Advertisement

ನಾಯಕ ಸ್ಥಾನ ಕೊಹ್ಲಿಗೆ ಸವಾಲಾಗ್ತಾರೆ ರೋಹಿತ್‌

12:24 PM Jan 06, 2018 | Team Udayavani |

ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಟೆಸ್ಟ್‌ನಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದರೂ, ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಕೊಹ್ಲಿಗಿಂತ ರೋಹಿತ್‌ ಮುಂದಿದ್ದಾರೆ. ಇದನ್ನು ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸಂದೀಪ್‌ ಪಾಟೀಲ್‌ ಕೂಡ ಹೇಳಿಕೊಂಡಿದ್ದಾರೆ.

Advertisement

ನಾಯಕನಾಗಿ ಮತ್ತು ವೈಯಕ್ತಕವಾಗಿಯೂ ಭರ್ಜರಿ ಯಶಸ್ಸು ಕಾಣುತ್ತಿರುವ ವಿರಾಟ್‌ ಕೊಹ್ಲಿಗೆ ಯಾರೂ ಸವಾಲಾಗಲು ಸಾಧ್ಯವಿಲ್ಲ ಅನ್ನುವ ವಾತಾವರಣ ಕೆಲವೇ ತಿಂಗಳುಗಳ ಹಿಂದೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಲಂಕಾ ವಿರುದ್ಧದ ಪಂದ್ಯಗಳಲ್ಲಿ ನಾಯಕನಾಗಿ ರೋಹಿತ್‌ ಶರ್ಮ ಏಕದಿನ ಮತ್ತು ಟಿ20 ಸರಣಿ ಗೆಲ್ಲುವ ಮೂಲಕ ನಾಯಕ ಪಟ್ಟಕ್ಕೆ ಕೊಹ್ಲಿಗೆ ಪ್ರತಿಸ್ಪರ್ಧಿಯಾಗುವ ಸೂಚನೆ ನೀಡಿದ್ದಾರೆ.

ನಾಯಕ ವಿರಾಟ್‌ ಕೊಹ್ಲಿ ವಿಶ್ರಾಂತಿ ಪಡೆದ ಹಿನ್ನೆಲೆಯಲ್ಲಿ ಶ್ರೀಲಂಕಾದೊಂದಿಗಿನ ಮೂರು ಏಕದಿನ ಹಾಗೂ 3 ಟಿ20 ಪಂದ್ಯಗಳಿಗೆ ನಾಯಕನಾಗಿ ರೋಹಿತ್‌ ಆಯ್ಕೆಯಾಗಿದ್ದರು. ಆ ಮೂಲಕ, ಟೀಂ ಇಂಡಿಯಾದ ಕ್ಯಾಪ್ಟನ್‌ ಅನ್ನಿಸಿಕೊಳ್ಳಬೇಕೆಂಬ ಅವರ ಬಹುವರ್ಷಗಳ ಕನಸು ಈಡೇರಿತಾದರೂ, ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿಯೇ ಕ್ಯಾಪ್ಟನ್‌ ರೋಹಿತ್‌ಗೆ ಹೀನಾಯ ಸೋಲೊಂದು ಎದುರಾಯಿತು. 

ಮೊದಲ ಸೋಲಿನಿಂದ ಪಾಠ ಕಲಿತ ರೋಹಿತ್‌, ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ತಮ್ಮ ನಾಯಕತ್ವದಲ್ಲಿ ಮೊದಲ ಏಕದಿನ ಸರಣಿಯನ್ನು ಗೆದ್ದರು. ಜತೆಗೆ ಎರಡನೇ ಏಕದಿನ ಪಂದ್ಯದಲ್ಲಿ ಮೂರನೇ ದ್ವಿಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಪಾತ್ರವಾದರು. 

