮ    ಸಿ ಧವನ್‌ ಬಿ ಚಾಹಲ್‌    42
ಏಂಜೆಲೊ ಮ್ಯಾಥ್ಯೂಸ್‌    ಬಿ ಚಾಹಲ್‌    17
ನಿರೋಷನ್‌ ಡಿಕ್ವೆಲ್ಲ    ಸಿ ಅಯ್ಯರ್‌ ಬಿ ಯಾದವ್‌    8
ಅಸೇಲ ಗುಣರತ್ನೆ    ಸಿ ಧೋನಿ ಬಿ ಭುವನೇಶ್ವರ್‌    17
ತಿಸರ ಪೆರೆರ    ಎಲ್‌ಬಿಡಬ್ಲ್ಯು ಚಾಹಲ್‌    6
ಸಚಿತ ಪತಿರಣ    ಸಿ ಚಾಹಲ್‌ ಬಿ ಪಾಂಡ್ಯ    7
ಅಖೀಲ ಧನಂಜಯ    ಬಿ ಯಾದವ್‌    1
ಸುರಂಗ ಲಕ್ಮಲ್‌    ಎಲ್‌ಬಿಡಬ್ಲ್ಯು ಪಾಂಡ್ಯ    1
ನುವಾನ್‌ ಪ್ರದೀಪ್‌    ಔಟಾಗದೆ    0

ಇತರ        8
ಒಟ್ಟು  (44.5 ಓವರ್‌ಗಳಲ್ಲಿ ಆಲೌಟ್‌)    215

ವಿಕೆಟ್‌ ಪತನ: 1-15, 2-136, 3-160, 4-168, 5-189, 6-197, 7-208, 8-210, 9-211.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        6.5-0-35-1
ಜಸ್‌ಪ್ರೀತ್‌ ಬುಮ್ರಾ        8-1-39-1
ಹಾರ್ದಿಕ್‌ ಪಾಂಡ್ಯ        10-1-49-2
ಕುಲದೀಪ್‌ ಯಾದವ್‌        10-0-42-3
ಯಜುವೇಂದ್ರ ಚಾಹಲ್‌        10-3-46-3

ಭಾರತ
ರೋಹಿತ್‌ ಶರ್ಮ    ಬಿ ಧನಂಜಯ    7
ಶಿಖರ್‌ ಧವನ್‌    ಔಟಾಗದೆ    100
ಶ್ರೇಯಸ್‌ ಅಯ್ಯರ್‌    ಸಿ ಲಕ್ಮಲ್‌ ಬಿ ಪೆರೆರ    65
ದಿನೇಶ್‌ ಕಾರ್ತಿಕ್‌    ಔಟಾಗದೆ    26

ಇತರ        21
ಒಟ್ಟು  (32.1 ಓವರ್‌ಗಳಲ್ಲಿ 2 ವಿಕೆಟಿಗೆ)    219
ವಿಕೆಟ್‌ ಪತನ: 1-14, 2-149.

ಬೌಲಿಂಗ್‌:
ಸುರಂಗ ಲಕ್ಮಲ್‌        5-2-20-0
ಅಖೀಲ ಧನಂಜಯ        7.1-0-53-1
ಏಂಜೆಲೊ ಮ್ಯಾಥ್ಯೂಸ್‌        3-0-30-0
ಸಚಿತ ಪತಿರಣ        4-0-33-0
ನುವಾನ್‌ ಪ್ರದೀಪ್‌        3-0-10-0
ತಿಸರ ಪೆರೆರ        5-0-25-1
ಅಸೇಲ ಗುಣರತ್ನೆ        4-0-30-0
ದನುಷ್ಕ ಗುಣತಿಲಕ        1-0-12-0
ಪಂದ್ಯಶ್ರೇಷ್ಠ:ಕುಲದೀಪ್‌ ಯಾದವ್‌
ಸರಣಿಶ್ರೇಷ್ಠ: ಶಿಖರ್‌ ಧವನ್‌

Advertisement

Udayavani is now on Telegram. Click here to join our channel and stay updated with the latest news.

Next