ಆನಂತರ ಮೂರು ಪಂದ್ಯಗಳ ಟಿ20 ಪಂದ್ಯದಲ್ಲಿಯೂ ಅತಿ ವೇಗದ ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ ರೋಹಿತ್‌, ಶ್ರೀಲಂಕಾ ತಂಡದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಶ್ರೀಲಂಕಾಗೆ ವೈಟ್‌ವಾಷ್‌ ರುಚಿ ತೋರಿಸಿದರು. ಹೀಗೆ ಎರಡು ಸರಣಿಗಳನ್ನು ಗೆದ್ದ ರೋಹಿತ್‌ ತಂಡದ ಕಾಯಂ ನಾಯಕ ಕೊಹ್ಲಿಗೆ ಸವಾಲಾಗುವ ಮಟ್ಟಕ್ಕೆ ಖಂಡಿತ ಬೆಳೆಯಲಿದ್ದಾರೆ ಎಂಬುದು ಈಗ ಕ್ರೀಡಾ ವಿಶ್ಲೇಷಕರ ಮಾತಾಗಿದೆ.

Advertisement

ಕೊಹ್ಲಿ ಸಮರ್ಥ
ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್‌ ಧೋನಿ ವಿದಾಯ ಹೇಳಿದ ನಂತರ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ವಿರಾಟ್‌ ಕೊಹ್ಲಿ, ಈವರೆಗೆ ಎಲ್ಲ ಮಾದರಿಗಳಲ್ಲಿಯೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದರೊಂದಿಗೆ ಉತ್ತಮ ಫಾರ್ಮ್ ಮುಂದುವರಿಸಿರುವ ಕೊಹ್ಲಿ ಎರಡೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. 

ಹೀಗಾಗಿ ತಂಡದ ಆಯ್ಕೆ ಹಾಗೂ ಪ್ರಮುಖ ನಿರ್ಧಾರಗಳಲ್ಲಿ ಕೊಹ್ಲಿ ನಿರ್ಧಾರವೇ ಅಂತಿಮ ಎನ್ನುವ ಪರಿಸ್ಥಿತಿ ಸದ್ಯ ಬಿಸಿಸಿಐನಲ್ಲಿದೆ. ಇದರಿಂದಾಗಿ ಕ್ರಿಕೆಟ್‌ ಮಂಡಳಿಯ ಕೆಲ ಸದಸ್ಯರಿಗೆ ಕೊಹ್ಲಿ ಮೇಲೆ ಮುನಿಸಿದ್ದರೂ, ಕೊಹ್ಲಿ ಉತ್ತಮ ಫಾರ್ಮ್ನಲ್ಲಿರುವುದರಿಂದ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲಾಗಿದೆ ಸುಮ್ಮನಿದ್ದಾರೆ ಎಂಬ ಮಾತುಗಳಿವೆ. ಅವಕಾಶ ಸಿಕ್ಕರೆ ಅವರೆಲ್ಲ ಕೊಹ್ಲಿ ಮೇಲೆ ಮುಗಿಬೀಳುವುದು ಖಚಿತ.

ರೋಬೋಟ್‌ ಅಲ್ಲ ಎಂದ ಕೊಹ್ಲಿ
ನ್ಯೂಜಿಲೆಂಡ್‌ ವಿರುದ್ಧ ಸರಣಿ ಜಯಿಸಿದ ವಿರಾಟ್‌ ಕೊಹ್ಲಿ, ತಾನೇನು ರೋಬೋಟ್‌ ಅಲ್ಲ. ತನಗೂ ವಿಶ್ರಾಂತಿ ಬೇಕಿದೆ ಎಂದಿದ್ದರು. ಜತೆಗೆ ಅನುಷ್ಕಾ ಜತೆ ವಿವಾಹ ಇದ್ದುದರಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅದನ್ನೇ ಕಾದಿದ್ದ ಬಿಸಿಸಿಐ ಶ್ರೀಲಂಕಾ ನಡುವಿನ ಏಕದಿನ ಹಾಗೂ ಟಿ20 ಸರಣಿಗೆ ಕೊಹ್ಲಿ ಜಾಗದಲ್ಲಿ ರೋಹಿತ್‌ ಶರ್ಮಾ ಅವರನ್ನು ತಂದು ಕೂರಿಸಿತು. ಅದಕ್ಕೆ ತಕ್ಕಂತೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರೋಹಿತ್‌ ತಂಡವನ್ನು ಜಯದ ಹಾದಿಯಲ್ಲಿ ತೆಗೆದುಕೊಂಡು ಹೋಗುವ ಜತೆಗೆ, ವೈಯಕ್ತಿಕವಾಗಿಯೂ ಉತ್ತಮ ರನ್‌ ಕಲೆಹಾಕಿದ್ದಾರೆ.

ಯುವಕರಿಗೆ ಅವಕಾಶ
ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದ ಎಲ್ಲ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ರೋಹಿತ್‌ ಅವಕಾಶ ನೀಡಿದರು. ತಂಡಕ್ಕೆ ಆಯ್ಕೆಯಾಗಿದ್ದ ವಾಷಿಂಗ್‌ಟನ್‌ ಸುಂದರ್‌, ಜಯದೇವ್‌ ಉನಡ್ಕಟ್‌, ಮೊಹಮದ್‌ ಸಿರಾಜ್‌ಗೆ ಅವಕಾಶ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು. 

ಅಂದೇ ಭವಿಷ್ಯ ನುಡಿದಿದ್ದ ಪಾಂಟಿಂಗ್‌
ರೋಹಿತ್‌ ಶರ್ಮಾ 2013ರಿಂದಲೂ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಹಿಂದೆ ಸಚಿನ್‌ ತೆಂಡುಲ್ಕರ್‌ ಹಾಗೂ ಹರ್ಭಜನ್‌ ಸಿಂಗ್‌ ನಾಯಕತ್ವ ಬೇಡ ಎಂದಾಗ, ರೋಹಿತ್‌ ಆ ಜವಾಬ್ದಾರಿ ವಹಿಸಿಕೊಂಡಿದ್ದರು. ರೋಹಿತ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಸೀಮಿತ ಓವರ್‌ಗಳಲ್ಲಿ ವಿರಾಟ್‌ ಕೊಹ್ಲಿಗೆ ರೋಹಿತ್‌ ಪರ್ಯಾಯವಾಗಬಲ್ಲರು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್‌ 2015ರಲ್ಲಿ ಮುಂಬೈ ಐಪಿಎಲ್‌ ಟ್ರೋಫಿ ಗೆದ್ದಾಗ ಹೇಳಿದ್ದರು.

3 ಐಪಿಎಲ್‌ ಕಪ್‌ ಗೆದ್ದ ಶ್ರೇಯಸ್ಸು
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾದ ಬಳಿಕ ರೋಹಿತ್‌ ಶರ್ಮಾ 2013, 2015 ಹಾಗೂ 2017ರಲ್ಲಿ ತಂಡವನ್ನು ಚಾಂಪಿಯನ್‌ ಮಾಡುವ ಮೂಲಕ ತಾನೊಬ್ಬ ಉತ್ತಮ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ, ಟೀಂ ಇಂಡಿಯಾ ನಾಯಕನಾಗಿರುವ ವಿರಾಟ್‌ ಕೊಹ್ಲಿ ಈವರೆಗೆ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಚಾಂಪಿಯನ್‌ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ರೋಹಿತ್‌ ಶರ್ಮಾಗೆ ಐಪಿಎಲ್‌ ಸಾಧನೆ ಬೆನ್ನಿಗಿದ್ದು, ಕೊಹ್ಲಿ ಫಾರ್ಮ್ ಕಳೆದುಕೊಂಡರೆ ಭಾರತ ತಂಡದ ನಾಯಕತ್ವ ಸ್ಥಾನ ರೋಹಿತ್‌ಗೆ ಒಲಿದರೂ ಅಚ್ಚರಿ ಇಲ್ಲ.

ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next